ಹೇಮಾವತಿ ಕಾಲುವೆಗೆ ಅಪಾಯ ಸಾಧ್ಯತೆ: ಕಾಮಗಾರಿ ಸ್ಥಗಿತಕೆ ರೈತರ ಒತ್ತಾಯ
ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಚಟ್ಟಂಗೆರೆ ಗ್ರಾಮದ ಬಳಿ ಸುಮಾರು ೨ ಕಿ.ಮೀ. ದೂರದವರೆಗೆ ಸುರಂಗವನ್ನು ಕೊರೆದು ಹೇಮಾವತಿ ಕಾಲುವೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಕಾಲುವೆಯ ಮೂಲಕ ಸಾವಿರಾರು ಹೆಕ್ಟೇರ್ ಭೂಮಿಗೆ ನೀರು ಹರಿಸಲಾಗುತ್ತದೆ. ಆದರೆ, ಸುರಂಗದ ಮೇಲ್ಭಾಗದಲ್ಲಿ ಏತ ನೀರಾವರಿ ಯೋಜನೆಗೆ ಪೈಪ್ಲೈನ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಗುತ್ತಿಗೆದಾರರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ನಡೆಸುತ್ತಿದ್ದು, ಸುರಂಗ ಮಾರ್ಗದ ಕಾಲುವೆಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಶೀಳನೆರೆ ಹೋಬಳಿಗೆ ಹೇಮಾವತಿ ನದಿ ನೀರನ್ನು ಏತ ನೀರಾವರಿ ಮೂಲಕ ಪೂರೈಕೆ ಮಾಡಲು ಸುಮಾರು ೧೬೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಈ ಕಾಮಗಾರಿ ನಡೆಸುತ್ತಿರುವ ಮಾರ್ಗದಲ್ಲಿ ಚಟ್ಟಂಗೆರೆ ಸುರಂಗ ಮಾರ್ಗದ ಕಾಲುವೆ ಇರುವ ಕಾರಣ ಹೇಮಾವತಿನೀರಾವರಿ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಸುರಂಗ ಸಂರಕ್ಷಣಾ ಪರಿಣತ ಇಂಜಿನಿಯರ್ ಅನ್ನು ಸ್ಥಳದಲ್ಲಿ ನಿಯೋಜನೆ ಮಾಡಿಕೊಂಡು ಕಾಮಗಾರಿ ನಡೆಸಬೇಕಿತ್ತು.
ಆದರೆ, ಏತ ನೀರಾವರಿ ಗುತ್ತಿಗೆದಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಸುರಂಗಮಾರ್ಗದಲ್ಲಿ ಬೃಹತ್ ಹಿಟಾಚಿ ಬಳಸಿ, ಬಂಡೆಗಳನ್ನು ಕೊರೆದು, ಬ್ಲಾಸ್ಟ್ ಮಾಡುವ ಮೂಲಕ ಕಲ್ಲುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಸುರಂಗ ಮಾರ್ಗದ ಕಾಲುವೆಗೆ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಹಾಗಾಗಿ ಕೂಡಲೇ ಅಗತ್ಯ ಸುರಂಗ ತಜ್ಞ ಇಂಜಿನಿಯರನ್ನು ಸ್ಥಳದಲ್ಲಿ ನಿಯೋಜಿಸಿಕೊಂಡು ತಜ್ಞರ ಉಪಸ್ಥಿತಿಯಲ್ಲಿ ಕಾಮಗಾರಿ ನಡೆಸಬೇಕು. ಈ ಮೂಲಕ ಹೇಮಾವತಿ ಕಾಲುವೆಯನ್ನು ಸಂರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಸುರಂಗ ಮಾರ್ಗದ ಕಾಲುವೆಗೆ ಅಪಾಯ ಎದುರಾದರೆ ಇದಕ್ಕೆ ಯಾರು ಹೊಣೆಗಾರರಾಗುತ್ತಾರೆ ಎಂದು ರೈತರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಕೂಡಲೇ ಹೇಮಾವತಿ ಜಲಾಶಯ ಯೋಜನೆಯ ಪಾಂಡವಪುರ(ಚಿನಕುರಳಿ)ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೆ, ಸುರಂಗ ಮಾರ್ಗದಲ್ಲಿ ಬಂಡೆಗಳನ್ನು ಸಿಡಿಮದ್ದು ಬಳಸಿ ಹಾಗೂ ಬೃಹತ್ ಹಿಟಾಚಿ ಬಳಿಸಿ ಬಂಡೆಗಳನ್ನು ಕೊರೆಯುತ್ತಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಚಟ್ಟಂಗೆರೆ ಸುರಂಗ ಮಾರ್ಗವು ಸಂರಕ್ಷಿತ ಪ್ರದೇಶವಾಗಿದೆ. ಹಾಗಾಗಿ ತಾಲ್ಲೂಕು ಆಡಳಿತವು ಕೂಡಲೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಮಗಾರಿನಡೆಸುವಂತೆ ಆದೇಶ ನೀಡಬೇಕು ಎಂದು ಚಟ್ಟಂಗೆರೆ ಸುತ್ತಮುತ್ತಲ ಗ್ರಾಮದ ರೈತರು ತಾಲ್ಲೂಕು ತಹಸಿಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.
” ಚಟ್ಟಂಗೆರೆ ಸುರಂಗ ಮಾರ್ಗದ ಮುಖ್ಯ ನಾಲೆಯು ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಹಾಗೂ ಮಂಡ್ಯ ತಾಲ್ಲೂಕುಗಳ ಸುಮಾರು ೩೦ ಸಾವಿರ ಎಕರೆ ಭೂ ಪ್ರದೇಶಕ್ಕೆ ನೀರು ಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸುರಂಗ ಮಾರ್ಗದ ನಾಲೆಗೆ ಅಪಾಯ ಸಂಭವಿಸುವಂತಹ ಸ್ಥಿತಿಯಲ್ಲಿ ಪೈಪ್ಲೈನ್ಅ ಳವಡಿಸುವ ಕಾಮಗಾರಿಯನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಇದರಿಂದ ನಮ್ಮ ಚಟ್ಟಂಗೆರೆ ಸುರಂಗದ ಮುಖ್ಯ ನಾಲೆಯು ಕಂಪನಗೊಳ್ಳುತ್ತಿದ್ದು ಯಾವುದೇ ಕ್ಷಣದಲ್ಲೂ ನಾಲೆ ಕುಸಿಯುವ ಅಪಾಯ ಇದೆ. ಹಾಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ನಿಲ್ಲಿಸಿ, ಸುರಂಗ ತಜ್ಞರ ಉಪಸ್ಥಿತಿಯಲ್ಲಿ ಕಾಮಗಾರಿ ನಡೆಸಿ ಸುರಂಗ ಮಾರ್ಗದ ಮುಖ್ಯ ನಾಲೆಗೆ ಆಗುವ ಅಪಾಯವನ್ನು ತಪ್ಪಿಸಬೇಕು.”
-ಚಟ್ಟಂಗೆರೆ ನಾಗೇಶ್, ವಕೀಲರು, ಕೆ.ಆರ್.ಪೇಟೆ.
” ಕಂಫ್ರೆಷರ್ನಿಂದ ಕುಳಿ ಹಾಕಿ ಕಲ್ಲು ಬಂಡೆಗಳನ್ನು ಪುಡಿ ಮಾಡುತ್ತಿರುವುದರಿಂದ ಕೆಳ ಭಾಗದಲ್ಲಿರುವ ಚಟ್ಟಂಗೆರೆ ಸುರಂಗ ನಾಲೆಯು ಕಂಪನಕ್ಕೆ ಒಳಗಾಗಿ ಮುಖ್ಯ ನಾಲೆಗೆ ಅಪಾಯ ಎದುರಾಗುವ ಕಾರಣ ಈ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ. ಸುರಂಗ ತಜ್ಞರ ತಾಂತ್ರಿಕ ವರದಿ ಪಡೆದು ಕಾಮಗಾರಿಯನ್ನು ಆರಂಭಿಸಲು ಸೂಚನೆ ನೀಡಲಾಗಿದೆ.”
-ಶ್ರೀನಾಥ್, ಕಾರ್ಯಪಾಲಕ ಇಂಜಿನಿಯರ್, ಹೇಮಾವತಿ ಎಡದಂಡ ನಾಲೆ ವಿಭಾಗ ಪಾಂಡವಪುರ
ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್…
ಮೈಸೂರು : ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದ್ಯ ಸೇವಿಸಿ ಬಂದು ಕಿರುಕುಳ…
ರಾಮನಗರ : ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು…
ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಒತ್ತಾಯ ; ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮಕ್ಕೆ ಆಗ್ರಹ ನವೀನ್…
ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತು ಪರಿಶೀಲಿಸುತ್ತಿರುವ ಅಧಿಕಾರಿಗಳು ಎಚ್.ಡಿ.ಕೋಟೆ : ಕಬಿನಿ ಜಲಾಶಯದ ಹಿನ್ನೀರು ಮತ್ತು ನಾಗರಹೊಳೆ, ಬಂಡೀಪುರ…
ಅಸ್ಪೃಶ್ಯರನ್ನು ಅವರ ನೋವುಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾತ್ಮ ಯಾವುದೇ ಸಮಸ್ಯೆಗೆ ಆಯುಧಗಳು ಮಾತ್ರ ಉತ್ತರವಲ್ಲ ಎಂದು ಮಹಾತ್ಮ ಗಾಂಧಿ ಯಾವಾಗಲೂ…