Andolana originals

ರಾಷ್ಟ್ರೀಯ ಹೆದ್ದಾರಿಗೆ ತಡೆಗೋಡೆ ನಿರ್ಮಾಣಕ್ಕೆ ಶೀಘ್ರ ಚಾಲನೆ

ಪುನೀತ್

೯೪ ಕೋಟಿ ರೂ. ವೆಚ್ಚದ ಕಾಮಗಾರಿ; ೧೮ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ 

ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ೨೧ ಅಪಾಯಕಾರಿ ಸ್ಥಳಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

ಬೆಂಗಳೂರಿನಿಂದ ಕರಾವಳಿ ಭಾಗ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ ೨೭೫ನ್ನು ಸುರಕ್ಷಿತ ಮಾರ್ಗ ಮಾಡುವತ್ತ ರಾಷ್ಟ್ರೀಯ ಹೆದ್ದಾರಿ ವಿಭಾಗ ಹೆಜ್ಜೆ ಇಟ್ಟಿದೆ. ಈ ಹೆದ್ದಾರಿಯ ೨೧ ಕಡೆಗಳಲ್ಲಿ ಇರುವ ಅಪಾಯಕಾರಿ ಸ್ಥಳಗಳಲ್ಲಿ ಕಾಂಕ್ರೀಟ್ ತಡೆಗೋಡೆ ಕಟ್ಟಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್, ಶಿರಾಡಿ ಘಾಟ್‌ಗಳಲ್ಲಿ ಸಮಸ್ಯೆ ಉಂಟಾದರೆ ಇವೆರಡೂ ನಗರಗಳನ್ನು ಸಂಪರ್ಕಿಸುವ ಪ್ರಮುಖ ಪರ್ಯಾಯ ಮಾರ್ಗವಾಗಿ ಸಂಪಾಜೆ ಘಾಟ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೭೫ ಗುರುತಿಸಿಕೊಂಡಿದೆ. ಆದರೆ, ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಈ ಹೆದ್ದಾರಿಯೂ ಹಲವೆಡೆ ಕುಸಿದು ಮಡಿಕೇರಿ-ಸುಳ್ಯ ನಡುವೆ ೨ ತಿಂಗಳುಗಳ ಕಾಲ ಸಂಪರ್ಕ ಕಡಿತವಾಗಿತ್ತು.

ನಂತರದ ವರ್ಷಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕಾರ್ಯಗಳು ನಡೆದಿರುವುದರಿಂದ ಒಂದೆರಡು ಸ್ಥಳಗಳನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಬಹುತೇಕ ಸುರಕ್ಷಿತ ಅನ್ನಬಹುದಾದ ಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ ವಿಭಾಗದ ೯೪ ಕೋಟಿ ರೂ.ಗಳ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಯೋಜನೆಯ ಮೊತ್ತ ಕೂಡ ಬಿಡುಗಡೆ ಆಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆ ಮೇಲ್ಭಾಗ ಮತ್ತು ಕೆಳಭಾಗದ ಎರಡೂ ಕಡೆಯೂ ತಡೆಗೋಡೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಇಳಿಜಾರು ಪ್ರದೇಶಗಳನ್ನು ಕೇಂದ್ರೀಕರಿಸಿ ಕಾಮಗಾರಿ ನಡೆಯಲಿದೆ.

ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಮಡಿಕೇರಿ- ಸಂಪಾಜೆ ಮಧ್ಯೆ ಕಾಟಕೇರಿ, ಕರ್ತೋಜಿ, ೧ನೇ ಮೊಣ್ಣಂಗೇರಿ, ೨ನೇ ಮೊಣ್ಣಂಗೇರಿ, ಮದೆನಾಡು, ಜೋಡುಪಾಲ ಸೇರಿದಂತೆ ಸುಮಾರು ೨೧ ಕಡೆ ಮಣ್ಣು ಕುಸಿತದ ಸಾಧ್ಯತೆಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗವೇ ಗುರುತಿಸಿದೆ. ಈ ಪೈಕಿ ಮಳೆಯ ಅಬ್ಬರ ಹೆಚ್ಚಾದರೆ ಮದೆನಾಡು ಸಮೀಪದ ಕರ್ತೋಜಿ ಸುತ್ತಮುತ್ತ ರಸ್ತೆಯಲ್ಲೇ ನೀರು ಉಕ್ಕುವ ಸಾಧ್ಯತೆ ಇರುವುದರಿಂದ ಹೆಚ್ಚು ಅಪಾಯಕಾರಿ ಆಗಬಹುದು ಎನ್ನುವುದು ಅಧಿಕಾರಿಗಳ ಆತಂಕ. ಇಲ್ಲಿ ೨೦೦ ಮೀಟರ್ ವ್ಯಾಪ್ತಿಯಲ್ಲಿ ೨ ಕಡೆ ಭೂಕುಸಿತದ ಸಾಧ್ಯತೆಯನ್ನು ಅಂದಾಜಿಸಲಾಗಿದೆ.

ದೀರ್ಘಕಾಲೀನ ಪರಿಹಾರ ಕಲ್ಪಿಸುವ ಸಲುವಾಗಿ ನಡೆಸಲಾಗುವ ೯೪ ಕೋಟಿ ರೂ. ಮೊತ್ತದ ಯೋಜನೆ ೧೮ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನುತ್ತಾರೆ ಅಧಿಕಾರಿಗಳು. ಈಗಾಗಲೇ ಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಕರ್ತೋಜಿ ಭಾಗದಿಂದಲೇ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದರ ಜತೆಗೆ ಈ ಭಾಗದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅದನ್ನು ಎದುರಿಸಲು ಕೂಡ ರಾಷ್ಟ್ರೀಯ ಹೆದ್ದಾರಿ ವಿಭಾಗ ಸಜ್ಜಾಗಿದೆ.

” ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ೭೮ ಕಿ.ಮೀ. ನಿಂದ ೧೨೫ ಕಿ.ಮೀ. ತನಕ ೪೭ ಕಿ.ಮೀ. ವ್ಯಾಪ್ತಿಯಲ್ಲಿ ೨೧ ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ೯೪ ಕೋಟಿ ರೂ. ವೆಚ್ಚದ ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆದಾರರಿಗೆ ಕಾಮಗಾರಿಯ ಆದೇಶವನ್ನೂ ನೀಡಲಾಗಿದೆ. ಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಕರ್ತೋಜಿ ಭಾಗದಲ್ಲಿ ಮೊದಲು ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸದ್ಯದಲ್ಲೇ ಕೆಲಸ ಆರಂಭವಾಗಲಿದೆ.”

-ಗಿರೀಶ್, ಎಇಇ, ರಾಷ್ಟ್ರೀಯ ಹೆದ್ದಾರಿ ವಿಭಾಗ

ಆಂದೋಲನ ಡೆಸ್ಕ್

Recent Posts

ಎಸ್‌ಸಿ, ಎಸ್‌ಟಿಗಳ ಹಕ್ಕು ರಕ್ಷಣೆಗೆ ಕ್ರಮ : ಡಾ.ಮೂರ್ತಿ

ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು…

10 hours ago

ಬೆಂಕಿ ಅವಘಡ | ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲು ಸೂಚನೆ ಕೊಟ್ಟ ಯತೀಂದ್ರ ಸಿದ್ದರಾಮಯ್ಯ!

ಮೈಸೂರು : ಸೋಮವಾರ ಪಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ…

11 hours ago

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ತಮಿಳುನಾಡು ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್‌ ಬಂಪರ್‌ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ…

14 hours ago

ಮುಂಗಾರು ಕೊರತೆ: ಹಾರಂಗಿ ಜಲಾಶಯದ ಒಳಹರಿವು ತೀವ್ರ ಕುಸಿತ

ಮಡಿಕೇರಿ: ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲವಾದರೂ ಜಿಲ್ಲೆಯಲ್ಲಿ ಮಳೆ…

16 hours ago

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮು ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ…

17 hours ago

ನಟ ವಿಜಯ್‌ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್‌ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ…

18 hours ago