ರಾಷ್ಟ್ರೀಯ

ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರ ರಕ್ಷಣಾಕಾರ್ಯ ಹೇಗೆ ನಡೆಯಿತು? ಇಲ್ಲಿದೆ ಪ್ರತಿದಿನದ ಅಪ್‌ಡೇಟ್‌

ನವೆಂಬರ್‌ 12: ಉತ್ತರಕಾಶಿಯ ದಂಡಲ್‌ಗೌನ್‌ನಿಂದ ಸಿಲ್ಕ್ಯಾರಾವರೆಗಿನ ನಿರ್ಮಾಣ ಹಂತದ ಸುರಂಗ ಕುಸಿತದಿಂದ 41 ಕಾರ್ಯನಿರತ ಕಾರ್ಮಿಕರು ಬೆಳಗ್ಗೆ 5.30ರ ಸಮಯಕ್ಕೆ ಸಿಲುಕಿಕೊಂಡರು. ಉತ್ತರಕಾಶಿ ಹಾಗೂ ಯಮುನೋತ್ರಿಯ ನಡುವಿನ ಅಂತರವನ್ನು 26 ಕಿಮೀ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡುತ್ತಿರುವ ಸುರಂಗ ಇದಾಗಿದೆ. ಘಟನೆ ನಡೆದ ತಕ್ಷಣವೇ ಪೊಲೀಸರು ಹಾಗೂ ಎನ್‌ಡಿಆರ್‌ಎಫ್‌ ಸೇರಿ 160 ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಹಾಜರು. ಕುಸಿದು ಬಿದ್ದ ಕಲ್ಲುಗಳ ನಡುವೆಯೇ ಸಿಲುಕಿದ್ದ ಕಾರ್ಮಿಕರಿಗೆ ಟ್ಯೂಬ್‌ ಅಳವಡಿಕೆ ಮೂಲಕ ಆಮ್ಲಜನಕದ ವ್ಯವಸ್ಥೆ ಮಾಡುವಲ್ಲಿ ಯಶಸ್ವಿ. ಪೈಪ್‌ ಮೂಲಕ ಬೆಳಕಿಗಾಗಿ ಬೇಕಾಗುವ ವಸ್ತುಗಳು ಹಾಗೂ ಆಹಾರ ಪೂರೈಕೆ.

ನವೆಂಬರ್‌ 13: ಆಮ್ಲಜನಕದ ಟ್ಯೂಬ್‌ ಮೂಲಕ ಸಿಲುಕಿದ್ದ ಕಾರ್ಮಿಕರ ಸುರಕ್ಷತೆ ಬಗ್ಗೆ ಕೇಳಿ ಸಂದೇಶ ರವಾನೆ ಹಾಗೂ ಎಲ್ಲಾ ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ರಕ್ಷಣಾ ಪಡೆ. ಸ್ಥಳಕ್ಕೆ ಆಗಮಿಸಿ ರಕ್ಷಣಾಕಾರ್ಯದ ಮಾಹಿತಿ ಪಡೆದುಕೊಂಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ. ಸುರಂಗ ಇನ್ನೂ ಸಹ ನಿರ್ಮಾಣ ಹಂತದಲ್ಲಿದ್ದ ಕಾರಣ ಮಣ್ಣು ಕುಸಿತ ಉಂಟಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿತ್ತು. ಹೀಗಾಗಿ ಕಾಂಕ್ರೀಟ್‌ ಸಿಂಪಡಿಸಿ ಅದನ್ನು ತಡೆದು ರಕ್ಷಣಾ ಕಾರ್ಯ ಮುಂದುವರಿಸಲಾಗಿತ್ತು.

ನವೆಂಬರ್‌ 14: ಕಾಂಕ್ರೀಟ್‌ ಸಿಂಪಡಿಸಿದ ಬಳಿಕ 800 ಮಿಮೀ ವ್ಯಾಸದ ಉಕ್ಕಿನ ಪೈಪುಗಳನ್ನು ಅವಶೇಷದ ಮೂಲಕ ಕಾರ್ಮಿಕರಿದ್ದ ಜಾಗಕ್ಕೆ ಸೇರಿಸಲು ಪ್ರಯತ್ನ, ಮತ್ತೆ ಮರಳು, ಕಲ್ಲು ಬಿದ್ದು ಇಬ್ಬರು ಕಾರ್ಮಿಕರಿಗೆ ಗಾಯವಾದ ಕಾರಣ ಆ ಪ್ರಯತ್ನ ಕೈಬಿಟ್ಟಿದ್ದ ಸಿಬ್ಬಂದಿ. ಕೂಡಲೇ ಆ ಸ್ಥಳದ ಮಣ್ಣಿನ ಪರೀಕ್ಷೆ ನಡೆಸಿದ ಸಿಬ್ಬಂದಿ.

ನವೆಂಬರ್‌ 15: ಮೊದಲಿಗೆ ಬಳಸಲಾದ ಡ್ರಿಲ್ಲಿಂಗ್‌ ಮಷಿನ್‌ನಿಂದ ನಿರೀಕ್ಷಿತ ಫಲಿತಾಂಸ ಬಾರದ ಕಾರಣ ದೆಹಲಿಯಲ್ಲಿದ್ದ ಅಮೆರಕನ್‌ ಆಗರ್‌ ಡ್ರಿಲ್ಲಿಂಗ್‌ ಮಷಿನ್‌ಗಳನ್ನು ವಿಮಾನದ ಮೂಲಕ ತರಿಸಿಕೊಂಡು ರಕ್ಷಣಾ ಕಾರ್ಯದ ವೇಗವನ್ನು ಹೆಚ್ಚಿಸುವ ಪ್ರಯತ್ನ ನಡೆಸಲಾಗಿತ್ತು,

ನವೆಂಬರ್‌ 16: ಅಮೆರಿಕನ್‌ ಡ್ರಿಲ್ಲಿಂಗ್‌ ಮಷಿನ್‌ ಅನ್ನು ಅಳವಡಿಸಿ ಪೂರ್ಣವಾಗಿ ಕೆಲಸ ಆರಂಭಿಸುವಷ್ಟರಲ್ಲಿ ತಡರಾತ್ರಿಯಾಗಿತ್ತು.

ನವೆಂಬರ್‌ 17: ರಾತ್ರಿಯೆಲ್ಲಾ ಡ್ರಿಲ್ಲಿಂಗ್‌ ನಡೆಸಿ 6 ಮೀಟರ್‌ ಉದ್ದದ 4 ಎಂಎಸ್‌ ಪೈಪ್‌ಗಳನ್ನು ಬಳಸಿ 24 ಮೀಟರ್‌ ಕೊರೆದ ಬಳಿಕ ಐದನೇ ಪೈಪ್‌ ಅನ್ನು ಅವಶೇಷದ ಒಳಗೆ ಹಾಕುವಾಗ ಅಮೆರಿಕನ್‌ ಆಗರ್‌ ಮಷಿನ್‌ಗೆ ಹಾನಿಯಾಗಿತ್ತು ಹಾಗೂ ಕೆಲಸ ಮತ್ತೆ ಸ್ಥಗಿತಗೊಂಡಿತ್ತು. ಇಂದೋರ್‌ನಿಂದ ಮತ್ತೊಂದು ಆಗರ್‌ ಮಷಿನ್‌ ಅನ್ನು ತಂದು ರಕ್ಷಣಾ ಕಾರ್ಯ ಮುಂದುವರಿಕೆ. ಮಧ್ಯಾಹ್ನ ಮತ್ತೆ ಐದನೇ ಪೈಪ್‌ ಅಳವಡಿಕೆ ವೇಳೆ ಬಿರುಕಿನ ಶಬ್ದ ಬಂದ ಕಾರಣ ರಕ್ಷಣಾ ಕಾರ್ಯಕ್ಕೆ ತಡೆ.

ನವೆಂಬರ್‌ 18 : ಆಗರ್‌ ಮಷಿನ್‌ನಲ್ಲಿ ಡ್ರಿಲ್ಲಿಂಗ್‌ ಮಂದುವರೆಸಿದರೆ ಮತ್ತಷ್ಟು ಮಣ್ಣು ಕುಸಿಯುವ ಸಂಭವವಿದ್ದು ಕಾರ್ಮಿಕರ ಜೀವಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಪರಿಣಿತರು. ಪ್ರಧಾನಮಂತ್ರಿ ಕಛೇರಿಯ ಅಧಿಕಾರಿಗಳು ಹಾಗೂ ತಜ್ಞರು ಒಟ್ಟಿಗೆ 5 ಯೋಜನೆಗಳನ್ನು ಕೈಗೊಂಡು ರಕ್ಷಣಾ ಕಾರ್ಯ ಮುಂದುವರಿಸಲು ನಿರ್ಧರಿಸಿದ್ದರು. ಕಾರ್ಮಿಕರು ಸಿಲುಕಿದ್ದ ಸ್ಥಳದ ಮೇಲ್ಭಾಗದಲ್ಲಿ ರಂಧ್ರ ಕೊರೆದು ರಕ್ಷಿಸುವುದು ಸಹ ಈ ಯೋಜನೆಗಳಲ್ಲಿ ಒಂದಾಗಿತ್ತು.

ನವೆಂಬರ್‌ 19: ಈ ದಿನ ರಕ್ಷಣಾ ಕಾರ್ಯಕ್ಕೆ ಬ್ರೇಕ್‌ ಹಾಕಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ತಜ್ಞರು ಚರ್ಚಿಸಿದ್ದರು. ಕಾರ್ಮಿಕರಿದ್ದ ಜಾಗಕ್ಕೆ ಅಳವಡಿಸಲಾಗಿದ್ದ ನಾಲ್ಕು ಇಂಚಿನ ಪೈಪ್‌ ಮೂಲಕ ಆಹಾರ ಒದಗಿಸುವ ಕೆಲಸ ಮುಂದುವರಿದಿತ್ತು. ನಿತಿನ್‌ ಗಡ್ಕರಿ ಈ ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ಸವಲತ್ತನ್ನು ಒದಗಿಸುವ ಆಶ್ವಾಸನೆ ನೀಡಿದ್ದರು. ಬಳಿಕ ಇದೇ ದಿನ 39 ಮೀಟರ್‌ಗಳವರೆಗೆ 6 ಇಂಚ್ ಪೈಪ್‌ ಅನ್ನು ತಲುಪಿಸಲಾಯಿತು.

ನವೆಂಬರ್‌ 20: ಅಂತರರಾಷ್ಟ್ರೀಯ ಸುರಂಗ ಮತ್ತು ಭೂಗತ ಬಾಹ್ಯಾಕಾಶ ಸಂಘದ ಅಧ್ಯಕ್ಷ ಅರ್ನಾಲ್ಡ್ ಡಿಕ್ಸ್ ಸುರಂಗ ಸ್ಥಳ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಕ್ಕೆ ಬೇಕಾದ ಸಲಹೆ ನೀಡಿದ್ದರು. ಮೋದಿ ಉತ್ತರಾಖಂಡ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದರು .

ನವೆಂಬರ್‌ 21: ಈ ದಿನ ರಕ್ಷಣಾಕಾರ್ಯಕ್ಕೆ ದೊಡ್ಡ ಬ್ರೇಕ್‌ಥ್ರೂ ದೊರಕಿತು. 6 ಇಂಚ್‌ ಅಳತೆಯ ಪೈಪ್‌ ಅನ್ನು ಕಾರ್ಮಿಕರಿದ್ದ ಸ್ಥಳಕ್ಕೆ ತಲುಪಿಸಲಾಗಿತ್ತು. ಈ ಪೈಪ್‌ ಮೂಲಕ ಕಿಚಡಿ, ದಾಲಿಯಾ, ಬಾಳೆಹಣ್ಣು ಹಾಗೂ ಸೇಬನ್ನು ಕಾರ್ಮಿಕರಿಗೆ ತಲುಪಿಸಲಾಯಿತು. ಇದೇ ಪೈಪ್‌ ಮೂಲಕ ಮೊಬೈಲ್‌ ಫೋನ್‌ ಅನ್ನೂ ಸಹ ತಲುಪಿಸಲಾಯಿತು. ಇದೇ ದಿನ ಒಳಗೆ ಸಿಲುಕಿದ್ದ ಕಾರ್ಮಿಕರ ಮೊದಲ ದೃಶ್ಯ ಸಹ ಹೊರಬಿತ್ತು. ಹಳದಿ ಬಣ್ಣದ ಹೆಲ್ಮೆಟ್‌ ಧರಿಸಿ ಪೈಪ್‌ನಿಂದ ಬರುತ್ತಿದ್ದ ಆಹಾರ ಸ್ವೀಕರಿಸುತ್ತಿದ್ದ ದೃಶ್ಯ ಬಿಡುಗಡೆ ಮಾಡಲಾಗಿತ್ತು.

ನವೆಂಬರ್‌ 22: ಮೊಬೈಲ್‌ ಚಾರ್ಜರ್‌ಗಳನ್ನು ಕಾರ್ಮಿಕರಿಗೆ ತಲುಪಿಸಲಾಗಿತ್ತು. ಟೆಲಿಸ್ಕೋಪಿಂಗ್‌ ವಿಧಾನದ ಮೂಲಕ 800 ಮಿಲಿ ಮೀಟರ್‌ ವ್ಯಾಸದ ಪೈಪ್‌ ಅನ್ನು ಮತ್ತಷ್ಟು ಒಳತಳ್ಳುವ ಪ್ರಯತ್ನ ಮಾಡಲಾಯಿತು. ಕಬ್ಬಿಣದ ಅದಿರು ಆಗರ್‌ ಮಷಿನ್‌ಗೆ ಸಿಕ್ಕ ಕಾರಣ 6 ಗಂಟೆಗಳ ಕಾಲ ರಕ್ಷಣಾ ಕಾರ್ಯ ಸ್ಥಗಿತಗೊಂಡಿತ್ತು.

ನವೆಂಬರ್‌ 23: ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಕಬ್ಬಿಣದ ಅದಿರನ್ನು ಬೆಳಗ್ಗೆ ತೆರವುಗೊಳಿಸಲಾಯಿತು. ಈ ದಿನದ ಅಂತ್ಯಕ್ಕೆ ಡ್ರಿಲ್ಲಿಂಗ್ 48 ಮೀಟರ್‌ ತಲುಪಿತು. ‌

ನವೆಂಬರ್‌ 24: ಮತ್ತೆ ಆಗರ್‌ ಮಷಿನ್‌ಗೆ ಅದಿರು ಅಡ್ಡಿಯಾದ ಪರಿಣಾಮ ಕಾರ್ಯಾಚರಣೆ ಸ್ಥಗಿತ.

ನವೆಂಬರ್‌ 25: ಕಾರ್ಮಿಕರು ಅವರ ಕುಟುಂಬದವರ ಜತೆ ಮಾತನಾಡಲು ಬಿಎಸ್‌ಎನ್‌ಎಲ್‌ ಟೆಲಿಫೋನ್‌ ವ್ಯವಸ್ಥೆ ಕಲ್ಪಿಸಿತು. ಹಾವುಏಣಿ ಹಾಗೂ ಲುಡೊ ಗೇಮ್‌ ಬೋರ್ಡ್‌ಗಳನ್ನು ಕಾರ್ಮಿಕರಿಗೆ ನೀಡಿ ಆತಂಕ ಕಡಿಮೆ ಮಾಡುವ ಕೆಲಸ ಮಾಡಲಾಯಿತು. ಕೊನೆಯ 10 ಮೀಟರ್‌ ಅವಶೇಷವನ್ನು ಮಷಿನ್‌ ಬದಲು ಮನುಷ್ಯರಿಂದಲೇ ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.

ನವೆಂಬರ್‌ 26: 3 ದಿನಗಳ ಬಳಿಕ ಮತ್ತೆ ಕಾರ್ಯಾಚರಣೆ ಆರಂಭವಾಯಿತು. ಕಾರ್ಯಾಚರಣೆಯಲ್ಲಿ ತುಂಡಾಗಿ ಬಿದ್ದಿದ್ದ ಆಗರ್‌ ಮಷಿನ್‌ನ ಭಾಗಗಳನ್ನು ಪೈಪ್‌ನಿಂದ ಹೊರ ತೆಗೆಯಲು ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್‌ ತಂದು ಬಳಸಲಾಯಿತು. ಈ ರಕ್ಷಣಾಕಾರ್ಯಕ್ಕೆ ಭಾರತ ಸೇನೆ ಸಹ ಕೈ ಜೋಡಿಸಿತು.

ನವೆಂಬರ್‌ 27: ಇಲಿ ಬಿಲ ತಂತ್ರಜ್ಞಾನ ಬಳಸಿ ಸಿಲುಕಿದ್ದ ಕಾರ್ಮಿಕರನ್ನು ಹೊರತರುವ ಯೋಜನೆ ರೂಪಿಸಲಾಯಿತು. ದೆಹಲಿ, ಝಾನ್ಸಿ ಹಾಗೂ ದೇಶದ ವಿವಿಧ ಊರುಗಳಲ್ಲಿ ಟ್ರೆಂಚ್‌ಲೆಸ್‌ ಇಂಜಿನಿಯರಿಂಗ್‌ ಸರ್ವಿಸಸ್ ಪ್ರೈವೇಟ್‌ ಲಿಮಿಟೆಡ್‌ ಹಾಗೂ ನವಯಗ ಇಂಜಿನಿಯರ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಮಿಕರನ್ನು ಬಳಸಲಾಯಿತು. ಇವರು ಕೊನೆಯ ಹತ್ತು ಮೀಟರ್‌ ಅನ್ನು ಯಾವುದೇ ಡ್ರಿಲ್ಲಿಂಗ್‌ ಮಷಿನ್‌ ಬಳಸದೇ ಕೊರೆಯುವ ಕೆಲಸವನ್ನು ಆರಂಭಿಸಿದರು.

ನವೆಂಬರ್‌ 28: 17 ದಿನಗಳ ಬಳಿಕ ಕಾರ್ಮಿಕರಿದ್ದ ಸ್ಥಳಕ್ಕೆ ರಕ್ಷಣಾ ತಂಡ ತಲುಪಿತು. ಇಲಿ ಬಿಲ ತಂತ್ರಜ್ಞಾನ ಬಳಸಿ ಕೊರೆಯಲಾಗಿದ್ದ ರಂಧ್ರಕ್ಕೆ ಎರಡು ಅಡಿ ವ್ಯಾಸದ ಕೊಳವೆ ಅಳವಡಿಸಿ ಸ್ಟ್ರೆಚರ್‌ ಬಳಸಿ ಕಾರ್ಮಿಕರನ್ನು ಹೊರ ತರಲಾಯಿತು.

andolana

Recent Posts

ಕಾಂಗ್ರೆಸ್‌ ಶಾಸಕ ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…

2 hours ago

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪತ್ತೆ: ಆರೋಗ್ಯ ಇಲಾಖೆಯಿಂದ ಹೈಅಲರ್ಟ್‌

ಕೋಯಿಕ್ಕೋಡ್:‌ ವಯನಾಡು, ಕೋಯಿಕ್ಕೋಡ್‌ನಲ್ಲಿ ಶಿಗೆಲ್ಲಾ ವೈರಸ್‌ ಸೋಂಕು ಹರಡಿರುವ ನಡುವೆ ನಿಫಾ ವೈರಸ್‌ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…

2 hours ago

ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ 81 ಅಡಿಗೆ ಕುಸಿತ: ರೈತರಲ್ಲಿ ಆತಂಕ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.…

3 hours ago

ಮಧ್ಯಪ್ರಾಚ್ಯ ಯುದ್ಧ ಮತ್ತೆ ಉಲ್ಬಣ: ಹಾರ್ಮುಜ್‌ ಜಲಸಂಧಿ ಬಂದ್‌ ಮಾಡಿದ ಇರಾನ್‌

ಟೆಹರಾನ್:‌ ಇರಾನ್‌, ಅಮೇರಿಕಾ ಮತ್ತು ಇಸ್ರೇಲ್‌ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ. ಯುಎಸ್‌ ದಾಳಿ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಮತ್ತೆ…

4 hours ago

ಓದುಗರ ಪತ್ರ: ನೇರಳೆ ತಳಿ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿ

ನೇರಳೆ ಹಣ್ಣಿನ ಬೀಜಗಳ ಔಷಧಿಯ ಗುಣಗಳನ್ನು ಪರಿಗಣಿಸಿ ಸರ್ಕಾರವು ಇವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ತೋಟಗಾರಿಕಾ…

5 hours ago

ಓದುಗರ ಪತ್ರ: ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಬಸ್ ನಿಲುಗಡೆಯಿಂದ ತೊಂದರೆ

ಮೈಸೂರಿನ ರಿಂಗ್ ರಸ್ತೆ ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಪ್ರತಿನಿತ್ಯ ಸಾರಿಗೆ ನಿಗಮದ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್…

5 hours ago