Andolana originals

ಲಿಂಗಾಂಬುಧಿ ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿ

ಚಿರಂಜೀವಿ ಸಿ ಹುಲ್ಲಹಳ್ಳಿ

ಸೆಪ್ಟೆಂಬರ್ ೧ರಿಂದ ಜಾರಿ; ಮಾಸಿಕ ಪಾಸ್ ಸೌಲಭ್ಯ

ವಾಯುವಿಹಾರಿಗಳ ಅಸಮಾಧಾನ ವಯಸ್ಕರಿಗೆ ೧೦ ರೂ., ಮಕ್ಕಳಿಗೆ ೫ ರೂ. ಶುಲ್ಕ 

ಮೈಸೂರು: ನಗರದ ಪ್ರಮುಖ ಹಸಿರು ತಾಣವಾಗಿರುವ ಲಿಂಗಾಂಬುಧಿ ಕೆರೆ ಪ್ರವೇಶ ಮಾಡುವವರಿಗೆ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕೆರೆಯಲ್ಲಿ ವಾಯುವಿಹಾರ ಮಾಡುವವರು ಇನ್ನು ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ. ಕೆರೆಯ ಆವರಣದಲ್ಲಿರುವ ವೃಕ್ಷೋದ್ಯಾನ ಪ್ರವೇಶಕ್ಕೆ ಸೆಪ್ಟೆಂಬರ್ ೧ರಿಂದ ಶುಲ್ಕ ವಿಧಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಈ ಕ್ರಮಕ್ಕೆ ಅನೇಕ ವಾಯುವಿಹಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ನೈಋತ್ಯ ಭಾಗದಲ್ಲಿರುವ ಲಿಂಗಾಂಬುಧಿ ಕೆರೆ ತನ್ನ ವಿಶಾಲ ಜಲಪ್ರದೇಶ ಹಾಗೂ ಸಮೃದ್ಧ ಜೀವವೈವಿಧ್ಯದಿಂದ ಗಮನ ಸೆಳೆದಿದೆ. ಸುಮಾರು ೨೨ ಚದರ ಕಿಲೋ ಮೀಟರ್ ಜಲಾನಯನ ಪ್ರದೇಶ ಹೊಂದಿರುವ ಕೆರೆಗೆ ಪ್ರತಿದಿನ ನೂರಾರು ಮಂದಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಕ್ರೀಡಾಪಟುಗಳು ಓಟದ ಅಭ್ಯಾಸ ನಡೆಸಿದರೆ, ಹಿರಿಯ ನಾಗರಿಕರು ಹಾಗೂ ಕುಟುಂಬಗಳು ಸಮಯ ಕಳೆಯಲು ಕೆರೆ ಆವರಣವನ್ನು ಬಳಸುತ್ತಾರೆ.

ಲಿಂಗಾಂಬುಧೀ ಕೆರೆಯ ಸುಮಾರು ೮೦ ಎಕರೆ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಿ ‘ಲಿಂಗಾಂಬುಧಿ ಕೆರೆ ವೃಕ್ಷೋದ್ಯಾನ’ ರೂಪಿಸಲಾಗಿದೆ. ಇದುವರೆಗೆ ಅರಣ್ಯ ಇಲಾಖೆಯ ಅನುದಾನದಿಂದ ಉದ್ಯಾನವನದ ನಿರ್ವಹಣೆ ನಡೆಯುತ್ತಿತ್ತು. ಆದರೆ ವೃಕ್ಷೋದ್ಯಾನಗಳಿಗೆ ಪ್ರವೇಶ ಶುಲ್ಕ ವಿಧಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಅನುದಾನದ ಕೊರತೆಯೂ ಎದುರಾಗಿದೆ. ಹೀಗಾಗಿ ಕೆರೆಯ ನಿರ್ವಹಣಾ ವೆಚ್ಚ ಭರಿಸಲು ಶುಲ್ಕ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ

೨೦೨೨ರಲ್ಲಿ ಶುಲ್ಕ ನಿಗದಿ ಪ್ರಯತ್ನ ವಿಫಲ:

ಲಿಂಗಾಂಬುಧಿ ಕೆರೆಗೆ ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾವನೆ ಇದೇ ಮೊದಲಲ್ಲ. ೨೦೨೨ರಲ್ಲಿಯೂ ಅರಣ್ಯ ಇಲಾಖೆ ಇದೇ ರೀತಿಯ ಕ್ರಮಕ್ಕೆ ಮುಂದಾಗಿತ್ತು. ಆಗ ಲಿಂಗಾಂಬುಧಿ ನಗರ ಉದ್ಯಾನ ವಾಯುವಿಹಾರಿಗಳ ಸಮಿತಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿತ್ತು. ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಇಲಾಖೆ ಶುಲ್ಕ ವಿಧಿಸುವ ನಿರ್ಧಾರವನ್ನು ಕೈಬಿಟ್ಟಿತ್ತು. ಇದೀಗ ಮತ್ತೆ ಶುಲ್ಕ ಜಾರಿಗೊಳಿಸಲು ಮುಂದಾಗಿರುವುದು ವಾಯುವಿಹಾರಿಗಳಲ್ಲಿ ಆಕ್ರೋಶ ಮೂಡಿಸಿದೆ.

” ರಾಜ್ಯ ಸರ್ಕಾರದ ಸೂಚನೆಯಂತೆ ಕೆರೆ ನಿರ್ವಹಣೆಗೆ ಶುಲ್ಕ ನಿಗದಿಪಡಿಸಲಾಗಿದೆ. ಸಾರ್ವಜನಿಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.”

 ಪರಮೇಶ್ವರ್, ಡಿಸಿಎಫ್, ಮೈಸೂರು

” ನಿತ್ಯ ವಾಯುವಿಹಾರಕ್ಕೆ ಬರುವ ಜನರಿಂದಲೂ ಶುಲ್ಕ ಪಡೆಯುವುದು ಸರಿಯಲ್ಲ. ಈ ಹಿಂದೆಯೂ ನಮ್ಮ ಬಳಗ ಇದನ್ನು ವಿರೋಧಿಸಿತ್ತು. ಇದೀಗ ಮತ್ತೆ ಅರಣ್ಯ ಇಲಾಖೆಯ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು.”

ನಾಗೇಶ್, ಅಧ್ಯಕ್ಷ, ಲಿಂಗಾಂಬುಧಿ ಮಿತ್ರರ ಬಳಗ 

ಐತಿಹಾಸಿಕ ಹಿನ್ನೆಲೆ:  ಮಹಾರಾಣಿ ಕೃಷ್ಣವಿಲಾಸ ಲಿಂಗರಾಜಮ್ಮಣ್ಣಿಯವರ ಸ್ಮರಣಾರ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ೧೮೨೮ರಲ್ಲಿ ಲಿಂಗಾಂಬುಧಿ ಕೆರೆಯನ್ನು ನಿರ್ಮಿಸಿದರು. ಸುಮಾರು ೨೫೦ ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ೧೫೦ ಎಕರೆ ಪ್ರದೇಶ ಜಲರಾಶಿಯಾಗಿದ್ದರೆ, ಉಳಿದ ಸುಮಾರು ೧೦೦ ಎಕರೆ ಪ್ರದೇಶದಲ್ಲಿ ಮೀಸಲು ಅರಣ್ಯವಿದೆ.

 

 

ಆಂದೋಲನ ಡೆಸ್ಕ್

Recent Posts

ರಸ್ತೆ ಕಾಮಗಾರಿ ಕಳಪೆ: ಸಾರ್ವಜನಿಕರ ಆರೋಪ

ದಾಸೇಗೌಡ ಸರಗೂರು ಸರಗೂರು: ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆಗ್ರಹ ಸರಗೂರು: ಪಟ್ಟಣದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ…

1 min ago

20 ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಟ

ಮಹಾದೇಶ್ ಎಂ.ಗೌಡ ಅಧಿಕಾರಿಗಳ ವಿರುದ್ಧ ಕೌದಳ್ಳಿ ಗ್ರಾಮದ ಮಹಿಳೆಯರ ಆಕ್ರೋಶ  ಹನೂರು: ಕುಡಿಯುವ ನೀರಿಗಾಗಿ ಕಳೆದ ಹಲವು ದಿನಗಳಿಂದ ಪರಿತಪಿಸುತ್ತಿದ್ದರೂ…

6 mins ago

ಮಾಲೀಕರು ಒಪ್ಪಿದರೆ ಪರಿಹಾರ ನೀಡಿ, ಇಲ್ಲವೇ ಭೂಮಿ ಹಿಂತಿರುಗಿಸಿ

ಕೆ.ಬಿ.ರಮೇಶನಾಯಕ ಮೈಸೂರು: ಸರ್ಕಾರದ ನಿರ್ದೇಶನ ಉಲ್ಲಂಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಹಿಂದಿನ ಮುಡಾ) ಮಂಜೂರು ಮಾಡಿದ್ದ ಬದಲಿ ನಿವೇಶನಗಳ ಹಂಚಿಕೆ…

23 mins ago

ಮೈಸೂರು ಜಿಲ್ಲೆ: ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು!

ಕೆ.ಬಿ.ರಮೇಶನಾಯಕ ಮೈಸೂರು: ೨೦೨೯ರ ಲೋಕಸಭಾ ಚುನಾವಣೆಗೂ ಮುನ್ನ ಕ್ಷೇತ್ರಗಳ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ…

28 mins ago

ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆಯ ವಿವರ

ಕೊಡಗು: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ…

16 hours ago