Categories: Uncategorized

ಜಾತಿಗಣತಿಗೆ ಹೆಚ್ಚುತ್ತಿರುವ ಒತ್ತಡಕ್ಕೆ ಕೇಂದ್ರ ಮೌನ!

• ಶಿವಾಜಿ ಗಣೇಶನ್‌

ಒಂದು ದೇಶದ ಸಮಗ್ರ ಮಾಹಿತಿ ಮತ್ತು ಅದರ ಚಿತ್ರಣ ಸಿಗಬೇಕೆಂದರೆ ಬಜನಸಂಖ್ಯೆಯೇ ಆಧಾರ. ಇದನ್ನು ಖಾತರಿಪಡಿಸಿಕೊಳ್ಳಲು ಹತ್ತು ವರ್ಷಗಳಿಗೊಮ್ಮೆ ಜನಸಂಖ್ಯೆಯ ಮಾಹಿತಿಯನ್ನು ತಿಳಿಯಲು ಸಮೀಕ್ಷೆ ನಡೆಸುವ ಪದ್ಧತಿಯನ್ನು ಭಾರತ ಮಾತ್ರವಲ್ಲ ಪ್ರಪಂಚದ ಎಲ್ಲ ದೇಶಗಳೂ ಮಾಡುತ್ತಾ ಬಂದಿವೆ. ನಮ್ಮಲ್ಲಿ ಬ್ರಿಟಿಷರು ಆಡಳಿತ ಮಾಡುವಾಗ 1881ರಲ್ಲಿ ಮೊದಲ ಜನಗಣತಿಯನ್ನು ಯಶಸ್ವಿಯಾಗಿ ಮಾಡಿದರು. ಈ ಕೆಲಸ ಚಾಚೂತಪ್ಪದೆ ಮುಂದುವರಿದುಕೊಂಡು ಬಂದಿತು.

ನಮಗೆ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ದೊರೆತ ಮೇಲೆ ಸ್ವತಂತ್ರ ಭಾರತ ಸರ್ಕಾರ 1951ರಲ್ಲಿ ಮೊದಲ ಜನಗಣತಿಯನ್ನು ಮಾಡಿತು. 2011ರವರೆಗೆ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಕರಾರುವಾಕ್ಕಾಗಿ ನಡೆದುಕೊಂಡು ಬಂತು. 2021ರಲ್ಲಿ ನಡೆಯಬೇಕಿದ್ದ ಜನಗಣತಿಗೆ ಕೋವಿಡ್ -19 ಗ್ರಹಣ ಹಿಡಿಯಿತು. ಆದರೆ 2021ರ ಅಂತ್ಯದ ಹೊತ್ತಿಗೆ ಕೊರೊನಾ ಕೊನೆಗೊಂಡಿತ್ತಾದರೂ ನಮ್ಮ ಆಡಳಿತ ವ್ಯವಸ್ಥೆ ಸೇರಿದಂತೆ ಇಡೀ ದೇಶದ ಸ್ಥಿತಿಗತಿ ಅಯೋಮಯವಾಗಿತ್ತು. ಕೊರೊನಾ ಮುಕ್ತಿಯಿಂದ ಜನರಿಗೆ ಪುನ‌ರ್ ಜನ್ಮಸಿಕ್ಕಿದಂತಾಯಿತು. ಈ ಕೊರೊನಾ ಅವಧಿಯಲ್ಲಿ ಹೆಚ್ಚು ಕಡಿಮೆ ಸರ್ಕಾರದ ಆಡಳಿತ ಯಂತ್ರ ಸ್ಥಗಿತವಾಗಿತ್ತು. ಹಾಗಾಗಿ ಜನಗಣತಿಗೆ ಸಿದ್ಧತೆ ನಡೆಯಲಿಲ್ಲ. ಇದರ ಪರಿಣಾಮ 2021ರ ಜನಗಣತಿ ಮುಂದಕ್ಕೆ ಹೋಗುತ್ತಲೇ ಬಂದಿದೆ.

ಕೊರೊನಾ ದಿನಗಳಲ್ಲಿನ ಈ ವಿಳಂಬಕ್ಕೆ ಎದುರಾದ ಕಾರಣಗಳನ್ನು ಅರ್ಥಮಾಡಿಕೊಳ್ಳಬಹುದಿತ್ತು. ಆದರೆ 2021ರ ಅಂತ್ಯದ ಹೊತ್ತಿಗೆ ದೇಶ ಕೊರೊನಾ ಮುಕ್ತವಾಗಿತ್ತು. ಆದರೆ ಆಡಳಿತ ಮತ್ತು ಕುಸಿದಿದ್ದ ಅರ್ಥ ವ್ಯವಸ್ಥೆ ಮತ್ತೆ ಚೇತರಿಸಿಕೊಳ್ಳುವ ಕಡೆ ಸಹಜವಾಗಿ ಕೇಂದ್ರ ಸರ್ಕಾರದ ಗಮನ ಹೆಚ್ಚಿತು. ಆ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯೂ ಆಯಿತು. ದೇಶ ಮತ್ತು ಅರ್ಥ ವ್ಯವಸ್ಥೆ ಸರಿದಾರಿಗೆ ಬಂದಾಯಿತು. ನಾವೀಗ 2024ಕ್ಕೆ ಬಂದು ನಿಂತಿದ್ದರೂ ಇನ್ನೂ ಈ ಜನಗಣತಿ ಅನಿಶ್ಚಿತವಾಗಿರುವುದು ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ವಿಪರ್ಯಾಸ. ಜನ ಸಂಖ್ಯೆಯ ಕರಾರುವಾಕ್ಕಾದ ಮಾಹಿತಿ ಇಲ್ಲದೆ ಯಾವುದೇ ಯೋಜನೆಗಳ ನಾಗಲಿ ಅಥವಾ ತಾತ್ಕಾಲಿಕ ಕಾರ್ಯಕ್ರಮಗಳನ್ನಾಗಲಿ ರೂಪಿಸುವುದು ಕಷ್ಟದ ಕೆಲಸ. ಇದರ ಪರಿಣಾಮ ರಾಜ್ಯಗಳಿಗೆ ಸಂಪನ್ಮೂಲದ ಹಂಚಿಕೆಗೆ ತೊಂದರ ಆಗಲಿದೆ. ಮುಂದಿನ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮಹಿಳಾ ಮೀಸಲಾತಿ ನಿಗದಿ ಮಾಡುವ ಮತ್ತು ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯ ಕಾರ್ಯಗಳು ನನೆಗುದಿಗೆ ಬೀಳಲಿವೆ.

ಜನಗಣತಿ ಕೈಗೆತ್ತಿಕೊಳ್ಳುವ ಕಾರ್ಯವನ್ನು 2020ರ ಡಿಸೆಂಬರ್‌ನಿಂದ ಇದುವರೆಗೆ ಒಂಬತ್ತು ಬಾರಿ ಕೇಂದ್ರ ಸರ್ಕಾರ ಮುಂದೂಡುತ್ತಲೇ ಬರುತ್ತಿದೆ. ಈಗಲೂ ಅದು ಅನಿಶ್ಚಿತವಾಗಿರುವುದಕ್ಕೆ ಕೇಂದ್ರ ಸರ್ಕಾರದ ಗೊಂದಲವೋ. ಅಥವಾ ಮತ್ಯಾವ ಕಾರಣವೋ ತಿಳಿಯದಾಗಿದೆ. ಸದ್ಯಕ್ಕೆ ಈಗ ತುರ್ತಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಒಳಮೀಸಲಾತಿ ಹಾಗೂ ಆರ್ಥಿಕವಾಗಿ ನೀಡಲಾಗುವ ಮೀಸಲಾತಿಗೆ ಅನುಸರಿಸಬೇಕಾದ ಮಾನದಂಡಕ್ಕಾಗಿ ಜನಗಣತಿ ನಡೆಯುವುದು ಅನಿವಾರ್ಯವಾಗಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಈ ಬಾರಿ ಜಾತಿ ಜನಗಣತಿ ನಡೆಸಬೇಕೆನ್ನುವ ಒತ್ತಡ ಹೆಚ್ಚುತ್ತಿದೆ.

ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಜನತಾದಳ (ಯು) ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಬಾರಿಯ ಜನಗಣತಿಯಲ್ಲಿ ಜಾತಿ ಗಣತಿಯನ್ನು ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹ ಪಡಿಸುತ್ತಿವೆ. ಪರಿಶಿಷ್ಟರಿಗೆ ಮತ್ತು ಹಿಂದುಳಿದ ಜಾತಿಗಳಿಗೆ ಮೀಸಲಾತಿ ಮತ್ತು ಕೆಲವು ಸೌಲಭ್ಯವನ್ನು ನಿಗದಿಪಡಿಸಿದಾಗ, ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಿದಾಗ, ನ್ಯಾಯಾಲಯವು ಈ ಜನಾಂಗಗಳ ಸಂಖ್ಯೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತ ಪಕ್ಕಾ ಮಾಹಿತಿಯನ್ನು ಕೇಳುತ್ತದೆ. ಆದ್ದರಿಂದ ಜಾತಿಜನಗಣತಿ ನಡೆಸುವುದು ಅನಿವಾರ್ಯ ಎನ್ನುವುದು ಈ ರಾಜ್ಯಗಳ ಹಕ್ಕೊತ್ತಾಯ.

ನಮ್ಮ ದೇಶದಲ್ಲಿ ಜಾತಿ ಜನಗಣತಿಯು 1881 ರಿಂದ 1931ರವರೆಗೆ ಮಾತ್ರ ನಡೆದಿದೆ. ಆ ನಂತರ ಜಾತಿ ಆಧಾರದಮೇಲೆ ಜನಗಣತಿ ನಡೆದಿಲ್ಲ. ಮೀಸಲಾತಿ ವ್ಯವಸ್ಥೆ ಬಂದ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಲು ಆಯಾ ರಾಜ್ಯಗಳು ಜಾತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಆಧಾರದ ಮೇಲೆ ಸಮೀಕ್ಷೆಗಳನ್ನು ನಡೆಸಿವೆ. ಇಂತಹ ಸಮೀಕ್ಷೆ ನಡೆಸಲು ರಾಜ್ಯಗಳಿಗೆ ಮುಕ್ತ ಅವಕಾಶ ನೀಡುವ ಸಂಬಂಧ ಕೇಂದ್ರ

ಸರ್ಕಾರವು 1961ರಲ್ಲಿ ಒಂದು ಆಜ್ಞೆಯನ್ನು ಹೊರಡಿಸಿತು. ಕೇಂದ್ರದ ಈ ಆಜ್ಞೆಯಂತೆ ರಾಜ್ಯಗಳು ತಳ ಸಮುದಾಯಗಳಿಗೆ ಕಾರ್ಯಕ್ರಮ ರೂಪಿಸಲು ಮತ್ತು ಮೀಸಲಾತಿ ವಿಂಗಡಣೆಗೆ ಆಯೋಗಗಳನ್ನು ರಚಿಸಿ ಸಮೀಕ್ಷೆ ನಡೆಸಿಕೊಂಡು ಬಂದಿವೆ.

ಕರ್ನಾಟಕ ಸರ್ಕಾರ ರಚಿಸಿದ್ದ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಅದರಲ್ಲಿನ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ ಕೆಲವು ಪ್ರಭಾವಿ ಜಾತಿಗಳು ಈ ವರದಿ ಬಹಿರಂಗಪಡಿಸಲು ಮತ್ತು ಅದನ್ನು ಸರ್ಕಾರ ಒಪ್ಪಿಕೊಳ್ಳಲು ಬಲವಾದ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ.

ಇತ್ತೀಚೆಗೆ ಬಿಹಾರ ಸರ್ಕಾರವು ಜಾತಿ ಜನಗಣತಿ ನಡೆಸಿ, ಅದರ ಅಂಕಿ ಅಂಶಗಳನ್ನೂ ಬಹಿರಂಗಪಡಿಸಿದೆ. ಈಗ ಕೇಂದ್ರ ಸರ್ಕಾರ ನಡೆಸುವ ಜನಗಣತಿಯಲ್ಲಿ ಜಾತಿಯನ್ನೂ ಪ್ರಮುಖವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಸರ್ಕಾರ ಇನ್ನೂ ಈ ಬೇಡಿಕೆಗೆ ಸ್ಪಂದಿಸಿಲ್ಲ.

ಈಗ ಹಿಂದುಳಿದ ವರ್ಗಗಳ ಸಂಸದೀಯ ಸಮಿತಿಯು ತನ್ನ ಮೊದಲ ಸಭೆಯನ್ನು ಕರೆದಿದ್ದು, ತನ್ನ ಅಜೆಂಡಾದಲ್ಲಿ ಪ್ರಮುಖವಾಗಿ ಜಾತಿ ಜನಗಣತಿಯನ್ನು ನಡೆಸಬೇಕೆನ್ನುವ ವಿಷಯವನ್ನು ಆದ್ಯತೆಯ ಮೇಲೆ ಚರ್ಚೆಗೆ ತೆಗೆದುಕೊಳ್ಳಬೇಕೆಂದು ಜನತಾದಳ (ಯು) ಸಂಸತ್ ಸದಸ್ಯ ಗಿರಿಧಾರಿ ಯಾದವ್ ಆಗ್ರಹಪಡಿಸಿದ್ದಾರೆ. ಈ ಸಮಿತಿಯ ಸದಸ್ಯರಾಗಿರುವ ಡಿಎಂಕೆಯ ಟಿ.ಆ‌ರ್.ಬಾಲು ಮತ್ತು ಕಾಂಗ್ರೆಸ್ಸಿನ ಮಾಣಿಕ್ಯಂ ಟ್ಯಾಗೋರ್ ಜಾತಿ ಜನಗಣತಿ ನಡೆಸುವ ಅವಶ್ಯಕತೆ ಕುರಿತಂತೆ ಸಮಗ್ರ ಚರ್ಚೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ಸಿನ ಕಲ್ಯಾಣ ಬ್ಯಾನರ್ಜಿ ಮತ್ತು ಮಾಣಿಕ್ಯಂ ಜನಗಣತಿಯ ಹೊಣೆಗಾರಿಕೆಯನ್ನು ನಿರ್ವಹಿಸುವ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಮುಂದೆ ನಡೆಸಲಿರುವ ಜನ ಗಣತಿಯ ವಿವರ ವಿವರವನ್ನು ಸಮಿತಿಗೆ ನೀಡಬೇಕೆಂದು ಒತ್ತಾಯಪಡಿಸಿರುವುದರಿಂದ ಜಾತಿ ಜನಗಣತಿಗೆ ಹೆಚ್ಚಿನ ಒತ್ತಡ ಕೇಳಿ ಬರುತ್ತಿದೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಾಗಲಿ ಅಥವಾ ಗೃಹ ಸಚಿವ ಅಮಿತ್ ಶಾ ಅವರಾಗಲಿ ಇದುವರೆಗೆ ಈ ವಿಷಯದಲ್ಲಿ ಬಾಯಿ ಬಿಟ್ಟಿಲ್ಲ. ದೇಶದಲ್ಲಿ ಇಂತಹ ಒಂದು ಬೇಡಿಕೆ ಬರುತ್ತಿರುವುದನ್ನು ಗಮನಿಸಿ ಸಚಿವ ಸಂಪುಟದಲ್ಲಿ ಚರ್ಚಿಸುವ ಮುನ್ನ ಸರ್ವ ಪಕ್ಷಗಳ ಸದಸ್ಯರ ಸಭೆ ಕರೆದು ಪೂರ್ವಭಾವಿಯಾಗಿ ಮಾತುಕತೆ ನಡೆಸಬೇಕಿತ್ತು. ಅಂತಹ ಯಾವುದೇ ಮಾತುಕತೆಯ ಸುಳಿವು ಇದುವರೆಗೆ ಸರ್ಕಾರದ ಮಟ್ಟದಲ್ಲಿ ಕೇಳಿ ಬರುತ್ತಿಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡಬಹುದು. ಇದರ ಪರಿಣಾಮ ಮತ್ತೆ 2024ರ ಜನಗಣತಿ ನನೆಗುದಿಗೆ ಬೀಳಬಹುದು. 2011ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜನಗಣತಿಯಲ್ಲದೆ ಜಾತಿ ಗಣತಿಯೊಂದನ್ನೂ ನಡೆಸಿದೆ. ಆದರೆ ಅದರ ವಿವರವನ್ನು ಇದುವರೆಗೂ ಬಹಿರಂಗಗೊಳಿಸಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರವೊಂದನ್ನು ಸಲ್ಲಿಸಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಡೆಸಿರುವ ಜಾತಿ ಗಣತಿಯು ಪೂರ್ಣ ದೋಷಗಳಿಂದ ಕೂಡಿದೆ ಎಂದು ತಿಳಿಸಿದೆ.

ಈ ಪ್ರಮಾಣ ಪತ್ರದ ಪ್ರಕಾರ ಮತ್ತು 1931ರಲ್ಲಿ ನಡೆಸಿರುವ ಜಾತಿ ಆಧಾರಿತ ಗಣತಿಯಂತೆ ದೇಶದಲ್ಲಿ 4,147 ಪ್ರಮುಖ ಜಾತಿಗಳಿವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತು ನಡೆಸಿರುವ ಸಮೀಕ್ಷೆಯಂತೆ ಜಾತಿ, ಉಪಜಾತಿಗಳು ಸೇರಿದಂತೆ 46 ಸಾವಿರ ಜಾತಿಗಳು ಇರುವುದಾಗಿ ತಿಳಿದು ಬಂದಿದೆ. ಆದ್ದರಿಂದ ಇದನ್ನು ಆಧರಿಸಿ ಉದ್ಯೋಗ, ಶಿಕ್ಷಣ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ನಿರ್ಧರಿಸುವುದು ಕಷ್ಟ ಎನ್ನುವುದು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿನ ಮಾಹಿತಿ.

ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನವನ್ನೂ ನೀಡಿಲ್ಲ. ಹಾಗಾಗಿ ಜಾತಿ ಜನಗಣತಿ ನಡೆಸುವುದಕ್ಕೆ ಕೇಂದ್ರ ಸರ್ಕಾರ ಒಲವು ತೋರುತ್ತಿಲ್ಲ. ಬಿಹಾರ ಸರ್ಕಾರವು ಈಗಾಗಲೇ ಜಾತಿ ಜನಗಣತಿಯನ್ನು ನಡೆಸಿದೆ. ಎನ್‌ಡಿಎ ಭಾಗವಾಗಿರುವ ನಿತೀಶ್ ಕುಮಾರ್ ಅವರ ಜನತಾ ದಳ (ಯು) ಮತ್ತು ಚಿರಾಗ್ ನೇತೃತ್ವದ ಎಲ್‌ಜೆಪಿ ಜಾತಿ ಜನಗಣತಿ ನಡೆಸಬೇಕೆನ್ನುವ ನಿಲುವನ್ನು ಹೊಂದಿದ್ದು, ಇದು ಎನ್‌ಡಿಎ ನೇತೃತ್ವ ವಹಿಸಿರುವ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಜೊತೆಗೆ ಜಾತಿ ಗಣತಿ ನಡೆಸಿರುವ ಕಾಂತರಾಜು ಆಯೋಗದ ವರದಿಗೆ ಈಗ ಎನ್‌ಡಿಎ ಭಾಗವಾಗಿರುವ ಜನತಾದಳ (ಎಸ್) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಒಟ್ಟಾರೆ ಇದುವರೆಗೆ ರಾಜಕೀಯ ವಲಯದಲ್ಲಿ ಜಾತಿ ಪ್ರಭಾವದಿಂದ ಅಧಿಕಾರದ ರುಚಿ ಅನುಭವಿಸಿರುವ ಬಲಿಷ್ಠ ಜಾತಿಗಳ ನೇತೃತ್ತ ಇರುವ ಪಕ್ಷ ಗಳು ಮತ್ತು ಬಲಿಷ್ಠ ಜಾತಿಗಳು ಜಾತಿ ಗಣತಿ ನಡೆಸುವುದಕ್ಕೆ ವಿರುದ್ದವಾಗಿದೆ.

ಯಾವುದೇ ವಿಷಯದಲ್ಲೂ ಪ್ರತಿಪಕ್ಷಗಳ ಅಭಿಪ್ರಾಯವನ್ನು ಗೌರವಿಸದ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಸಂದಿಗ್ಧ ಸ್ಥಿತಿಯ ವಿವಾದವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲಕಾರಿ. ಆದರೆ ಜಾತಿ ಗಣತಿ ವಿವಾದವನ್ನೇ ಮುಂದು ಮಾಡಿ ಜನಗಣತಿಯನ್ನು ಮುಂದೂಡುವುದು ಹತ್ತಾರು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.

ಆಂದೋಲನ ಡೆಸ್ಕ್

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

12 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

14 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

18 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

22 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

1 day ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

1 day ago