ಎಡಿಟೋರಿಯಲ್

ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ

– ಪ್ರಸನ್ನ

ಪಾರ್ಕಿನ್ಸನ್ ಖಾಯಿಲೆಯಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದ ಜಿ.ರಾಜಶೇಖರ ನಿನ್ನೆ ನಿಧನರಾದರು. ಕೆಲವೊಮ್ಮೆ ಸಾವೇ ಸಮಾಧಾನಕರವಂತೆ. ಕಡೆಗೂ ಅವರನ್ನು ಕೊಂಡೊಯ್ದು ಸಂಕಟದಿಂದ ಬಿಡುಗಡೆಗೊಳಿಸಿ, ಸಾವು ಸಮಾಧಾನಕರವಾಗಿಯೇ ನಡೆದುಕೊಂಡಿತು. ಅವರ ಸಂಕಟವನ್ನು ನೋಡುವುದು, ಕಡೆ ಕಡೆಗೆ, ನನ್ನಿಂದಾಗುತ್ತಿರಲಿಲ್ಲ. ಏನೋ ಹೇಳಬೇಕೆಂದು ಅವರು ಪ್ರಯಾಸ ಪಡುವುದು, ಅದನ್ನರಿಯಲೆಂದು ನಾವು ಪ್ರಯಾಸಪಡುವುದನ್ನು, ಇಬ್ಬರನ್ನೂ ಕೊಲ್ಲುತ್ತಿತ್ತು.

ಇತ್ತೀಚೆಗೆ ಉಡುಪಿಗೆ ಹೋದಾಗ ಸಹ ಅವರನ್ನು ಕಂಡು ಬರುವ ದೈರ್ಯವಾಗುತ್ತಿರಲಿಲ್ಲ ನನಗೆ.

ಪಾದರಸದಂತಹ ಮೆದುಳು, ಅದಕ್ಕೆ ತದ್ವಿರುದ್ಧವಾಗಿದ್ದ ಮೃದು ಹೃದಯ ರಾಜಶೇಖರದ್ದು. ಜೊತೆಗೆ, ನಾಚಿಕೆ ಸ್ವಭಾವ, ಹಿಂಜರಿಕೆ. ಆದರೆ, ಒಳ್ಳೆಯ ಪುಸ್ತಕಗಳು ಹಾಗೂ ಒಳಿತಿನ ವಿಚಾರಗಳು ಕನ್ನಡಕ್ಕೆ ತಲುಪುವ ಬಹಳ ಮುಂಚೆಯೇ, ಉಡುಪಿಯ ಮೂಲೆಯಲ್ಲಿದ್ದ, ಸಣ್ಣ ಮನೆಯೊಂದರಲ್ಲಿದ್ದ, ಕಾರಕೂನ ರಾಜಶೇಖರನ್ನು ತಲುಪಿಬಿಡುತ್ತಿತ್ತು.

ಅದು ಹೇಗೋ. ಹಲವು ಆಯಾಮಗಳ ವ್ಯಕ್ತಿತ್ವ ಅವರದ್ದು.

ಮಾರ್ಕ್ಸ್‌ವಾದಿ ರಾಜಶೇಖರ, ಟ್ರೇಡ್ ಯೂನಿಯನ್ ರಾಜಶೇಖರ, ಸಾಹಿತ್ಯ ವಿಮರ್ಶಕ ರಾಜಶೇಖರ, ಅಲ್ಪಸಂಖ್ಯಾತರ ಸಂಗಾತಿ ರಾಜಶೇಖರ… ಇತ್ಯಾದಿ. ಯಾವುದೂ ಇಂದಿನ ಕಾಲಮಾನದಲ್ಲಿ ಗೆಲ್ಲುವುದು ಸಾಧ್ಯವಿರಲಿಲ್ಲ. ಆದರೆ ಸೋಲುವ ಜಾಯಮಾನವಲ್ಲ ರಾಜಶೇಖರದ್ದು. ಸೋಲು ಗೆಲುವುಗಳಾಚೆ ನಡೆದಿದ್ದರು ಅವರು.

ಆತ ಬರೆದದ್ದು ಒಂದೇ ಒಂದು ಪುಸ್ತಕ ‘ಕಾಗೋಡು ಸತ್ಯಾಗ್ರಹ’. ವಿಟ್ಗೆನ್ ಸ್ಟೈನ್ ಎಂಬ ತತ್ತ್ವಜ್ಞಾನಿ ಹೀಗೆಯೇ ಇದ್ದನಂತೆ. ೩೮ ಪುಟಗಳ, ಟ್ರ್ಯಾಕ್ಟಟಸ್ ಎಂಬ ಹೆಸರಿನ ಒಂದು ಸಣ್ಣ ಪುಸ್ತಕ ಬರೆದ ಆತ. ಆದರೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅದನ್ನೇ ಥೀಸಿಸ್ ಎಂದು ಸ್ವೀಕರಿಸಿ ಡಾಕ್ಟರೇಟ್ ಪದವಿ ನೀಡಿತ್ತು. ವಿಟ್ಗೆನ್ ಸ್ಟೈನ್ ಜರ್ಮನಿಯ ಯೂಹೂದ್ಯನಾಗಿದ್ದ. ರಾಜಶೇಖರ ಮಾರ್ಕ್ಸ್ವಾದಿ ಬ್ರಾಹ್ಮಣನಾಗಿದ್ದ. ರಾಜಶೇಖರರೊಟ್ಟಿಗೆ ಒಡನಾಟವಿದ್ದವರಿಗೆ ಅಥವಾ ಬಿಡಿ ಲೇಖನ ಓದಿದವರಿಗಷ್ಟೆ ಗೊತ್ತಿತ್ತು. ಆತನ ಮೌಲ್ಯ.

ಈಗನ್ನಿಸುತ್ತಿದೆ, ರಾಜಶೇಖರ ಏನನ್ನೋ ಹೇಳಬೇಕೆಂದು ಪ್ರಯಾಸಪಡುತ್ತಿದ್ದದ್ದು, ಕೇಳುಗರು ಅದೇನೆಂದು ಅರ್ಥವಾಗದೆ ಪ್ರಯಾಸಪಡುತ್ತಿದ್ದದ್ದು, ಆತನಿಗೆ ಪಾರ್ಕಿನ್ಸನ್ ಖಾಯಿಲೆ ಬಂದ ನಂತರದ ಸಮಸ್ಯೆ ಮಾತ್ರವೇ ಅಲ್ಲ. ಮೊದಲು ಹೀಗೆಯೇ ಇತ್ತು. ಆತನ ಮೆದುಳು ಸಮಾಜವಾದದ ತತ್ವ ಮಿಡಿಯುತ್ತಿದ್ದರೆ, ಹೃದಯ ಕನ್ನಡದ ಹೃದಯವಂತಿಕೆ ಮಿಡಿಯುತ್ತಿತ್ತು. ಸಂವಹನ ಸಾಧಿಸಬೇಕೆಂದರೆ ಕೇಳುಗರ ಹೃದಯವೂ ಮಿಡಿಯಬೇಕು ತಾನೆ.

ಆದರೆ, ಈಚಿನ ದಿನಗಳಲ್ಲಿ ಮಾತು ಮೆದುಳಿಂದ ಕೆಳಕ್ಕಿಳಿಯುವುದೇ ಇಲ್ಲ. ಕಿಡಿ ಕಿಡಿಯಾಗಿ, ಕಿರಿ ಕಿರಿಯಾಗಿ, ಮೇಲು ಮೇಲೆ ಹಾರುತ್ತಿರುತ್ತದೆ. ಮೆದುಳುಗಳ ನಡುವೆ ಎಂದಾದರೂ ಸಂಬಂಧ ಸಾಧ್ಯವೇ? ಎಲ್ಲ ಹಿಂದೂಗಳು ಮೆದುಳು ನೆನಪಿಸಿದ್ದಷ್ಟನ್ನೇ ನುಡಿಯುತ್ತಿದ್ದಾರೆ, ಎಲ್ಲ ಮುಸಲನ್ಮಾರು, ಎಲ್ಲ ಪಕ್ಷಗಳು, ಎಲ್ಲ ನಾಯಕರು, ಅಷ್ಟನ್ನೆ ನುಡಿಯುತ್ತಿದ್ದಾರೆ. ಅವಸರದಲ್ಲಿದ್ದಾರೆ, ಯುದ್ಧೋನ್ಮಾದದಲ್ಲಿದ್ದಾರೆ. ಇಡೀ ಮನುಕುಲಕ್ಕೇ ಪಾರ್ಕಿನ್ಸನ್ ಎಂಬ ಹೆಸರಿನ ಅಭಿವ್ಯಕ್ತಿ ಹೀನತೆಯ ಖಾಯಿಲೆ ಬಡಿದಿದೆ. ಆದರೆ, ಈ ಖಾಯಿಲೆ ಬಲಿ ತೆಗೆದುಕೊಂಡ ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ.

andolana

Recent Posts

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

4 mins ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

9 mins ago

ಅಕ್ಕಿ ಬೆಲೆ ಹೆಚ್ಚಳ: ಗ್ರಾಹಕರ ಜೇಬಿಗೆ ಹೊರೆ

ಚನ್ನೇಶ ಬಿ.ಇದರಮನಿ ಬರ ಪರಿಸ್ಥಿತಿಯಿಂದ ಅಕ್ಕಿ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ ಪ್ರತಿ ಕೆಜಿಗೆ ೬ ರಿಂದ ೧೦ ರೂ.ಗಳಷ್ಟು…

14 mins ago

ಧ್ರುವರ ಹೆಸರಿಗೆ ಹೊಳಪು ನೀಡುವ ಅಭಿಮಾನಿ ಬಳಗ

ಎಸ್.ಎಸ್.ಭಟ್ಟ ನಾಳೆ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜನೆ  ನಂಜನಗೂಡು: ಮಾಜಿ ಸಂಸದರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ…

19 mins ago

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

24 hours ago