ಕೆ.ಬಿ.ರಮೇಶನಾಯಕ
ಮೈಸೂರು: ಸರ್ಕಾರದ ನಿರ್ದೇಶನ ಉಲ್ಲಂಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಹಿಂದಿನ ಮುಡಾ) ಮಂಜೂರು ಮಾಡಿದ್ದ ಬದಲಿ ನಿವೇಶನಗಳ ಹಂಚಿಕೆ ಆದೇಶವನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದ ನಂತರ ದಿನಕ್ಕೊಂದು ತಿರುವು ಪಡೆಯುವ ಜತೆಗೆ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ.
ಮೂರು ದಶಕಗಳ ಹಿಂದೆ ಮಾಲೀಕರ ಒಪ್ಪಿಗೆ ಇಲ್ಲದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಮಿ ಸ್ವಾಧಿನಪಡಿಸಿಕೊಂಡು ನಿವೇಶನ ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ರೈತರು ಒಪ್ಪಿದರೆ ಪರಿಹಾರ ನೀಡಿ ಅಥವಾ ಭೂಮಿಯನ್ನು ಮಾಲೀಕರಿಗೆ ಒಪ್ಪಿಸಿ ಎಂದು ನ್ಯಾಯಾಲಯ ಆದೇಶ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಬದಲಿ ನಿವೇಶನ ಹಂಚಿಕೆ ಆದೇಶ ರದ್ದುಪಡಿಸುವ ರಾಜ್ಯಸರ್ಕಾರದ ತೀರ್ಮಾನದಿಂದಾಗಿ ಭೂಮಿ ಕಳೆದುಕೊಂಡವರು ಭೂಮಿಯನ್ನೇ ಬಿಟ್ಟುಕೊಡುವಂತೆ ಪಟ್ಟುಹಿಡಿದಿರುವುದರಿಂದ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸಂದಿಗ್ಧತೆ ಮತ್ತು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಏನಿದು ಪ್ರಕರಣ? : ಮೈಸೂರಿನ ಕ್ಯಾತಮಾರನಹಳ್ಳಿ ಗ್ರಾಮದ ಎತ್ತಯ್ಯ ಹಾಗೂ ಮರಯ್ಯ ಎಂಬವರಿಗೆ ಸೇರಿದ ಕೆಸರೆ ಸರ್ವೆ ನಂಬರ್ ೪೩೦ರಲ್ಲಿ ೮.೩೦ ಎಕರೆ ಜಮೀನಿದ್ದು, ಇದರಲ್ಲಿ ೩.೧೫ ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಉಳಿದ ಜಮೀನನ್ನು ಹಾಗೆಯೇ ಉಳಿಸಿಕೊಂಡಿದ್ದರು. ಆದರೆ, ೧೯೯೨ರಲ್ಲಿ ಅಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಕೆಸರೆ- ದೇವನೂರು ಮೂರನೇ ಹಂತದ ಬಡಾವಣೆಯನ್ನು ರಚನೆ ಮಾಡಲು ಮಾಲೀಕರ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನಪಡಿಸಿಕೊಂಡು ನಿವೇಶನಗಳನ್ನು ರಚನೆ ಮಾಡಿತ್ತು. ಮುಡಾ ಕೈಗೊಂಡ ಈ ತೀರ್ಮಾನದ ವಿರುದ್ಧ ಮರಯ್ಯ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಭೂಸ್ವಾಧೀನಕ್ಕೆ ಪರಿಹಾರವನ್ನು ಕೊಡದೆ ಹಾಗೂ ಒಪ್ಪಿಗೆ ಇಲ್ಲದೆ ಸ್ವಾಧೀನಕ್ಕೆ ಪಡೆದು ಬಡಾವಣೆ ರಚನೆ ಮಾಡಿದ್ದ ತಪ್ಪನ್ನು ಎತ್ತಿ ಹಿಡಿದಿದ್ದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾ.ಇಂದ್ರೇಶ್, ೨೦೨೪ರಲ್ಲಿ ಆರು ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಆದೇಶ ನೀಡಿದ್ದರು. ಆದರೆ, ಅಧಿಕಾರಿಗಳು ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ತನಿಖೆ ನಡೆಸುತ್ತಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮಯ ನೀಡಬೇಕು ಎಂದು ಕೋರಿದ್ದರಿಂದ ಉಚ್ಚ ನ್ಯಾಯಾಲಯ ಛೀಮಾರಿ ಹಾಕಿ ಪರಿಹಾರ ಹಾಗೂ ಬದಲಿ ನಿವೇಶನ ಕೊಡುವಂತೆ ಆದೇಶ ನೀಡಿತ್ತು. ಈ ತೀರ್ಪು ಹೊರ ಬರುವ ಹೊತ್ತಿಗೆ ಭೂಮಿಯ ಮಾಲೀಕರಾದ ಎತ್ತಯ್ಯ ಹಾಗೂ ಪುತ್ರ ಮರಯ್ಯ ಮರಣವನ್ನಪ್ಪಿದ್ದರು. ನಂತರ, ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠದ ಆದೇಶದಂತೆ ಕ್ರಮಕೈಗೊಳ್ಳುವ ಬದಲಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು.
ತಾತನ ಹೆಸರಿನಲ್ಲಿದ್ದ ಜಮೀನನ್ನು ಪೌತಿ ಖಾತೆ ಮಾಡಿಸಿಕೊಂಡಿದ್ದ ಮೊಮ್ಮಕ್ಕಳಾದ ಗಿರೀಶ್ ಹಾಗೂ ಶಿವು ಎಂಬವರು ಕಾನೂನು ಸಮರವನ್ನು ಮುಂದುವರಿಸಿದ್ದರು. ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರು ಕೂಡ ರೈತರಿಗೆ ಭೂ ಪರಿಹಾರ ಏಕೆ ಕೊಟ್ಟಿಲ್ಲ, ರೈತರ ಒಪ್ಪಿಗೆ ಇಲ್ಲದೆ ನಿವೇಶನಗಳನ್ನು ಹಂಚಿಕೆ, ಮಾರಾಟ ಮಾಡಿರುವುದರಿಂದ ಬದಲಿ ನಿವೇಶನ ಏಕೆ ಕೊಟ್ಟಿಲ್ಲವೆಂದು ಪ್ರಶ್ನಿಸಿದ್ದರು. ಭೂಮಾಲೀಕರ ವಾದ ಹಾಗೂ ಎಂಡಿಎ ಅಧಿಕಾರಿಗಳ ಪ್ರತಿವಾದವನ್ನು ಆಲಿಸಿದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು, ತನಿಖೆ ವಿಚಾರಣೆಯ ಹಂತದಲ್ಲಿದ್ದರೆ ನಡೆಯಲಿ. ಭೂಮಿ ಸ್ವಾಧೀನಕ್ಕೂ ಹಾಗೂ ವಿಚಾರಣೆಗೂ ಸಂಬಂಧವಿಲ್ಲ. ಭೂಮಿಯ ಮಾಲೀಕರು ಒಪ್ಪಿದರೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಭೂಮಿಯನ್ನು ಮಾಲೀಕರಗೆ ಸುಪರ್ದಿಗೆ ಒಪ್ಪಿಸ ಬೇಕು ಎಂದು ಜೂನ್ ೨೮ರಂದು ಮಹತ್ವದ ಆದೇಶ ನೀಡಿದ್ದರು.
ವಾಪಸಾತಿಗೆ ಜಮೀನು ಇಲ್ಲ: ಹೈಕೋರ್ಟ್ ಆದೇಶದಂತೆ ಮಾಲೀಕರಿಗೆ ಭೂಮಿ ವಾಪಸ್ ನೀಡಲು ಎಂಡಿಎ ಬಳಿ ಭೂಮಿಯೇ ಇಲ್ಲದಂತಾಗಿದೆ. ಹಿಂದಿನ ಎಂಡಿಎ ಸ್ವಾಧಿನಪಡಿಸಿಕೊಂಡಿದ್ದ ೫.೧೫ ಎಕರೆ ಜಮೀನಿನಲ್ಲಿ ೧೧೫ ನಿವೇಶನಗಳನ್ನು ರಚಿಸಿ, ಹಂಚಿಕೆ ಮಾಡಿದ್ದರಿಂದ ಮಾಲೀಕರು ಮನೆಗಳನ್ನು ಕಟ್ಟಿ ವಾಸ ಮಾಡುತ್ತಿದ್ದಾರೆ. ಅಂದಿನ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಭೂಮಿಯ ಮಾಲೀಕರಿಗೆ ಪರಿಹಾರವೂ ಸಿಕ್ಕಿಲ್ಲ. ಇತ್ತ ಬದಲಿ ನಿವೇಶನಗಳೂ ಹಂಚಿಕೆಯಾಗಿಲ್ಲದೆ ನಿತ್ಯ ಮುಡಾ ಕಚೇರಿ ಹಾಗೂ ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಬದಲಿ ನಿವೇಶನಗಳ ಹಂಚಿಕೆ ಆದೇಶವನ್ನೇ ರದ್ದುಪಡಿಸಿರುವ ಸರ್ಕಾರ ಈಗ ಭೂಮಿಯನ್ನು ಕಳೆದುಕೊಂಡ ರೈತರಿಗೆ ಯಾವ ರೀತಿಯಲ್ಲಿ ನ್ಯಾಯ ಒದಗಿಸಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
” ನಮ್ಮ ತಾತನ ಹೆಸರಿನಲ್ಲಿದ್ದ ಜಮೀನನ್ನು ಒಪ್ಪಿಗೆ ಇಲ್ಲದೆ ಸ್ವಾಧಿನಪಡಿಸಿಕೊಂಡಿದ್ದ ಹಿಂದಿನ ಮುಡಾ ಪರಿಹಾರವನ್ನಾಗಲೀ ಅಥವಾ ಬದಲಿ ನಿವೇಶನವನ್ನಾಗಲಿ ಕೊಟ್ಟಿಲ್ಲ. ಬದಲಿ ನಿವೇಶನ ಕೊಡಲಾಗಿದೆ ಎನ್ನುವಂತೆ ಮಾತನಾಡುವವರು ನಮ್ಮ ಸಮಸ್ಯೆಯನ್ನು ಅರಿಯಬೇಕು. ಹೈಕೋರ್ಟ್ನ ದ್ವಿಸದಸ್ಯ ಪೀಠ ಆದೇಶ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ನಮಗೆ ಪರಿಹಾರ ಬೇಡವೇ ಬೇಡ. ನಮ್ಮ ಭೂಮಿಯನ್ನು ವಾಪಸ್ ಕೊಡಲಿ.”
ಗಿರೀಶ್, ಭೂಮಾಲೀಕ
ಮಹಾದೇಶ್ ಎಂ.ಗೌಡ ಅಧಿಕಾರಿಗಳ ವಿರುದ್ಧ ಕೌದಳ್ಳಿ ಗ್ರಾಮದ ಮಹಿಳೆಯರ ಆಕ್ರೋಶ ಹನೂರು: ಕುಡಿಯುವ ನೀರಿಗಾಗಿ ಕಳೆದ ಹಲವು ದಿನಗಳಿಂದ ಪರಿತಪಿಸುತ್ತಿದ್ದರೂ…
ಚಿರಂಜೀವಿ ಸಿ ಹುಲ್ಲಹಳ್ಳಿ ಸೆಪ್ಟೆಂಬರ್ ೧ರಿಂದ ಜಾರಿ; ಮಾಸಿಕ ಪಾಸ್ ಸೌಲಭ್ಯ ವಾಯುವಿಹಾರಿಗಳ ಅಸಮಾಧಾನ ವಯಸ್ಕರಿಗೆ ೧೦ ರೂ., ಮಕ್ಕಳಿಗೆ…
ಕೆ.ಬಿ.ರಮೇಶನಾಯಕ ಮೈಸೂರು: ೨೦೨೯ರ ಲೋಕಸಭಾ ಚುನಾವಣೆಗೂ ಮುನ್ನ ಕ್ಷೇತ್ರಗಳ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ…
ಕೊಡಗು: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ…
ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದು 2,858.45…