ಎಡಿಟೋರಿಯಲ್

ಖಾದಿ ಕೇಂದ್ರಗಳಿಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಸರ್ಕಾರದ ಹೆಜ್ಜೆ

ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ನೆನಪಿನಾರ್ಥವಾಗಿ ಆಚರಿಸುವ ಸರ್ವೋದಯ ದಿನದಂತೆ ರಾಜ್ಯ ಸರ್ಕಾರ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಗಮನಾರ್ಹ.

ಸರ್ಕಾರಿ ಅಧಿಕಾರಿಗಳು, ನೌಕರರು ಪ್ರತಿ ತಿಂಗಳ ಮೊದಲನೇ ಶನಿವಾರ ಖಾದಿ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂದು ಆದೇಶ ಹೊರಡಿಸಿದೆ. ನಂಜನಗೂಡು ತಾಲ್ಲೂಕಿನ ಬದನವಾಳು, ತಗಡೂರು ಸೇರಿದಂತೆ ರಾಜ್ಯಾದ್ಯಂತ ಇರುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಪುನಶ್ಚೇತನ ನೀಡಬೇಕು ಎಂಬ ಒತ್ತಾಯ ಆಗಾಗ್ಗೆ ಕೇಳಿಬರುತ್ತಿದೆ. ಈ ಸಮಯದಲ್ಲೇ ಸರ್ಕಾರ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ ಅನಿಸುತ್ತದೆ.

ಇಂತಹ ಪರೋಕ್ಷ ಕ್ರಮಗಳಿಂದ ಖಾದಿ ಗ್ರಾಮೋದ್ಯೋಗ ಕೆಂದ್ರಗಳ ಪುನರುಜ್ಜೀವನ ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಸಮಜಾಯಿಷಿ ನೀಡಬೇಕಾಗಿದೆ. ಆದರೆ, ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದಲೇ ಉಡುಪು ಖರೀದಿಸಲು ಆದೇಶ ಮಾಡಿರುವುದು ಸ್ವಲ್ಪ ಮಟ್ಟಿಗೆ ಆಶಾದಾಯಕವಾಗಿದೆ.

೨೦೧೫ರಲ್ಲಿ ಬದನವಾಳುವಿನಲ್ಲಿ ಖಾದಿ ಕೇಂದ್ರದ ಬಲವರ್ಧನೆಗಾಗಿ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಸತ್ಯಾಗ್ರಹ ನಡೆಯಿತು. ಆದರೆ, ನಿರೀಕ್ಷೆ ಯಷ್ಟು ಫಲ ದೊರೆಯಲಿಲ್ಲ. ೩.೫೦ ಕೋಟಿ ರೂ. ವೆಚ್ಚದಲ್ಲಿ ಒಂದು ಬೃಹತ್ ಕಟ್ಟಡ ನಿರ್ಮಾಣದ ಹೊರತು ಬೇರೆ ಏನೂ ಆಗಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕು. ಅಲ್ಲದೆ, ಇತ್ತೀಚೆಗೆ ಬದನವಾಳು ಕೇಂದ್ರದ ಅಭಿವೃದ್ಧಿಗೆ ೪೦ ಕೋಟಿ ರೂ. ಅನುದಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ. ಆದರೆ, ಸರಿಯಾದ ನೀಲನಕ್ಷೆಯೇ ಇಲ್ಲ. ಹೀಗಿರುವಾಗ ಅನುದಾನ ವ್ಯರ್ಥವಾಗುವ ಅಪಾಯ ಇದೆ.

ಹಲವು ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಕುಂಟುತ್ತಾ ಸಾಗಿವೆ. ನೇಕಾರರು, ನೂಲುಕಾರರಿಗೆ ವೇತನ ನಿಯಮಿತವಾಗಿ ದೊರೆಯುತ್ತಿಲ್ಲ ಎಂಬ ಆರೋಪಗಳು ಇವೆ. ತಗಡೂರು ಕೇಂದ್ರದಲ್ಲಿ ನೂಲುಕಾರರು ಕೆಲಸ ಮಾಡುತ್ತಿದ್ದು, ನೂಲು ಸಂಗ್ರಹಣೆ ಅಧಿಕವಾಗಿದೆ. ಆದರೆ, ನೇಕಾರರು ಕೆಲಸ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಪ್ರಮುಖವಾಗಿ ಖಾದಿ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ. ಮಹಾತ್ಮ ಗಾಂಧೀಜಿ ಅವರು ಆರ್ಥಿಕ ಸ್ವಾತಂತ್ರ್ಯ, ಮಹಿಳಾ ಸಬಲೀಕರಣ ಹಾಗೂ ಗ್ರಾಮ ಸ್ವರಾಜ್‌ನ ಅನುಷ್ಠಾನದ ಭಾಗವಾಗಿ ಈ ಖಾದಿ ಕೇಂದ್ರಗಳ ಸ್ಥಾಪನೆಯನ್ನು ಬಯಸಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಖಾದಿ ಕೇಂದ್ರಗಳು, ಜನಜೀವನದ ಸಹಜ ಭಾಗವಾಗಿಬಿಟ್ಟಿದ್ದು, ಖಾದಿ ವಸ್ತ್ರಗಳಿಗೆ ಬೇಡಿಕೆ ಇತ್ತು. ಸ್ವಾತಂತ್ರ್ಯಾನಂತರ ಪಾಶ್ಚಿಮಾತ್ಯೀಕರಣ, ಜಾಗತೀಕರಣದ ದಾಳಿಗೆ ಸಿಲುಕಿದ ಈ ಕೇಂದ್ರಗಳು ಶೈಶವವಾಸ್ಥೆಗೆ ತಲುಪಿಬಿಟ್ಟಿವೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಖಾದಿ ಬಟ್ಟೆಗಳಿಗೆ ಮತ್ತೆ ಬೇಡಿಕೆ ಕುದುರಿಸುವುದು ತ್ರಾಸದಾಯಕದ ಕೆಲಸ. ಅಲ್ಲದೆ, ಖಾದಿ ಕೇಂದ್ರಗಳಿಗೆ ಯಂತ್ರಗಳು ಪ್ರವೇಶ ಮಾಡಿದರೆ ದೇಸಿತನಕ್ಕೆ ಧಕ್ಕೆ ಒದಗುತ್ತದೆ ಎಂಬುದು ಖಾದಿ ಕೇಂದ್ರಗಳ ಪರವಾದವರ ಆತಂಕ.

ಹಾಗಾಗಿ ಕೈಮಗ್ಗದ ಉತ್ಪನ್ನಗಳಿಗೆ ಆದ್ಯತೆ ನೀಡಬೇಕಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವೆನಿಸುತ್ತದೆ. ಖಾದಿ ಉತ್ಪನ್ನಗಳ ಮಾರುಕಟ್ಟೆಗೆ ಸಾರ್ವಜನಿಕರೇ ಗ್ರಾಹಕರಾಗಬೇಕು. ಖಾದಿ ಉಡುಪುಗಳು ದುಬಾರಿ ಅನಿಸಿದರೆ, ಒಂದು ಪಂಚೆ, ಒಂದು ಟವೆಲ್… ಹೀಗೆ ಸಣ್ಣಪುಟ್ಟ ಖಾದಿ ಉತ್ಪನ್ನಗಳನ್ನು ನಿಯಮಿತವಾಗಿ ಖರೀದಿಸಬೇಕು ಎನ್ನುವ ಪ್ರಸನ್ನ ಹೆಗ್ಗೋಡು ಅವರ ನಿಲುವಿನಲ್ಲಿ ಅರ್ಥವಿದೆ. ಒಂದು ರೀತಿಯಲ್ಲಿ ಜನರೇ ಖಾದಿ ಉತ್ಪನ್ನಗಳ ರಾಯಭಾರಿಗಳಾಗಬೇಕು. ಅದರಿಂದ ದೇಸಿ ಚಳವಳಿಯ ಘಮಲು, ಸರಳತೆಯನ್ನು ಉಳಿಸಿದಂತಾಗುತ್ತದೆ.

ಒಂದೆಡೆ ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ಇಡುವ ಮಾತನಾಡುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯ ಅರಿವು ಮೂಡಿಸುವ ಯತ್ನ ನಡೆಸುವ ಆಲೋಚನೆ ಮಾಡಿದಂತಿದೆ. ಆದರೆ ಮುಖ್ಯವಾಗಿ ಸರ್ಕಾರದ ನಿರ್ಧಾರದ ಹಿಂದೆ ಇರುವುದು ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಬದಲಾವಣೆ ಮಾಡಿ ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್- ಗ್ರಾಮೀಣ್ (ವಿಬಿ ಜಿ ರಾಮ್ ಜಿ) ಜಾರಿಗೆ ಮುಂದಾಗಿರುವುದಕ್ಕೆ ತಿರುಗೇಟು ನೀಡುವ ಉದ್ದೇಶವಾಗಿದೆ. ಇತ್ತೀಚೆಗೆ ಹಲವು ದಿನಪತ್ರಿಕೆಗಳ ಮುಖಪುಟಗಳಲ್ಲಿ ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ವಿರುದ್ಧ ಜಾಹೀರಾತು ನೀಡಿತ್ತು. ಇದು ಪ್ರಸ್ತುತ ಅಧಿವೇಶನದಲ್ಲಿ ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿ ಗದ್ದಲವೂ ನಡೆಯಿತು. ಆದರೆ, ರಾಜ್ಯ ಸರ್ಕಾರ ನಿಜವಾಗಿ ಗಾಂಧಿಜಿ ಅವರ ಆಶಯಗಳಲ್ಲಿ ಒಂದಾದ ಸ್ವದೇಶಿ ಖಾದಿ ಉತ್ಪನ್ನ ಕೇಂದ್ರಗಳ ಸಬಲೀಕರಣ ಹಾಗೂ ಗ್ರಾಮ ಸ್ವರಾಜ್ ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಿಸುವುದು ಅತ್ಯಗತ್ಯ. ಹಾಗಿದ್ದರೆ ಮಾತ್ರ ಸರ್ಕಾರಿ ನೌಕರರಿಗೆ ಒಂದು ದಿನ ಖಾದಿ ಉಡುಪು ಕಡ್ಡಾಯಗೊಳಿಸಿರುವುದು ಮತ್ತು ಖಾದಿ ಗ್ರಾಮೋದ್ಯೋಗ ಕೇಂದ್ರಗಳ ಚೇತರಿಕೆಯ ಕ್ರಮಗಳು ಅರ್ಥವತ್ತಾಗುತ್ತವೆ

” ಒಂದೆಡೆ ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ಇಡುವ ಮಾತನಾಡುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯ ಅರಿವು ಮೂಡಿಸುವ ಯತ್ನ ನಡೆಸುವ ಆಲೋಚನೆ ಮಾಡಿದಂತಿದೆ.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

6 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

6 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

6 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

6 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

6 hours ago