Andolana originals

ಗೌರಿ-ಗಣೇಶ ಹಬ್ಬಕ್ಕೆ ಅರಮನೆ ನಗರಿ ಸಜ್ಜು

ಗೌರಿ-ಗಣೇಶ ಖರೀದಿಸಿದ ಜನರು; ಹೂವು-ಹಣ್ಣು ಖರೀದಿಯೂ ಜೋರು

 

ಮೈಸೂರು: ಗೌರಿ-ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲು ಸಾಂಸ್ಕೃತಿಕ ನಗರಿಯ ಜನತೆ ಸಜ್ಜಾಗಿದ್ದು, ಹಬ್ಬಕ್ಕೆ ಅಗತ್ಯವಿರುವ ಗಣೇಶನ ವಿಗ್ರಹ, ಹೂವು-ಹಣ್ಣು, ಬಾಳೆಕಂದು, ಗರಿಕೆ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯಿತು.

ಒಂದೆಡೆ ಅಗತ್ಯ ವಸ್ತುಗಳ ಖರೀದಿ ಜೋರಾದರೆ, ಇತ್ತ ನಗರದ ಹಲವು ಬಡಾವಣೆಗಳು, ರಸ್ತೆ ಬದಿಗಳಲ್ಲಿ ಗೌರಿ-ಗಣೇಶನ ಮೂರ್ತಿಗಳಿಂದ ತುಂಬಿದ್ದವು. 100 ರೂ. ಬೆಲೆಯ ಪುಟ್ಟ ಗಣಪನಿಂದ ಹಿಡಿದು 300 ಸಾವಿರ ರೂ.ನ ಗಣಪನವರೆಗೂ ನಾನಾ ಬೆಲೆಯ ಮೂರ್ತಿಗಳು ಮಾರಾಟವಾದವು.

ಅಯೋಧ್ಯೆ ರಾಮ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ ‘ಲಾಲ್‌ಬಾಗ್ ರಾಜ”.. ಹೀಗೆ ಬಗೆ ಬಗೆಯ ನಾಲ್ವಾರು ಅಡಿಗಳ ಎತ್ತರದವರೆಗಿನ ಗಣೇಶನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಗೌರಿ ಹಬ್ಬಕ್ಕಾಗಿ ಗಜಗೌರಿ, ಮಂಗಳಗೌರಿ, ಮಡಿಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿ ಮೂರ್ತಿಗಳು ರಾರಾಜಿಸಿದವು. ಪರಿಸರ ಸ್ನೇಹಿ, ಜೇಡಿಮಣ್ಣಿನ ಗಣೇಶನನ್ನು ಗ್ರಾಹಕರು ಖರೀದಿಸಿದರು.

ಹೂ, ಹಣ್ಣು ಖರೀದಿ…

ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿತು. ಹೂವು- ಹಣ್ಣು, ಬಾಳೆಕಂದು, ಗರಿಕೆ ಮಾರಾಟ ಭರ್ಜರಿಯಾಗಿಯೇ ನಡೆಯಿತು. ಬಾಗಿನ, ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಇದರೊಂದಿಗೆ ಬಾಳೆಕಂದು, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಜನರು ವಿಶೇಷವಾಗಿ ಖರೀದಿಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೆ ಕಡಿಮೆ ಇದ್ದ ಅಗತ್ಯ ವಸ್ತುಗಳ ಬೆಲೆಗಳು ಹಬ್ಬದ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದವು. ಏಲಕ್ಕಿ ಬಾಳೆ ಕೆಜಿಗೆ 100 ರೂ.ನಿಂದ 120 ರೂ.ಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ, ಕಿತ್ತಳೆ, ಪೈನಾಪಲ್, ದ್ರಾಕ್ಷಿ ಸೀತಾಫಲ ಮೊದಲಾದ ಹಣ್ಣುಗಳ ಬೆಲೆ ಕನಿಷ್ಠ 30ರಿಂದ 40 ರೂ.ವರೆಗೆ ಹೆಚ್ಚಾಗಿದೆ. ಸೇವಂತಿಗೆ ಮಾರಿಗೆ 100 ರೂ.ನಿಂದ 120 ರೂ.ವರೆಗೆ ಮಾರಾಟವಾದರೆ ಮಲ್ಲಿಗೆ, ಮರಲೆ, ಸುಗಂಧ ರಾಜ, ಕಾಕಡ, ಕನಕಾಂಬರ, ಗುಲಾಬಿ ಹೂ, ಚೆಂಡು ಹೂ, ಮೂರು ರೀತಿಯ ಬಣ್ಣದ ಗಣಗಲೆ ಹೂ ಸೇರಿದಂತೆ ಎಲ್ಲ ಹೂಗಳ ದರವೂ ಕೊಂಚ ಏರಿಕೆಯಾಗಿತ್ತು.

ಬಾಗಿನ ಸಾಮಗ್ರಿಗೆ ಡಿಮ್ಯಾಂಡ್…
ಸಾಮಾನ್ಯವಾಗಿ ಗೌರಿ ಹಬ್ಬಕ್ಕೆ ಅಣ್ಣ-ತಂಗಿಗೆ ಬಾಗಿನ ಕೊಡುವುದು ಸಂಪ್ರದಾಯ. ಅಲ್ಲದೆ, ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಬಾಗಿನ ಸಾಮಗ್ರಿಗೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಗರಿಕೆ, ಬಿಲ್ವಪತ್ರೆ, ಬಾಳೆಕಂದು, ಬಾಗಿನ ನೀಡಲು ಬೇಕಾದ ಮೊರ, ಬಾಗಿನದ ಸಾಮಗ್ರಿಗಳು, ಬಳೆ ಸೇರಿದಂತೆ ಗೌರಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯೂ ಜೋರಾಗಿ ನಡೆಯಿತು.

ಬಟ್ಟೆ ಖರೀದಿ ಜೋರು…
ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದ್ದು, ಪ್ರಭಾ, ಒಲಂಪಿಯಾ ಚಿತ್ರ ಮಂದಿರದ ಬಳಿ, ಸಯ್ಯಾಜಿರಾವ್‌ ರಾವ್ ರಸ್ತೆ, ಗಾಂಧಿ ವೃತ್ತ, ಅಗ್ರಹಾರ, ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಧನ್ವಂತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಗಾಂಧಿ ವೃತ್ತ, ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು.

ಹಣ್ಣುಗಳ ದರ ಪ್ರತಿ ಕೆಜಿಗೆ (ರೂಪಾಯಿಗಳಲ್ಲಿ): ಸೇಬು 200, ದಾಳಿಂಬೆ 200, ಸೀತಾಫಲ 120, ಮರಸೇಬು 100, ಕಿತ್ತಲೆ 120, ಮೊಸಂಬಿ 80, ಏಲಕ್ಕಿ ಬಾಳೆ 130, ದ್ರಾಕಿ 200.

ಹೂವುಗಳ ದರ ಪ್ರತಿ ಕೆಜಿಗೆ (ರೂಪಾಯಿಗಳಲ್ಲಿ): ಸೇವಂತಿಗೆ 300, ಮಲ್ಲಿಗೆ 1500, ಮರಲೆ 100, ಸುಗಂಧ ರಾಜ 400, ಕಾಕಡ 1,000, ಕನಕಾಂಬರ 2,500, ಗುಲಾಬಿ ಹೂ 400.

 

 

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

5 hours ago

ಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರ ಗೆಲುವು,

ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು…

8 hours ago

ಪರಿಷತ್‌ ಚುನಾವಣೆ ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…

9 hours ago

ಪಿಎಫ್‌ಗೆ ಶೇ 8.25 ಬಡ್ಡಿದರ : ಕೇಂದ್ರ ಸರ್ಕಾರದ ಅನುಮೋದನೆ

ಹೊಸದಿಲ್ಲಿ : 2025-26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.25ರಷ್ಟಿ ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ…

10 hours ago

ಕರ್ತವ್ಯ ಲೋಪ ; ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಅಮಾನತ್ತು

ಚಾಮರಾಜನಗರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ…

11 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಏಳು ದಿನ ಭಾರೀ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

16 hours ago