ಮೈಸೂರು

ಜೋಡಿಲಿಂಗ ಶ್ರೀ ಮಹದೇಶ್ವರ ದೇವಸ್ಥಾನ ಉದ್ಘಾಟನೆ : ಸಾವಿರಾರು ಮಂದಿ ದರ್ಶನ, ಕೊಂಡೋತ್ಸವದಲ್ಲಿ ಭಕ್ತಿಪರವಶ

ಮೈಸೂರು : ತಾಲ್ಲೂಕಿನ ಜಯಪುರ ಹೋಬಳಿಯ ಮಂಡನಹಳ್ಳಿ ಗ್ರಾಮದಲ್ಲಿ ನವೀಕರಣಗೊಂಡ ಜೋಡಿಲಿಂಗ ಶ್ರೀ ಮಹದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭವು ಭಕ್ತಿಯ ಜ್ವಾಲೆಯಂತೆ ಆಚರಣೆಯಾಯಿತು.

ಫೆಬ್ರವರಿ 8ರಿಂದ 10ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿ, ಮಾದಪ್ಪನ (ಶ್ರೀ ಮಹದೇಶ್ವರ ಸ್ವಾಮಿ) ದಿವ್ಯ ದರ್ಶನ ಪಡೆದು ಭಕ್ತಿಪರವಶರಾದರು.

ದೇವಸ್ಥಾನವನ್ನು ತಳಿರು-ತೋರಣಗಳು, ವಿವಿಧ ಪುಷ್ಪಗಳು, ಬಾವಲಿಗಳು, ಛತ್ರಿ, ಚಾಮರ ಮತ್ತು ಪೂರ್ಣಕುಂಭಗಳಿಂದ ಅಲಂಕರಿಸಿ ಸಿಂಗರಿಸಲಾಗಿತ್ತು. ಉದ್ಘಾಟನಾ ಸಂದರ್ಭದಲ್ಲಿ ಸ್ವಸ್ತಿ ಪುಣ್ಯಾಹವಾಚನ, ಪಂಚ ಕಳಶ ಪ್ರತಿಷ್ಠಾಪನೆ, ನವಗ್ರಹ ಕಳಶ, ನವಗ್ರಹ ಹೋಮ, ರುದ್ರಹೋಮ, ರುದ್ರಾಭಿಷೇಕ ಮುಂತಾದ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು. ಮಾದಪ್ಪನ ಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆಯಲ್ಲಿ ಸಾಗಿಸಲಾಯಿತು. ವೀರಗಾಸೆ, ಕಹಳೆ, ನಂದಿಕೋಲ್, ಪ್ರದರ್ಶನಗಳು, ಮಂಗಳವಾಧ್ಯಗಳ ಮೊಳಗು ಮತ್ತು ಜೈಕಾರಗಳೊಂದಿಗೆ ಮೆರವಣಿಗೆಯು ಭಕ್ತಿಯ ವಾತಾವರಣವನ್ನು ಸೃಷ್ಟಿಸಿತು. ಮೆರವಣಿಗೆಯ ನಂತರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ನಡೆದು, ಭಕ್ತರು ದರ್ಶನ ಪಡೆದರು.

ಮೂರು ದಿನಗಳ ಕಾಲ ನಿರಂತರ ಅನ್ನದಾಸೋಹ ನಡೆಸಿ ಭಕ್ತರಿಗೆ ಸಂತರ್ಪಣೆ ಮಾಡಲಾಯಿತು. ಬೆಳಗಿನ ಜಾವದಲ್ಲಿ ನಡೆದ ಕೊಂಡೋತ್ಸವದಲ್ಲಿ ನೂರಾರು ಭಕ್ತರು ಕೊಂಡ ಹಾಯ್ದು, ಮಾದಪ್ಪನ ಮಹಿಮೆಯನ್ನು ಕೊಂಡಾಡಿ ಹರಕೆಗಳನ್ನು ಇಟ್ಟು ಪುನೀತರಾದರು.

ಧಾರ್ಮಿಕ ಸಭೆಯಲ್ಲಿ ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ವಿಶಿಷ್ಟ ಸ್ಥಾನವಿದೆ ಎಂದು ಹೇಳಿದರು.

ಪ್ರಕೃತಿಯನ್ನು ದೇವರಾಗಿ ಪೂಜಿಸುವ ಸಂಪ್ರದಾಯ ಭಾರತದ್ದು. ದೇವಸ್ಥಾನಗಳು ಶ್ರದ್ಧಾ-ಭಕ್ತಿ ಕೇಂದ್ರಗಳಾಗಿ, ಶಿಕ್ಷಣ ಕೇಂದ್ರಗಳಾಗಿ ಬೆಳೆದಿವೆ ಎಂದು ವಿವರಿಸಿದರು. ಆಧುನಿಕ ಯಾಂತ್ರಿಕ ಜೀವನದಲ್ಲಿ ಸಂಸ್ಕಾರಗಳು ಕಡಿಮೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿ, ಭಕ್ತಿಯನ್ನು ತನುಮನದಿಂದ ಅರ್ಪಿಸಿ, ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಉಪದೇಶಿಸಿದರು. ಉಚಿತಗಳ ಆಸೆಯಿಂದ ಸೋಮಾರಿತನ ಬರಬಾರದು; ಕಾಯಕ ಪ್ರೀತಿಯೇ ದೇವರನ್ನು ಒಲಿಸುವುದು ಎಂದು ತಿಳಿಸಿದರು.

ಮೈಸೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರು ಮಾತನಾಡಿ, ಹಿಂದೆ ಸಣ್ಣ ದೇವಸ್ಥಾನವಿದ್ದ ಸ್ಥಳದಲ್ಲಿ ಇಂದು ವೈಭವದ ದೇವಾಲಯ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸೋತು, ಹಣದ ಕೊರತೆಯಿದ್ದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತನ್ನ ಸ್ವಂತ 3 ಎಕರೆ ಜಮೀನನ್ನು ಮಾರಿ ಸುಮಾರು 2.5 – 3 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಿದ್ದೇನೆ ಎಂದು ಭಾವುಕರಾದರು. ಇದರಿಂದ ಮನಸ್ಸಿಗೆ ತೃಪ್ತಿ ದೊರೆತಿದ್ದು, ಮತ್ತಷ್ಟು ಸೇವೆ ಮಾಡುವ ಆಸೆ ಹೆಚ್ಚಿದೆ. ದಾನ-ಧರ್ಮ-ದಾಸೋಹದ ಪರಂಪರೆಯನ್ನು ಇಲ್ಲಿ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.

ಕನಕಪುರ ದೇಗುಲ ಮಠದ ಡಾ. ಚನ್ನಬಸವಸ್ವಾಮಿಜಿ, ಪುರ ಶ್ರೀ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರ ಸ್ವಾಮಿಜಿ, ಮೈಸೂರು ಕುದೇರು ಮಠದ ಗುರುಶಾಂತ ಸ್ವಾಮಿಜಿ, ಸಂಗಮ ಕಾರ್ಯಸ್ವಾಮಿ ಮಠದ ಮಹದೇಶ್ವರ ಸ್ವಾಮಿಜಿ, ಹುಣಸೂರು ಮಾದವಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮಿಜಿ, ಮಂಡ್ಯ ಬೇಬಿಬೆಟ್ಟ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮಿಜಿ, ಹಂಚೀಪುರ ಶ್ರೀ ಸಿದ್ಧಮಲ್ಲೇಶ್ವರ ಪಟ್ಟದ ಮಠದ ತೋಂಟದಾರ್ಯ ಸ್ವಾಮಿಜಿ ಸೇರಿದಂತೆ ಹಲವು ಶ್ರೀಗಳು, ಕಮಲಮ್ಮ ಸಿದ್ದೇಗೌಡ, ನಾಗೇಂದ್ರ ಆರಾಧ್ಯ, ಶಿವರಾಜಪ್ಪ ಮುಂತಾದ ಮುಖಂಡರು ಉಪಸ್ಥಿತರಿದ್ದರು.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಗ್ಯಾರಂಟಿ ಪರಿಷ್ಕರಣೆ; ಅರ್ಹರಿಗೆ ಅನ್ಯಾಯ ಆಗಬಾರದು

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…

1 hour ago

ರಾಜ್ಯ ರಾಜಕಾರಣದ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ-ಜಾ.ದಳ ಮಿತ್ರಕೂಟ ಯತ್ನ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್‌ನ…

1 hour ago

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…

1 hour ago

ಮುಚ್ಚುವ ಆತಂಕದಲ್ಲಿ ಶತಮಾನ ಕಂಡ ಶಾಲೆ

ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…

2 hours ago

ಸರ್ಕಾರಿ ಕಚೇರಿ; ಮೂಲ ಸೌಕರ್ಯಗಳಿಗೆ ಗೋರಿ!

ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…

2 hours ago