Andolana originals

ಜೊಹಾನ್ಸ್ ಬರ್ಗ್‌ನಲ್ಲಿ ಮಹಾತ್ಮ ಗಾಂಧಿ

ದಿನೇಶ್ ಬಸವಾಪಟ್ಟಣ

ಜೊಹಾನ್ಸ್ ಬರ್ಗ್‌ನ ನಗರ ಪ್ರದಕ್ಷಿಣೆ ಸಮಯದಲ್ಲಿ ನಮ್ಮ ಮಾರ್ಗದರ್ಶಿ ಬಿಲ್ಲಿ, ದಕ್ಷಿಣ ಆಫ್ರಿಕನ್ನರಿಗೆ ಬಹಳ ಅತ್ಯಮೂಲ್ಯ ಅಕ ರಗಳೆಂದರೆ, ಮೂರು ‘ಮ’ಗಳೆಂದು ವಿವರಿಸುತ್ತಿದ್ದ. ಅದಾವುದೆಂದು ಕೇಳಿದೆ. ಒಂದು ಮಹಾತ್ಮಗಾಂಧಿ, ಎರಡು ಮಾರ್ಟಿನ್ ಲೂಥರ್ ಕಿಂಗ್, ಮೂರನೆಯದು ಮಂಡೆಲಾ ಎಂದು ಭಾವನಾತ್ಮಕವಾಗಿ ಹೇಳುತ್ತಿದ್ದ. ನಾನು ಚಿಕ್ಕಂದಿನಲ್ಲಿ ಗಾಂಧಿಯ ದಕ್ಷಿಣ ಆಫ್ರಿಕಾದ ವಾಸ ಮತ್ತು ಅನುಭವಗಳ ಬಗ್ಗೆ ಓದಿ ತಿಳಿದಿದ್ದರೂ ನಾನು ಅತನಿಗೆ ಗಾಂಧಿ ನಿಮಗೆ ಹೇಗೆ ಸಂಬಂಧ ಎಂದು ಕೇಳಿದೆ. ಜೀವನದಲ್ಲಿ ಮೊದಲ ಬಾರಿ ಆಫ್ರಿಕನ್ನರ ಬಾಯಲ್ಲಿ ಮಹಾತ್ಮ ಗಾಂಧಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ನಿರಾಕರಿಸುವ ಸ್ಥಿತಿಯಲ್ಲಿ ಇರಲಿಲ್ಲ.

ಅದಕ್ಕೂ ಮೊದಲು ನೆಲ್ಸನ್ ಮಂಡೆಲಾ ಕೆಲವು ಕಾಲ ಸುವೆಟೋ ಪ್ರಾಂತ್ಯದಲ್ಲಿ ಜೀವಿಸಿದ್ದ ಮನೆಗೆ ಭೇಟಿ ನೀಡುವ ಅವಕಾಶವಿತ್ತು. ಅಲ್ಲಿದ್ದ ಮಾರ್ಗದರ್ಶಿ ನಮಗೆ ಜಗತ್ತಿನಲ್ಲಿ ಒಂದೇ ರಸ್ತೆಯ ಇಬ್ಬರು ಆಫ್ರಿಕನ್ನರು ನೊಬೆಲ್ ಪಾರಿತೋಷಕ ಪಡೆದು ಇತಿಹಾಸ ನಿರ್ಮಿಸಿದರೆಂದು ಬಹಳ ಪ್ರೌಢಿಮೆಯಿಂದ ಹೇಳುತ್ತಿದ್ದ. ಒಬ್ಬರು ಮೊದಲ ಕರಿಯ ಬಿಷಪ್ ಡೆಸ್ಮಾಂಡ್ ಟುಟು ಮತ್ತು ಇನ್ನೊಬ್ಬರು ನೆಲ್ಸನ್ ಮಂಡೆಲಾ. ಅಲ್ಲಿಯವರೆವಿಗೂ ದಕ್ಷಿಣ ಆಫ್ರಿಕಾದ ಬಿಳಿಯರು ಜೀವಿಸುವ ನಗರ ಪ್ರದೇಶಗಳಲ್ಲಿ ಸುತ್ತಾಡಿದ್ದ ನಮಗೆ ಅಲ್ಲಿರುವ ಪ್ರಶಾಂತತೆ, ಗುಹೆಯೊಳಗಿಂದಲೂ ಎಂಬಂತೆ ಬೊಗಳುತ್ತಿದ್ದ ನಾಯಿಗಳು, ರಕ್ಷಣೆಗೆಂದೆ ಕಾಂಪೌಂಡ್ ಗೋಡೆಯ ಮೇಲೆ ಎರಡೆರಡು ಸರಣಿಯಲ್ಲಿ ಭದ್ರಪಡಿಸಿದ ಮುಳ್ಳು ತಂತಿಗಳು, ಹೂ ಮರಗಳಿಂದ, ಬಳ್ಳಿಗಳಿಂದ ತುಂಬಿದ ರಸ್ತೆಗಳು ಮತ್ತು ಭವ್ಯ ಬಂಗಲೆಗಳು ಸುಂದರವಾಗಿ ಕಂಡರೂ ಹೇಳಲರಿಯದ ಆಂತಕ, ಭಯ ಗಾಬರಿ ಮೂಡಿಸುವಂತಿದ್ದವು. ದಕ್ಷಿಣ ಆಫ್ರಿಕಾಗೆ ಮೊದಲು ಬಂದ ಬಿಳಿಯರು, ಕರಿಯರು ವಾಸಿಸುತ್ತಿದ್ದ ಆಯಕಟ್ಟಿನ ಪ್ರದೇಶದಿಂದ ಒಕ್ಕಲೆಬ್ಬಿಸಿ ನಗರದಿಂದ ದೂರದಲ್ಲಿ ನೆಲಸುವಂತೆ ಮಾಡಿದ್ದರು. ಎಲ್ಲ ಚಿಕ್ಕ ಚಿಕ್ಕ ಮನೆಗಳ ಕೊಳಗೇರಿಗಳಾಗಿದ್ದರೂ ಈಗೇನೊ ಅದಕ್ಕೆ ಸರಿಯಾದ ರಸ್ತೆಗಳನ್ನು ನಿರ್ಮಿಸಿದ್ದರು, ಬಿಳಿಯರು ವಾಸಿಸುತ್ತಿದ್ದ ಏಕಾಂತ ಪ್ರದೇಶದಂತಿರದೆ, ಪ್ರವಾಸಿ ಜನಗಳು ಮತ್ತು ನಿವಾಸಿಗಳಿಂದ ರಸ್ತೆಗಳು ತುಂಬಿ ಹಾಡು ನೃತ್ಯಗಳಿಂದ ಜೀವಂತವಾಗಿತ್ತು. ದೇಶ ವಿದೇಶಗಳಿಂದ ಬಂದಿದ್ದ ಬಿಳಿಯರೂ ಸೇರಿ ಎಲ್ಲ ಜನಾಂಗದವರು ಮಂಡೆಲಾ ಮನೆಯನ್ನು ವೀಕ್ಷಿಸಿ ತನ್ಮಯತೆಯಿಂದ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು, ಮನೆಯನ್ನು ವೀಕ್ಷಿಸಲು ವಿತರಿಸಲಾಗುವ ಟಿಕೆಟ್‌ನ್ನು ಸ್ಮಾರಕ ವಸ್ತುವಾಗಿ ಸಂರಕ್ಷಿಸಬಹುದಾಗಿತ್ತು. ನೆಲ್ಸನ್ ಮಂಡೆಲಾ ಯಾವುದೋ ರಾಜ ಮನೆತನಕ್ಕೆ ಸೇರಿದ್ದರಂತೆ, ಆದರೇನೂ ಅವರ ಮನೆ ದೊಡ್ಡ ಅರಮನೆಯಾಗಿರಲಿಲ್ಲ, ಸಾಮಾನ್ಯ ೭ ಚದರಡಿಯ ಅವರ ಮನೆ ಅಲ್ಲಿಗೆ ಅತಿ ದೊಡ್ಡದು. ಒಂದು ಕೊಠಡಿ, ಅಡುಗೆ ಮನೆ, ಎಲ್ಲರೂ ಕೂರುವಂಥ ಊಟದ ಮನೆ, ಸ್ನಾನದ ಮನೆಯ ತುಂಬ ಈಗ ಮಂಡೇಲಾರಿಗೆ ಜಗತ್ತಿನಾದ್ಯಂತ ನೀಡಿದ ಪ್ರಶಸ್ತಿ ಪಾರಿತೋಷಕಗಳಿಂದ ತುಂಬಿ ತುಳುಕಾಡುತ್ತಿದ್ದವು. ನನಗೆ ಮನೆಯ ಮಾರ್ಗದರ್ಶಿಯಾಗಿದ್ದ ವಿದ್ಯಾರ್ಥಿ ಸ್ವಯಂ ಸೇವಕಳೊಬ್ಬಳು ಮಂಡೇಲಾರ ಜೀವನವನ್ನು ವಿವರಿಸುತ್ತಿದ್ದಳು.

ನಂತರ ನಾನು ಮಂಡೇಲಾರಿಗೆ ಗಾಂಧಿಯ ಮಹತ್ವ ಹೇಗೆ ಎಂದು ಪ್ರಶ್ನಿಸಿದೆ. ಆಗ ಆಕೆ ಹೇಗೆ ಸ್ಛೂರ್ತಿಯಾದರು ಮತ್ತು ಅವರ ಸತ್ಯದ ದರ್ಶನ ಬಗೆಗಿನ ಮಹಾತ್ಮಗಾಂಧಿ ಮಂಡೆಲಾರಿಗೆ ಜಿಜ್ಞಾಸೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಕಿಡಿ ದಕ್ಷಿಣ ಆಫ್ರಿಕಾದಲ್ಲಿ ಹೊತ್ತಿಕೊಂಡ ಬಗ್ಗೆ ವಿವರಿಸಿದಳು. ಆಕೆ ಎಂದೂ ಗಾಂಧಿಯೆಂದು ಏಕವಚನದಲ್ಲಿ ಹೆಸರಿಸದೆ ಪ್ರತಿಬಾರಿಯೂ ಮಹಾತ್ಮಗಾಂಧಿಯೆಂದು ಬಹಳ ಗೌರವದಿಂದ ಸಂಬೋಧಿಸುತ್ತಿದ್ದುದನ್ನು ಸೂಕ  ವಾಗಿ ಗಮನಿಸಿದೆ. ನಂತರ ನಾನೂ ಮಹಾತ್ಮಗಾಂಧಿಯೆಂದು ಸಂಬೋಧಿಸಲು ಅನುಸರಿಸಿದೆ. ನಾವು ಗಾಂಧಿಯ ನಾಡಿನಿಂದ ಬಂದವರೆಂದು ಬಹಳ ಗೌರವ ನೀಡುತ್ತಿದ್ದಳು.

ನಂತರ ಜೊಹಾನ್ಸ್ ಬರ್ಗ್‌ನ ಮಾರ್ಷಲ್ ಟೌನಿನಲ್ಲಿ ಇರುವ ಗಾಂಧಿ ವೀಕ್ಷಿಸಲು ಹೊರಟೆವು. ಒಂದು ಕಾಲದಲ್ಲಿ ಜೊಹಾನ್ಸ್ ಬರ್ಗ್‌ನ ಅತ್ಯಂತ ಜನನಿಬಿಡ ಕೇಂದ್ರವಾದ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್, ಗಗನಚುಂಬಿ ಕಟ್ಟಡಗಳಿಂದ ಕೂಡಿದ ವಾಣಿಜ್ಯ ಕೇಂದ್ರವಾಗಿ ಅನೇಕ ದಶಕ ಕಾರ್ಯನಿರ್ವಹಿಸಿದೆ. ಪ್ರಮುಖ ವ್ಯಾಪಾರ ಕೇಂದ್ರಗಳು, ಬ್ಯಾಂಕ್‌ಗಳು, ಕೋರ್ಟ್ ಗಳು, ಬಸ್ ನಿಲ್ದಾಣಗಳು, ಮೆಟ್ರೊ ರೈಲ್ಗಳಿಂದ ಕೂಡಿ, ಒಂದು ಮಾದರಿ ವಾಣಿಜ್ಯ ಕೇಂದ್ರ. ಇದರ ಕೇಂದ್ರಸ್ಥಾನದಲ್ಲಿರುವ ಗಾಂಧಿ ಸ್ಕ್ವೇರ್‌ನ್ನು ಮತ್ತು ಪ್ರತಿಮೆಯನ್ನು ವೀಕ್ಷಿಸುವ ಎಂದಾಗ ನನಗೆ ಮನಸ್ಸಿನಲ್ಲಿ ಮೂಡಿದ್ದು ಅದೇ ಶಾಂತ ಮೂರ್ತಿ, ಬೋಳು ತಲೆ, ಗುಂಡು ಕನ್ನಡಕ ತೊಟ್ಟ, ಸೊಂಟದ ಮೇಲೊಂದು ಕಚ್ಚೆಯನ್ನು ಕಟ್ಟಿ ಕೈಯಲ್ಲೊಂದು ಕೋಲು ಹಿಡಿದು, ತೆಳ್ಳನೆಯ ಬಡಕಲು ದೇಹದ, ನಿರಂತರ ನಡಿಗೆ ಬಿಂಬಿಸುವ ಗಾಂಧಿಯ ಪ್ರತಿಮೆ.

ಆದರೆ ಅಲ್ಲಿ ಕಂಡಿದ್ದು ೧೮೯೩ರಿಂದ ೧೯೧೪ರವರೆವಿಗೂ ಇದ್ದ ಗಾಂಧಿಯ ಸ್ವರೂಪ, ನ್ಯಾಯವಾದಿಯ ಅಂದಿನ ಬ್ಯಾರಿಸ್ಟ್‌ರ್ ಗೌನ್ ತೊಡುಗೆ ತೊಟ್ಟ ನಿಚ್ಚಳ ನಿಲುವಿನ ಪ್ರತಿಭಟನೆಯ ಪ್ರತೀಕದಂತೆ ಒಂದು ಕೈಯಲ್ಲಿ ಪುಸ್ತಕಗಳು ಇನ್ನೊಂದು ಕೈಯನ್ನು ಎದೆಯ ಮೇಲಿಟ್ಟು ಕೊಂಡಂತಹ, ಟಿಂಕಾ ಕ್ರಿಸ್ಟೋಫರ್ ಎಂಬುವವರು ನಿರ್ಮಿಸಿದ ಎಳೆಯ ವಯಸ್ಸಿನ ೨.೫ ಮೀಟರ್ ಎತ್ತರದ ಗಾಂಧಿಯ ಪ್ರತಿಮೆ. ನಾನು ಇದೇ ಮೊಟ್ಟಮೊದಲು ಬಾರಿ ಹೀಗೆ ಗಾಂಧಿಯ ಇನ್ನೊಂದು ರೂಪ ನೋಡಿದ್ದು. ಆದರೆ ಮಾರ್ಗದರ್ಶಿ ಬಿಲ್ಲಿ ಆ ಪ್ರದೇಶದ ಬಗ್ಗೆ ನೀಡಿದ ಮಾಹಿತಿ ಅತ್ಯಂತ ನಿರಾಶಾದಾಯಕವಾಗಿ ಹಾಗೂ ಆತಂಕ ಹುಟ್ಟಿಸುವಂತದ್ದಾಗಿತ್ತು. ೧೯೯೦ರ ಆಸುಪಾಸಿನಲ್ಲಿ ಅತ್ಯಂತ ದೊಡ್ಡ ವಾಣಿಜ್ಯ ಕೇಂದ್ರ ಕ್ರಿಮಿನಲ್‌ಗಳು, ಭೂಗತ ಲೋಕದ ಅಪರಾಧಿಗಳು ವಾದ ಈ ಪ್ರದೇಶವನ್ನು ನಿಧಾನವಾಗಿ ಆಕ್ರಮಿಸಿಕೊಂಡು, ಚಟುವಟಿಕೆಗಳನ್ನು ನಡೆಸತೊಡಗಿದರಂತೆ. ನಂತರ ಕಾನೂನುಬಾಹಿರ ಈ ಪ್ರದೇಶ ಮಹತ್ವವನ್ನು ಕಳೆದುಕೊಂಡು ಅಪರಾಧಿಗಳಕಾರಸ್ಥಾನವಾಗಿ ಮಾರ್ಪಟ್ಟು, ಇಲ್ಲಿ ಓಡಾಡುವುದು ದುಸ್ತರವಾಗಿದೆ ಎಂದು ವಿವರಿಸಿದ.

ಪ್ರಪಂಚಕ್ಕೆ ಅಹಿಂಸೆಯ ಬೀಜವನ್ನು ಬಿತ್ತಿ ಹಿಂಸೆಯನ್ನು ಧೈರ್ಯದಿಂದ ಎದುರಿಸಲು ದಾರಿ ತೋರಿದ ಮಹಾತ್ಮನ ಪ್ರತಿಮೆಯ ಸುತ್ತಲೂ ಇಂದು ಅಪರಾಧಿಗಳು, ಚರಿತ್ರಾ ಹೀನರು, ಭೂಗತ ಪಾತಕಿಗಳು ಆಕ್ರಮಿಸಿಕೊಂಡಿರುವುದನ್ನು ಕೇಳಿ ನನ್ನ ಮನ ಘಾಸಿಗೊಳ ಗಾಯಿತು. ಪ್ರಪಂಚದೆಲ್ಲೆಡೆ ಪ್ರಯಾಣಿಸುವಾಗ ದೇಶದ ಜನ ನಮ್ಮನ್ನು ಗುರುತಿಸುತ್ತಾರೆಂದರೆ ಅದು ಗಾಂಧೀಯ ಮೂಲಕ. ಅನೇಕ ಬಾರಿ ನನ್ನನ್ನು ‘ನೀವು ಎಲ್ಲಿಂದ ಬಂದಿರುವುದು’ ಎಂದು ವಿಚಾರಿಸಿದಾಗ, ನಾನು ಭಾರತವೆಂದರೆ, ‘ಓಹ್ ನೀವು ಗಾಂಧಿ ನಾಡಿನವರೆ’ ಎಂಬ ಉದ್ಗಾರ ಎತ್ತಿದ್ದಿದೆ.

ಜೊಹಾನ್ನೆಸ್ ಬರ್ಗ್‌ನಲ್ಲಿ ನಮ್ಮ ಜೊತೆ ಪ್ರಯಾಣಿಸುತ್ತಿದ್ದವರೆಲ್ಲ ಗಾಂಧೀ ನಾಡಿನವರಾಗಿದ್ದರೂ ಗಾಂಧಿ ಪ್ರತಿಮೆಯ ಹತ್ತಿರ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ಆಘಾತವಾಯಿತು. ಅಲ್ಲಿಯವರೆಗೂ ಪ್ರಯಾಣದಲ್ಲಿ ಸಿಕ್ಕುತ್ತಿದ್ದ ಕಲ್ಲು ಬಂಡೆಗಳ, ನಿರ್ಜೀವ ಕಟ್ಟಡಗಳ ಹಾಗೂ ಕ್ಷುಲ್ಲಕ ವಸ್ತುಗಳ ಮುಂದೆ ನಿಂತು ಸೆಲ್ಛಿ ತೆಗೆದುಕೊಳ್ಳುತ್ತಿದ್ದವರಲ್ಲಿ ಕೆಲವು ನನ್ನ ಸ್ನೇಹಿತರನ್ನು ಬಿಟ್ಟು ಮಿಕ್ಕವರೆಲ್ಲೂ ಪ್ರತಿಮೆಯ ಹತ್ತಿರ ಕಾಣಲಿಲ್ಲ. ಇಡೀ ಜಗತ್ತಿಗೆ ಶಾಂತಿಮಂತ್ರವನ್ನು ಬೋಧಿಸಿದ ಮಹಾತ್ಮ ಗಾಂಧಿಯ ಮುಂದೆ ನಿಲ್ಲುವ, ನೋಡುವ ಹೆಮ್ಮೆಯ ಕ್ಷಣಗಳನ್ನು ನಿರಾಕರಿಸಿದ್ದನ್ನು ಕಂಡು ಒಂದು ಕ್ಷಣ ಮನ ಘಾಸಿಗೊಳಗಾಯಿತು. ನಾವೆಲ್ಲ ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಅವರನ್ನು ತಿರಸ್ಕರಿಸುವ ಮನಸ್ಥಿತಿಯತ್ತ ವಾಲುತ್ತಿರುವವರ ಬಗ್ಗೆ ಕನಿಕರವಾಯಿತು ಮತ್ತು ಮಹಾತ್ಮ ಗಾಂಧಿಯ ಬಗ್ಗೆ ಬದಲಾಗುತ್ತಿರುವ ಜನರ ಭಾವನೆಗಳನ್ನು ಕಂಡು ಮನಸ್ಸು ಚಿಂತಿತವಾಯಿತು.

” ಪ್ರಪಂಚಕ್ಕೆ ಅಹಿಂಸೆಯ ಬೀಜವನ್ನು ಬಿತ್ತಿ ಹಿಂಸೆಯನ್ನು ಧೈರ್ಯದಿಂದ ಎದುರಿಸಲು ದಾರಿ ತೋರಿದ ಮಹಾತ್ಮನ ಪ್ರತಿಮೆಯ ಸುತ್ತಲೂ ಇಂದು ಅಪರಾಧಿಗಳು, ಚರಿತ್ರಾಹೀನರು, ಭೂಗತ ಪಾತಕಿಗಳು ಆಕ್ರಮಿಸಿಕೊಂಡಿರುವುದನ್ನು ಕೇಳಿ ನನ್ನ ಮನ ಘಾಸಿಗೊಳಗಾಯಿತು. ಪ್ರಪಂಚದೆಲ್ಲೆಡೆ ಪ್ರಯಾಣಿಸುವಾಗ ದೇಶದ ಜನ ನಮ್ಮನ್ನು ಗುರುತಿಸುತ್ತಾರೆಂದರೆ ಅದು ಗಾಂಧಿಯ ಮೂಲಕ”

” ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಗುರುತಿಸಲ್ಪಟ್ಟಿರುವ ಅಕ್ಟೋಬರ್ ೨ರಂದು ೨೦೦೭ನೇ ಇಸ್ವಿಯಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಸದಸ್ಯರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಗೆಳೆತನದ ಗುರುತಾಗಿ ವೆಲ್ಲಿಂಗ್ಟನ್ (wellington) ರೈಲ್ವೆ ಸ್ಟೇಷನ್ ಎದುರು ಮಹಾತ್ಮ ಗಾಂಧೀ ಪ್ರತಿಮೆ ಸ್ಥಾಪಿಸಲ್ಪಟ್ಟಿದೆ. ಸಾಮಾನ್ಯವಾಗಿ ರೈಲು ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿದ್ದ ಮಹಾತ್ಮ ಗಾಂಧಿಯ ಸರಳತೆಯನ್ನು ಗೌರವಿಸಿ ರೈಲು ನಿಲ್ದಾಣವನ್ನೇ ಉದ್ದೇಶ ಪೂರ್ವಕವಾಗಿ ಆಯ್ಕೆ ಮಾಡಲಾಗಿದೆ.”

 

 

ಆಂದೋಲನ ಡೆಸ್ಕ್

Recent Posts

ಶಿಷ್ಯವೇತನಕ್ಕೆ ಸಂಶೋಧಕರ ಆಗ್ರಹ : ಭಾನುವಾರ ಸಭೆ

ಮೈಸೂರು : ಶಿಷ್ಯವೇತನಕ್ಕೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಭಾನುವಾರ ಬೆಳಿಗ್ಗೆ 11ಕ್ಕೆ ವಿಶ್ವವಿದ್ಯಾನಿಲಯದ ಕ್ರಾಫರ್ಡ್…

5 hours ago

ನಿರ್ಮಾಣ ಹಂತದಲ್ಲಿದ್ದ ಹನುಮನ ದೇಗುಲದ ಛಾವಣಿ ಕುಸಿತ ; 7 ಭಕ್ತರು ಸಾವು

ಮುಂಬೈ : ಇಲ್ಲಿನ ಪರ್ಭಾನಿಯಲ್ಲಿರುವ ನಿರ್ಮಾಣ ಹಂತದ ಹನುಮನ ದೇವಾಲಯದ ಛಾವಣಿ ಕುಸಿದು 7 ಭಕ್ತರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ…

7 hours ago

ಚೂರಿ ಇರಿತ ಆರೋಪ : ಐವರ ವಿರುದ್ಧ ಪ್ರಕರಣ

ಸಿದ್ದಾಪುರ : ಟಿಂಬರ್ ಯೂನಿಯನ್ ಸಭೆಯಲ್ಲಿ ಮಾರಾಮಾರಿ ನಡೆದು ಇಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಆರೋಪದಡಿ ಐವರ ವಿರುದ್ಧ ಸಿದ್ದಾಪುರ…

9 hours ago

ಹನೂರು | ಪೊನ್ನಾಚಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

ಹನೂರು : ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಕೊಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಚಿರತೆಯನ್ನು ಕೊನೆಗೂ ಸೆರೆ…

10 hours ago

ಮುಂದಿನ ಎರಡು ತಿಂಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದ ಮಳೆ ಬಾರದೇ ಇದ್ದರೂ, ಮುಂದಿನ ಎರಡು ತಿಂಗಳ ಕಾಲ ಕುಡಿಯುವ ನೀರಿಗೆ…

13 hours ago

ಕದನ ವಿರಾಮದ ನಡುವೆ ಮತ್ತೆ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ: 5 ಮಂದಿ ಸಾವು

ಬೈರುತ್:‌ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದ್ದು, ಇಸ್ರೇಲ್ ಮತ್ತು ಇರಾನ್‌ ಬೆಂಬಲಿತ ಹೆಬ್ಜೊಲ್ಲಾ ನಡುವೆ ಕದನ ವಿರಾಮ ಜಾರಿಗೆ…

13 hours ago