ರಾಜ್ಯ

ಬಿಜೆಪಿ ಕ್ರಿಮಿನಲ್‌ ಪಿತೂರಿ ಮಾಡಿ ಶೃಂಗೇರಿಯಲ್ಲಿ ವೋಟ್‌ ಚೋರಿ ಮಾಡಿದೆ: ಸಿಎಂ ಸಿದ್ದರಾಮಯ್ಯ ಬಾಂಬ್‌

ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯವರು ಕ್ರಿಮಿನಲ್‌ ಪಿತೂರಿ ಮಾಡಿ ವೋಟ್‌ ಚೋರಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜೇಗೌಡ ಅವರು ಕಳೆದ ಚುನಾವಣೆಯಲ್ಲಿ 201 ಮತಗಳ ಅಂತರದಲ್ಲಿ ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಅವರ ಎದುರಾಳಿ ಬಿಜೆಪಿಯ ಜೀವರಾಜ್ ಅವರಿಗೆ 58970 ಮತಗಳು ಬಂದಿದ್ದವು. ಇವಿಎಂನಲ್ಲಿ ರಾಜೇಗೌಡರಿಗೆ 58602 ಮತಗಳು ಬಂದಿದ್ದವು. ಅಂಚೆಯಲ್ಲಿ 569 ಮತಗಳು ಬಂದಿದ್ದವು. ಜೀವರಾಜ್ ಅವರಿಗೆ ಇವಿಎಂನಲ್ಲಿ 58278ಮತಗಳು ಬಂದಿದ್ದವು. ಅಂಚೆಯಲ್ಲಿ 692 ಮತಗಳು ಬಂದಿದ್ದವು. ಇವೆಲ್ಲವೂ ಅರ್ಹ ಮತಗಳೆಂದು ಚುನಾವಣಾಧಿಕಾರಿಗಳು, ಏಜೆಂಟ್ಗಳು ಸಹಿ ಮಾಡಿ ಫಲಿತಾಂಶ ಘೋಷಿಸಿದ್ದರು.

ಘೋಷಣೆ ಆದ ಬಳಿಕ ಜೀವರಾಜ್ ಅವರು ಅಕ್ರಮ ಆಗಿದೆ ಎಂದು ರಾಜ್ಯ ಹೈಕೋರ್ಟ್ ನಲ್ಲಿ ಮರು ಎಣಿಕೆಗೆ ದಾವೆ ಹೂಡಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ, 6-03-26ರಲ್ಲಿ ಮರು ಎಣಿಕೆಗೆ ನಿರ್ದೇಶನ ನೀಡಿತ್ತು. ಮರು ಎಣಿಕೆಯಲ್ಲಿ ರಾಜೇಗೌಡರಿಗೆ 314 ಮತಗಳು ಮಾತ್ರ ಅರ್ಹ ಎಂದು ಆಗುತ್ತದೆ. 255 ಮತಗಳು ಅನರ್ಹ ಎಂದು ಆಗುತ್ತದೆ. ಜೀವರಾಜ್ ಅವರಿಗೆ ಮರು ಎಣಿಕೆಯಲ್ಲಿ 690 ಮತಗಳು ಲಭಿಸಿವೆ. ಬಿಜೆಪಿಯವರು ಕ್ರಿಮಿನಲ್ ಸಂಚು ಮಾಡಿ ವೋಟ್ ಚೋರಿ ಮಾಡಿರುವುದು ಬಹಳ ಸ್ಪಷ್ಟವಾಗುತ್ತದೆ. ರಾಜೇಗೌಡರಿಗೆ ಬಿದ್ದಿದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿಯಾಗಿದೆ.

ಎಣಿಕೆ ಮಾಡಿದ ಬಳಿಕ ಎಲ್ಲಾ ದಾಖಲಾತಿಗಳನ್ನು ಟ್ರಂಕ್‌ನಲ್ಲಿಡಲಾಗುತ್ತದೆ. ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲೂ ಆವರ ಸರ್ಕಾರ ಇತ್ತು. ಅವರು ಹೇಳುವ ಪ್ರಕಾರ ಡಬಲ್ ಇಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಸಂಚು.

ರಾಜೇಗೌಡರಿಗೆ ಮೂರನೇ ಸುತ್ತಿನಲ್ಲಿ ಲಭಿಸಿದ್ದ ಎಲ್ಲಾ 170 ಅಂಚೆ ಮತಗಳು ಈಗ ಅನರ್ಹವಾಗಿವೆ. ಅವು ಹಿಂದೆ ಮತ ಎಣಿಕೆ ಮಾಡಿದಾಗ ಅರ್ಹವಾಗಿ ಪರಿಗಣಿಸಲಾಗಿತ್ತು.

ನಮ್ಮ ಪಕ್ಷದಿಂದ ಸುಧೀರ್ ಕುಮಾರ್ ಮರೋಳಿ ಅವರು ಏಜೆಂಟ್ ಆಗಿದ್ದರು. ಎಲ್ಲಾ ಏಜೆಂಟರು 2023ರಲ್ಲಿ ಸಹಿ ಹಾಕಿದ ದಾಖಲೆಯಿದೆ. ಮತಗಳು ಅನರ್ಹವಾಗಿದ್ದರೆ ಆಗಲೇ ಎಲ್ಲರೂ ಆಕ್ಷೇಪ ಎತ್ತಬಹುದಾಗಿತ್ತು. ಆಗ ಯಾರೂ ಆಕ್ಷೇಪ ಎತ್ತಲಿಲ್ಲ ಯಾಕೆ?

ಮರು ಎಣಿಕೆ ಸಂದರ್ಭದಲ್ಲಿ ಚುನಾವಣಾ ವೀಕ್ಷಕರು ಸಹ ಬಂದಿದ್ದರು. ಗಂಭೀರ ಸ್ವರೂಪದ ಕ್ರಿಮಿನಲ್ ಸಂಚು ನಡೆದಿರುವುದಾಗಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. ಅಂಚೆ ಮತಪತ್ರಗಳನ್ನು ಫೊರೆನ್ಸಿಕ್ ಪರಿಶೀಲನೆಗೆ ಸಲ್ಲಿಸಬೇಕಿತ್ತು. ಚುನಾವಣಾ ಫಲಿತಾಂಶ ಘೋಷಣೆಯನ್ನು ನ್ಯಾಯಾಲಯಕ್ಕೆ ಬಿಡಬೇಕಾಗಿತ್ತು. ಅದನ್ನು ಬಿಟ್ಟು ಚುನಾವಣಾಧಿಕಾರಿಗಳೇ ಫಲಿತಾಂಶ ಘೋಷಣೆ ಮಾಡಿದ್ದಾರೆ. ಚುನಾವಣಾ ವೀಕ್ಷಕರು ಅನುಮತಿ ಪಡೆದ ಬಳಿಕವೇ ಫಲಿತಾಂಶ ಘೋಷಿಸಬೇಕು. ಆದರೆ ಚುನಾವಣಾಧಿಕಾರಿಗಳು ಚುನಾವಣಾ ವೀಕ್ಷಕರ ಅನುಮತಿಯಿಲ್ಲದೇ ಆತುರಾತುರವಾಗಿ ಫಲಿತಾಂಶ ಘೋಷಿಸಿದ್ದಾರೆ. ತಪ್ಪು ಮಾಡಿದ ಯಾರೇ ಆಗಿದ್ದರೂ, ಅಂತಹ ಅಧಿಕಾರಿಗೆ ಶಿಕ್ಷೆಯಾಗಬೇಕು.

ಈ ಹಿಂದೆ ಬಿಜೆಪಿಯವರು ಚಿಲುಮೆ ಎಂಬ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನೇ ತಿದ್ದುಪಡಿ ಮಾಡಲು ಪ್ರಯತ್ನಿಸಿದ್ದರು. ಆಳಂದದಲ್ಲಿ ನೈಜ ಮತದಾರರನ್ನೇ ಬಿಟ್ಟು ಬಿಟ್ಟಿದ್ದರು. ಬಿಜೆಪಿಯವರಿಗೆ ಮೊದಲಿನಿಂದಲೂ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು. ನಿಷ್ಪಕ್ಷಪಾತವಾದ ಚುನಾವಣೆಯಲ್ಲಿ ನಂಬಿಕೆ ಇಲ್ಲದವರು. ಅವರು ಇಂತಹ ಅಪರಾಧ ಎಸಗಲು ಹಿಂಜರಿಯುವುದಿಲ್ಲ. ಕೇಂದ್ರದ ಇಬ್ಬರು ಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸಮರ್ಥನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ಜನರು ಅವರಿಗೆ ಪಾಠ ಕಲಿಸಲಿದ್ದಾರೆ.

ರಾಜೇಗೌಡ ಅವರು ನೀಡಿದ ದೂರಿನ ಮೇಲೆ ಎಫ್ಐಆರ್ ಆಗಿದೆ. ಇದು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು.

ಬಾಗಲಕೋಟೆ ಹಾಗೂ ದಾವಣಗೆರೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ.

ಇದು ಮುಂದಿನ 2028ರಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಾಯಿತು.

ಈ ಹಿಂದೆ ನಡೆದ ಮೂರು ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಜಯ ಗಳಿಸಿದೆ. ಇದರರ್ಥ ನಮ್ಮ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ನಮ್ಮ ಕಾರ್ಯಕ್ರಮಗಳು ಮತದಾರರನ್ನು ತಲುಪಿವೆ. ಜನರು ನಮ್ಮ ಮೇಲೆ ವಿಶ್ವಾಸ, ಅಭಿಮಾನ ಇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷನ ನುಡಿದಂತೆ ನಡೆಯುವ ಪಕ್ಷ. ಕೊಟ್ಟ ಮಾತಿನಂತೆ ನಡೆಯುವ ಪಕ್ಷ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿದ್ದಾವೆ.

ಎಸ್ಡಿಪಿಐಗೆ ಮತ ಬಿದ್ದಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬುವುದನ್ನು ಪರಿಶೀಲನೆ ಮಾಡಲಿದ್ದೇವೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ರಾಮನಗರದ ರೈಲ್ವೆ ಪ್ರಯಾಣಿಕರಿಗೆ ಶುಭ ಸಮಾಚಾರ: ಏನದು ಗೊತ್ತಾ.?

ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಂಚರಿಸುವ ಒಡೆಯರ್‌ ಎಕ್ಸ್‌ಪ್ರೆಸ್‌ ರೈಲಿಗೆ ಈಗ ರಾಮನಗರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ…

9 hours ago

ಟಿವಿಕೆ ಶಾಸಕಾಂಗ ಪಕ್ಷದ ನಾಯಕನಾಗಿ ನಟ ವಿಜಯ್‌ ಆಯ್ಕೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಚೆನ್ನೈನ ಪಣಿಯೂರಿನಲ್ಲಿರುವ…

10 hours ago

ತಮಿಳುನಾಡು ಫಲಿತಾಂಶ ತುಂಬಾ ಆಶ್ವರ್ಯಕರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಈ ಫಲಿತಾಂಶ ತುಂಬಾ ಆಶ್ಚರ್ಯಕರವಾಗಿದೆ ಎಂದು ಸಿಎಂ…

10 hours ago

ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌ ರಾಜೀನಾಮೆ

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರಿಂದು ತಮಿಳುನಾಡು ಸಿಎಂ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಭವನದಲ್ಲಿರುವ…

11 hours ago

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಯುವಕನ ಕೊಲೆ

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಮೈಸೂರಿನ ಉದಯಗಿರಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉದಯಗಿರಿ ಪೊಲೀಸ್‌ ಠಾಣೆಯಿಂದ ಕೇವಲ…

11 hours ago

ಹನೂರು: ಪಂಪ್‌ಸೆಟ್‌ ಮೋಟಾರ್‌ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಮಾಪುರ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಇರುತ್ತಿದ್ದ ನೀರೆತ್ತುವ ಪಂಪ್ ಸೆಟ್ ಮೋಟಾರ್‌ಗಳನ್ನು…

12 hours ago