ಎಂ.ಅನುಚೇತನ್
ಸಂಚಾರಕ್ಕೆ ಅಡಚಣೆ,ಆರೋಗ್ಯಕ್ಕೆ ಕುತ್ತು, ಶಾಲಾ ಮಕ್ಕಳು, ಸ್ಥಳೀಯರು ಹೈರಾಣ
ಮೈಸೂರು: ಮೈಸೂರಿನಲ್ಲಿ ಕುಡಿಯುವ ನೀರಿನ ಬರ ನೀಗಿಸುವ ಸಲುವಾಗಿ, ಶಾಶ್ವತವಾಗಿ ಕುಡಿಯುವ ನೀರಿನ ಪೂರೈಕೆಗಾಗಿ ಉಂಡುವಾಡಿ ಕುಡಿಯುವ ನೀರು ಸರಬರಾಜು ಯೋಜನೆ ಒಂದೆಡೆ ಸಂತಸವನ್ನುಂಟು ಮಾಡಿದರೆ, ಮತ್ತೊಂದೆಡೆ ಅದರ ಭಾಗವಾದ ಯೋಜ ನೆಯ ಪೈಪ್ಲೈನ್ ಕಾಮಗಾರಿ ನಗರವಾಸಿಗಳ ಸಂಚಾರಕ್ಕೆ ತೊಡಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಗರದ ಹಲವಾರು ಬಡಾವಣೆಗಳಿಗೆ ಶಾಶ್ವತಕುಡಿಯುವ ನೀರನ್ನು ಪೂರೈಸಲು ಯೋಜನೆ ಯನ್ನು ೨೦೦೮ ರಲ್ಲಿ ಜಾರಿಗೆ ತಂದಿದ್ದು, ಇಂದಿಗೂ ಕಾಮಗಾರಿ ನಡೆಯುತ್ತಲೇ ಇದೆ. ಈ ಕಾಮಗಾರಿಗಾಗಿ ಹಲವು ಬಡಾವಣೆಗಳಲ್ಲಿ ರಸ್ತೆಗಳನ್ನು ಅಗೆಯಲಾಗಿದ್ದು, ಅದನ್ನು ಸರಿಪಡಿಸುತ್ತಿಲ್ಲ. ಇಂತಹದ್ದೇ ಸಮಸ್ಯೆ ನಗರದ ಹಿನಕಲ್ ಭಾಗದ ವರ್ತುಲ ರಸ್ತೆಯ ಲ್ಲಿರುವ ವಿಜಯನಗರ ಎಫ್ ಬ್ಲಾಕ್ಗೆ ಸೇರ್ಪಡೆಯಾಗುವ ಆಶ್ರಮ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಕಂಡು ಬಂದಿದೆ. ಇದರಿಂದಾಗಿ ನಿತ್ಯವೂ ಜನರು ಹಿಡಿಶಾಪಹಾಕುವಂತಾಗಿದೆ.
ಗುಂಡಿ ರಸ್ತೆ, ನಿತ್ಯವು ದೂಳುಮಯ: ರಸ್ತೆಗಳು ಹದಗೆಟ್ಟು ಗುಂಡಿಬಿದ್ದು, ದೂಳುಮಯವಾದರೆ ಅಂತಹ ರಸ್ತೆಗಳಲ್ಲಿ ಓಡಾಡಲು ಹರಸಾಹಸ ಪಡಬೇಕು. ಇಂತಹ ಪರಿಸ್ಥಿತಿ ಈ ಭಾಗದಲ್ಲಿ ಕಳೆದ ಐದಾರು ತಿಂಗಳಿಂದ ಇದೆ. ಕಿರಿದಾದ ರಸ್ತೆಗಳಲ್ಲಿ ಕಾಮಗಾರಿ ನಡೆಸಿ ಗುಂಡಿಯನ್ನು ಸರಿಯಾಗಿ ಮುಚ್ಚಿಲ್ಲ. ಕೆಲವೆಡೆ ಎತ್ತರಕ್ಕೆ ಮಣ್ಣು ಗುಡ್ಡೆಯಂತಿದ್ದರೆ, ಇನ್ನೊಂದೆಡೆ ಗುಂಡಿಮಯವಾಗಿವೆ. ಇದರಿಂದ ವಾಹನಗಳ ಸಂಚಾರಕ್ಕೆ ವಿಪರೀತ ತೊಂದರೆಯಾಗುತ್ತಿದ್ದು, ಮನೆಗಳ ಮುಂದೆ ವಾಹನಗಳ ನಿಲುಗಡೆಗೂ ಸಮಸ್ಯೆಯಾಗುತ್ತಿದೆ.
ಅಲ್ಲದೇ ರಸ್ತೆ ತುಂಬೆಲ್ಲ ಮಣ್ಣು ತುಂಬಿರುವ ಕಾರಣ ವಿಪರೀತ ದೂಳುಮಯವಾಗಿ ನಿವಾಸಿಗಳು ಹೈರಾಣಾಗುತ್ತಿದ್ದು, ಆರೋಗ್ಯವೂ ಕೈಕೊಡುತ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ.
ಅಧಿಕಾರಿ, ಜನಪ್ರತಿನಿಧಿಗಳಿಂದ ಸ್ಪಂದನೆ ಇಲ್ಲ: ಬಡಾವಣೆಗಳಲ್ಲಿ ಕಿರಿದಾದ ರಸ್ತೆಗಳೇ ಹೆಚ್ಚು. ಹೀಗಿರಬೇಕಾದರೆ, ವಿವಿಧ ಯೋಜನೆಗಳಿಗೆ ರಸ್ತೆಗಳನ್ನು ಅಗೆದು ಬೇಕಾಬಿಟ್ಟಿ ಮುಚ್ಚಿ ದರೆ ಅಲ್ಲಿ ವಾಹನ ಸಂಚಾರ, ಜನರ ಓಡಾಟಕ್ಕೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಉಂಡವಾಡಿ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ರಸ್ತೆ ಅಗೆದು ಕಾಮಗಾರಿ ಪೂರ್ಣಗೊಂಡು, ತಿಂಗಳುಗಳೇ ಕಳೆದರೂ ಸುಗಮ ಸಂಚಾರಕ್ಕೆ ರಸ್ತೆಯನ್ನು ಸರಿಪಡಿಸಿಲ್ಲ.
ಅಧಿಕಾರಿಗಳು, ಯೋಜನೆಗೆ ಸಂಬಂಧಪಟ್ಟವರು, ಜನಪ್ರತಿನಿಧಿಗಳಿಗೆ ಸಮಸ್ಯೆ ತಿಳಿಸಿ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಶಾಲಾ ಮಕ್ಕಳಿಗೆ ಆತಂಕ: ಈ ಭಾಗದಲ್ಲಿ ಹಲವಾರು ಮನೆಗಳಿದ್ದು, ಶಾಲೆಗಳೂ ಇವೆ. ರಸ್ತೆ ದೂಳುಮಯವಾಗಿದ್ದು, ಮಕ್ಕಳು ನಿತ್ಯ ಶಾಲೆಗೆ ಹೋಗಲೂ ಅಡಚಣೆಯಾಗಿದೆ. ಇದರಿಂದ ಬೇಸತ್ತ ನಿವಾಸಿಗಳು ಮನೆಯ ಮುಂದೆ ಹಾಗೂ ಶಾಲಾ ಆಡಳಿತ ಮಂಡಳಿಯವರು ಶಾಲೆಯ ಸುತ್ತಲೂ ನಿತ್ಯವೂ ನೆಲಕ್ಕೆ ನೀರು ಹಾಕುವ ಕೆಲಸ ಮಾಡಬೇಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ರಸ್ತೆಯನ್ನು ಸರಿಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
” ಸಂಬಂಧಪಟ್ಟವರಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಸಮಸ್ಯೆಯ ಬಗ್ಗೆ ಯಾರೊಬ್ಬರೂ ಕಾಳಜಿವಹಿಸುತ್ತಿಲ್ಲ. ರಸ್ತೆ ಸರಿಪಡಿಸಲು ಯಾಕಿಷ್ಟು ಬೇಜವಾಬ್ದಾರಿ?.”
ಮಂಜೇಶ್, ಸ್ಥಳೀಯ ನಿವಾಸಿ
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…