ಎಡಿಟೋರಿಯಲ್

ಸಂಪಾದಕೀಯ : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕೊಡಗಿನ ಬಗ್ಗೆ ಸರ್ಕಾರದ ನಿರ್ಲಕ್ಷ್ಯವೇಕೆ?

ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ, ಅಭಿಯಾನಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ನಡೆಸಿದ ಉತ್ತರ ಕನ್ನಡ ಜಿಲ್ಲೆ ಯಶಸ್ವಿ ಕಂಡಿದೆ. ಅದೇ ರೀತಿ ಕೊಡಗು ಜಿಲ್ಲೆಯ ಜನತೆ ಅಭಿಯಾನದ ಮೂಲಕ ನಡೆಸಿದ್ದ ಹೋರಾಟ ಯಾಕೆ ಕೈಗೂಡಲಿಲ್ಲ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದ್ದು, ಸಾಕಷ್ಟು ಅಸಮಾಧಾನ ಕೂಡ ವ್ಯಕ್ತವಾಗುತ್ತಿದೆ.

ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಹಿಂದಿನಿಂದಲೂ ಇದೆ. ಈ ಸಂಬಂಧ ದೊಡ್ಡ ಮಟ್ಟದಲ್ಲಿ ಅಭಿಯಾನವೂ ನಡೆದಿತ್ತು. ದೇಶ, ವಿದೇಶದಲ್ಲಿರುವ ಕೊಡಗು ಮೂಲದವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಸಿನಿಮಾ ನಟರು, ಕ್ರೀಡಾಪಟುಗಳೂ ಕೊಡಗಿನವರ ಬೇಡಿಕೆಗೆ ಒತ್ತಾಸೆಯಾಗಿ ನಿಂತಿದ್ದರು. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಇದೊಂದು ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ಇಷ್ಟಾದರೂ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿಲ್ಲ ಎನ್ನುವ ಉತ್ತರ ಸದನದಲ್ಲಿ ಅಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೊಟ್ಟಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲೂ ಇತ್ತೀಚೆಗೆ ಇಂತಹದ್ದೇ ಅಭಿಯಾನ ನಡೆದಿತ್ತು. ಸರ್ಕಾರವೂ ಆರಂಭದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಷಯ ನಿರ್ಲಕ್ಷಿಸಿತ್ತು. ಆದರೆ ಅಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಲಾಬಿ ಮುಂದೆ ತಲೆ ಬಾಗಿದ ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಮುಂದಾಗಿದೆ. ಆಸ್ಪತ್ರೆಗಾಗಿ ಜಾಗ ಹುಡುಕಾಟವೂ ಪ್ರಗತಿಯಲ್ಲಿದೆ. ಆದರೆ ಕೊಡಗಿನ ಕೂಗು ಇನ್ನೂ ಗಡಿ ದಾಟಿ ವಿಧಾನಸೌಧ ತಲುಪಲೇ ಇಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ೨೦೧೧ರ ಜನಗಣತಿ ಪ್ರಕಾರ ೫.೫ ಲಕ್ಷದಷ್ಟು ಜನಸಂಖ್ಯೆ ಇದೆ. ಈಗ ಈ ಪ್ರಮಾಣ ಸುಮಾರು ೭-೮ ಲಕ್ಷ ತಲುಪಿರಬಹುದು. ಪ್ರವಾಸಿಗರ ಫ್ಲೋಟಿಂಗ್ ಪಾಪ್ಯುಲೇಷನ್ ಕೂಡ ಹೆಚ್ಚಾಗಿದೆ. ಆದರೆ ಎಲ್ಲಾ ಬಗೆಯ ಆರೋಗ್ಯ ತೊಂದರೆಗಳಿಗೆ ಗರಿಷ್ಟ ಪ್ರಮಾಣದಲ್ಲಿ ಸೂಕ್ತ ಚಿಕಿತ್ಸೆ ಕೊಡುವ ಆಸ್ಪತ್ರೆ ಜಿಲ್ಲೆಯಲ್ಲಿ ಇಲ್ಲ. ಅದರಲ್ಲೂ ತೀವ್ರ ಹೃದಯಾಘಾತ, ರಸ್ತೆ ಅಪಘಾತದಂತಹ ತುರ್ತು ಇರುವಾಗ ದೂರದ ಮೈಸೂರು, ಬೆಂಗಳೂರು ಅಥವಾ ಮಂಗಳೂರಿಗೆ ತೆರಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಚಿಕಿತ್ಸೆಯಲ್ಲಾದ ವಿಳಂಬದಿಂದ ಸಾವನ್ನಪ್ಪಿದವರ ದೊಡ್ಡ ಪಟ್ಟಿಯೇ ಕೊಡಗಿನಲ್ಲಿ ಸಿಗುತ್ತದೆ.
ಮಡಿಕೇರಿ ಜಿಲ್ಲಾಸ್ಪತ್ರೆ ಈಗ ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಬೋಧಕ ಆಸ್ಪತ್ರೆ ಆಗಿದೆ. ಆದರೆ ಈ ಆಸ್ಪತ್ರೆ ಮೇಲೆ ಜನರಿಗಿದ್ದ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ. ದೊಡ್ಡ ಕಟ್ಟಡ, ಆಧುನಿಕ ಉಪಕರಣಗಳಿದ್ದರೂ ರೋಗಿಗಳಿಗೆ ಉಪಯೋಗ ಆಗುತ್ತಿಲ್ಲ ಎನ್ನುವ ಆರೋಪ ಇದೆ. ಸ್ಕ್ಯಾನಿಂಗ್‌ಗೆ ಕೂಡ ಹೊರಗಡೆ ಕಳುಹಿಸುತ್ತಾರೆ ಎನ್ನುವ ಆರೋಪ ಸಾಮಾನ್ಯವಾಗಿದೆ. ಡಯಾಲಿಸಿಸ್ ಕೇಂದ್ರದ ಬಗ್ಗೆಯೂ ಸಾಕಷ್ಟು ದೂರುಗಳಿವೆ.
ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೀಗೆ ಎರಡೂ ರೀತಿಯ ಆಸ್ಪತ್ರೆಗಳ ಬೇಡಿಕೆ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದರೆ ನಿರ್ದಿಷ್ಟ ರೋಗಗಳ ಚಿಕಿತ್ಸಗೆ ಸಂಬಂಧಿಸಿರುತ್ತದೆ. ಇಂತಹ ಆಸ್ಪತ್ರೆಗಳಲ್ಲಿ ೨ ಅಥವಾ ೩ ಪ್ರಮುಖ ವಿಭಾಗಗಳ ಚಿಕಿತ್ಸೆ ಮತ್ತು ಆರೈಕೆ ವಿಭಾಗ ಇರುತ್ತದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದಕ್ಕಿಂತ ಹೆಚ್ಚು ರೋಗಗಳಿಗೆ ಚಿಕಿತ್ಸೆ ಮತ್ತು ಆರೈಕೆ ಮಾಡಲಾಗುತ್ತದೆ. ಮೂಲ ಆರೋಗ್ಯ, ಸರ್ಜರಿ ವ್ಯವಸ್ಥೆಯೂ ಇಲ್ಲಿರುತ್ತದೆ. ಹೀಗಾಗಿ ಜಿಲ್ಲೆಗೆ ಇಂತಹ ಆಸ್ಪತ್ರೆ ಬರಲೇಬೇಕಾದ ಅನಿವಾರ್ಯತೆ.
ಉತ್ತರಕನ್ನಡ ಜಿಲ್ಲೆಗೆ ಸುಲಭವಾಗಿ ಮಂಜೂರಾಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಗಿಗೆ ಯಾಕೆ ಸಿಗುವುದಿಲ್ಲ ಎನ್ನುವ ಪ್ರಶ್ನೆ ಈಗ ಇಲ್ಲಿನ ಜನರನ್ನು ಕಾಡುತ್ತಿದೆ. ನಮ್ಮನ್ನಾಳುವವರ ಇಚ್ಛಾಶಕ್ತಿಯ ಕೊರತೆಯಿಂದ ನಿರೀಕ್ಷೆಗಳು ಹುಸಿಯಾಗುತ್ತಿದೆಯೇ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪರ ಅಭಿಯಾನವನ್ನು ತೀವ್ರಗೊಳಿಸಲು ವೇದಿಕೆ ಸಜ್ಜುಗೊಳ್ಳುತ್ತಿದೆ.
ಬೃಹತ್ ಹೋರಾಟಕ್ಕೂ ಮುನ್ನ ಜಿಲ್ಲೆಯ ಜನತೆಗೆ ಅಗತ್ಯವಾಗಿ ಬೇಕಾದ ಸೌಕರ್ಯವನ್ನು ಒದಗಿಸಬೇಕಾಗಿರುವುದು ಸರ್ಕಾರದ ಜವಬ್ದಾರಿಯಾಗಿರುವುದರಿಂದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊರತೆಯಿಂದ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸರಣಿ ಸಾವು ಸಂಭವಿಸುತ್ತಿರುವುದನ್ನು ತಡೆಯುವ ಪ್ರಯತ್ನ ಸರ್ಕಾರದಿಂದ ತುರ್ತಾಗಿ ಆಗಬೇಕಾಗಿದೆ.

andolanait

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

9 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

9 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

9 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

10 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

10 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

10 hours ago