ಎಡಿಟೋರಿಯಲ್

ಸಂಪಾದಕೀಯ : ರೈಲು ಸುರಂಗ ಮಾರ್ಗ ಪ್ರಸ್ತಾಪ ಕೈಬಿಟ್ಟು ಹಳೇಯೋಜನೆಗೆ ಚಾಲನೆ ನೀಡಲಿ

ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರ್ವೆ ಕಾರ್ಯ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ಮತ್ತು ತಮಿಳುನಾಡಿನ ಈರೋಡ್ ನಡುವೆ ಸಂರಕ್ಷಿತಾರಣ್ಯವಿದೆ. ಈ ಅರಣ್ಯದೊಳಗೆ ನೆಲದಡಿ ೯ ಕಿ.ಮೀ. ಸುರಂಗ ಮಾರ್ಗ ನಿರ್ಮಿಸಿ ರೈಲು ಓಡಿಸಲು ಉದ್ದೇಶಿಸಲಾಗಿದೆ. ಇದರಿಂದ ಅರಣ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ವಸತಿ, ಮೂಲ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕಳೆದ ವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡಿ ಸಂಚಲನ ಮೂಡಿಸಿದರು. ಪರಿಸರ ಪ್ರೇಮಿಗಳು, ಅರಣ್ಯಾಧಿಕಾರಿಗಳ ಹುಬ್ಬೇರುವಂತೆ ಮಾಡಿದರು.

ಇದು ಯಾವುದು ಹೊಸ ಯೋಜನೆ ಎಂದು ಜಿಲ್ಲೆಯ ಜನರು ಸಹ ಅಚ್ಚರಿಪಟ್ಟರು. ಹಾಗಾದರೆ ಬೆಂಗಳೂರು- ಸತ್ಯಮಂಗಲ ರೈಲು ಯೋಜನೆ (ಬೆಂಗಳೂರು- ಚಾಮರಾಜನಗರ ರೈಲು ಪರಿಷ್ಕೃತ ಯೋಜನೆ) ಮತ್ತು ಚಾಮರಾಜನಗರ- ಮೆಟ್ಟುಪಾಳ್ಯಂ ರೈಲು ಯೋಜನೆಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳು ಕೇಳಿಬಂದವು. ರಾಜ್ಯದ ದಕ್ಷಿಣ ಭಾಗದ ಕೊನೆಯ ರೈಲು ನಿಲ್ದಾಣಗಳಲ್ಲಿ ಚಾಮರಾಜನಗರವೂ ಒಂದು. ಇಲ್ಲಿಂದ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಮತ್ತು ಸತ್ಯಮಂಗಲಕ್ಕೆ ರೈಲು ಯೋಜನೆ ರೂಪಿಸಬೇಕೆಂಬ ಕೂಗು ಮೂರು ದಶಕಗಳಿಂದಲೂ ಕೇಳಿಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಈ ಎರಡು ಯೋಜನೆಗಳು ಮೂಲೆಗುಂಪಾಗುತ್ತಿವೆ. ಈ ನಡುವೆ ಸೋಮಣ್ಣ ಅವರು ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬದಲಿಗೆ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ನೀಡಬಹುದಿತ್ತು ಎಂಬ ಮಾತುಗಳೂ ಕೇಳಿಬಂದಿವೆ.
ಚಾಮರಾಜನಗರ- ಮೆಟ್ಟುಪಾಳ್ಯಂ ರೈಲು ಯೋಜನೆ ಏಕೆ ಜಾರಿಯಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚಾಮರಾಜನಗರದಿಂದ ಮೆಟ್ಟು ಪಾಳ್ಯಂಗೆ ರೈಲು ಸಂಚರಿಸಬೇಕಾದರೆ ಬಿಳಿಗಿರಿರಂಗನಬೆಟ್ಟ, ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯದೊಳಗೆ ಹೋಗಬೇಕಿತ್ತು. ಹಾಗಾಗಿ ಪರಿಸರ ಸಚಿವಾಲಯ ಈ ಯೋಜನೆಗೆ ಅನುಮೋದನೆ ನೀಡಲಿಲ್ಲ, ಇದು ಕಸದಬುಟ್ಟಿ ಸೇರಿತು. ಇನ್ನು ಬೆಂಗಳೂರು- ಸತ್ಯಮಂಗಲ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ೧೯೯೬ರಲ್ಲಿ ಘೋಷಿಸಿ ೨೦೦೨ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿತ್ತು. ಈ ರೈಲು ಮಾರ್ಗವು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯ ಮೂಲಕ ಹಾದು ಹೋಗಬೇಕಿದ್ದ ಕಾರಣ ತಮಿಳುನಾಡು ಸರ್ಕಾರ ಒಪ್ಪಿಗೆ ನೀಡಲಿಲ್ಲ. ಬದಲಿಗೆ ಪರಿಷ್ಕೃತ ಬೆಂಗಳೂರು- ಹೆಜ್ಜಾಲೆ- ಕನಕಪುರ- ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ರೈಲು ಯೋಜನೆ ರೂಪಿಸಿ ಅಂದಾಜು ವೆಚ್ಚ ೧೩೮೩ ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಮಾಡಿ ಯೋಜನಾ ಮೊತ್ತದ ಶೇ.೫೦ರಷ್ಟನ್ನು ಭರಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಒಪ್ಪಿಕೊಂಡಿತ್ತು. ಯೋಜ ನೆಗಾಗಿ ೧೭೩೩ ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮನಸ್ಸು ಮಾಡಲಿಲ್ಲ. ನಂತರ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರು ಸಹ ಇಚ್ಛಾಶಕ್ತಿ ತೋರಲಿಲ್ಲ ಹಾಗಾಗಿ ಯೋಜನೆಯು ಒಂದು ಹೆಜ್ಜೆಯೂ ಮುಂದಕ್ಕೆ ಹೋಗಲಿಲ್ಲ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ನಂತರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರ ಸುಮ್ಮನಾಯಿತು.
ರಾಜ್ಯದಲ್ಲಿ ಅಧಿಕಾರ ನಡೆಸಿದ ಜಾ.ದಳ- ಕಾಂಗ್ರೆಸ್ ಮೈತ್ರಿ ಸರ್ಕಾರ, ಬಿಜೆಪಿ ಸರ್ಕಾರ ಈ ರೈಲು ಯೋಜನೆ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ. ಈಗ ಕನಕಪುರ- ಮಳವಳ್ಳಿ, ಕೊಳ್ಳೇಗಾಲ- ಯಳಂದೂರು- ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಹೊಸ ಯೋಜನೆಯನ್ನು ತೇಲಿ ಬಿಡಲಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶವು ವೈವಿಧ್ಯಮಯ ಕಾಡುಗಳು, ಬುಡಕಟ್ಟು ಗಿರಿಜನರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಇಲ್ಲಿ ೯ ಕಿ.ಮೀ.ಸುರಂಗ ಮಾರ್ಗ ಮಾಡಲು ಸಾಧ್ಯವೇ?
ರಾಷ್ಟ್ರೀಯ ಹೆದ್ದಾರಿ(೭೬೬)ಯು ಮೈಸೂರು- ನಂಜನಗೂಡು- ಗುಂಡ್ಲುಪೇಟೆ- ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪ್ರಾಣಿಗಳ ಹಿತದೃಷ್ಟಿಯಿಂದ ಇಲ್ಲಿ ರಾತ್ರಿ ೯ ರಿಂದ ಬೆಳಿಗ್ಗೆ ೬ ಗಂಟೆ ತನಕ ಸಂಚಾರವನ್ನೇ ಬಂದ್ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(೨೦೯) ಯು ಬಿಳಿಗಿರಿರಂಗನಬೆಟ್ಟ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಹಾದು ಹೋಗುತ್ತಿದ್ದು, ಇಲ್ಲಿಯೂ ರಾತ್ರಿ ಸಂಚಾರ ಬಂದ್ ಮಾಡಲಾಗಿದೆ. ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧ ತೆರವಿಗೆ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಅಲ್ಲದೆ ಬಂಡೀಪುರ ಅರಣ್ಯದೊಳಗೆ ಇರುವ ರಾಷ್ಟ್ರೀಯ ಹೆದ್ದಾರಿ (೭೬೬) ಉದ್ದಕ್ಕೂ ಎಲಿವೆಟೆಡ್ ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡಬೇಕೆಂಬ ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಲಾಗಿದೆ.
ಸಂರಕ್ಷಿತಾರಣ್ಯಗಳಲ್ಲಿ ರಸ್ತೆ ವಿಸ್ತರಣೆ, ರೈಲು ಮಾರ್ಗಗಳಿಗೆ ಅವಕಾಶ ನೀಡದಂತೆ ಪರಿಸರ ಪ್ರೇಮಿಗಳು ಹೋರಾಟ ನಡೆಸುತ್ತ ಬಂದಿದ್ದಾರೆ. ಕಾನೂನು ಹೋರಾಟಕ್ಕೂ ಸಿದ್ದರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಸುರಂಗ ರೈಲು ಮಾರ್ಗ ನಿರ್ಮಾಣ ಸಾಧ್ಯವೇ? ಕಾರ್ಯಸಾಧ್ಯವಲ್ಲದ ಹೊಸ ಯೋಜನೆಗಳನ್ನು ತೇಲಿಬಿಡುವ ಬದಲು ಕಾರ್ಯಸಾಧ್ಯವಾಗುವ ಹಳೇ ಯೋಜನೆಗಳನ್ನೇ ತ್ವರಿತ ಅನುಷ್ಠಾನಗೊಳಿಸಲು ಸರ್ಕಾರ ಆಸಕ್ತಿ ವಹಿಸಬೇಕಿದೆ.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

6 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

8 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

22 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago