ಮಹಾದೇಶ್ ಎಂ.ಗೌಡ
ಸರ್ಕಾರದಿಂದ ಹಣ ಬಿಡುಗಡೆಯಾಗದೆ ಕಾಮಗಾರಿ ಸ್ಥಗಿತ; ವಾಹನ ಸವಾರರಿಗೆ ನರಕಯಾತನೆ
ಹನೂರು: ತಾಲ್ಲೂಕಿನ ರಾಮಾಪುರ ಹೋಬಳಿ ಕೇಂದ್ರ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ-ನಾಲ್ ರೋಡ್ ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸು ವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.
ತಾಲ್ಲೂಕು ಕೇಂದ್ರದಿಂದ ಅಜ್ಜೀಪುರ, ರಾಮಾಪುರ, ನಾಲ್ ರೋಡ್, ಗರಿಕೆಕಂಡಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಬಹಳ ಹದಗೆಟ್ಟು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿ ಹಲವಾರು ಪ್ರತಿಭಟನೆಗಳು ಕೂಡ ನಡೆದಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾ.ದಳ ಅಭ್ಯರ್ಥಿಯಾಗಿದ್ದ ಮಂಜುನಾಥ್ರವರು ನಾನು ಶಾಸಕನಾಗಿ ಆಯ್ಕೆಯಾದರೆ ಮೊದಲು ಅಂತರರಾಜ್ಯ ರಸ್ತೆ ಅಭಿವೃದ್ಧಿಗೆ ಕ್ರಮವಹಿಸುತ್ತೇನೆಂದು ಭರವಸೆ ನೀಡಿದ್ದರು. ಈಗ ಅವರು ಶಾಸಕರಾಗಿದ್ದು, ಕೊಟ್ಟ ಮಾತಿನಂತೆ ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ರಾಮಾಪುರ ಗ್ರಾಮದಿಂದ ನಾಲ್ ರೋಡ್ ಗರಿಕೆಕಂಡಿ ಮಾರ್ಗದ ರಸ್ತೆ ಅಭಿವೃದ್ಧಿಗೆ ೨೫ ಕೋಟಿ ರೂ. ವೆಚ್ಚದಲ್ಲಿ ೨೦೨೪ರ ಮಾ.೧೧ರಂದು ಭೂಮಿಪೂಜೆ ನೆರವೇರಿಸಿದ್ದರು. ಆದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲದಿದ್ದರಿಂದ ಕಾಮಗಾರಿ ತಡವಾಗಿ ಪ್ರಾರಂಭವಾಯಿತು.
ಕಳೆದ ಆರು ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದ್ದರೂ ಸರ್ಕಾರದಿಂದ ಹಣಬಿಡುಗಡೆಯಾಗಿಲ್ಲ ಎಂಬ ನೆಪವೊಡ್ಡಿ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ನಿತ್ಯ ವಾಹನ ಸವಾರರು, ದ್ವಿಚಕ್ರ ವಾಹನ ಸವಾರರಿಗೆ ಕಿತ್ತು ಹೋಗಿರುವ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆಯಾಗಿದೆ. ನಾಲ್ರೋಡ್-ಗರಿಕೆಕಂಡಿವರೆಗಿನ ಸುಮಾರು ೩ ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದೆ. ಆದರೆ ನಾಲ್ರೋಡ್ ಗ್ರಾಮದಿಂದ ರಾಮಾಪುರ ಗ್ರಾಮದವರೆಗಿನ ರಸ್ತೆ ಕಾಮಗಾರಿ ನಡೆಯದೆ ಇರುವುದರಿಂದ ತೊಂದರೆಯಾಗುತ್ತಿದೆ.
ಹಲವಾರು ವರ್ಷಗಳಿಂದ ಚಾ.ನಗರ, ಮೈಸೂರು, ಬೆಂಗಳೂರು, ಹಾಸನ ಮತ್ತಿತರ ಜಿಲ್ಲೆಗಳಿಂದ ತಮಿಳುನಾಡಿಗೆ ಹೋಗುವ ವಾಹನಗಳು ಬಣ್ಣಾರಿ ರಸ್ತೆಯ ಮೂಲಕಸಂಚರಿಸುತ್ತಿದ್ದವು. ಆದರೆ ಚೆನ್ನೈ ಕೋರ್ಟ್ ಆ ಮಾರ್ಗದಲ್ಲಿ ಅಧಿಕ ಬಾರದ ವಾಹನಗಳ ಸಂಚಾರವನ್ನು ನಿರ್ಬಂಽಸಿರುವುದರಿಂದ ವಾಣಿಜ್ಯ ಸರಕು ಸಾಗಣೆ ವಾಹನಗಳು ಹನೂರು- ರಾಮಾಪುರ- ಗರಿಕೆಕಂಡಿ ಮಾರ್ಗವಾಗಿ ತಮಿಳುನಾಡಿಗೆ ಸಂಚರಿಸುತ್ತಿವೆ. ಇದರಿಂದ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ.
ರಾಮಾಪುರದಿಂದ ನಾಲ್ರೋಡ್ ಗ್ರಾಮದವರೆಗೆ ಸುಮಾರು ೪ ಕಿ.ಮೀ.ಗೂ ಹೆಚ್ಚು ದೂರದ ರಸ್ತೆ ಅಭಿವೃದ್ಧಿ ಆಗದೆ ಇರುವುದರಿಂದ ಸವಾರರು ಪರದಾಡುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ರಸ್ತೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ವಾಹನ ಸವಾರರು ಮನವಿ ಮಾಡಿದ್ದಾರೆ.
” ರಾಮಾಪುರ ಗ್ರಾಮದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ೨೫ ಕೋಟಿ ರೂ. ವೆಚ್ಚದಲ್ಲಿ ಭೂಮಿಪೂಜೆ ಸಲ್ಲಿಸಲಾಗಿತ್ತು. ಆದರೆ ಹೆಚ್ಚುವರಿ ೧೦ ಕೋಟಿ ರೂ. ಅನುದಾನ ಅವಶ್ಯವಿರುವುದರಿಂದ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದೇನೆ. ಅನುದಾನ ಬಿಡುಗಡೆಯಾದ ನಂತರ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ.”
-ಎಂ.ಆರ್.ಮಂಜುನಾಥ್, ಶಾಸಕರು
” ರಾಮಾಪುರದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಹಾಳಾಗಿತ್ತು. ಶಾಸಕ ಮಂಜುನಾಥ್ರವರು ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಬಾಕಿ ಉಳಿದಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಹೆಚ್ಚಿನ ಅನುಕೂಲವಾಗಲಿದೆ.”
-ರಾಜೇಶ್, ವಾಹನ ಚಾಲಕ
ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು ಜಿಲ್ಲಾಧಿಕಾರಿ…
ಬೆಂಗಳೂರು: ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದೆ.…
ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು…
ಇಂದು ಒಟಿಟಿ ವೇದಿಕೆಗಳಾದ ಅಮೆಜನ್ ಪ್ರೈಮ, ನೆಟ್ಫ್ಲಿಕ್ಸ್, ಡಿಸ್ನಿ+ಹಾಟ್ಸ್ಟಾರ್, ಜೀ೫, ಸೋನಿಲಿವ್ ಮುಂತಾದವುಗಳು ನಮ್ಮ ಮನರಂಜನೆಯ ಅವಿಭಾಜ್ಯ ಅಂಗವಾಗಿವೆ. ಮನೆಯಲ್ಲಿಯೇ…
ರಾಜ್ಯದಲ್ಲಿ ಸರ್ಕಾರಿ ವಿಶ್ವವಿದ್ಯಾನಿಲಯಗಳ ಸಂಯೋಜಿತ ಕೆಲವು ಖಾಸಗಿ ಕಾಲೇಜುಗಳು ವರ್ಷದಿಂದ ವರ್ಷಕ್ಕೆ ಕಾಲೇಜು ಅಭಿವೃದ್ಧಿಯ ಹೆಸರಿನಲ್ಲಿ, ವಿಶ್ವವಿದ್ಯಾನಿಲಯದ ಸೂಚನೆ ಹೆಸರಿನಲ್ಲಿ…
ಕೋರ್ಟ್ ಮೆಟ್ಟಿಲು ಏರಿ ವೈದ್ಯಕೀಯ ಸೀಟು ಪಡೆದ ಸಾಹಸಿ ಗುಜರಾತಿನ ಭಾವನಗರದ ಗೋರ್ಕಿ ಗ್ರಾಮದ ಗಣೇಶ್ ಬರಯ್ಯ ಎಂಟು ಜನ…