ರಾಷ್ಟ್ರೀಯ

ಪ್ರಧಾನಿ ಮೋದಿ ಚಿತ್ರ ಇರುವ “ಸೆಲ್ಫಿ ಪಾಯಿಂಟ್” ಸ್ಥಾಪಿಸಿ: ವಿವಿಗಳಿಗೆ ಯುಜಿಸಿ ಸೂಚನೆ

ನವದೆಹಲಿ : ದೇಶದ ಎಲ್ಲಾ ವಿವಿ ಮತ್ತು ಕಾಲೇಜುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳಿರುವ ಸೆಲ್ಪಿ ಪಾಯಿಂಟ್‌ಗಳನ್ನು ಅಥವಾ ತಾಣಗಳನ್ನು ಸ್ಥಾಪಿಸುವಂತೆ ಎಲ್ಲಾ ವಿಶ್ವ ವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಸೂಚನೆ ನೀಡಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನಾ ಈ ನಿರ್ದೇಶನ ಹೊರಬಿದ್ದಿದೆ ಎಂದು telegraphindia.com ವರದಿ ಮಾಡಿದೆ.

ಪ್ರತಿಯೊಂದು ಸೆಲ್ಪಿ ಪಾಯಿಂಟ್‌ನ್ನು ಕ್ಯಾಂಪಸ್‌ನಲ್ಲಿಯ ಅಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಬೇಕು ಮತ್ತು 3ಡಿ ವಿನ್ಯಾಸವನ್ನು ಹೊಂದಿರಬೇಕು ಎಂದು ಯುಜಿಸಿ ಸೂಚಿಸಿದೆ.

ನರೇಂದ್ರ ಮೋದಿ ಅವರ ಸೆಲ್ಫಿ ತಾಣಗಳನ್ನು ನಿರ್ಮಿಸಿ ವಿವಿಧ ಕ್ಷೇತ್ರದಲ್ಲಿ ಭಾರತದ ಸಾಧನೆಗಳತ್ತ ಗಮನ ಸೆಳೆಯುವುದು ಆ ಮೂಲಕ ಸಾಮೂಹಿಕ ಹೆಮ್ಮೆಯನ್ನು ಬೆಳೆಸುವುದು ಇದರ ಉದ್ದೇಶ ಎಂದು ಯುಜಿ ಹೇಳಿದೆ.

ಈ ಬಗ್ಗೆ ಹಲವಾರು ಶಿಕ್ಷಣ ತಜ್ಞರು ಆರೋಪ ಮಾಡಿದ್ದು, ಮೋದಿ ಅವರ ಸೆಲ್ಫಿ ತಾಣಗಳು ಸೆಲ್ಫಿ ಕ್ಲಿಕ್ಕಿಸಲು, ಮಾಧ್ಯಮ ವೇದಿಕೆ ಹಂಚಿಕೊಳ್ಳಲು, ವಿದ್ಯಾರ್ಥಿ ಮತ್ತು ಸಂದರ್ಶಕರನ್ನು ಉತ್ತೇಜಿಸುವಂತೆ ಇದನ್ನು ಬಜೆಪಿ ಅನಧಿಕೃತ ಪ್ರಚಾರಕರನ್ನಾಗಿ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳು ತಮಗೆ ಸಂಬಂಧವೇ ಇಲ್ಲದ ‘ವ್ಯಕ್ತಿನಿಷ್ಠೆ ನಿರ್ಮಾಣ’ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಯುಜಿಸಿ ಕಾರ್ಯದರ್ಶಿ ಮನೀಷ್ ಜೋಶಿ ಅವರು ಶುಕ್ರವಾರ ಎಲ್ಲ ಭಾರತೀಯ ವಿವಿಗಳ ಕುಲಪತಿಗಳು ಮತ್ತು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಿರುವ ಪತ್ರದಲ್ಲಿ, ‘ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಸ್ಪೂರ್ತಿಯೊಂದಿಗೆ ಯುವಜನರ ಶಕ್ತಿ ಮತ್ತು ಉತ್ಸಾಹವನ್ನು ಬಳಸಿಕೊಳ್ಳಲು ಇದು ಅನನ್ಯ ಅವಕಾಶವಾಗಿದೆ’ ಎಂದು ಹೇಳಿದ್ದಾರೆ.

ನಿಮ್ಮ ಸಂಸ್ಥೆಯೊಳಗೆ ಸೆಲ್ಪಿ ಪಾಯಿಂಟ್ ಸ್ಥಾಪಿಸುವ ಮೂಲಕ ನಮ್ಮ ದೇಶವು ಮಾಡಿರುವ ಅದ್ಭುತ ಪ್ರಗತಿಗಳನ್ನು ಸಂಭ್ರಮಿಸೋಣ ಮತ್ತು ಅವುಗಳನ್ನು ಪ್ರಸಾರ ಮಾಡೋಣ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಯ, ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಡಿ ನೂತನ ಉಪಕ್ರಮಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವುದು ಸೆಲ್ಸಿ ಪಾಯಿಂಟ್‌ನ ಉದ್ದೇಶವಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.

ಯುಜಿಸಿಯು ಸೆಲ್ಟಿ ಪಾಯಿಂಟ್‌ಗಳಿಗಾಗಿ ಹಲವಾರು ವಿನ್ಯಾಸಗಳನ್ನು ಸೂಚಿಸಿದೆ. ಪ್ರತಿ ವಿನ್ಯಾಸವನ್ನೂ ಶಿಕ್ಷಣದ ಅಂತರರಾಷ್ಟ್ರೀಕರಣ, ವೈವಿಧ್ಯತೆಯಲ್ಲಿ ಏಕತೆ, ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್, ಭಾರತೀಯ ಜ್ಞಾನ ವ್ಯವಸ್ಥೆಬಹುಭಾಷೀಯತೆ ಮತ್ತು ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ನವೀನತೆಗಳಲ್ಲಿ ಭಾರತದ ಪ್ರಗತಿಯಂತಹ ನಿರ್ದಿಷ್ಟ ವಿಷಯಕ್ಕೆ ಅನುಗುಣವಾಗಿ ರೂಪಿಸಲಾಗಿದೆ.

ಸರಕಾರವು ಪ್ರತಿಯೊಂದೂ ಸಾಮಾನ್ಯ ಸಾಧನೆಯನ್ನು ಅದ್ಭುತವೆಂದು ಬಿಂಬಿಸುತ್ತಿದೆ ಮತ್ತು ಅದರ ಹೆಗ್ಗಳಿಕೆಯನ್ನು ಪ್ರಧಾನಿಯವರಿಗೆ ಸಲ್ಲಿಸುತ್ತಿದೆ ಎಂದು ಹೇಳಿದ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ಅಧ್ಯಾಪಕರೋರ್ವರು, ಈಗ ನಡೆಯುತ್ತಿರುವುದು ಆರಾಧನಾ ವ್ಯಕ್ತಿತ್ವವನ್ನು ನಿರ್ಮಿಸುವ ಪೂರ್ಣ ಪ್ರಮಾಣದ ಪ್ರಚಾರವಾಗಿದೆ. ಇದಕ್ಕಾಗಿ ಸರಕಾರವು ಈ ಚಟುವಟಿಕೆಗಳಿಗೆ ಸಂಬಂಧವೇ ಇಲ್ಲದ ಸಾರ್ವಜನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಸರಕಾರ ಅಥವಾ ಯುಜಿಸಿ ಇಂತಹ ಪ್ರಚಾರವನ್ನು ಉತ್ತೇಜಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದರು.

ಕೋವಿಡ್ ಲಸಿಕೆ ಪ್ರಮಾಣಪತ್ರಗಳು ಸೇರಿದಂತೆ ಹಲವಾರು ಮಾರ್ಗಗಳ ಮೂಲಕ ಪ್ರಧಾನಿ ಮೋದಿಯವರ ಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ರೋಜಗಾರ್ ಮೇಲಾಗಳಲ್ಲಿ ಸೆಲ್ಪಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಹೊಸದಾಗಿ ನೇಮಕಗೊಂಡಿರುವ ಸರಕಾರಿ ಉದ್ಯೋಗಿಗಳು ಅಥವಾ ಪದೋನ್ನತಿಗೊಂಡಿರುವ ಉದ್ಯೋಗಿಗಳು ಮೋದಿಯವರ ಕಟ್-ಔಟ್‌ಗಳ ಮುಂದೆ ನಿಂತುಕೊಂಡು ಚಿತ್ರವನ್ನು ತೆಗೆಸಿಕೊಳ್ಳಬೇಕಿದೆ ಎಂದು ಹೇಳಿದ ಅವರು, ಈ ಎಲ್ಲ ಚಟುವಟಿಕೆಗಳಿಗೆ ಒಬ್ಬನೇ ನಾಯಕ ಕಾರಣ ಎಂಬ ನವಿರಾದ ಗ್ರಹಿಕೆಯನ್ನು ಸೃಷ್ಟಿಸಲಾಗುತ್ತಿದೆ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅಮಾಯಕ ಮತದಾರರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದರು.

ವೈವಿಧ್ಯಮಯ ವಿಚಾರಗಳನ್ನು ಪ್ರೋತ್ಸಾಹಿಸುವ, ಚರ್ಚೆಗಳನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ವಿಷಯಗಳಿಗೆ ಒತ್ತು ನೀಡುವ ಸೆಲ್ಪಿ ಪಾಯಿಂಟ್‌ಗಳಿಗೆ ಸದಾ ಸ್ವಾಗತವಿದೆ ಎಂದು ಹೇಳಿದ ಜವಾಹರಲಾಲ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ಪ್ರಾಧ್ಯಾಪಕರೋರ್ವರು,ವಿವಿಯು ಬಹು ವಿಚಾರಗಳನ್ನು ಪೋಷಿಸಲು ಸ್ಥಳವಾಗಿದೆ. ಪ್ರಬಲ ಶಕ್ತಿಗಳಿಂದ ಮುಂದೊತ್ತಲ್ಪಟ್ಟ ಒಂದೇ ಅಭಿಪ್ರಾಯವನ್ನು ಉತ್ತೇಜಿಸುವ ಆಲೋಚನೆಯು ವಿವಿಯ ದೀರ್ಘಾವಧಿಯ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದರು.

ಯುಜಿಸಿಯು ಇಂತಹ ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ ಮತ್ತು ಅವುಗಳನ್ನು ನಿರ್ಲಕ್ಷಿಸಲು ಕ್ಯಾಂಪಸ್ ಆಡಳಿತಗಳು ಮುಕ್ತವಾಗಿವೆ ಎಂದು ಹೇಳಿದ ಮ್ಯಾನೇಜ್‌ಮೆಂಟ್ ಶಿಕ್ಷಕರೋರ್ವರು, ಶಿಕ್ಷಣ ಸಂಸ್ಥೆಗಳು ಇಂತಹ ಸಲಹೆಗಳಿಗೆ ಕಿವಿಗೊಡಬಾರದು. ಸಂಸ್ಥೆಗಳ ಮುಖ್ಯಸ್ಥರು ಭಟ್ಟಂಗಿಗಳಲ್ಲದಿದ್ದರೆ ಅವರಿಗೆ ಇಂತಹ ಸಲಹೆಗಳನ್ನು ಕಡೆಗಣಿಸಲು ಸಾಧ್ಯವಾಗುತ್ತದೆ ಎಂದರು.

andolanait

Recent Posts

ಪತ್ನಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…

2 hours ago

ಓದುಗರ ಪತ್ರ: ಜಾಗೃತಿ

ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…

2 hours ago

ಓದುಗರ ಪತ್ರ: ಅಶ್ಲೀಲ ಹಾಡು ನಿಷೇಧ ಸ್ವಾಗತಾರ್ಹ

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…

2 hours ago

ಓದುಗರ ಪತ್ರ: ರೈಲು ಟಿಕೆಟ್ ಕಾಯ್ದಿರಿಸುವ ಸ್ಥಳದಲ್ಲಿ ಕೆಲಸ ಮಾಡದ ಎಸಿ

ಮೈಸೂರು ರೈಲ್ವೆ ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ವಿಭಾಗದಲ್ಲಿ ಫ್ಯಾನ್ ಹಾಗೂ ಎಸಿ ಯಾವುದೂ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಟಿಕೆಟ್ ಮುಂಗಡವಾಗಿ…

2 hours ago

ಓದುಗರ ಪತ್ರ: ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ನೀಡಿ

ಜೀವನ ನಿರ್ವಹಣೆಗಾಗಿ ಪ್ರತಿಯೊಬ್ಬರೂ ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಅಸಂಘಟಿತ ಕಾರ್ಮಿ ಕರು ಅದರಲ್ಲೂ ಮುಖ್ಯವಾಗಿ ಕಟ್ಟಡ ನಿರ್ಮಾಣ, ಎಲೆಕ್ಟ್ರಿಕ್ ಕೆಲಸ,…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಚಿತ್ರಮಂದಿರಗಳನ್ನು ಉಳಿಸಲು ಚಿತ್ರೋದ್ಯಮ ಹುಡುಕುತ್ತಿದೆ ದಾರಿ

ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಅಟ್ಟುತ್ತಿರುವ ಪ್ರದರ್ಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಕಳೆದ ವರ್ಷ ತಮಿಳುನಾಡಿನ ಹೈಕೋರ್ಟ್ ಆದೇಶ…

2 hours ago