ಕೆ.ಬಿ.ರಮೇಶ ನಾಯಕ
ಕಸ ಎಸೆಯುತ್ತಿದ್ದ ಸ್ಥಳಗಳಲ್ಲಿ ಮನರಂಜನಾ ವಸ್ತುಗಳ ಚಿತ್ತಾಕರ್ಷಣೆ
ರಸ್ತೆ ಬದಿ ಕಸ ಹಾಕುವವರ ಮನ ಪರಿವರ್ತನೆಗೆ ವಿನೂತನ ಪ್ರಯೋಗ
ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಶ್ರೀರಾಂಪುರ ಪಪಂನಿಂದ ದಂಡ
ಮೈಸೂರು: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಆರಂಭವಾದ ಮೇಲೆ ಸ್ಥಳೀಯ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಸ್ವಚ್ಛತೆಗಾಗಿ ಹಲ ವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ರಸ್ತೆ ಬದಿಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಶ್ರೀರಾಂಪುರ ಪಟ್ಟಣ ಪಂಚಾ ಯಿತಿ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ.
ರಿಂಗ್ ರಸ್ತೆ, ಮುಖ್ಯರಸ್ತೆ, ಸರ್ವೀಸ್ ರಸ್ತೆಗಳಲ್ಲಿ ದಾರಿಯುದ್ದಕೂ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಯಲು ಮಕ್ಕಳ ಮನರಂಜನೆಯ ವಸ್ತುಗಳನ್ನು ಇಟ್ಟು ಮತ್ತೊಮ್ಮೆ ಕಸ ಹಾಕದಂತೆ ಬ್ರೇಕ್ ಹಾಕುವ ಯತ್ನ ನಡೆಸಲಾಗಿದೆ. ಅಲ್ಲದೆ, ಎಲ್ಲೆಂದರಲ್ಲಿ ಕಸ ಎಸೆದು ಹೋಗುವುದಕ್ಕೆ ಕಡಿವಾಣ ಹಾಕುವುದಕ್ಕೂ ದಂಡದ ಪ್ರಯೋಗ ಆರಂಭಿಸಿರುವುದರಿಂದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಲವು ಕೊಳಚೆ ಪ್ರದೇಶಗಳು ಕಸಮುಕ್ತ ಪ್ರದೇಶವಾಗುವ ಹೆಜ್ಜೆ ಇರಿಸಿದೆ.
ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಮಹದೇವಪುರ, ರಮಾಬಾಯಿ ನಗರ, ಮುನಿಸ್ವಾಮಿ ನಗರ, ಗುರೂರು, ಕುಪ್ಪಲೂರು ಮೊದಲಾದ ಪ್ರದೇಶಗಳು ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದವು. ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳ ಸೇರಿದಂತೆ ನಾಗರಿಕ ಸೌಕರ್ಯಗಳ ಬೇಡಿಕೆಯೂ ಹೆಚ್ಚಾಗಿದ್ದರಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಇದೀಗ ಪ್ರದೇಶಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಮನೆ ಮನೆ ಕಸ ಸಂಗ್ರಹವನ್ನು ಮಾಡಿಕೊಂಡು ಬರಲಾಗುತ್ತಿದೆ.
ಗೂಡ್ಸ್ ಆಟೋಗಳಲ್ಲಿ ಮನೆ ಮನೆ ಕಸ ಸಂಗ್ರಹ ಮಾಡುತ್ತಿದ್ದರೂ ಕೆಲವರು ಮಹ ದೇವಪುರ ರೈಲ್ವೆ ಗೇಟ್ನಿಂದ ಮುನಿಸ್ವಾಮಿ ನಗರಕ್ಕೆ ಹೋಗುವ ಮಾರ್ಗದ ಬಲಭಾಗದ ರಸ್ತೆ, ಎಚ್.ಡಿ.ಕೋಟೆ ರಸ್ತೆಯ ಮಹ ದೇವಪುರದಿಂದ ಶ್ರೀರಾಂಪುರ ರೇಷ್ಮೆ ಸಂಶೋಧನಾ ಕೇಂದ್ರ, ಕುಪ್ಪಲೂರು, ರಮಾಬಾಯಿ ನಗರದಿಂದ ಗುರೂರು ಮಾರ್ಗದ ರಸ್ತೆಗಳಲ್ಲಿ ಕಸದ ಪೊಟ್ಟಣಗಳನ್ನು ಎಸೆದು ಹೋಗುತ್ತಿದ್ದರು. ಅದರಲ್ಲೂ ಸ್ಲಂ ಬೋರ್ಡ್ನಿಂದ ನಿರ್ಮಾಣಗೊಂಡಿರುವ ಬಹುಮಹಡಿ ವಸತಿ ಸಮುಚ್ಚಯಗಳ ನಿವಾಸಿಗಳು ಈ ಜಾಗದಲ್ಲೇ ರಾತ್ರಿ ಅಥವಾ ಮುಂಜಾನೆ ಕಸ ಎಸೆದು ಹೋಗುತ್ತಿದ್ದರಿಂದ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವಂತಾಗಿತ್ತು. ಬೀದಿ ನಾಯಿಗಳು ಕಸದ ಪೊಟ್ಟಣಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದರಿಂದ ಪಾದಚಾರಿಗಳು ಅದನ್ನು ತುಳಿದುಕೊಂಡೇ ಸಾಗುತ್ತಿದ್ದರು. ಇದನ್ನು ಮನಗಂಡ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಅಧಿಕಾರಿ ವರ್ಗದವರು ವಿನೂತನ ಪ್ರಯೋಗವನ್ನು ಆರಂಭಿಸಿ ಸಫಲವಾಗಿದ್ದಾರೆ. ಮಹದೇವಪುರ ರೈಲ್ವೆ ಗೇಟ್ನಿಂದ ರಮಾಬಾಯಿ ನಗರಕ್ಕೆ ಹೋಗುವ ರಸ್ತೆಯ ಒಂದು ಬದಿಯಲ್ಲಿ ೧೦ ಮೀಟರ್ಗೆ ಒಂದರಂತೆ ಕಮಾನುಗಳನ್ನು ಹಾಕಿ ಹಾಲೋ ಬ್ರಿಕ್ಗಳನ್ನು ಇಡಲಾಗಿದೆ. ನೋಡಲು ಆಕರ್ಷಣೀಯವಾಗಿಸಲು ಹಳೆಯ ಟೈರ್ಗಳಿಗೆ ಬಣ್ಣ ಬಳಿದು ಕಟ್ಟಲಾಗಿದೆ.
ದಾನಿಗಳ ನೆರವಿನಿಂದ ಒಂದಿಷ್ಟು ಕಬ್ಬಿಣದ ಸಾಮಗ್ರಿಗಳನ್ನು ಖರೀದಿಸಿ ಸಣ್ಣ ಸಣ್ಣ ಆಸನಗಳ ಮಾದರಿಯನ್ನು ಮಾಡಿಸಲಾಗಿದೆ. ಇದೇ ರೀತಿ ಕುಪ್ಪಲೂರು ಬ್ಲಾಕ್ ಸ್ಪಾಟ್, ಗುರೂರು, ಎಚ್.ಡಿ.ಕೋಟೆ ರಸ್ತೆಯ ಬ್ಲಾಕ್ ಸ್ಪಾಟ್ಗಳನ್ನು ಸೌಂದರ್ಯೀಕರಣ ಗೊಳಿಸಲಾಗಿದೆ. ವಿಶೇಷವಾಗಿ ಹೆಚ್ಚಿನ ಜನದಟ್ಟಣೆ ಪ್ರದೇಶ ವಾದ ಮಹದೇವಪುರ ಸಮೀಪದ ಕೊಳಚೆ ಪ್ರದೇಶದ ಬ್ಲಾಕ್ ಸ್ಪಾಟ್ ಅನ್ನು ಸುಂದರ ವಾಗಿಸಿ ಮತ್ತೆ ಯಾರೂ ಕಸ ಹಾಕದಂತೆ ನೋಡಿಕೊಳ್ಳುವ ಹೊಣೆ ವಹಿಸಲಾಗಿದೆ.
ರಸ್ತೆ ಬದಿಯಲ್ಲೇ ಒಂದು ಟನ್ ಕಸ: ರಸ್ತೆಗಳನ್ನು ಸೌಂದರ್ಯೀಕರಣಗೊಳಿಸುವ ಮೊದಲು ಈ ಪ್ರಮುಖ ರಸ್ತೆಗಳ ಬದಿಯಲ್ಲೇ ಒಂದು ಟನ್ ಕಸ ಸಂಗ್ರಹವಾಗುತ್ತಿತ್ತು. ಈಗ ಈ ರಸ್ತೆಯಲ್ಲಿ ಒಂದು ಗೂಡ್ಸ್ ವಾಹನದಷ್ಟು ಕಸ ದೊರೆಯುತ್ತಿದೆ. ಹಸಿ-ಒಣ ಕಸ ವಿಂಗ ಡಣೆ ಮಾಡಿ ಸಂಗ್ರಹ ಮಾಡುತ್ತಿದ್ದರೂ ಕೆಲವರು ಕೆಲಸಕ್ಕೆ ಹೋಗುವಾಗ ಎಸೆದು ಹೋಗುತ್ತಿದ್ದರು. ಈಗ ತಪ್ಪಿಸಲಾಗಿದೆ. ಮುಂದೆ ಈ ಮಾರ್ಗಗಳನ್ನು ಯಥಾಸ್ಥಿತಿ ಯಲ್ಲಿ ಇರುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
” ರಸ್ತೆ ಬದಿಗಳಲ್ಲಿ ಕಸ ಸುರಿಯದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರೂ ಬೆಳಿಗ್ಗೆ-ರಾತ್ರಿ ಎಸೆದು ಹೋಗುತ್ತಿದ್ದರು. ಈಗ ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಸುಂದರೀಕರಣ ಮಾಡ ಲಾಗಿದೆ. ರಸ್ತೆ ಬದಿಯಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸುವ ಕೆಲಸ ಶುರು ಮಾಡಿದ್ದೇವೆ. ಮಹದೇವ ಪುರ, ಎಚ್.ಡಿ.ಕೋಟೆ ಮಾರ್ಗದಲ್ಲಿ ನಿತ್ಯ ಒಂದು ಟನ್ ಕಸ ಬೀಳುತ್ತಿತ್ತು. ಈಗ ಒಂದು ಸಣ್ಣ ಕಸದ ಪೊಟ್ಟಣ ಹಾಕದಂತೆ ನಿಗಾ ಇಡಲಾಗಿದೆ.”
-ಎಚ್.ಎಂ.ಸುರೇಶ್, ಮುಖ್ಯಾಧಿಕಾರಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ.
ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್ಮಂಗಲ…
ಹೊಸದಿಲ್ಲಿ : ನೀಟ್ ಯುಜಿ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಲಾತೂರ್ ಮೂಲದ ವೈದ್ಯರು ಮತ್ತು ಪುಣೆಯ ಕೋಚಿಂಗ್ ಸಂಸ್ಥೆಯ ಭೌತಶಾಸ್ತ್ರ…
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಗುರುವಾರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ…
ಮಂಡ್ಯ: ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡ ವಿರುದ್ಧ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಮಾನಹಾನಿಗೆ ಸಂಬಂಧಿಸಿದಂತೆ…
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಗುರುವಾರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ…
ಬೆಂಗಳೂರು : ಕಳೆದ ಏಪ್ರಿಲ್ 18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಶಿವಂಗಿಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಜೂನ್…