Andolana originals

ಆಶ್ರಯ ಫಲಾನುಭವಿ ಮಹಿಳೆಗೆ ತಪ್ಪಿದ ‘ಆಸರೆ’

ಎಚ್.ಎಸ್.ದಿನೇಶ್‌ಕುಮಾರ್

ಫಲಾನುಭವಿಯ ಹೆಸರಿನ ಬೇರೆ ಮಹಿಳೆಗೆ ಮನೆ ಹಕ್ಕು ಪತ್ರ ವಿತರಣೆ

ನಗರಪಾಲಿಕೆಯ ಆಶ್ರಯ ವಿಭಾಗದ ಕೈಚಳಕ: ದೂರು ದಾಖಲು

ಕಾರ್ಯಕ್ರಮದಲ್ಲಿವಿತರಿಸುವ ನೆಪದಲ್ಲಿ ಮೂಲ ಫಲಾನುಭವಿಯಿಂದ ಹಕ್ಕುಪತ್ರ ವಾಪಸ್ ಪಡೆದಿದ್ದ ಪಾಲಿಕೆ

ಮೈಸೂರು: ಆಶ್ರಯ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಯೊಬ್ಬರಿಗೆ ದೊರೆತಿದ್ದ ಮನೆಯನ್ನು ಅದೇ ಹೆಸರಿನ ಮತ್ತೊಬ್ಬರಿಗೆ ಹಕ್ಕು ಪತ್ರ ನೀಡಿದ್ದು, ಹಾಗೆ ಮನೆ ಪಡೆದವರು ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆ ಮೂಲಕ ಮೂಲ ಫಲಾನುಭವಿಯನ್ನು ವಂಚಿ ಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶ್ರಯ ವಿಭಾಗದಲ್ಲಿ ಈ ಪ್ರಕರಣ ನಡೆದಿದೆ. ಅಲ್ಲಿನ ಸಿಬ್ಬಂದಿ ಮೇಲೆ ಯಾರ ಹತೋಟಿಯೂ ಇಲ್ಲದಂತಾಗಿದೆ.

ಪ್ರತಿದಿನ ಅಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಆಶ್ರಯ ಯೋಜನೆಯ ಅಡಿಯಲ್ಲಿ ಮಹಿಳೆಯೊಬ್ಬರಿಗೆ ಮಂಜೂರಾಗಿದ್ದ ಮನೆಯ ದಾಖಲೆಗಳನ್ನು ಫಲಾನುಭವಿ ಅಲ್ಲದವರಿಗೆ ನೀಡುವ ಮೂಲಕ ಮೂಲ ಮಾಲೀಕರಿಗೆ ವಂಚಿಸಲಾಗಿದೆ.

ಆಶ್ರಯ ವಿಭಾಗ ಎಂದರೆ ಸಾಕು ಕೆಲವರಿಗೆ ಕಿವಿ ನೆಟ್ಟಗಾಗುತ್ತದೆ. ಕಾರಣ ಅಲ್ಲಿನ ಸಿಬ್ಬಂದಿ ಗಳೊಂದಿಗೆ ಶಾಮೀಲಾದಲ್ಲಿ ಸುಲಭವಾಗಿ ಹಣ ಮಾಡ ಬಹುದು ಎಂಬುದು ಮಧ್ಯವರ್ತಿಗಳ ಲೆಕ್ಕಾಚಾರ.

ಆಶ್ರಯ ಯೋಜನೆಯಡಿ ಕಳೆದ ೨೫ ವರ್ಷಗಳಿಂದಲೂ ಸಾವಿರಾರು ಮಂದಿ ಬಡವರಿಗೆ ಮನೆಗಳು ಮಂಜೂರಾಗಿವೆ. ಕೆಲ ಉಳ್ಳವರಿಗೂ ‘ಆಶ್ರಯ’ ದೊರೆತಿದೆ. ಅಂತಹ ಮನೆಗಳಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದೆ. ಹಕ್ಕುಪತ್ರ ಪಡೆಯಬೇಕಾದರೆ ಫಲಾನುಭವಿಗಳು ಸಾಕಷ್ಟು ಬೆವರು ಹರಿಸಬೇಕು. ಅಲ್ಲಿನ ಸಿಬ್ಬಂದಿ ಹೇಳುವ ಅಲಿಖಿತ ಹಾಗೂ ನಿಯಮಬಾಹಿರ ಷರತ್ತುಗಳಿಗೆ ಒಪ್ಪಿಕೊಳ್ಳಬೇಕು.

ಹಾಗಾದರೆ ಮಾತ್ರ ಹಕ್ಕುಪತ್ರ ದೊರಕುತ್ತದೆ. ಇಲ್ಲವಾದಲ್ಲಿ ಕಚೇರಿ ಸಿಬ್ಬಂದಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಯಾರ ಮನೆಗೆ ಯಾರು ಬೇಕಾದರೂ ಹಕ್ಕುಪತ್ರ ಪಡೆದುಕೊಳ್ಳಬಹುದು ಹಾಗೂ ಅಂತಹ ಮನೆಗಳನ್ನು ಲಕ್ಷಾಂತರ ರೂ.ಗಳಿಗೆ ಮಾರಾಟವನ್ನೂ ಮಾಡಬಹುದು. ಈ ಪ್ರಕರಣದಲ್ಲಿ ವಂಚಿತರಾಗಿರುವ ಮಂಜುಳಾ ಎಂಬವರು ನಗರಪಾಲಿಕೆ ಸಿಬ್ಬಂದಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದಾರೆ.

ನಡೆದದ್ದಾದರೂ ಏನು?: ಮೈಸೂರಿನ ಕೆಸರೆ ಬಡಾವಣೆಯ ನಿವಾಸಿ ಮಂಜುಳಾ ಅವರಿಗೆ ೨೦೦೧ರಲ್ಲಿ ಆಶ್ರಯ ಯೋಜನೆಯಡಿ ಎನ್. ಆರ್.ಕ್ಷೇತ್ರ ವ್ಯಾಪ್ತಿಯ ರಮ್ಮನಹಳ್ಳಿ ಬಳಿ ಮನೆ ಮಂಜೂರಾಗಿತ್ತು. ಅವರು ಅಲ್ಲಿಯೇ ವಾಸವಿದ್ದರು. ಕೊರೊನಾ ಸಂದರ್ಭದಲ್ಲಿ ಅವರು ಕೆಸರೆ ಬಳಿಗೆ ಸ್ಥಳಾಂತರಗೊಂಡಿದ್ದರು. ಈ ನಡುವೆ ಅವರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಕ್ಕುಪತ್ರವನ್ನು ಪಡೆದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದರು. ನಂತರ ಅವರಿಂದ ಹಕ್ಕುಪತ್ರ ಪಡೆದ ಪಾಲಿಕೆ ಸಿಬ್ಬಂದಿ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದ್ದರು.

ಇದಾದ ಕೆಲ ದಿನಗಳ ನಂತರ ಅವರು ರಮ್ಮನಹಳ್ಳಿಯ ಮನೆಗೆ ತೆರಳಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಮನೆಯಲ್ಲಿ ಬೇರೊಬ್ಬರು ವಾಸವಿದ್ದರು. ವಾಸವಿ ದ್ದವರು ನಾನು ಮಂಜುಳಾ ಎಂಬವರಿಂದ ಮನೆಯನ್ನು ಖರೀದಿಸಿದ್ದೇನೆ ಎಂದು ಹೇಳಿದ್ದಾರೆ. ಕೂಡಲೇ ಅವರು ಆಶ್ರಯ ವಿಭಾಗದ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ.

ಮಂಜುಳಾ ಎಂಬವರು ಬಂದರು,ಕೊಟ್ಟೆವು!: ಇದು ನಗರಪಾಲಿಕೆ ಕಚೇರಿ ಆಶ್ರಯ ವಿಭಾಗದ ಸಿಬ್ಬಂದಿಗಳ ಅಣಿಮುತ್ತುಗಳು. ಅಸಲಿ ಮಾಲೀಕರೇ ದಾಖಲೆಗಳನ್ನು ಪಡೆಯಬೇಕಾದರೆ ಸಾಕಷ್ಟು ಬೆವರು ಹರಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಯಾರೋ ಬಂದರು, ಅವರಿಗೆ ದಾಖಲೆಗಳನ್ನು ಕೊಟ್ಟೆವು ಎಂದರೆ ನಂಬಲು ಸಾಧ್ಯವಾಗದ ಮಾತು. ನಂತರ ತಮ್ಮ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂಬುದನ್ನು ತಿಳಿದ ಮಂಜುಳಾ ಅವರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಕಲಿ ಮಂಜುಳಾ! ಮಧ್ಯವರ್ತಿಗಳು ಹಾಗೂ ಆಶ್ರಯ ವಿಭಾಗದ ಸಿಬ್ಬಂದಿಗಳು ಸೇರಿ ಅಗ್ರಹಾರದ ನಿವಾಸಿ ಮಂಜುಳಾ ಎಂಬವರಿಗೆ ಮೂಲ ಮಾಲೀಕರಾದ ಮಂಜುಳಾರಿಗೆ ನೀಡಬೇಕಾದ ಹಕ್ಕುಪತ್ರವನ್ನು ನಕಲಿ ಮಂಜುಳಾಗೆ ನೀಡಿದ್ದಾರೆ. ನಂತರ ನೋಂದಣಿಗೆ ಬೇಕಾದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಅಗ್ರಹಾರದ ಮಂಜುಳಾ ಅವರೇ ಮೂಲ ಮಾಲೀಕರು ಎಂದು ಬಿಂಬಿಸಿ ಮಸೂದ್ ಎಂಬವರಿಗೆ ಮನೆಯನ್ನು ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಎಷ್ಟು ಹಣಕಾಸು ವ್ಯವಹಾರ ನಡೆದಿದೆ, ವಂಚನೆಯ ಪ್ರಕರಣದಲ್ಲಿ ಭಾಗಿಯಾದವರೆಷ್ಟು ಮಂದಿ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

 

ಆಂದೋಲನ ಡೆಸ್ಕ್

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

11 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

13 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

16 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

20 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

24 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

24 hours ago