ಲಂಡನ್: ಟೀಮ್ ಇಂಡಿಯಾ ಟ್ರೋಫಿ ಗೆಲುವಿನ ಕನಸು ಮತ್ತೆ ಭಗ್ನವಾಗಿದೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಎರಡನೇ ಆವೃತ್ತಿಯಲ್ಲೂ ಫೈನಲ್ ತಲುಪಿದ್ದ ಭಾರತ ತಂಡ ಮತ್ತೆ ಮುಗ್ಗರಿಸಿದೆ.
ಮೊದಲ ಆವೃತ್ತಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು 8 ವಿಕೆಟ್ ಸೋಲುಂಡಿದ್ದ ಭಾರತ ತಂಡ, ಇದೀಗ ಎರಡನೇ ಆವೃತ್ತಿಯ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು 209 ರನ್ಗಳ ಹೀನಾಯ ಸೋಲುಂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿನ ಕಳಾಹೀನ ಪ್ರದರ್ಶನ ಫಲವಾಗಿ ರೋಹಿತ್ ಶರ್ಮಾ ಬಳಗ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಶರಣಾಯಿತು.
234ಕ್ಕೆ ಭಾರತ ಆಲ್ಔಟ್
ಗೆಲುವಿಗೆ ನಾಲ್ಕನೇ ಇನಿಂಗ್ಸ್ನಲ್ಲಿ 444 ರನ್ಗಳ ಬೃಹತ್ ಗುರಿ ಪಡೆದಿದ್ದ ಟೀಮ್ ಇಂಡಿಯಾ, ನಾಲ್ಕನೇ ದಿನದ ಅಂತ್ಯಕ್ಕೆ 163/3 ರನ್ ಕಲೆಹಾಕಿತ್ತು. ಪರಿಣಾಮ 5ನೇ ದಿನದಂದು ಭಾರತ ತಂಡ ಕೈಲಿದ್ದ 7 ವಿಕೆಟ್ಗಳಲ್ಲಿ 280 ರನ್ಗಳನ್ನು ಗಳಿಸಬೇಕಿತ್ತು. ಆದರೆ, ಕಾಂಗರೂ ಪಡೆಯ ವೇಗಿಗಳು ಮತ್ತು ಸ್ಪಿನ್ನರ್ ನೇಥನ್ ಲಯಾನ್ ಎದುರು ದಿಟ್ಟ ಆಟವಾಡಲು ವಿಫಲವಾದ ರೋಹಿತ್ ಶರ್ಮಾ ಬಳಗ 234ಕ್ಕೆ ಆಲ್ಔಟ್ ಆಯಿತು.
ಭಾರತದ ಪರ ಹೋರಾಟ ನಡೆಸಿದ ವಿರಾಟ್ ಕೊಹ್ಲಿ (49) ಮತ್ತು ಅಜಿಂಕ್ಯ ರಹಾನೆ (46) ಮೊದಲ ಅವಧಿಯಲ್ಲೇ ಪೆವಿಲಿಯನ್ ಸೇರಿದಾಗ ಭಾರತಕ್ಕೆ ಸೋಲು ಖಾತ್ರಿಯಾಗಿತ್ತು. ಕೆಳ ಮಧ್ಯಮ ಕ್ರಮಾಂಕದಲ್ಲೂ ಯಾವುದೇ ಹೋರಾಟ ಬರದೇ ಇದ್ದ ಕಾರಣ ಭಾರತ ತಂಡ 209 ರನ್ಗಳ ಹೀನಾಯ ಸೋಲೆದುರಿಸುವಂತ್ತಾಯಿತು.
ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠ
ಟೀಮ್ ಇಂಡಿಯಾ ಬೌಲರ್ಗಳನ್ನು ಬಡಿದು ಬೆಂಡೆತ್ತಿದ ಆಸ್ಟ್ರೇಲಿಯಾದ ಯುವ ಬ್ಯಾಟರ್ ಟ್ರಾವಿಸ್ ಹೆಡ್ ಮೊದಲ ಇನಿಂಗ್ಸ್ನಲ್ಲಿ ಬಿರುಸಿನ 163 ರನ್ ಬಾರಿಸಿದರು. ಅಷ್ಟೇ ಅಲ್ಲದೆ ಸ್ಟೀವ್ ಸ್ಮಿತ್ (121) ಜೊತೆಗೂಡಿ 4ನೇ ವಿಕೆಟ್ಗೆ ದಾಖಲೆಯ 285 ರನ್ಗಳ ಜೊತೆಯಾಟವಾಡಿದರು. ಅವರ ಈ ಗೇಮ್ ಚೇಂಜಿಂಗ್ ಆಟಕ್ಕೆ ಫೈನಲ್ ಪಂದ್ಯ ಪಂದ್ಯಶ್ರೇಷ್ಠ ಗೌರವ ಲಭ್ಯವಾಯಿತು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 121.3 ಓವರ್ಗಳಲ್ಲಿ 469 ರನ್ (ಡೇವಿಡ್ ವಾರ್ನರ್ 43, ಮಾರ್ನಸ್ ಲಾಬುಶೇನ್ 26, ಸ್ಟೀವ್ ಸ್ಮಿತ್ 121, ಟ್ರಾವಿಸ್ ಹೆಡ್ 163; ಮೊಹಮ್ಮದ್ ಸಿರಾಜ್ 108ಕ್ಕೆ 4).
ಭಾರತ ಪ್ರಥಮ ಇನಿಂಗ್ಸ್: 69.4 ಓವರ್ಗಳಲ್ಲಿ 296 ರನ್ (ಅಜಿಂಕ್ಯ ರಹಾನೆ 89, ರವೀಂದ್ರ ಜಡೇಜಾ 48, ಶಾರ್ದುಲ್ ಠಾಕೂರ್ 51; ಪ್ಯಾಟ್ ಕಮಿನ್ಸ್ 83ಕ್ಕೆ 3).
ಆಸ್ಟ್ರೇಲಿಯಾ ದ್ವಿತೀಯಾ ಇನಿಂಗ್ಸ್: ಮಾರ್ನಸ್ ಲಾಬುಶೇನ್ 41, ಸ್ಟೀವ್ ಸ್ಮಿತ್ 34, ಅಲೆಕ್ಸ್ ಕೇರಿ 66*; ರವೀಂದ್ರ ಜಡೇಜಾ 58ಕ್ಕೆ 3, ಮೊಹಮ್ಮದ್ ಶಮಿ 39ಕ್ಕೆ 2).
ಭಾರತ ಎರಡನೇ ಇನಿಂಗ್ಸ್: 63.3 ಓವರ್ಗಳಲ್ಲಿ ರೋಹಿತ್ ಶರ್ಮಾ 43, ವಿರಾಟ್ ಕೊಹ್ಲಿ 49, ಅಜಿಂಕ್ಯ ರಹಾನೆ 46, ಸ್ಕಾಟ್ ಬೋಲ್ಯಾಂಡ್ 46ಕ್ಕೆ 3, ನೇಥನ್ ಲಯಾನ್ 41ಕ್ಕೆ 4).
ಪಂದ್ಯ ಶ್ರೇಷ್ಠ: ಟ್ರಾವಿಸ್ ಹೆಡ್
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…