1997ರ ಜೂನ್ 17ರಂದು ಚೊಚ್ಚಲು ಗಂಡು ಮಗು ಹುಟ್ಟಿದಾಗ ಬೆಂಗಳೂರಿನ ಎಂಜಿನಿಯರ್ ತಂದೆ ಸುರೇಶ್ ಗುಮ್ಮರಾಜು ಹಾಗೂ ಆರ್ಕಿಟೆಕ್ಟ್ ತಾಯಿ ಹೈಮಾ ಹಲ್ದಾರ್ ದಂಪತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಗುವಿಗೆ ಅಂಗದ ಹಲ್ದಾರ್ ಗುಮ್ಮರಾಜು ಎಂದು ನಾಮಕರಣ ಮಾಡಿದರು. ಆ ಗಂಡು ಮಗು ತಾಯಿಯ ಸೀರೆಯನ್ನು ಸುತ್ತಿಕೊಂಡು, ಮೇಕಪ್ ಹಚ್ಚಿಕೊಂಡು ಮನೆ ತುಂಬಾ ಓಡಾಡಿದಾಗ ಓಹ್! ಎಷ್ಟು ಚಂದ, ಹೌ ಕ್ಯೂಟ್ ಎಂದು ಮೆಚ್ಚಿದರು. ಆದರೆ, ಗಂಡು ಮಗು ವರ್ಷಗಳು ಉರುಳಿದ ನಂತರವೂ ಹಾಗೆ ಸೀರೆ ಸುತ್ತಿಕೊಳ್ಳುವುದನ್ನು, ಮೇಕಪ್ ಹಚ್ಚಿಕೊಳ್ಳುವುದನ್ನು ನಿಲ್ಲಿಸದಿದ್ದಾಗ, ‘ನೀನೀಗ ದೊಡ್ಡವನಾಗಿದ್ದೀಯಾ ಪುಟ್ಟಾ, ಹೀಗೆಲ್ಲ ಮಾಡಬಾರದು’ ಎಂದು ಹೇಳಿ ಸೀರೆ, ಮೇಕಪ್ ಸಾಧನಗಳು ಮಗುವಿನ ಕೈಗೆ ಸಿಗದಂತೆ ಅಡಗಿಸಿಡತೊಡಗಿದರು.
ಅಂಗದನಿಗೆ ಐದು ವರ್ಷ ತುಂಬಿದಾಗ ಒಬ್ಬ ತಮ್ಮ ಹುಟ್ಟಿದ. ಅವನಿಗೆ ಅಗಸ್ಯ ಗುಮ್ಮರಾಜು ಹಲ್ದಾರ್ ಎಂದು ಹೆಸರಿಸಿದರು. ಅಪ್ಪ ಅಮ್ಮ ಅಗಸ್ಯನನ್ನು ಅಂಗದನಿಗೆ ತೋರಿಸುತ್ತ ನೀನು ಅವನ ಅಣ್ಣ’ ಅಂತ ಹೇಳಿದಾಗ ಅಂಗದನಿಗೆ ಹೇಗೇಗೋ ಅನ್ನಿಸಿ, ‘ನಾನು ಅವನ ಅಣ್ಣ ಅಲ್ಲ, ಅಕ್ಕ’ ಅನ್ನಬೇಕೆನಿಸಿದರೂ ಅದು ಸಾಧ್ಯವಾಗುತ್ತಿರಲಿಲ್ಲ. ಅವನು ತನ್ನಲ್ಲಿ ಏನೋ ತಪ್ಪಿರಬೇಕು ಅಂತ ತಿಳಿದು ಅಪ್ಪ ಅಮ್ಮನನ್ನು ಖುಷಿಪಡಿಸಲು ಅಂಗದ ಗಂಡು ಮಕ್ಕಳು ಆಡುವ ಆಟಗಳನ್ನು ಆಡಿ ತೋರಿಸುತ್ತಿದ್ದನು. ಆದರೆ, ಹಾಗೆ ಮಾಡುವಾಗ ಒಳಗೊಳಗೇ ಅವನಲ್ಲಿ ಅಸಮಾಧಾನ ಹುಟ್ಟುತ್ತಿತ್ತು.
ಶಾಲೆಯಲ್ಲೂ ಅಂಗದ ಇತರ ಮಕ್ಕಳ ಗೇಲಿ, ಅಪಹಾಸ್ಯ, ಕೀಟಲೆಗೆ ಗುರಿಯಾಗುತ್ತಿದ್ದನು. ಅವರು ಅಂಗದನನ್ನು ವಿವಿಧ ಹೆಸರುಗಳಿಂದ ಕರೆದು ಗೋಳು ಹೊಯ್ದುಕೊಳ್ಳುತ್ತಿದ್ದರು. ಆಗ ಅಂಗದನಿಗೆ ಅಳ ಬೇಕೆನಿಸುತ್ತಿತ್ತು. ಆದರೆ, ಮರುಕ್ಷಣವೇ, ದೊಡ್ಡ ಮಕ್ಕಳು ಅಳಬಾರದು ಎಂದು ಮನೆಯಲ್ಲಿ ಹೇಳಿಕೊಟ್ಟುದುದು ನೆನಪಾಗಿ, ಮತ್ತೇನು ಮಾಡುವುದು ಎಂದು ತಿಳಿಯದೆ ತನ್ನನ್ನು ತಾನೇ ಹಳಿದುಕೊಳ್ಳುತ್ತಿದ್ದನು. ‘ನನ್ನಲ್ಲಿ ಏನೋ ತಪ್ಪಿದೆ, ನನ್ನನ್ನೂ ಇತರರಂತೆಯೇ ಮಾಡು’ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದನು.
ಒಂದು ದಿನ ಅಂಗದ ‘ಗೇ’ ವ್ಯಕ್ತಿಯೊಬ್ಬನ ಟಿವಿ ಕಾರ್ಯಕ್ರಮ ನೋಡುತ್ತಿದ್ದನು. ಹಾಗೆ ನೋಡುವಾಗ ನಡುವೆ ಸ್ಫೂರ್ತಿಗೊಂಡು, ‘ನಾನೂ ಇವನಂತೆಯೇ’ ಎಂದು ಪಕ್ಕದಲ್ಲಿದ್ದ ತಂದೆ-ತಾಯಿಗೆ ಹೇಳಿದಾಗ ಅವರು, ಶ್… ಎಂದು ಅವನ ಬಾಯಿ ಮುಚ್ಚಿಸಿದರು. ಇನ್ನು ಸಾಧ್ಯವಿಲ್ಲ ಅನ್ನಿಸಿ ಅಂಗದ ಕೊನೆಗೂ ಅದರಿಂದ ಹೊರ ಬರಲು ನಿರ್ಧರಿಸಿದಾಗ ಬೆಂಕಿಗೆ ತುಪ್ಪ ಸುರಿದಂತಾಯಿತು. ಅವನ ಸಹಪಾಠಿಗಳ ಕಿರುಕುಳ ಹೆಚ್ಚಾಯಿತು. ಅವನ ಶಿಕ್ಷಕರೂ ಅವನನ್ನು ಕಿಚಾಯಿಸಲು ಶುರುಮಾಡಿದರು. ಅವರು ತರಗತಿಯಲ್ಲಿ ಅಂಗದ ಪಾಠವನ್ನು ಜೋರು ಸ್ವರದಲ್ಲಿ ಓದಲು ಹೇಳಿ, ಉಳಿದ ಮಕ್ಕಳು ಅವನ ಸ್ವರವನ್ನು ತಮಾಷೆ ಮಾಡಲು ಹೇಳುತ್ತಿದ್ದರು. ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಅಂಗದ ಶಾಲೆಯಲ್ಲಿ ನಡೆಯುತ್ತಿದ್ದ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು. ತನ್ನೆಲ್ಲ ಶಕ್ತಿಯನ್ನು ಓದಿನತ್ತ ಕೇಂದ್ರೀಕರಿಸಿದನು. ಅದನ್ನು ಗೇಲಿ ಮಾಡಲು ಯಾರಿಗೂ ಸಾಧ್ಯಲಿಲ್ಲ. ಆ ಓದು ಅವನನ್ನು ಮುಂದೆ ಒಬ್ಬ ಡಾಕ್ಟರಾಗಲು ಪ್ರೇರೇಪಿಸಿತು.
ಅಂಗದ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ತನ್ನೆಲ್ಲ ಧೈರ್ಯವನ್ನು ಒಗ್ಗೂಡಿಸಿ ʻನಾನೊಬ್ಬಳು ಹೆಣ್ಣು’ ಎಂದು ತನಗೆ ತಾನೇ ಘೋಷಿಸಿಕೊಂಡನು. ತನ್ನ ಒಂದು ಫೇಸ್ಬುಕ್ ಸ್ಟೇಟಸಲ್ಲಿ ಇಂದಿನಿಂದ ತನ್ನ ಹೆಸರು ‘ತ್ರಿನೇತ್ರಾ ಹಲ್ದಾರ್ ಗುಮ್ಮರಾಜು’ ಎಂದು ಬರೆದುಕೊಂಡನು. ತಕ್ಷಣವೇ ಅವನ ಮೊಬೈಲ್ ರಿಂಗಾಯಿತು. ಆಚೆ ಕಡೆಯ ಸರ, ‘ನೇತ್ರಾ…’ ಎಂದಿತು. ಅದು ತಾಯಿಯ ಸ್ವರ. ತಾಯಿ ಕೊನೆಗೂ ತನ್ನ ಮಗ ಮಗನಲ್ಲ, ಮಗಳು ಎಂದು ಸ್ವೀಕರಿಸಿದರು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಹಲವು ಶಸ್ತ್ರಚಿಕಿತ್ಸೆಗಳ ಮೂಲಕ ತ್ರಿನೇತ್ರಾ ಸಂಪೂರ್ಣವಾಗಿ ಹೆಣ್ಣಾದರು. ಅವರ ತಂದೆ-ತಾಯಿ ತಮ್ಮ ಕುಡಿಯ ಆ ಹೊಸ ಐಡೆಂಟಿಟಿಯನ್ನು ತಾವೂ ಗುರುತಿಸಿದೆವು ಮತ್ತು ಗೌರವಿಸಿದೆವು ಎಂಬುದರ ಸೂಚಕವಾಗಿ ಬೆಂಗಳೂರಲ್ಲಿ ಒಂದು ಪಾರ್ಟಿ ನಡೆಸಿದರು. ಅಂದಿನಿಂದ ತ್ರಿನೇತ್ರಾರಲ್ಲಿದ್ದ ಗೊಂದಲ, ಮುಸುಕು ಎಲ್ಲವೂ ಸರಿದು ಹೋದವು. ಪ್ರತಿ ಬಾರಿ ಕನ್ನಡಿ ನೋಡುವಾಗ ಅವರಿಗೆ ಮಬ್ಬು ಸರಿದು ತನ್ನ ಸ್ಪಷ್ಟ ರೂಪ ತೋರುತ್ತಿರುವಂತೆ ಅನ್ನಿಸುತ್ತಿತ್ತು.
ತ್ರಿನೇತ್ರಾ ಸಿಇಟಿಯಲ್ಲಿ 163ನೇ ಬ್ಯಾಂಕ್ ಪಡೆದು, 2021 ರಲ್ಲಿ ಎಂಬಿಬಿಎಸ್ ಮಾಡಿ, 2023ರಲ್ಲಿ ಮಣಿಪಾಲದ ಕಸ್ತೂರ್ ಬಾ ಕಾಲೇಜಿನಲ್ಲಿ ಇಂಟರ್ನ್ಶಿಪ್ ಮುಗಿಸಿ ಡಾಕ್ಟರಾದರು. ಆ ಮೂಲಕ ಅವರು ಕರ್ನಾಟಕದ ಪ್ರಪ್ರಥಮ ಟ್ರಾನ್ಸ್ ಜೆಂಡರ್ ಡಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈದ್ಯಕೀಯ ಓದುವಾಗ ತ್ರಿನೇತ್ರಾ ವೈದ್ಯರುಗಳಲ್ಲೂ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಗ್ಗೆ ಜನಸಾಮಾನ್ಯರು ತೋರುವಂತಹದೇ ಧೋರಣೆಗಳನ್ನು ಕಂಡಿದ್ದರು. ತ್ರಿನೇತ್ರಾ ಕಾನೂನಾತ್ಮಕವಾಗಿ ಪುರುಷನಿಂದ ಮಹಿಳೆಯಾಗಿ ಪರಿವರ್ತನೆಯಾದರೂ ಅವರಿಗೆ ಕಾಲೇಜಿನ ಹೆಣ್ಣು ಮಕ್ಕಳ ಹಾಸ್ಟೆಲ್ ಸೌಕರ್ಯವನ್ನು ನಿರಾಕರಿಸಲಾಗಿತ್ತು. ಅದನ್ನು ಪಡೆಯಲು ಅವರು ಕಾನೂನು ಹೋರಾಟವನ್ನು ನಡೆಸಬೇಕಾಯಿತು.
ಹಿಜ್ಜಾ, ಚಕ್ಕಾ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಂಡು ಗೇಲಿಗೊಳಗಾಗುತ್ತಿದ್ದ ತ್ರಿನೇತ್ರಾ ಇಂದು ಡಾ.ತ್ರಿನೇತ್ರಾ ಆಗಿದ್ದಾರೆ. ವೈದ್ಯರಾಗಿರುವ ಜೊತೆಗೆ ಯೂಟ್ಯೂಬಲ್ಲಿ ಆಕ್ಟಿವ್ ವೋಗರ್ ಆಗಿದ್ದು, ಟ್ರಾನ್ಸ್ ಜೆಂಡರ್ ಸಮುದಾಯದ ಬಗ್ಗೆ ದನಿ ಎತ್ತುತ್ತಿರುತ್ತಾರೆ. ತನ್ನಂತೆಯೇ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಬಯಸುವವರಿಗೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿಕೊಡುತ್ತಾರೆ. ಬೂಟ್ ಇಂಡಿಯಾ, ದಿ ಕ್ಲಿಂಟ್, ಮೋಜೋ ಸ್ಟೋರಿ, ದಿ ಲಾಜಿಕಲ್ ಇಂಡಿಯನ್ ಮೊದಲಾದ ಚಾನಲ್ಗಳಲ್ಲಿ ಕಾಣಿಸಿಕೊಂಡು ತಮ್ಮ ಬದುಕಿನ ಕತೆಯನ್ನು ಹೇಳುವ ಮೂಲಕ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಬವಣೆಯನ್ನು ಜನರ ಮುಂದಿಡುತ್ತಾರೆ.
ಅಮೆಝಾನ್ ಪ್ರೈಮ್ ಒರಿಜಿನಲ್ನ ‘ಮೇಡ್ ಇನ್ ಹ್ಯಾವನ್’ ಎಂಬ ವೆಬ್ ಸಿರೀಸ್ನಲ್ಲಿ ಪ್ರಧಾನ ಪಾತ್ರ ಮಾಡುವ ಮೂಲಕ ಭಾರತದ ವೆಬ್ ಸಿರೀಸ್ಗಳಲ್ಲಿ ಪ್ರಧಾನ ಪಾತ್ರ ಮಾಡಿದ ಟ್ರಾನ್ಸ್ಜೆಂಡರ್ ಎನಿಸಿಕೊಂಡರು. 2022ರಲ್ಲಿ ‘ಫೋರ್ಟ್ಸ್ ಅಂಡರ್ 30-ಇಂಡಿಯಾ’ ಹಾಗೂ ‘ಫೋಬ್ ಅಂಡರ್ 30-ಏಷಿಯಾ’ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 2022 ಮತ್ತು 2023ರ ‘ಫೋರ್ಬ್ ಟಾಪ್ 100 ಡಿಜಿಟಲ್ ಸ್ಟಾರ್’ ಪಟ್ಟಿಯಲ್ಲಿದ್ದರು. ಪೋರ್ಟ್ಸ್ ಇಂಡಿಯಾ, ಫೆಮಿನಾ ಮತ್ತು ಎಲ್ಲೆ ಇಂಡಿಯಾ ಮೊದಲಾದ ಅಂಗದ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ತನ್ನೆಲ್ಲ ಧೈರ್ಯವನ್ನು ಒಗ್ಗೂಡಿಸಿ, ಮ್ಯಾಗಝಿನ್ಗಳು ಡಾ.ತ್ರಿನೇತ್ರಾರನ್ನು ತಮ್ಮ ಕವರ್ಗಳಲ್ಲಿ ಪ್ರಕಟಿಸಿದ್ದವು.
ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…
ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…
ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ…
ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…
ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…