ಮಹೇಶ್ ಕರೋಟಿ
ಗುದ್ದಲಿ ಪೂಜೆಗಷ್ಟೇ ಸೀಮಿತವಾದ ರಸ್ತೆ ಕಾಮಗಾರಿ ; ಎಚ್ಚರ ತಪ್ಪಿದಲ್ಲಿ ಅನಾಹುತ; ದುರಸ್ತಿಗೆ ಗ್ರಾಮಸ್ಥರ ಒತ್ತಾಯ
ಕಿಕ್ಕೇರಿ: ಹೋಬಳಿಯ ಲಿಂಗಾಪುರ ಗ್ರಾಮದ ಹರಿಹರಪುರ-ಕೃಷ್ಣಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಹಲವು ತಿಂಗಳ ಹಿಂದೆ ಆರಂಭಿಸಿದ ಗುತ್ತಿಗೆದಾರರು ಜಲ್ಲಿಕಲ್ಲು ಹಾಕಿದ ನಂತರ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟಿರುವುದರಿಂದ ವಾಹನ ಸವಾರರು ಓಡಾಡಲು ಹರಸಾಹಸ ಪಡುವಂತಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಪ್ರತಿನಿತ್ಯ ನೂರಾರು ವಾಹನಗಳು, ಶಾಲಾ ಮಕ್ಕಳು, ರೈತರು ಹಾಗೂ ಗ್ರಾಮಸ್ಥರು ಸಂಚರಿಸುವ ಈ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಡಿರುವ ಜಲ್ಲಿಕಲ್ಲುಗಳು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಬೈಕ್ ಸವಾರರು ಪ್ರತಿ ದಿನ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಯಾರಾದರೂ ಬಿದ್ದು ಪ್ರಾಣ ಕಳೆದುಕೊಂಡ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನು ರಸ್ತೆ ಬದಿಯ ನಿವಾಸಿಗಳ ಪರಿಸ್ಥಿತಿ ಹೇಳತೀರದು. ವಾಹನಗಳು ಸಂಚರಿಸಿದಾಗ ಆವರಿಸುವ ದೂಳು ಮನೆಯೊಳಗೆ ನುಗ್ಗುತ್ತಿದ್ದು, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಆರಂಭವಾದ ಕಾಮಗಾರಿ ಇದೀಗ ಜನರಿಗೆ ಶಾಪವಾಗಿ ಪರಿಣಮಿಸಿದೆ. ಕಾಮಗಾರಿ ಆರಂಭಿಸಿ ಅರ್ಧಕ್ಕೆ ಬಿಟ್ಟು ಜನರ ಜೀವದೊಂದಿಗೆ ಆಟವಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇನ್ನಷ್ಟು ವಿಳಂಬ ಮಾಡದೆ ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಕಷ್ಟಕ್ಕೆ ಅಂತ್ಯ ಹಾಡಬೇಕು. ತಪ್ಪಿದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
” ರಸ್ತೆ ಕಾಮಗಾರಿ ಮಾಡುವ ಮೊದಲು ಡ್ರೈನೇಜ್ನ್ನು ನಿರ್ಮಿಸಬೇಕು. ಡ್ರೈನೇಜ್ ಇಲ್ಲದೆ ರಸ್ತೆ ಎತ್ತರವಾಗಿರುವುದರಿಂದ ಮಳೆನೀರು ಸರಾಗವಾಗಿ ಹರಿದು ಹೋಗದೆ ಮನೆಗಳ ಒಳಗೆ ನುಗ್ಗುವ ಪರಿಸ್ಥಿತಿ ಉಂಟಾಗಿದೆ. ರಸ್ತೆ ಬದಿಯಲ್ಲೇ ಡೇರಿ ಹಾಗೂ ಶಾಲೆ ಇದ್ದು, ಮಳೆ ಬಂದಾಗ ಮಕ್ಕಳು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೂಡಲೇ ಡ್ರೈನೇಜ್ ಕಾಮಗಾರಿ ಪೂರ್ಣಗೊಳಿಸಿ ನಂತರ ರಸ್ತೆ ಕಾಮಗಾರಿ ಕೈಗೊಳ್ಳಬೇಕು.”
-ಪ್ರಫುಲ್ ಕುಮಾರ್, ಗ್ರಾಮಸ್ಥರು
” ಚರಂಡಿ ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ನಿರ್ಮಾಣ ಮಾಡಬಾರದು. ಮೊದಲು ಚರಂಡಿ ವ್ಯವಸ್ಥೆ ಮಾಡಿ ನಂತರ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯಿಂದ ಶಾಲಾ ಮಕ್ಕಳಿಗೆ, ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಎದ್ದೇಳುವ ದೂಳು ಮನೆಗಳಿಗೆ ನುಗ್ಗಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.”
-ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷ
ಭೇರ್ಯ ಮಹೇಶ್ ಕೆ.ಆರ್.ನಗರ: ತಾಲ್ಲೂಕು ಆಡಳಿತದಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಸೇರುವ ನಿರೀಕ್ಷೆ ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿಯ ವಿಶ್ವವಿಖ್ಯಾತ…
ಮಂಜು ಕೋಟೆ ಮುಖ್ಯಮಂತ್ರಿಯಾಗಿದ್ದ ೮ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಮಂಜೂರು ಎಚ್.ಡಿ.ಕೋಟೆ: ರಾಜ್ಯದ ಮತ್ತು…
ಮದನ್ ಕೆ.ಪಿ ಸಾಂಪ್ರದಾಯಿಕ ಮನೆಗಳು, ಧರಿಸುವ ಉಡುಪುಗಳು, ಒಡವೆಗಳ ಅನಾವರಣ ಮೈಸೂರು: ನಗರದ ಬೋಗಾದಿಯಲ್ಲಿರುವ ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ…
ಎಚ್.ಎಸ್.ದಿನೇಶ್ಕುಮಾರ್ ಕಸ ಎಸೆಯುವ ಹಾಟ್ ಸ್ಪಾಟ್ಗಳಲ್ಲಿ ತ್ಯಾಜ್ಯಗಳಿಂದಲೇ ‘ಕಲಾಕೃತಿ’ ರಚನೆ!; ಜನರಲ್ಲಿ ಅರಿವು ಮೂಡಿಸುತ್ತಿರುವ ಪೌರಕಾರ್ಮಿಕರು ಮೈಸೂರು: ಸಿಕ್ಕಸಿಕ್ಕಲ್ಲಿ ಕಸ…
ಸೋಮವಾರಪೇಟೆ: ಇಲ್ಲಿನ ಹೋಂಸ್ಟೇ ಒಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರಿನ ಯುವತಿ ಮೃತಪಟ್ಟಿದ್ದಾಳೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ…