Andolana originals

ವಿಶೇಷಚೇತನರಿಗೆ ಪ್ರತ್ಯೇಕ ಕಾಲೋನಿ; ಕನಸಿನ ಸೂರು ಸನಿಹ

ಅನುಚೇತನ್ ಕೆ.ಎಂ.

ದಡದಹಳ್ಳಿ ಭಾಗದಲ್ಲಿ ಸ್ಥಳ ಪರಿಶೀಲನೆ; ಯೋಜನೆಗೆ ನಾಲ್ಕು ಎಕರೆ ಭೂಮಿ ಗುರುತು  ವಿಶೇಷಚೇತನರಿಗೆ ಯೋಜನೆಯ ಸೌಲಭ್ಯ 

ಮೈಸೂರು: ಎಲ್ಲರಿಗೂ ಸ್ವಂತ ಮನೆ ಹೊಂದಬೇಕೆಂಬ ಆಸೆ ಇರುತ್ತದೆ. ಇಂತಹ ಆಸೆಯೊಂದಿಗೆ ಹಲವು ವರ್ಷಗಳಿಂದ ಸ್ವಂತ ಸೂರಿಗಾಗಿ ಪರಿತಪಿಸಿ, ಹೋರಾಟಕ್ಕಿಳಿದು ಪ್ರತಿಭಟಿಸಿ ಬಸವಳಿದಿದ್ದ ವಿಶೇಷಚೇತನರಿಗೆ ನೆರಳಾಗಲು ಮುಂದಾಗಿರುವ ಜಿಲ್ಲಾಡಳಿತ ಇದೀಗ ಪ್ರತ್ಯೇಕ ಕಾಲೋನಿ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ದಡದಹಳ್ಳಿಯಲ್ಲಿ ನಾಲ್ಕು ಎಕರೆ ಭೂಮಿಯನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗಿದೆ.

ಒಂದು ವರ್ಷದ ಹಿಂದೆ ನಡೆದಿದ್ದ ವಿಶೇಷಚೇತನರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ್ದ ವಿಶೇಷ ಚೇತನರು ತಮಗೆ ಸ್ವಂತ ಸೂರು ಕಲ್ಪಿಸಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿತ್ತು. ಅದರಂತೆ ಹಿಂದೆ ಇದ್ದ ಜಿಲ್ಲಾಧಿಕಾರಿಗಳು ಸಭೆ ನಡೆಸಿ ನಗರದ ಸುತ್ತಮುತ್ತ ೧೦ ಕಿ.ಮೀ. ವ್ಯಾಪ್ತಿಯಲ್ಲಿ ೨-೩ ಎಕರೆ ಜಾಗದಲ್ಲಿ ವಿಶೇಷಚೇತನರಿಗೆ ಪ್ರತ್ಯೇಕ ಬಡಾವಣೆ ನಿರ್ಮಿಸಲು ತೀರ್ಮಾನಿಸಿದ್ದರು. ಇದೀಗ ಜಿಲ್ಲಾ ಡಳಿತ ಸ್ಥಳ ಪರಿಶೀಲನೆಯ ಜವಾಬ್ದಾರಿಯನ್ನು ತಹಸಿಲ್ದಾರರಿಗೆ ವಹಿಸಿದ್ದು, ನಗರದ ದಡದಹಳ್ಳಿ ಭಾಗದಲ್ಲಿ ಸರ್ವೆ ನಂಬರ್ ೬೬ರಲ್ಲಿ ಸ್ಥಳ ಗುರುತಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಉಪ ವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ವರದಿ ಪರಿಶೀಲಿಸಿದ ನಂತರ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಗುತ್ತದೆ.

ನಿರಾಶ್ರಿತರು, ಬಡವರಿಗೆ ಸೂರಿನ ಸೌಲಭ್ಯ: ವಿಶೇಷಚೇತನರಲ್ಲಿ ಹೆಚ್ಚಿನವರು ನಗರದ ಭಾಗದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಜೀವನ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದಾರೆ. ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಸಾಲ ಸೌಲಭ್ಯವಾಗಲಿ, ಉದ್ಯೋಗವಾಗಲಿ, ಇತರ ಯೋಜನೆಗಳ ಸೌಲಭ್ಯಗಳು ದೊರೆಯದೆ ಬದುಕು ಸಾಗಿಸಲು ಹರ ಸಾಹಸ ಪಡುತ್ತಿದ್ದಾರೆ. ಕೆಲವರಂತೂ ಎಲ್ಲೂ ಉದ್ಯೋಗ ಸಿಗದೆ ಭಿಕ್ಷಾಟನೆಯಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ೨೦೧೧ರ ಜನಗಣತಿ ಪ್ರಕಾರ ೪೪,೦೯೪ ಜನ ವಿಶೇಷಚೇತನರಿದ್ದಾರೆಂದು ಗುರುತಿಸಲಾಗಿತ್ತು. ಪ್ರಸ್ತುತ ಸರ್ಕಾರಗಳ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ೭೦ ಸಾವಿರಕ್ಕೂ ಹೆಚ್ಚು ವಿಶೇಷಚೇತನರಿದ್ದು ನಗರ ಭಾಗದಲ್ಲೇ ೧೫ ಸಾವಿರಕ್ಕೂ ಹೆಚ್ಚಿನ ವಿಶೇಷಚೇತನರಿದ್ದಾರೆಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ನಗರ ಭಾಗದ ವಿಶೇಷಚೇತನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದ್ದು, ಅರ್ಹರಿಗೆ ಸೂರು ನೀಡಲು ಯೋಜನೆ ಅನುಷ್ಠಾನಗೊಳಿಸಲು, ಜಿಲ್ಲಾಡಳಿತ ತೀರ್ಮಾನಿಸಿದೆ. ಇದರಿಂದಾಗಿ ಬಡವರು ಹಾಗೂ ನಿರಾಶ್ರಿತರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

೧೯೮೩ರಲ್ಲಿ ಮನೆ ನಿರ್ಮಿಸಿಕೊಡಲಾಗಿತ್ತು: ಸರ್ಕಾರ ಈ ಹಿಂದೆ ೧೯೮೩-೮೪ನೇ ಸಾಲಿನಲ್ಲಿ ಇಂತಹದ್ದೇ ಯೋಜನೆಯನ್ನು ರೂಪಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷಚೇತನರಿಗಾಗಿ ನಗರದ ಎನ್.ಆರ್.ಮೊಹಲ್ಲಾದಲ್ಲಿ ಪ್ರತ್ಯೇಕವಾಗಿ ಮನೆಗಳನ್ನು ನಿರ್ಮಿಸಿ ವಿತರಿಸಲಾಗಿತ್ತು. ಅಲ್ಲಿಂದ ಇಲ್ಲಿಯ ವರೆಗೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿರಲಿಲ್ಲ. ೨೦ ವರ್ಷಗಳ ವಿಶೇಷಚೇತನರ ಹೋರಾಟದಿಂದ ಮತ್ತೊಮ್ಮೆ ಅಂದಿನ ಮಾದರಿಯಲ್ಲೇ ವಿಶೇಷಚೇತನರಿಗೆ ಸೂರು ಕಲ್ಪಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ವಿಶೇಷಚೇತನರ ವೇದಿಕೆ ರಾಜ್ಯ ಸಂಚಾಲಕ ಎಂ.ಪ್ರಭುಸ್ವಾಮಿ ತಿಳಿಸಿದ್ದಾರೆ.

” ಹಡಜನದಲ್ಲಿ ಸ್ಥಳ ಕೇಳಲಾಗಿತ್ತು. ಸದ್ಯ ಜಿಲ್ಲಾಡಳಿತ ದಡದಹಳ್ಳಿ ಭಾಗದಲ್ಲಿ ಸ್ಥಳ ಪರಿಶೀಲನೆ ಮಾಡಿದೆ. ಇದರಿಂದ ಹಲವು ವಿಶೇಷಚೇತನರಿಗೆ ಅನುಕೂಲವಾಗಲಿದೆ. ಅರ್ಹ ಪಲಾನುಭವಿಗಳಿಗೆ ಈ ಯೋಜನೆಯ ಅನುಕೂಲ ದೊರಯಬೇಕು. ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಿ. ಇದರ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸಬೇಕು.”

– ಎಂ.ಪ್ರಭುಸ್ವಾಮಿ, ರಾಜ್ಯಸಂಚಾಲಕಕರ್ನಾಟಕ ರಾಜ್ಯ ವಿಶೇಷಚೇತನರ ವೇದಿಕೆ.

” ದಡದಹಳ್ಳಿಯಲ್ಲಿ ಸರ್ವೆ ನಂಬರ್ ೬೬ರಲ್ಲಿ ನಾಲ್ಕು ಎಕರೆ ಭೂಮಿ ಗುರುತಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಸದ್ಯದಲ್ಲೇ ಉಪವಿಭಾಗೀಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದೇವೆ. ನಂತರ ಜಿಲ್ಲಾಧಿಕಾರಿಗಳು ವರದಿ ಪರಿಶೀಲಿಸಿ, ಮಹಾನಗರಪಾಲಿಕೆ ಮೂಲಕ ಯೋಜನೆ ಕಾರ್ಯರೂಪಕ್ಕೆ ಬರಲಿದೆ.”

ಮಹೇಶ್ ಕುಮಾರ್, ತಹಸಿಲ್ದಾರ್

ಆಂದೋಲನ ಡೆಸ್ಕ್

Recent Posts

ಮನೆಯ ಚಾವಣಿ ಕುಸಿದು ನಾಲ್ವರು ಸಾವು ; ತಲಾ 5 ಲಕ್ಷ ಪರಿಹಾರ ಘೋಷಣೆ

ವಿಜಯಪುರ : ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ…

15 hours ago

ಡಿ.ಕೆ.ಶಿವಕುಮಾರ್‌ ಜನ್ಮದಿನಾಚರಣೆ : ರಾರಾಜಿಸಿದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಬ್ಯಾನರ್‌ಗಳು

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ದಂಡೇ…

16 hours ago

ದರ್ಶನ್‌ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ : ಅರ್ಜಿ ವಜಾಗೊಳಿಸಿದ ಸುಪೀಂ

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು, ಇನ್ನು ಒಂದು…

16 hours ago

ಜೂನ್‌ 21ರಂದು ನೀಟ್-ಯುಜಿ 2026ರ ಮರು ಪರೀಕ್ಷೆ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ‘ನೀಟ್-ಯುಜಿ 2026’ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಜೂನ್…

18 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

22 hours ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

22 hours ago