ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಬಂಡೀಪುರ ಸಮೀಪದ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಸರಕು ಸಾಗಣೆ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸರಕು ಸಾಗಣೆ ವಾಹನ ಚಾಲಕರೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಪೊಲೀಸ್ ಇಲಾಖೆಯಲ್ಲಿ ಹೋಂಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಸಮವಸ್ತ್ರ ಧರಿಸದೆ ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹಣ ಪಡೆದ ಬಳಿಕ ಯಾವುದೇ ಅಧಿಕೃತ ರಶೀತಿಯನ್ನು ನೀಡುತ್ತಿಲ್ಲ. ಅಲ್ಲದೆ ಅನೇಕ ವರ್ಷಗಳಿಂದ ಹೋಂ ಗಾರ್ಡ್ ಹಣ ವಸೂಲಿ ಮಾಡುತ್ತಿದ್ದು, ಸಮವಸ್ತ್ರ ಧರಿಸದೆ ವಸೂಲಿಗೆ ಇಳಿದಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ತನಿಖೆಯಾಗಬೇಕು. ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತ್ತು ಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕೇರಳ ರಾಜ್ಯಕ್ಕೆ ತೆರಳುವ ಸರಕು ಸಾಗಣೆ ವಾಹನಗಳು ಹಾಗೂ ಖನಿಜ ಸಂಪತ್ತು ಹೊತ್ತ ಟಿಪ್ಪರ್ ಲಾರಿಗಳಿಂದ ಹಣ ಪಡೆದು ವಾಹನಗಳನ್ನು ತಪಾಸಣೆ ಮಾಡದೆ ಬಿಡಲಾಗುತ್ತಿದೆ. ಹಣ ನೀಡದ ವಾಹನಗಳನ್ನು ಮಾತ್ರ ತಪಾಸಣೆಯ ನೆಪದಲ್ಲಿ ವಿಳಂಬಗೊಳಿಸಿ ತೊಂದರೆ ನೀಡಲಾಗುತ್ತಿದೆ ಎಂದು ವಾಹನ ಚಾಲಕರು ದೂರಿದ್ದಾರೆ.
ಇದರಿಂದ ಅಕ್ರಮ ಜಾನುವಾರು ಸಾಗಣೆ ಹಾಗೂ ಖನಿಜ ಸಂಪತ್ತಿನ ಅಕ್ರಮ ಸಾಗಣೆಗೆ ಅವಕಾಶವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ರಾತ್ರಿ ೯ ಗಂಟೆಯ ನಂತರ ಚೆಕ್ಪೋಸ್ಟ್ ಕಾರ್ಯಾಚರಣೆ ಮುಗಿದ ಬಳಿಕವೂ ಕೆಲ ವಾಹನಗಳನ್ನು ಹಣ ಪಡೆದು ಬಿಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸರಕುಗಳನ್ನು ನಿಗದಿತ ಸಮಯಕ್ಕೆತಲುಪಿಸಬೇಕಾದ ಅನಿವಾರ್ಯತೆಯಿಂದ ಹಣ ನೀಡಿ ಮುಂದುವರಿಯಬೇಕಾಗಿದೆ ಎಂದು ಸರಕು ಸಾಗಣೆ ವಾಹನ ಚಾಲಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಆರೋಪಗಳ ಕುರಿತು ಸಂಬಂಧಪಟ್ಟ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಾಗಲಿ, ಗೃಹರಕ್ಷಕ ದಳದ ಸಿಬ್ಬಂದಿಗಳಾಗಲಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಾಗಲಿ ಪ್ರತಿನಿತ್ಯ ಬದಲಾಗಬೇಕು. ಅಲ್ಲದೆ ಚೆಕ್ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯವಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
” ಈ ವಿಚಾರ ತಿಳಿದ ಕೂಡಲೇ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಕ್ರಮಕ್ಕೆ ಪೊಲೀಸ್ ಇಲಾಖೆ ಜೊತೆ ಚರ್ಚಿಸಲಾಗುವುದು. ಸಿಬ್ಬಂದಿಗಳ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.”
-ನಂದೀಶ್, ಡಿಸಿಎಫ್, ಬಂಡೀಪುರ
” ಪ್ರತಿನಿತ್ಯ ಚೆಕ್ಪೋಸ್ಟ್ನಲ್ಲಿ ಲಕ್ಷಾಂತರ ರೂ. ವಸೂಲಿ ನಡೆಸಲಾಗುತ್ತಿದೆ. ಪ್ರತಿ ಲಾರಿಗೆ ೧೦೦-೨೦೦ ರೂ. ಕಡ್ಡಾಯವಾಗಿ ಕೊಡಬೇಕು. ಹಣ ಕೊಟ್ಟರೆ ತಪಾಸಣೆ ಮಾಡುವುದಿಲ್ಲ. ಬೇರೆ ರಾಜ್ಯದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತದೆ. ಕರ್ನಾಟಕದಲ್ಲಿ ಮಾತ್ರ ಚೆಕ್ಪೋಸ್ಟ್ಗಳಲ್ಲಿ ಹಣ ಕೊಟ್ಟರೆ ಯಾರು ಏನು ಕೊಂಡೊಯ್ದರೂ ನೋಡುವುದಿಲ್ಲ.”
-ರಾಜೇಂದ್ರ, ಲಾರಿ ಮಾಲೀಕ, ಕೇರಳ
ಬೆಂಗಳೂರು : ಸರ್ಕಾರಿ ಸೇವೆಯಲ್ಲಿದ್ದುಕೊಂಡು ನಿಯಮಗಳನ್ನು ಉಲ್ಲಂಘಿಸಿ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು…
ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಸರ್ಕಾರದ ಸ್ಪಂದನೆ ಬೆಂಗಳೂರು : ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ…
89 ತಾಲ್ಲೂಕುಗಳಲ್ಲಿ ತೀವ್ರ, 12 ತಾಲ್ಲೂಕುಗಳಲ್ಲಿ ತುಸು ಕಡಿಮೆ ಶೇ. 31ರಷ್ಟು ಮಳೆ ಕೊರತೆ ಶೇ.71ರಷ್ಟು ಬೆಳೆಗಳಿಗೆ ಹಾನಿ ಬೆಂಗಳೂರು…
ಮೈಸೂರು : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಗುರುವಾರ ಮೈಸೂರು ನಗರದ ಮಹಿಳಾ ಪೊಲೀಸ್…
ಮೈಸೂರು : ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10;30ಕ್ಕೆ ಹೆಲಿಕಾಪ್ಟರ್ನಲ್ಲಿ…
ನವದೆಹಲಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯಮಂತ್ರಿ…