ಎಡಿಟೋರಿಯಲ್

ಬೆಲೆ ಏರಿಕೆ ಬಿಸಿ ಹಳ್ಳಿಗರಿಗೆ ಹೆಚ್ಚು

ಹಿಡಿತಕ್ಕೆ ಸಿಗದೇ ಏರುತ್ತಿರುವ ಹಣದುಬ್ಬರದಿಂದಾಗಿ ಕಡಿಮೆ ಆದಾಯದವರು (ಬಡವರು) ಹೆಚ್ಚು ತೊಂದರೆಗೀಡಾಗುತ್ತಿದ್ದಾರೆ!
ಪ್ರೊ.ಆರ್.ಚಿಂತಾಮಣಿ

-ಒಂದು, ಎರಡು ಮತ್ತು ಐದು ರೂಪಾಯಿ ಬೆಲೆಯ ಚಾಕಲೆಟ್ ಮತ್ತು ಚುಯಿಂಗಮ್ ನಂತಹ ವಸ್ತುಗಳ ಮಾರಾಟ ತೀರ ಕುಸಿದಿದೆ. ಎಲ್ಲ ಕಡೆಗೂ ತಳ ಮಟ್ಟದ ಕಡಿಮೆ ಆದಾಯದವರ ಕೈಯಲ್ಲಿ ದುಡ್ಡಿಲ್ಲ. ಬೆಲೆ ಏರಿಕೆ ಅವರ ಕೊಳ್ಳುವ ಶಕ್ತಿಯನ್ನು ಕುಂದಿಸಿದೆ. ಅವರಿಗೆ ಕೊಳ್ಳುವ ಶಕ್ತಿ ತುಂಬಬೇಕಾದರೆ ಆದಾಯಗಳು ಹೆಚ್ಚಾಗಬೇಕು ಇಲ್ಲವೆ ಬೆಲೆಗಳು ಇಳಿಯಬೇಕು.

ಈಗ ಸರ್ಕಾರ ತುರ್ತಾಗಿ ಮಾಡಲೇಬೇಕಾದ ತುರ್ತು ಕೆಲಸವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಗಳ ನಿರ್ಮಾಣ ಕಾರ್ಯಗಳನ್ನು ಆರಂಭಿಸಬೇಕು. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಬೇಕು. ಇದರಿಂದ ಖಾಸಗಿ ಹೂಡಿಕೆಗಳೂ ಹೆಚ್ಚಾಗಿ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕೃಷಿ ರಂಗಕ್ಕೆ ಹೆಚ್ಚಿನ ಹಣಕಾಸು ಮತ್ತು ಪೂರಕ ಅವಶ್ಯಕತೆಗಳನ್ನು ಪೂರೈಸಬೇಕು. ಉತ್ಪಾದಕರಿಗೆ ಇಂಧನ ಮತ್ತು ಸಾಗಾಣಿಕೆ ವೆಚ್ಚಗಳು ಕಡಿಮೆಯಾಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು.

ಅಂತಾರಾಷ್ಟ್ರೀಯ ರಾಜಕೀಯ- ಬೌಗೋಳಿಕ ಸ್ಥಿತ್ಯಂತರಗಳು ಮತ್ತು ಸ್ಥಳೀಯ ನೈಸರ್ಗಿಕ ಏರುಪೇರುಗಳಿಂದಾಗಿ ಹಣದುಬ್ಬರ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಶೇ.೭ರ ಮೇಲೆಯೇ ಮುಂದುವರೆದಿದೆ. ಆಹಾರ ಪದಾರ್ಥಗಳ ಹಣ ದುಬ್ಬರ ಶೇ.೮ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇರುವದು ವರದಿಯಾಗಿದೆ. ಮುಂಗಾರು ಬೆಳೆಗಳ ಒಕ್ಕಣೆಯಾದ ನಂತರ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಅಕಾಲಿಕ ಅತಿಯಾದ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾಳಾಗಿದ್ದರಿಂದ ಮುಂಗಾರು ಕೃಷಿ ಉತ್ಪನ್ನಗಳು ನಿರೀಕ್ಷಿತ ಮಟ್ಟದಲ್ಲಿ ಕೈ ಸೇರುವ ಸಾಧ್ಯತೆ ಕಡಿಮೆ. ಇದರ ಪರಿಣಾಮ ಪೇಟೆಯಲ್ಲಿ ಪೂರೈಕೆಯ ಮೇಲಾಗುವುದರಿಂದ ಬೆಲೆಗಳಲ್ಲಿ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಬಹುದು.

ಕೋವಿಡ್-೧೯ ಪ್ರಭಾವದಿಂದ ಪೂರ್ಣವಾಗಿ ಹೊರ ಬಂದ ಅರ್ಥ ವ್ಯವಸ್ಥೆಯು ೨೦೨೨-೨೩ರಲ್ಲಿ ಬೆಳಗಣಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ರಿಜರ್ವ್ ಬ್ಯಾಂಕ್ ಸೇರಿ ಎಲ್ಲ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ಉಕ್ರೇನ್- ರಶಿಯಾ ಯುದ್ಧ ಮುಂದುವರೆದ್ದರಿಂದ ಪೂರೈಕೆ ಸರಪಳಿಯಲ್ಲಿ ವ್ಯತ್ಯಾಸಗಳಾಗಿ ಬಹುತೇಕ ಎಲ್ಲ ದೇಶಗಳಲ್ಲಿಯೂ ಹಣದುಬ್ಬರ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಬಹಳಷ್ಟು ದೇಶಗಳು ಆರ್ಥಿಕ ಹಿಂಜರಿತದ (್ಟಛ್ಚಿಛಿಜಿಟ್ಞ) ಅಂಚಿನಲ್ಲಿದೆ. ಬಡ್ಡಿ ದರಗಳು ಏರು ಮುಖವಾಗಿದೆ. ಹಣದುಬ್ಬರ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಭಾರತದಲ್ಲಿಯೂ ಕಳೆದ ಎಂಟು-ಒಂಭತ್ತು ತಿಂಗಳುಗಳಿಂದ ರಿಜರ್ವ್ ಬ್ಯಾಂಕ್ ಹಣಕಾಸು ನೀತಿಯ ಗರಿಷ್ಠ ಮಿತಿಗಳಿಂತೂ (ಶೇ.೬.೦ ಮಿತಿ) ಹಣದುಬ್ಬರ ಮೇಲೆಯೇ ಇದೆ. ರಿಜರ್ವ್ ಬ್ಯಾಂಕ್ ನಾಲ್ಕು ಕಂತುಗಳಲ್ಲಿ ರೆಪೋ ದರವನ್ನು ಶೇ.೧.೯೦ರಷ್ಟು ಹೆಚ್ಚಿಸಿ ಶೇ.೫.೯೦ರ ಮಟ್ಟಕ್ಕೆ ತಂದಿದ್ದರೂ ಸಕಾರಾತ್ಮಕ ಪರಿಣಾಮಗಳು ಕಾಣುತ್ತಿಲ್ಲ. ಇದರಿಂದ ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳೆವಣಿಗೆಯಲ್ಲಿ ಮೊದಲಿನ ಅಂದಾಜುಗಳನ್ನು ಕಡಿತಗೊಳಿಸುವ ಸ್ಥಿತಿ ಬಂದಿದೆ.

ರಿಜರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಶೇ.೭.೦ರಷ್ಟು ಜಿಡಿಪಿ ಬೆಳವಣಿಗೆ ಮುನ್ನಂದಾಜು ಮಾಡಿದ್ದಾರೆ. ಜಾಗತಿಕ ಸಂಶೋಧನಾ ಸಂಸ್ಥೆಗಳು ಶೇ.೬.೮ರಿಂದ ಶೇ.೭.೦ ಎಂದು ಹೇಳಿವೆ.

ಗ್ರಾಮೀಣ ಬೇಡಿಕೆ ಹೆಚ್ಚುತ್ತಿಲ್ಲ

ಬೆಲೆಯೇರಿಕೆಯ ಪರಿಣಾಮ ಬೇರೆ ಬೇರೆ ಆರ್ಥಿಕ ಗುಂಪುಗಳ ಮೇಲೆ ಬೇರೆ ಬೇರೆ ಇರುತ್ತದೆ. ಜನಸಂಖ್ಯೆಯ ಮೇಲಿನ ಶೇ.೨೦ರಷ್ಟು ಉಳ್ಳವರಿಗೆ ಹಣ ಹೆಚ್ಚು ಖರ್ಚಾಗುತ್ತದೆಯೇ ಹೊರತು ಅವರಿಗೆ ತೊಂದರೆ ಎನಿಸುವುದಿಲ್ಲ. ಇವರ ಬೇಡಿಕೆ ಹೆಚ್ಚಾಗದಿದ್ದರೂ ಕುಸಿಯುವದಿಲ್ಲ. ಇವರ ಖರೀದಿ ಗಾತ್ರ ದೊಡ್ಡದಿದ್ದರೆ ಸುಪರ್ ಮಾರ್ಕೆಟ್‌ಗಳಲ್ಲಿ ಡಿಸ್ಕೌಂಟ್‌ಗಳೂ ದೊರೆಯುತ್ತದೆ. ಇವರ ಜೇಬಿಗೆ ಹೆಚ್ಚು ಭಾರವಾಗುವುದಿಲ್ಲ.

ಕೆಳ ಹಂತದ ಶೇ.೨೦ರಷ್ಟು ಕಡಿಮೆ ಆದಾಯದವರು (ಬಡವರು) ಹೆಚ್ಚು ತೊಂದರೆಗೀಡಾಗುತ್ತಾರೆ. ಅಂದಂದಿನ ಆದಾಯದಲ್ಲಿ ನಿತ್ಯದ ಅವಶ್ಯಕತೆಗಳನ್ನು ಕೊಳ್ಳುವದೇ ಕಷ್ಟವಾಗುತ್ತದೆ. ಹೇಗೋ ದಿನ ಕಳೆಯುವದೇ ದೊಡ್ಡ ಸಾಹಸವಾಗುತ್ತದೆ. ಉಳಿತಾಯಗಳನ್ನು ಬಳಸುವ ಅನಿವಾರ್ಯತೆಯೂ ಉದ್ಭವಿಸಬಹುದು.

ನಡುವಿನ ಶೇ.೬೦ ಮಧ್ಯಮ ವರ್ಗದ ಕುಟುಂಬಗಳು ಬೆಲೆಯೇರಿಕೆಯಿಂದಾಗಿ ಆದಾಯ ಮತ್ತು ವೆಚ್ಚ ಸರಿದೂಗಿಸಲು ಕೆಲವು ಬೇಡಿಕೆಗಳನ್ನು ಮುಂದೂಡಬೇಕಾಗುತ್ತದೆ. ಅಂತೂ ಜೀವನ ನಡೆಯುತ್ತಿರುತ್ತದೆ.

ಹಣದುಬ್ಬರದ ಪರಿಣಾಮ ನಗರಗಳಲ್ಲಿ ಇರುವವರಿಗಿಂತ ಹಳ್ಳಿ ಜನರ ಮೇಲೆ ಹೆಚ್ಚಾಗಿರುತ್ತದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಪ್ರಕಾರ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಗರ ಪ್ರದೇಶಗಳಲ್ಲಿ ಹಣದುಬ್ಬರ ಶೇ.೭.೦ರಿಂದ ಶೇ.೭.೩ ಇದ್ದರೆ ಹಳ್ಳಿ ಪ್ರದೇಶಗಳಲ್ಲಿ ಶೇ.೮.೦ರಿಂದ ಶೇ.೮.೪ ಇತ್ತು. ಹೆಚ್ಚು ಜನ ಕಡಿಮೆ ಆದಾಯದವರೇ ವಾಸವಾಗಿರುವ ಹಳ್ಳಿಗಳಲ್ಲಿ ಜೀವನ ವೆಚ್ಚ ನಗರದವರಿಗಿಂತ ಹೆಚ್ಚಾಗಿತ್ತು. ಈಗಲೂ ಅದು ಮುಂದುವರಿದಿದೆ.

ಇದನ್ನು ಸರಿತೂಗಿಸಲು ಕೃಷಿ ಕಾರ್ಮಿಕರು ಮತ್ತು ಇತರ ಕುಶಲ ಕರ್ಮಿಗಳು ಹೆಚ್ಚು ಕೂಲಿಯನ್ನು ಕೇಳಬೇಕಾಗುತ್ತದೆ. ಆದರೆ, ರೈತರೇ ಈಗ ತೊಂದರೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕೆಲಸಗಳೂ ಕಡಿಮೆಯಾಗುತ್ತಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಘ್ಕೆಉಎಅ) ಕಾಯ್ದೆ ಅಡಿಯಲ್ಲಿ ವರ್ಷದಲ್ಲಿ ೧೦೦-೧೫೦ ದಿನ ಕೆಲಸ ಸಿಕ್ಕು ಕೂಲಿ ದೊರೆಯುವುದರಿಂದ ಹಳ್ಳಿ ಜನ ಅಂದಂದಿನ ಖರ್ಚು ತೂಗಿಸಿದರೆ ಸಾಕಾಗಿದೆ. ಹೆಚ್ಚಿನ ಬೇಡಿಕೆ ಬರುವುದು ಆರ್ಥಿಕ ಸ್ಥಿತಿ ಸುಧಾರಿಸಿದಾಗ ಮಾತ್ರ.

ತ್ವರಿತ ಮಾರಾಟವಾಗುವ ಗ್ರಾಹಕರ (ಉಪಭೋಗಕರ) ಉತ್ಪನ್ನಗಳನ್ನು ಬ್ರ್ಯಾಂಡುಗಳಡಿಯಲ್ಲಿ ಪ್ಯಾಕೆಟ್‌ಗಳಲ್ಲಿ ಮಾರುವ ಕಂಪನಿಗಳು ಹೇಳುತ್ತವೆ. ‘ಕಳೆದ ಎರಡು ತ್ರೈಮಾಸಿಕ ವ್ಯವಹಾರವನ್ನು ಪರಿಶೀಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ಹಬ್ಬಗಳ ಹಂಗಾಮು ಮುಗಿಯುತ್ತ ಬಂದರೂ ಈ ಬೇಡಿಕೆ ಚೇತರಿಸಿಕೊಂಡಿಲ್ಲ’.

ದಾಬರ್, ಐಟಿಸಿ, ಎಚ್‌ಯುಎಲ್, ಪಾರ್ಲೆ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಗಳು ತಮ್ಮ ತ್ರೈಮಾಸಿಕ ವರದಿಗಳಲ್ಲಿ ಇದನ್ನು ದಾಖಲಿಸಲಿವೆ. ಇಷ್ಟೇ ಅಲ್ಲ ನಗರಗಳಲ್ಲಿಯೂ ಸಣ್ಣ ಮತ್ತು ಕಡಿಮೆ ಬೆಲೆಯ ಪ್ಯಾಕೆಟುಗಳ ಮಾರಾಟ ಕಡಿಮೆಯಾಗಿದೆ. ಇವುಗಳನ್ನು ಖರೀದಿಸುವವರು ಕಡಿಮೆ ಆದಾಯದ ಕೆಳ ಆರ್ಥಿಕ ಗುಂಪಿನವರು. ಇವರಿಗೂ ಹಣದುಬ್ಬರದ ಬಿಸಿ ತಟ್ಟಿದೆ ಎಂದರ್ಥ.

ಒಂದು, ಎರಡು ಮತ್ತು ಐದು ರೂಪಾಯಿ ಬೆಲೆಯ ಚಾಕಲೆಟ್ ಮತ್ತು ಚುಯಿಂಗಮ್ ನಂತಹ ವಸ್ತುಗಳ ಮಾರಾಟ ತೀರ ಕುಸಿದಿದೆ ಎಂದು ಕಂಪನಿಗಳು ಹೇಳುತ್ತವೆ. ಅಂದರೆ ಎಲ್ಲ ಕಡೆಗೂ ತಳ ಮಟ್ಟದ ಕಡಿಮೆ ಆದಾಯದವರ ಕೈಯಲ್ಲಿ ದುಡ್ಡಿಲ್ಲ. ಬೆಲೆ ಏರಿಕೆ ಅವರ ಕೊಳ್ಳುವ ಶಕ್ತಿಯನ್ನು ಕುಂದಿಸಿದೆ. ಅವರಿಗೆ ಕೊಳ್ಳುವ ಶಕ್ತಿ ತುಂಬಬೇಕಾದರೆ ಆದಾಯಗಳು ಹೆಚ್ಚಾಗಬೇಕು ಇಲ್ಲವೆ ಬೆಲೆಗಳು ಇಳಿಯಬೇಕು.

ಈಗ ಸರ್ಕಾರ ತುರ್ತಾಗಿ ಮಾಡಲೇಬೇಕಾದ ತುರ್ತು ಕೆಲಸವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಗಳ ನಿರ್ಮಾಣ ಕಾರ್ಯಗಳನ್ನು ಆರಂಭಿಸಬೇಕು. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಬೇಕು. ಇದರಿಂದ ಖಾಸಗಿ ಹೂಡಿಕೆಗಳೂ ಹೆಚ್ಚಾಗಿ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕೃಷಿ ರಂಗಕ್ಕೆ ಹೆಚ್ಚಿನ ಹಣಕಾಸು ಮತ್ತು ಪೂರಕ ಅವಶ್ಯಕತೆಗಳನ್ನು ಪೂರೈಸಬೇಕು. ಉತ್ಪಾದಕರಿಗೆ ಇಂಧನ ಮತ್ತು ಸಾಗಾಣಿಕೆ ವೆಚ್ಚಗಳು ಕಡಿಮೆಯಾಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು.

ಇಷ್ಟೆಲ್ಲಕ್ಕೂ ಕಳೆದ ವಾರ ನಡೆದ ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಸಹಾಯವಾದೀತೆ?

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ : ನಿದ್ದೆ ಇಲ್ಲದ ಇಂಗ್ಲೆಂಡಿನ ಮೊದಲ ದಿನಗಳು

ಜಹಜಿನಲ್ಲಿ ನನಗೆ ಸಮುದ್ರ ಪ್ರಯಾಣದ ಯಾವ ತೊಂದರೆಯೂ ಆಗಲಿಲ್ಲ. ದಿನಗಳು ಕಳೆದಂತೆಲ್ಲ ನನ್ನ ಮನಸ್ಸು ಸಂದಿಗ್ಧ ಪರಿಸ್ಥಿತಿಗೆ ಬೀಳತೊಡಗಿದ್ದಿತು. ಹಡಗಿನ…

26 mins ago

ಮಳೆಗಾಲದಲ್ಲೇ ವೈಟ್‌ ಟಾಪಿಂಗ್‌ ಆಗಬೇಕೆ?

ವಸಂತ್‌ ಕುಮಾರ್‌, ಮೈಸೂರು ಮಠ ಪ್ರತಿ ವರ್ಷವೂ ಪಾಲಿಕೆಯ ಬಜೆಟ್‌ನಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗುತ್ತದೆ. ೨೦೨೪-೨೦೨೫ರಲ್ಲಿ ಕೊಟ್ಟ…

59 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 11 , ಶನಿವಾರ

1 hour ago

ದಸರಾ ಉನ್ನತ ಮಟ್ಟದ ಸಭೆ: ದಸರಾ ಪಾಸ್‌ಗಳನ್ನು ಸಂಪೂರ್ಣ ತಿರಸ್ಕರಿಸಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

16 hours ago

ಜೀಪಿನ ಮೇಲೆ ಬಿದ್ದ ಮರದ ಕೊಂಬೆ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…

17 hours ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಅ.11ಕ್ಕೆ ದಸರಾ ಉದ್ಘಾಟನೆ

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್.‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ…

18 hours ago