ಸಂಪಾದಕೀಯ

ಸಂಭಾವನೆ ಏರಿಕೆ, ವಿವಾದ, ಬಹಿಷ್ಕಾರ, ಪ್ರತಿಭಟನೆ

ರಾಜ್ಯೋತ್ಸವ ದಿನದಿಂದ ಹೊಸ ಚಿತ್ರಗಳಿಲ್ಲ, ಇಲ್ಲಲ್ಲ

ಬಾ.ನಾ.ಸುಬ್ರಹ್ಮಣ್ಯ

ಜೀವನದಿ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಜೀವನ ಕಾವ ಯಡಿಕೆಗಿಂತಲೂ ಹೆಚ್ಚು. ಆದರೆ ಎಲ್ಲ ಕಡೆ ಬೇಡಿಕೆಯಂತೆ ಕೊಡುವುದು ಹೇಗೆ ಸಾಧ್ಯ? ಚಿತ್ರರಂಗದಲ್ಲೂ ಅದೇ ಪರಿಸ್ಥಿತಿ. ವರ್ಚಸ್ವೀ ನಟರ ಸಂಭಾವನೆ, ವರ್ತನೆ, ಬೇಡಿಕೆಗಳು ಗಗನಕ್ಕೇರಿದೆ ಎನ್ನುತ್ತಿದೆ, ನೆರೆಯ ತಮಿಳು ಚಿತ್ರರಂಗ ಹಾಗಾಗಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಮೊನ್ನೆ ಸಭೆ ಸೇರಿ ಒಂದು ನಿರ್ಧಾರಕ್ಕೆ ಬಂದಿದೆ. ಅದರ ಪ್ರಕಾರ ನವೆಂಬರ್ ಒಂದರ ನಂತರ ಯಾವುದೇ ಹೊಸ ಚಿತ್ರಗಳ ನಿರ್ಮಾಣ ಇರುವುದಿಲ್ಲ.

ಅದು ಮಾತ್ರವಲ್ಲ, ನಿರ್ಮಾಪಕರು, ಕಲಾವಿದರಿಗೆ ಕೆಲವು ಷರತ್ತುಗಳನ್ನು ವಿಧಿಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ, ಜನಪ್ರಿಯ ನಟರ ಚಿತ್ರಗಳು ತೆರೆಕಂಡು ಎಂಟು ವಾರಗಳ ಮೊದಲು ಅದನ್ನು ಒಟಿಟಿಯಲ್ಲಿ ಪ್ರಸಾರ ಮಾಡುವಂತಿಲ್ಲ; ನಟರು ಆರಂಭಿಸಿದ ಚಿತ್ರ ಕೆಲಸ ಮುಗಿಯದೆ, ಇನ್ನೊಂದು ಚಿತ್ರವನ್ನು ಒಪ್ಪಿಕೊಳ್ಳುವಂತಿಲ್ಲ; ಹೊಸ ಚಿತ್ರಗಳನ್ನು ಆಗಸ್ಟ್ 16ರಿಂದ ಆರಂಭಿಸದಂತೆ ತಾತ್ಕಾಲಿಕ ಸ್ಥಗಿತ; ಕಲಾವಿದರ ಸಂಭಾವನೆಯನ್ನು ಕ್ರಮಬದ್ಧಗೊಳಿಸುವ ಕುರಿತು ಅಂತಿಮ ತೀರ್ಮಾನವಾಗುವವರೆಗೆ ನವೆಂಬರ್ 1ರಿಂದ ತಮಿಳು ಚಿತ್ರಗಳ ಕೆಲಸಕಾರ್ಯಗಳು ಬಂದ್.

ಇದಷ್ಟೇ ಅಲ್ಲದೆ, ನಟ ಧನುಷ್ ಅವರ ವಿರುದ್ದವೂ ಮಂಡಳಿ ಕ್ರಮ ಕೈಗೊಂಡಿದೆ. ಅಲ್ಲಿನ ನಿಯಮದ ಪ್ರಕಾರ ಅವರಿಗೆ ಕೆಂಪು ಕಾರ್ಡ್ ನೀಡಲಾಗಿದೆ. ಸಾಕಷ್ಟು ಮಂದಿ ನಿರ್ಮಾಪಕರಿಂದ ಮುಂಗಡ ಪಡೆದಿದ್ದು, ಕಾಲ್‌ ಶೀಟ್ ನೀಡದೆ, ನೀಡಿದವರ ಚಿತ್ರಗಳಿಗೆ ಸರಿಯಾಗಿ ಸಹಕರಿಸದೆ ಇರುವುದು ಅದಕ್ಕೆ ಕಾರಣ ಎನ್ನಲಾಗಿದೆ. ಈಗ, ಅವರೊಂದಿಗೆ ಕೆಲಸ ಮಾಡುವ ಮೊದಲು ಮಂಡಳಿಯ ಜೊತೆ ಚರ್ಚಿಸಿ ಮುಂದುವರಿಯಬೇಕು.

ತಮಿಳು ಚಿತ್ರ ನಿರ್ಮಾಪಕರ ಮಂಡಳಿಯ ಈ ನಿಲುವಿಗೆ ಇತ್ತೀಚಿನ ಬೆಳವಣಿಗೆಗಳು ಕಾರಣ. ಮುಖ್ಯವಾಗಿ, ಒಟಿಟಿ ತಾಣಗಳು ಮತ್ತು ವಾಹಿನಿಗಳು ಪ್ರಸಾರಕ್ಕಾಗಿ ಚಿತ್ರಗಳನ್ನು ಕೊಂಡುಕೊಳ್ಳುತ್ತಿಲ್ಲ. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿದೆ. ಮೂಲಗಳ ಪ್ರಕಾರ, ತಯಾರಾಗಿ ಪ್ರಮಾಣಪತ್ರ ಪಡೆದು ತೆರೆಗೆ ಸಿದ್ಧವಾಗಿರುವ ಚಿತ್ರಗಳ ಸಂಖ್ಯೆ 250ಕ್ಕೂ ಹೆಚ್ಚು ಇವೆ. ಸಣ್ಣಪುಟ್ಟ ನಿರ್ಮಾಪಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹಾಕಿದ ಬಂಡವಾಳ ಮರಳಿ ಬರುವ ನಿರೀಕ್ಷೆ ಕಡಿಮೆ. ಹೀಗಾಗಿ, ಈ ಎಲ್ಲ ವಿಷಯಗಳ ಕುರಿತಂತೆ ಆಮೂಲಾಗ್ರವಾಗಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲು ಮಂಡಳಿ ನಿರ್ಧರಿಸಿದೆ.

ಜನಪ್ರಿಯ ನಟರ ಸಂಭಾವನೆ, ಅವರ ಜೊತೆಗೆ ಬರುವವರು, ರಕ್ಷಣೆಗೆ ಇರುವವರು, ಅವರ ಹಿಂಬಾಲಕರು ಹೀಗೆ ಚಿತ್ರೀಕರಣದ ವೇಳೆ, ಮುಖ್ಯಪಾತ್ರಧಾರಿ ನಟರ ಜೊತೆಗಾರರಿಗೆ ಮಾಡಬೇಕಾದ ಖರ್ಚೂ ಕಡಿಮೆ ಏನಲ್ಲ. ತಮಿಳು ಚಿತ್ರ ನಿರ್ಮಾಪಕರು ಹೇಳುವ ಈ ಸಮಸ್ಯೆಗಳು ಅಲ್ಲಿಗೆ ಮಾತ್ರ ಸೀಮಿತ ಅಲ್ಲ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳ ಚಿತ್ರರಂಗಗಳೂ ಇದನ್ನು ಎದುರಿಸುತ್ತಿವೆ. ಚಿತ್ರಗಳ ನಿರ್ಮಾಣ ಪಾರದರ್ಶಕ ಅಲ್ಲದೆ ಇರುವುದು ಈ ಬೆಳವಣಿಗೆಗೆ ಕಾರಣ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ರಾಮ-ಕೃಷ್ಣ ಲೆಕ್ಕ ಈಗಲೂ ಇದೆ. ಅಲ್ಲೊಂದು ಇಲ್ಲೊಂದು ಕಾರ್ಪೊರೇಟ್ ಸಂಸ್ಥೆಯ ರೀತಿಯ ನಿರ್ಮಾಣ ಸಂಸ್ಥೆಗಳನ್ನು ಹೊರತುಪಡಿಸಿದರೆ, ಉಳಿದಂತೆ ಎಲ್ಲ ಕಡೆ ಕಪ್ಪು- ಬಿಳಿ ಲೆಕ್ಕಾಚಾರ ಎನ್ನುತ್ತಾರೆ, ನಿರ್ಮಾಪಕರು.

ತಮಿಳು ಚಿತ್ರ ನಿರ್ಮಾಪಕರ ಸಂಘಟನೆ ಧನುಷ್ ಅವರಿಗೆ ಕೆಂಪು ಕಾರ್ಡ್ ನೀಡಿರುವುದನ್ನು ಅಲ್ಲಿನ ಕಲಾವಿದರ ಸಂಘ ವಿರೋಧಿಸಿದೆ. ಇದನ್ನು ಎಷ್ಟು ಮಾತ್ರಕ್ಕೂಒಪ್ಪಲುಸಾಧ್ಯವಿಲ್ಲಎಂದು ಅದು ಹೇಳಿದೆ. ತಮಿಳುಚಿತ್ರೋದ್ಯಮದಲ್ಲಿ ನಿರ್ಮಾಪಕರ ಸಂಘ, ಕಲಾವಿದರ ಸಂಘಗಳು ಚಿತ್ರೋದ್ಯಮದ, ತಮ್ಮ ಸದಸ್ಯರ ಹಿತ ಕಾಯುವಲ್ಲಿ ಸಕ್ರಿಯವಾಗಿರುವುದನ್ನು ಗಮನಿಸಬೇಕು. ಕನ್ನಡ ಚಿತ್ರನಿರ್ಮಾಪಕರ ಸಂಘ ಈಗ ತನ್ನದೇ ಆದ ಕಟ್ಟಡ ಹೊಂದಿದೆ. ಕಲಾವಿದರ ಸಂಘವೂ ಅದರದೇ ಆದ ಕಟ್ಟಡವನ್ನು ವರ್ಷಗಳ ಹಿಂದೆಯೇ ಹೊಂದಿತ್ತು. ಕಟ್ಟಡ ಮಾತ್ರ ಇದೆ. ಕಲಾವಿದರ ಸಂಘದ ಭಾರವಾಹಿಗಳ ಬಗ್ಗೆ ಕೇಳಿದರೆ ಕಾರ್ಯದರ್ಶಿ ಮತ್ತುಖಜಾಂಚಿ ಇದ್ದಾರೆ. ಇಲ್ಲಿನ ಕಲಾವಿದರ ಆಗುಹೋಗುಗಳ, ಬೇಕುಬೇಡಗಳ ಬಗ್ಗೆ ಕಾಳಜಿ ವಹಿಸುವ, ಇಂತಹ ಸಂದರ್ಭಗಳು ಎದುರಾದಾಗ ಯಾವ ನಿಲುವು, ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ಚರ್ಚಿಸುವ ಒಂದು ಅಂಗ ಇಲ್ಲಿಲ್ಲ!

ಬಹಿರಂಗವಾಗದೆ ಇದ್ದರೂ, ಜನಪ್ರಿಯ ನಟರ ಸಂಭಾವನೆಯ ಕುರಿತಂತೆ, ಚಿತ್ರೀಕರಣದ ಸಂದರ್ಭ ಅವರ ವರ್ತನೆ, ಬೇಡಿಕೆಗಳ ಕುರಿತಂತೆ ಒಳಗೊಳಗೆ ಸಾಕಷ್ಟು ಮಂದಿ ಹೇಳುತ್ತಿರುತ್ತಾರೆ. ಅದು ಕಲಾವಿದರು ಮಾತ್ರ ಎಂದೇನಲ್ಲ, ಜನಪ್ರಿಯ ತಂತ್ರಜ್ಞರ ಹೆಸರೂ ಇರುತ್ತದೆ. ಅಂತಹ ವಿಷಯಗಳ ವಾಸ್ತವ ವಿಷಯ ಹೊರಬಂದರೆ, ಅದು ಚಿತ್ರದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಬಹಳಷ್ಟು ಮಂದಿ ನಿರ್ಮಾಪಕರಿಗೆ ಸಹಜವಾಗಿಯೇ ಇರುತ್ತದೆ.

ಸಾಮಾನ್ಯವಾಗಿ ಒಂದು ಚಿತ್ರದ ಕೆಲಸ ಒಪ್ಪಿಕೊಳ್ಳುವ ವೇಳೆ ತಂತ್ರಜ್ಞರು ಕಲಾವಿದರಿಗಿಂತ ಹೆಚ್ಚು ಸಮಯ ತೊಡಗಿಸಿಕೊಳ್ಳಬೇಕಾಗುತ್ತದೆ. ಅವರಲ್ಲಿ ಕೆಲವರು ಒಂದು ಚಿತ್ರಕ್ಕೆ ತಮ್ಮ ಸಂಭಾವನೆ ಇಷ್ಟು ಎಂದು ನಿಗದಿಪಡಿಸಿದರೆ, ಇನ್ನು ಕೆಲವರು ತಿಂಗಳ ಸಂಬಳದಂತೆ ನಿಗದಿಪಡಿಸಿಕೊಳ್ಳುವುದಿದೆ. ಅಂತಹ ಸಂದರ್ಭದಲ್ಲೇ ವಿವಾದಗಳೂ ಏಳುತ್ತವೆ. ಕಲಾವಿದರಲ್ಲಿ, ಕಿರುತೆರೆ ಮಂದಿ ಮಾತ್ರ ತಿಂಗಳ ಸಂಬಳ ತೆಗೆದುಕೊಳ್ಳುತ್ತಾರೆ. ಸಿನಿಮಾ ಮಂದಿ ದಿನದ ಇಲ್ಲವೇ ಇಡೀ ಚಿತ್ರದ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ಮಾರ್ಟಿನ್’ ಚಿತ್ರದಲ್ಲಿ ದಿನ ತಿಂಗಳು, ಒಟ್ಟು, ಹೀಗೆ ಮೂರೂ ರೀತಿಯಲ್ಲಿ ಸಂಭಾವನೆ ಪಡೆದವರಿದ್ದಾರೆ.

ಅಲ್ಲೇನಾಯಿತು, ವಿವಾದ ಏನು ಎನ್ನುವುದು ಒತ್ತಟ್ಟಿಗಿರಲಿ, ಬಂಗಾಲಿ ಚಿತ್ರೋದ್ಯಮದಲ್ಲೂ ಮೂರು ದಿನ ಬಂದ್ ಪ್ರಹಸನ ನಡೆಯಿತು. ಅಲ್ಲಿನ ಕಾರ್ಮಿಕ ಸಂಘಟನೆ, ನಿರ್ದೇಶಕರೊಬ್ಬರು ತಮಗೆ ಮಾಹಿತಿ ನೀಡದೆ ಬಾಂಗ್ಲಾದೇಶದಲ್ಲಿ ಚಿತ್ರೀಕರಣ ನಡೆಸಿದ್ದರು. ಅದರ ವಿರುದ್ದ ಕಾರ್ಮಿಕರ ಸಂಘಟನೆ ಪ್ರತಿಭಟಿಸಿ, ಚಿತ್ರೀಕರಣದಿಂದ ದೂರ ಉಳಿಯಿತು. ಅದರ ವಿರುದ್ಧ ನಿರ್ದೇಶಕ ಸಂಘಟನೆ ಸಮರ ಸಾರಿ, ಚಿತ್ರೀಕರಣಗಳೇ ಸ್ಥಗಿತಗೊಂಡವು. ಕಿರುತೆರೆ ಸರಣಿಗಳ, ಚಲನಚಿತ್ರಗಳ ಚಿತ್ರೀಕರಣ ರದ್ದಾದವು. ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಿ, ಮಾತುಕತೆ ನಡೆಸಿ ಚಿತ್ರೀಕರಣಕ್ಕೆ ಎಡೆ ಮಾಡಿಕೊಟ್ಟರು. ಅಲ್ಲಿನ ನಿಯಮಾವಳಿಗಳನ್ನು ಪರಿಷ್ಕರಿಸಲುಸಮಿತಿಯೊಂದನ್ನು
ರಚಿಸಲಾಗಿದೆ.

ಬಂಗಾಲಿ ಮತ್ತು ತಮಿಳು ಚಿತ್ರರಂಗಗಳ ಬೆಳವಣಿಗೆ ಇದಾದರೆ, ಕರ್ನಾಟಕದಲ್ಲಿ ಸಮಸ್ಯೆಗಳು ಇಲ್ಲ ಎಂದೇನಲ್ಲ. ಮೊನ್ನೆ ವಿಧಾನ ಮಂಡಲದ ಅಧಿವೇಶನದಲ್ಲಿ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ, 2024 ನ್ನು ಮಂಡಿಸಿ, ಅದಕ್ಕೆ ಒಪ್ಪಿಗೆ ಪಡೆಯಲಾಯಿತು. ಅದರಂತೆ, ರಾಜ್ಯದಲ್ಲಿನ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಯನ್ನು ಕಲ್ಪಿಸುವ ಹಣಕಾಸು ಯೋಜನೆಗಳಿಗಾಗಿ ನಿಧಿಯನ್ನು ಸ್ಥಾಪಿಸುವ ಭಾಗವಾಗಿ ರಾಜ್ಯದಲ್ಲಿ ಸಿನಿಮಾ ಟಿಕೆಟುಗಳು, ವಂತಿಗೆ ಶುಲ್ಕಗಳು ಮತ್ತು ಸಂಬಂಧಿತ ಸಂಸ್ಥೆಗಳಿಂದ ಸೃಜಿಸಲಾದಎಲ್ಲ ಆದಾಯದ ಮೇಲೆ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪಕರ ವಿಧಿಸಲು ಉದ್ದೇಶಿಸಲಾಗಿದೆ. ಸಿನಿಮಾ ಟಿಕೆಟುಗಳ ಮೇಲೆ ಇದು ಶೇ.2 ಮೀರದ ಶೇ.1ಗಿಂತ ಕಡಿಮೆಯಾಗತಕ್ಕದ್ದಲ್ಲ ಎಂದೂ ಅದು ಹೇಳಿತ್ತು.

ಈ ವಿಧೇಯಕದ ವಿರುದ್ಧ ಅದಾಗಲೇ ಚಲನಚಿತ್ರ ನಿರ್ಮಾಪಕರು, ವಾಣಿಜ್ಯ ಮಂಡಳಿಯವರು ತಿರುಗಿ ಬಿದ್ದಿದ್ದಾರೆ, ಇದರಿಂದ ಕನ್ನಡ ಚಿತ್ರ ನಿರ್ಮಾಪಕರಿಗೆ ತೊಂದರೆಯಾಗುತ್ತದೆ ಎನ್ನುವುದು ಅವರ ಅಂಬೋಣ. ವಿಧೇಯಕ ಬಂದಿದೆ ಅಷ್ಟೇ. ಅದು ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕಷ್ಟೆ ಮಂಡಳಿಯಲ್ಲಿ ಚಿತ್ರೋದ್ಯಮದ ಮಂದಿಯೂ ಸೇರಿದಂತೆ ಸದಸ್ಯರಿರುತ್ತಾರೆ. ಅಷ್ಟಕ್ಕೂ ಟಿಕೆಟುಗಳ ಮೇಲೆ ಒಂದೋ ಎರಡೋ ರೂಪಾಯಿ ಹೆಚ್ಚಿಸಿದರೆ, ನಿರ್ಮಾಪಕರಿಗೆ ಹೇಗೆ ನಷ್ಟ ಎಂದು ಕೇಳಿದರೆ, ಮೊದಲೇ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಟಿಕೆಟು ಬೆಲೆ ಹೆಚ್ಚಾದರೆ, ಬರುವವರ ಸಂಖ್ಯೆ ಇನ್ನೂ ಕಡಿಮೆ ಆಗಬಹುದು ಎನ್ನುವುದು ಅವರ ಆತಂಕ! ಪರಭಾಷಾ ಚಿತ್ರಗಳಿಗೆ ಎಷ್ಟೇ ಪ್ರವೇಶ ಶುಲ್ಕ ಇದ್ದರೂ ಬರುವ ಪ್ರೇಕ್ಷಕರು ಇಲ್ಲಿಗೆ ಯಾಕೆ ಬರುವುದಿಲ್ಲ ಎನ್ನುವುದರ ಕುರಿತಂತೆ ಕನ್ನಡ ಚಿತ್ರರಂಗದ ಮಂದಿ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಸರ್ಕಾರ ಯಾವುದೇ ಸೌಲಭ್ಯವನ್ನು ಕೊಟ್ಟರೂ ಅದು ನಿರ್ಮಾಪಕರಿಗೆ ಸಲ್ಲುವಂತಹದು ಎನ್ನುವುದು ಇಲ್ಲಿನವರ ಅಂಬೋಣ. ಹಿಂದೆ ಮನರಂಜನಾ ತೆರಿಗೆ ಇದ್ದ ದಿನಗಳಲ್ಲಿ, ಕನ್ನಡ ಚಿತ್ರಗಳಿಗೆ ಪೂರ್ತಿ ವಿನಾಯಿತಿ ನೀಡಲಾಯಿತು. ಆದರೆ ಅದು ಪ್ರೇಕ್ಷಕರಿಗೆ ತಲುಪಲೇ ಇಲ್ಲ. ಚಿತ್ರಮಂದಿರಗಳಲ್ಲಿ ಪ್ರವೇಶ ಶುಲ್ಕ ಏರಿಸಿ, ನಿರ್ಮಾಪಕರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಯಿತು.

ಕನ್ನಡ ಚಿತ್ರಗಳಿಗೆ ಸಹಾಯಧನ, ಪ್ರಶಸ್ತಿಗಳನ್ನು ನೀಡುವ ಯೋಜನೆ ಜಾರಿಯಾದಾಗ, ಮನರಂಜನಾ ತೆರಿಗೆಯ ಜೊತೆ 50% ಸರ್‌ಚಾರ್ಜ್ ಹಾಕಲಾಗಿತ್ತು. ಅದರಿಂದ ಬಂದ ಆದಾಯವನ್ನು ಈ ಸೌಲಭ್ಯ ಮತ್ತಿತರ ಯೋಜನೆಗಳಿಗಾಗಿ ಬಳಸುವುದಾಗಿ ಸರ್ಕಾರ ಹೇಳಿತ್ತು. ಯಾವುದೇ ಸೌಲಭ್ಯವನ್ನು ಸರ್ಕಾರ ನೀಡುವ ವೇಳೆ ಅದಕ್ಕೆ ಬೇಕಾದ ಆದಾಯವನ್ನು ಇಲ್ಲಿಂದಲೇ ಪಡೆಯುವುದು ಹೊಸದಲ್ಲ. ಸಿನಿಮಾ ರಂಗ ಸಾಂಸ್ಕೃತಿಕ ವಲಯ ಎಂದು ಅಲ್ಲಿನ ಮಂದಿ ಮೊದಲು ಪರಿಗಣಿಸಬೇಕು.

ತಮಿಳು ಚಿತ್ರ ನಿರ್ಮಾಪಕರ ಸಂಘಟನೆ ಧನುಷ್ ಅವರಿಗೆ ಕೆಂಪು ಕಾರ್ಡ್ ನೀಡಿರುವುದನ್ನು ಅಲ್ಲಿನ ಕಲಾವಿದರ ಸಂಘ ವಿರೋಧಿಸಿದೆ. ಇದನ್ನು ಎಷ್ಟು ಮಾತ್ರಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ತಮಿಳು ಚಿತ್ರೋದ್ಯಮದಲ್ಲಿ ನಿರ್ಮಾಪಕರ ಸಂಘ, ಕಲಾವಿದರ ಸಂಘಗಳು ಚಿತ್ರೋದ್ಯಮದ, ತಮ್ಮ ಸದಸ್ಯರ ಹಿತ ಕಾಯುವಲ್ಲಿ ಸಕ್ರಿಯವಾಗಿರುವುದನ್ನು ಗಮನಿಸಬೇಕು. ಕನ್ನಡ ಚಿತ್ರನಿರ್ಮಾಪಕರ ಸಂಘ ಈಗ ತನ್ನದೇ ಆದ ಕಟ್ಟಡ ಹೊಂದಿದೆ. ಕಲಾವಿದರ ಸಂಘವೂ ಅದರದೇ ಆದ ಕಟ್ಟಡವನ್ನು ವರ್ಷಗಳ ಹಿಂದೆಯೇ ಹೊಂದಿತ್ತು. ಕಟ್ಟಡ ಮಾತ್ರ ಇದೆ. ಕಲಾವಿದರ ಸಂಘದ ಭಾರವಾಹಿಗಳ ಬಗ್ಗೆ ಕೇಳಿದರೆ ಕಾರ್ಯದರ್ಶಿ ಮತ್ತು ಖಜಾಂಚಿ ಇದ್ದಾರೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

4 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

4 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

4 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

15 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

16 hours ago