Andolana originals

ಮೂರು ವರ್ಷ ಕಳೆದರೂ ಸ್ಥಳೀಯ ಸಂಸ್ಥೆಗಳಿಗೆ ಸಿಗದ ಮುಕ್ತಿ

ಮೈಸೂರು: ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಯೊಂದಿಗೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಜಾರಿಗೆ ತಂದ ಆಶಯ ಇಂದು ನುಚ್ಚು ನೂರಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಾಗದ ಕಾರಣ ಚುನಾಯಿತ ಜನಪ್ರತಿನಿಧಿಗಳಿಲ್ಲದೇ ಆಡಳಿತಾಧಿಕಾರಿಗಳೇ ಮೂರು ವರ್ಷಗಳ ಕಾಲ ಆಡಳಿತ ಪೂರೈಸಿದ್ದಾರೆ.

• ಜಿಪಂ, ತಾಪಂ ಮೀಸಲಾತಿ ನಿಗದಿಗೆ ಮೀನ ಮೇಷ ಎಣಿಸುತ್ತಿರುವ ಸರ್ಕಾರ
• ಆಡಳಿತಾಧಿಕಾರಿಗಳ ಆಡಳಿತದಲ್ಲೇ ನಡೆಯುತ್ತಿರುವ ಎಪಿಎಂಸಿ
• ರಾಜಕೀಯ ಕಾರಣಕ್ಕಾಗಿ ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಗೂ ಕೊಕ್

ಹಲವು ಕಾರಣಗಳಿಂದಾಗಿ ಚುನಾವಣೆಯನ್ನು ಮುಂದೂಡುತ್ತಲೇ ಬಂದ ಪರಿಣಾಮವಾಗಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಐದು ವರ್ಷಗಳ ಅವಧಿಯು ಮುಗಿದ ಬಳಿಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಮೇ 8ಕ್ಕೆ ಬರೋಬ್ಬರಿ ಮೂರು ವರ್ಷಗಳಾಗಿದ್ದು, ಸುದೀರ್ಘ ಕಾಲದಲ್ಲಿ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಿರುವುದು ದಾಖಲಾಗಿದೆ. ಈವರೆಗೆ ಅತೀ ಹೆಚ್ಚು ಆರು ತಿಂಗಳೊಳಗೆ ಚುನಾವಣೆ ನಡೆಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುತ್ತಲೇ ಬಂದಿತ್ತಾದರೂ ಮೊದಲ ಬಾರಿಗೆ ನಿರಂತರವಾಗಿ ಮುಂದೂಡುತ್ತಲೇ ಬಂದಿರುವುದರಿಂದ ಜಿಪಂ, ತಾಪಂ ಪ್ರವೇಶ ಮಾಡಬೇಕೆಂದು ಕನಸು ಹೊತ್ತವರಲ್ಲೂ ನಿರಾಶೆ ಉಂಟಾಗಿದೆ.

ನಾನಾ ಕಾರಣಗಳಿಗಾಗಿ ಮೂರು ವರ್ಷಗಳಿಂದ ವಿಳಂಬ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ, ತಾಪಂ ಸದಸ್ಯರ ಐದು ವರ್ಷಗಳ ಅವಧಿ ಮುಗಿದ ಬಳಿಕ ಚುನಾವಣೆ ನಡೆಸಬೇಕಿದ್ದ ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರಗಳ ಮರುವಿಂಗಡಣೆ ಮತ್ತು ಸ್ಥಾನಗಳಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಕಾರಣಕ್ಕಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾನಿರ್ಣಯ ಆಯೋಗವನ್ನು ರಚನೆಮಾಡಿತು. ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಕ್ಷೇತ್ರಗಳ ಮೀಸಲಾತಿ ನಿಗದಿಯ ಅಧಿಕಾರವನ್ನು ವಾಪಸ್ ಪಡೆದುಕೊಂಡ ಸರ್ಕಾರ ಆಯೋಗಕ್ಕೆ ನೀಡಿತ್ತು. ಇದರಿಂದಾಗಿ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮೊರೆ ಹೋಗಿದ್ದರಿಂದಾಗಿ ವಿಳಂಬವಾಗಿತ್ತು. ನಂತರ, ರಾಜ್ಯ ಸರ್ಕಾರ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ನಿಗದಿಪಡಿಸುವ ಹೊಣೆಯನ್ನು ಆಯೋಗಕ್ಕೆ ನೀಡಿ ಅಧಿಸೂಚನೆ ಹೊರಡಿಸಿದ್ದರಿಂದ ಆಯೋಗ ಸುಮ್ಮನಾಗಬೇಕಾಯಿತು.

ನಂತರ, ಸಕಾಲಕ್ಕೆ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಿಸಬೇಕೆಂದು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರಿಂದಾಗಿ ಸರ್ಕಾರ ಮೂರು ತಿಂಗಳ ಕಾಲಾವಕಾಶ ಪಡೆದುಕೊಂಡಿತ್ತು. ಆದರೆ, ಈ ಹೊತ್ತಿಗೆ ರಾಜ್ಯ ವಿಧಾನಸಭೆ ಚುನಾವಣೆ ಬಂದಿದ್ದರಿಂದ ನೆನಗುದಿಗೆ ಬಿದ್ದಿತು. ನಂತರ, 2023ರಲ್ಲಿ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ನಡೆಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಸರ್ಕಾರ ಕ್ಷೇತ್ರಗಳ ಗಡಿ ನಿಗದಿಪಡಿಸಿ ಸ್ಥಾನಗಳನ್ನು ಹಂಚಿಕೆ ಮಾಡಲು ಆರು ತಿಂಗಳ ಸಮಯ ತೆಗೆದುಕೊಂಡಿತ್ತು. ಬಳಿಕ ಆಯಾಯ ಜಿಲ್ಲೆಗಳ ಸದಸ್ಯ ಸ್ಥಾನಗಳಿಗೆ ತಕ್ಕಂತೆ ಮೀಸಲಾತಿ ಹಂಚಿಕೆ ಮಾಡಿತೇ ಹೊರತು ಮೀಸಲಾತಿ ಪ್ರಕಟಿಸಿಲ್ಲ. ಹೀಗಾಗಿ, ಚುನಾವಣಾ ಆಯೋಗವು ಮತ್ತೆ ಮೀಸಲಾತಿ ನಿಗದಿಪಡಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎನ್ನುವಂತೆ ಮತ್ತೆ ಅರ್ಜಿ ಸಲ್ಲಿಸಿದ್ದರಿಂದ ಮೂರು ತಿಂಗಳುಗಳ ಸಮಯ ತೆಗೆದುಕೊಂಡಿತ್ತಾದರೂ ಈವರೆಗೆ ಅಂದರೆ ಆರು ತಿಂಗಳುಗಳು ಕಳೆದರೂ ಕೂಡ ಮೀಸಲಾತಿ ಪ್ರಕಟಿಸಿಲ್ಲ.

ಹೀಗಾಗಿ, ಮತ್ತೆ ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಕದ ತಟ್ಟಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮೇ 8ರಂದು ಜಿಪಂಗೆ ರಾಜ್ಯಮಟ್ಟದ ಹಿರಿಯ ಐಎಎಸ್ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ, ತಾಪಂಗಳಿಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿ 2024ಕ್ಕೆ ಮೂರು ವರ್ಷಗಳು ಕಳೆದಿವೆ. ಈಗ ಮತ್ತೆ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ರಾಜ್ಯ ಸರ್ಕಾರ ಯಾವಾಗ ಚುನಾವಣೆನಡೆಸಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಎಪಿಎಂಸಿಗೂ ಇಲ್ಲ ಚುನಾವಣೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೆಶಕರ ಅವಧಿ ಮುಗಿದು ಎರಡು ವರ್ಷಗಳು ಕಳೆದರೂ ಚುನಾವಣೆ ನಡೆಸಿಲ್ಲ. 2021ರ ಫೆಬ್ರವರಿ 21ರಿಂದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆಯುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಇನ್ನಿತರೆ ವಿಚಾರಗಳಿಂದ ಸದ್ದು ಮಾಡಿದ್ದರೂ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸುವ ಗೋಜಿಗೆ ಸರ್ಕಾರ ಕೈ ಹಾಕಿಲ್ಲ. ಇದರಿಂದಾಗಿ ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಾವಳಿಯೇ ತುಸು ಜಾಸ್ತಿ ಯಾಗುವಂತಾಗಿದೆ.

ರಾಜಕೀಯ ಕಾರಣಕ್ಕಾಗಿ ಬ್ರೇಕ್: ಕಳೆದ ನವೆಂಬರ್ 17ರಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ ಬ್ಯಾಂಕ್) ಅವಧಿ ಮುಗಿದ ಮೇಲೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿತ್ತಾದರೂ ರಾಜಕೀಯ ಪ್ರಭಾವದಿಂದ ಮುಂದೂಡಲಾಗಿದೆ. ಸಹಕಾರಿ ಧುರೀಣ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಆಂತರಿಕ ಕದನದಿಂದ ಈ ಚುನಾವಣೆಯ ಮೇಲೂ ಗ್ರಹಣ ಹಿಡಿದಿದೆ. ಪ್ರಾಬಲ್ಯದಿಂದ ಎಂಸಿಡಿಸಿಸಿ ಬ್ಯಾಂಕ್ ಆಡಳಿತವನ್ನು ಬಿಡಿಸಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಲವರು ಪ್ರಯತ್ನ ನಡೆಸುತ್ತಿದ್ದು, ಇದರಿಂದಾಗಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಮುಂದೂಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಮೇಲೆ ಮತ್ತೆ ಸದ್ದು ಮಾಡುವುದು ಗ್ಯಾರಂಟಿಯಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಯೋಗ ಸದಾ ಸಿದ್ಧವಿದೆ. ಸರ್ಕಾರ ಮೀಸಲಾತಿ ನಿಗದಿಪಡಿಸಬೇಕಿದೆ. ಹೈಕೋರ್ಟ್‌ನಲ್ಲಿ ಮೂರು ತಿಂಗಳ ಸಮಯ ತೆಗೆದುಕೊಂಡಿತ್ತಾದರೂ ನಂತರ ಮತ್ತೆ ಸಮಯ ಕೇಳಿತು. ಆಗಿಂದಾಗ್ಗೆ ಸಮಯ ಪಡೆಯುತ್ತಲೇ ಬಂದಿರುವುದರಿಂದ ನಾವು ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಮೀಸಲಾತಿ ನಿಗದಿಪಡಿಸುವ ವಿಚಾರದಲ್ಲಿ ಮತ್ತೆ ನ್ಯಾಯಾಲಯದ ಗಮನಕ್ಕೆ ತರಲು ಮುಂದಾಗಿದ್ದೇವೆ.
ಡಾ.ಬಿ.ಬಸವರಾಜು, ಆಯುಕ್ತರು, ರಾಜ್ಯ ಚುನಾವಣಾ ಆಯೋಗ

ರಾಜ್ಯ ಸರ್ಕಾರ ತಕ್ಷಣವೇ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಂತೆ ಚುನಾವಣೆ ನಡೆಸಲು ಮುಂದಾಗಬೇಕು. ಸ್ಥಳೀಯ ಸಂಸ್ಥೆಗಳಿಗೆ ಬರುವ ಅನುದಾನ ಹಂಚಿಕೆಯು ನಮ್ಮಿಂದ ಕೈ ತಪ್ಪುತ್ತದೆ ಎನ್ನುವ ಕಾರಣಕ್ಕಾಗಿ ಒಳಗೊಳಗೆ ವಿರೋಧ ಮಾಡಿ ನಿಧಾನ ಮಾಡಲಾಗುತ್ತಿದೆ. ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ.

ಕೆರೆಹಳ್ಳಿ ನವೀನ್, ರಾಜ್ಯಾಧ್ಯಕ್ಷ, ಜಿಪಂ ಸದಸ್ಯರ ಒಕ್ಕೂಟ

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

2027 ಸೆ.3ಕ್ಕೆ ಅಟ್ಲಾಂಟಾದಲ್ಲಿ 9ನೇ ನಾವಿಕ ವಿಶ್ವ ಸಮ್ಮೇಳನ

ಬೆಂಗಳೂರು : ದುಬೈನ ಕರ್ನಾಟಕ ಸಂಘದೊಂದಿಗೆ ನವೆಂಬರ್ 22 ರಂದು ನಾವಿಕ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಾವು…

7 mins ago

ಉಕ್ಕು ಉದ್ಯಮಕ್ಕೆ ಮತ್ತಷ್ಟು ಬಲ ; ₹11,887 ಕೋಟಿ ಹೂಡಿಕೆ

ಹೊಸದಿಲ್ಲಿ : ಭಾರತ ಸರ್ಕಾರವು ಸ್ಪೆಶಾಲಿಟಿ ಸ್ಟೀಲ್ (ವಿಶೇಷ ಉಕ್ಕು) ಉತ್ಪಾದನೆಗೆ ಸಂಬಂಧಿಸಿ ಹೊಸದಾಗಿ ಉತ್ತೇಜನಾ (ಪಿಎಲ್ಐ) ಯೋಜನೆ 1.2…

13 mins ago

ಬಂಡೀಪುರದಲ್ಲಿ ಅಂತರಾಷ್ಟ್ರೀಯ ಬಿಗ್‌ ಕ್ಯಾಟ್‌ ಶೃಂಗಸಭೆ : 23 ದೇಶದ ವಿಜ್ಞಾನಿಗಳು ಭಾಗಿ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ಅಂತರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಶೃಂಗಸಭೆಯಲ್ಲಿಂದು…

2 hours ago

ಜೋಡಿಲಿಂಗ ಶ್ರೀ ಮಹದೇಶ್ವರ ದೇವಸ್ಥಾನ ಉದ್ಘಾಟನೆ : ಸಾವಿರಾರು ಮಂದಿ ದರ್ಶನ, ಕೊಂಡೋತ್ಸವದಲ್ಲಿ ಭಕ್ತಿಪರವಶ

ಮೈಸೂರು : ತಾಲ್ಲೂಕಿನ ಜಯಪುರ ಹೋಬಳಿಯ ಮಂಡನಹಳ್ಳಿ ಗ್ರಾಮದಲ್ಲಿ ನವೀಕರಣಗೊಂಡ ಜೋಡಿಲಿಂಗ ಶ್ರೀ ಮಹದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭವು ಭಕ್ತಿಯ…

2 hours ago

ಬೆಂಗಳೂರು | ಮಾಂಜಾ ದಾರಕ್ಕೆ ಸಿಲುಕಿ ಬೈಕ್‌ ಸವಾರ ಸಾವು

ಬೆಂಗಳೂರು : ಬೀದರ್‌ನಲ್ಲಿ ಗಾಳಿ ಪಟ ಹಾರಿಸಲು ಬಳಸಿದ್ದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದ ಪ್ರಕರಣಕ್ಕೆ…

2 hours ago

ಕೇಂದ್ರ ಬಜೆಟ್‌ ದೇಶದ ಅಭಿವೃದ್ಧಿಗೆ ಪೂರಕ : ಡಾ. ಸಿ.ಎನ್.ಅಶ್ವತ್ಥ ನಾರಾಯಣ

ಮಂಡ್ಯ : ಆಡಳಿತದಲ್ಲಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿ ಸ್ವಾವಲಂಬಿ ಮತ್ತು ಆತ್ಮನಿರ್ಭರ ಭಾರತ ಗುರಿಯಾಗಿಸಿಕೊಂಡು ಉದ್ಯೋಗ, ಕೃಷಿ ಉತ್ಪಾದನೆ,…

3 hours ago