ಎಡಿಟೋರಿಯಲ್

ಸಂಪಾದಕೀಯ : ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ; ಪೂರ್ಣಗೊಳ್ಳದ ಕೊಡವ ಹೆರಿಟೇಜ್ ಯೋಜನೆ!

ಕೊಡವ ವಿಭಿನ್ನ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ರೂಪಿಸಲಾದ ಕೊಡವ ಹೆರಿಟೇಜ್ ಯೋಜನೆ ೧೮ ವರ್ಷ ಕಳೆದರೂ ಕುಂಟುತ್ತಾ ಸಾಗುತ್ತಿದೆ. ಮಂಜಿನಗರಿ ಮಡಿಕೇರಿ ನಗರದಿಂದ ಅನತಿ ದೂರದ ಕರವಲೆ ಬಾಡಗ ಗ್ರಾಮದ (ವಿದ್ಯಾನಗರ) ೫ ಎಕರೆ ಜಾಗದಲ್ಲಿ ೨೦೦೪ರಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮೂಲಕ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ನೀಡಲಾಯಿತು. ಆದರೆ, ಅಂದಿನಿಂದ ಇಂದಿನವರೆಗೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕೊಡವ ಹೆರಿಟೇಜ್ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡವ ಐನ್‌ಮನೆ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಯಿತು. ಐನ್‌ಮನೆ, ಸಭಾಂಗಣ, ಕೊಡವರ, ಸಂಸ್ಕೃತಿ, ಪದ್ಧತಿ, ಪರಂಪರೆ, ಉಡುಪು ಪ್ರದರ್ಶನ, ಕೊಡಗಿನ ಪ್ರಮುಖ ಬೆಳೆ ಹಾಗೂ ಕೊಡವರ ಪೂರ್ವಿಕರು ಬಳಸುತ್ತಿದ್ದ ವಸ್ತುಗಳ ಪ್ರದರ್ಶನ ಇಡಲು ವಸ್ತು ಸಂಗ್ರಹಾಲಯ ಹಾಗೂ ಇನ್ನಿತರ ವ್ಯವಸ್ಥೆಗಳೊಂದಿಗೆ ಕೊಡವರ ಸಂಸ್ಕೃತಿ ಬಗ್ಗೆ ಪೂರಕ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು.
ಕೊಡವ ಪಾರಂಪರಿಕ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯನ್ನು ನೇಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿ, ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಆದರೆ, ಈ ಸಮಿತಿ ಇನ್ನೂ ಕೂಡ ಕಾರ್ಯೋನ್ಮುಖಗೊಂಡಿಲ್ಲ.
ಯೋಜನೆ ರೂಪಿಸಿದಾಗಲಿಂದ ಇದುವರೆಗೂ ನಾಲ್ಕು ಬಾರಿ ಅನುದಾನದ ಮೊತ್ತ ಬದಲಾವಣೆಗೊಂಡಿದೆ. ಈ ಪೈಕಿ ೨೦೦೪ರಲ್ಲಿ ಮೊದಲ ಕಂತಾಗಿ ರೂ. ೩೩.೫೪ ಲಕ್ಷವನ್ನು ಬಿಡುಗಡೆ ಮಾಡಲಾಯಿತು. ೧೮.೯.೨೦೧೦ರಂದು ಎರಡನೇ ಕಂತಾಗಿ ರೂ.೨೦ ಲಕ್ಷವನ್ನು ಜಿಲ್ಲಾಧಿಕಾರಿಗೆ, ೭.೬.೨೦೧೪ ರಂದು ಮೂರನೇ ಕಂತಾಗಿ ರೂ. ೧ ಕೋಟಿ, ೭.೨.೨೦೧೫ ರಂದು ನಾಲ್ಕನೇ ಕಂತಾಗಿ ರೂ. ೧ ಕೋಟಿ, ೮.೧೨.೨೦೨೧ ರಂದು ಐದನೇ ಕಂತಾಗಿ ರೂ. ೨೯ ಲಕ್ಷ, ಒಟ್ಟಾರೆಯಾಗಿ ರೂ. ೨.೮೨ ಕೋಟಿ ಹಣವನ್ನು ಕಾಮಗಾರಿಗಾಗಿ ಬಿಡುಗಡೆ ಮಾಡಲಾಗಿದೆ.
ಯೋಜನೆಗೆ ೨೦೦೪ರಲ್ಲಿ ರೂ.೮೮ ಲಕ್ಷ ಅಂದಾಜು ಮೊತ್ತದಲ್ಲಿ ಮಂಜೂರಾತಿ ದೊರೆತಿತ್ತು. ೨೦೧೦ರಲ್ಲಿ ರೂ. ೧.೪೫ ಕೋಟಿ ಪರಿಷ್ಕೃತ ಅಂದಾಜಿಗೆ ಹೆಚ್ಚಿಸಲಾಯಿತು. ಬಳಿಕ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿದ ಸಂದರ್ಭದಲ್ಲಿ ಅನುಮೋದಿತ ಅಂದಾಜಿನಲ್ಲಿ ‘ಲ್ಯಾಟರೈಟ್’ ತಡೆಗೋಡೆಗಳನ್ನು ನಿರ್ಮಿಸಬೇಕು. ಇಳಿಜಾರು ಪ್ರದೇಶವಾಗಿರುವ ಕಾರಣದಿಂದ ಈ ಗೋಡೆಗಳನ್ನು ನಿರ್ಮಿಸಿದ್ದಲ್ಲಿ ಗೋಡೆ ಕುಸಿಯುವ ಸಾಧ್ಯತೆ ಇರುವ ಕಾರಣಕ್ಕೆ ಮುಖ್ಯ ಇಂಜಿನಿಯರ್ ಇದರ ವಿನ್ಯಾಸವನ್ನು ಬದಲಾಯಿಸಿ ‘ಲ್ಯಾಟರೈಡ್’ ಗೋಡೆ ಬದಲಾಗಿ ಸರಳು ಸಹಿತ ತಡೆಗೋಡೆ ನಿರ್ಮಿಸಲು ಸೂಚಿಸಿದ್ದರಿಂದ ೨೦೧೪ರಲ್ಲಿ ೨.೬೪ ಕೋಟಿಗೆ ಏರಿಸಲಾಯಿತು.
ಇವೆಲ್ಲದರ ಬಳಿಕ ಗುತ್ತಿಗೆದಾರರ ಬದಲಾವಣೆಯಾದ ಕಾರಣ ಅಂದಾಜು ಮೊತ್ತದನ್ವಯ ಮೂಲಗುತ್ತಿಗೆದಾರರಿಗೆ ರೂ. ೧.೭೦ ಕೋಟಿ ಪಾವತಿಯಾಗಿದ್ದು, ಉಳಿದ ಕಾಮಗಾರಿಯನ್ನು ನಿರ್ವಹಿಸಲು ಹೊಸ ಗುತ್ತಿಗೆದಾರರು ನಮೂದಿಸಿರುವ ಟೆಂಡರ್ ಮೊತ್ತಕ್ಕೆ ಗುತ್ತಿಗೆ ವಹಿಸಿದ್ದಲ್ಲಿ ರೂ. ೬೨,೪೧,೧೧೦ ರೂಪಾಯಿ ಹೆಚ್ಚುವರಿಯಾಗಿದೆ. ಇದನ್ನು ಹೆಚ್ಚುವರಿ ಅನುದಾನ ಎಂದು ಪರಿಗಣಿಸಿ ೨೦೧೮ರಲ್ಲಿ ರೂ. ೩.೩೦ ಕೋಟಿ ರೂಪಾಯಿ ವೆಚ್ಚಕ್ಕೆ ಪರಿಷ್ಕೃತಗೊಳಿಸಲಾಯಿತು.
ಕೊಡಗಿನ ಶಾಸಕರು, ವಿಧಾನ ಪರಿಷತ್ತು ಸದಸ್ಯರುಗಳು ಹಲವು ಬಾರಿ ಕೊಡವ ಹೆರಿಟೇಜ್ ಕಾಮಗಾರಿ ಸಂಬಂಧ ಸರ್ಕಾರದ ಗಮನ ಸೆಳೆದರು ಯಾವುದೇ ಫಲ ದೊರೆತ್ತಿಲ್ಲ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪಗೊಂಡು ಚರ್ಚೆಗಳು ನಡೆದಿವೆ. ಮಾ.೨೯ ರಂದು ವಿಧಾನ ಪರಿಷತ್ತು ಸದಸ್ಯೆಯಾಗಿದ್ದ ಶಾಂತೆಯಂಡ ವೀಣಾ ಅಚ್ಚಯ್ಯ ಈ ವಿಷಯ ಪ್ರಸ್ತಾಪಿಸಿದ ಸಂದರ್ಭ ಈ ವರ್ಷದ ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರವಾಗಿ ಇಂಧನ ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದ್ದರು. ಅಲ್ಲದೆ, ಉದ್ಘಾಟನೆಗೆ ತಮ್ಮನ್ನೇ ಆಹ್ವಾನಿಸಲಾಗುವುದು ಎಂದು ಕೂಡ ಸಚಿವರು ವೀಣಾ ಅಚ್ಚಯ್ಯ ಅವರಿಗೆ ಸದನಲ್ಲಿ ಉತ್ತರಿಸಿದ್ದರು. ಆದರೆ, ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಜಿಲ್ಲೆಯ ಶಾಸಕರ ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ. ತನ್ನ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಕೋಟ್ಯಂತರ ವೆಚ್ಚದ ಯೋಜನೆಯನ್ನು ಶೀಘ್ರ ಮುಗಿಸಲು ಕೈಗೊಳ್ಳಬೇಕಾದ ಕ್ರಮದಲ್ಲಿ ವಿಫಲರಾಗಿದ್ದಾರೆ. ಕೇವಲ ಸ್ಥಳ ಭೇಟಿ, ಆ ಕ್ಷಣಕ್ಕೆ ತರಾಟೆಗೆ ತೆಗೆದುಕೊಳ್ಳುವುದರಿಂದ ಕಾಮಗಾರಿ ಮುಗಿಯುವುದಿಲ್ಲ ಎಂದು ಕೂಡ ಜನಪ್ರತಿನಿಧಿಗಳು ಅರಿತು ಮುನ್ನಡೆಯಬೇಕು. ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ವಿಷಯ ಮುಟ್ಟಿಸುವ ಜವಾಬ್ದಾರಿಯುತ ಕೆಲಸ ಮಾಡಬೇಕಾಗಿದೆ. ಜತೆಗೆ ವಿರೋಧ ಪಕ್ಷಗಳು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಸಹಕಾರ ನೀಡುವುದೂ ಅತ್ಯಗತ್ಯ.

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

13 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

17 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

17 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

17 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

17 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

17 hours ago