ಚನ್ನೇಶ ಬಿ.ಇದರಮನಿ
ಬರ ಪರಿಸ್ಥಿತಿಯಿಂದ ಅಕ್ಕಿ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ
ಪ್ರತಿ ಕೆಜಿಗೆ ೬ ರಿಂದ ೧೦ ರೂ.ಗಳಷ್ಟು ಹೆಚ್ಚಳ
ಮೈಸೂರು: ಅಗತ್ಯವಸ್ತುಗಳ ಬೆಲೆ ಏರಿಕೆ ಸರಣಿಗೆ ಇದೀಗ ಅಕ್ಕಿ ಬೆಲೆಯೂ ಸೇರ್ಪಡೆಯಾಗಿದ್ದು, ಜನರ ಅನ್ನದ ಬಟ್ಟಲು ಕೈ ಸುಡುತ್ತಿದೆ.
ಕೊಲ್ಲಿ ಯುದ್ಧದಿಂದಾಗಿ ತೈಲ ಬೆಲೆ ಹೆಚ್ಚಳ, ಸಾಗಾಣಿಕೆ ದರ ಏರಿಕೆ, ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ನಿರ್ಬಂಧ ಹೇರದಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಬೇಡಿಕೆಯಷ್ಟು ಅಕ್ಕಿ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದೆ. ಪ್ರತಿ ಕೆಜಿಗೆ ೬ ರಿಂದ ೧೦ ರೂ.ಗಳಷ್ಟು ಹೆಚ್ಚಳವಾಗಿದ್ದು, ೨೬ ಕೆಜಿಯ ಅಕ್ಕಿ ಚೀಲಕ್ಕೆ ೧೫೦ ರೂ. ಏರಿಕೆಯಾಗಿದೆ.
ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ರಾಜ್ಯ ಸರ್ಕಾರ ಜಲಾಶಯ ಗಳಲ್ಲಿನ ನೀರನ್ನು ಕೃಷಿ ಚಟುವಟಿಕೆಗೆ ಬಿಡದೆ, ಕುಡಿಯುವ ನೀರಿಗೆ ಕಾದಿಟ್ಟು ಕೊಳ್ಳಲು ನಿರ್ಧರಿಸಿದೆ. ಇದರ ಪರಿಣಾಮ ವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆ ಯುವ ತುಂಗಭದ್ರಾ ನದಿಪಾತ್ರದ ಜಿಲ್ಲೆಗಳು ಹಾಗೂ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಈ ವರ್ಷ ಭತ್ತದ ಬಿತ್ತನೆ ಕಾರ್ಯವೇ ಮಾಡುವಂತಿಲ್ಲ. ಇದರಿಂದ ಅಕ್ಕಿ ಬೆಲೆ ಇನ್ನಷ್ಟು ಗಗನಮುಖಿಯಾಗುವ ಸಾಧ್ಯತೆ ಹೆಚ್ಚಿದೆ.
ಸದ್ಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸರಬರಾಜಾಗು ತ್ತಿದೆ. ನೆರೆ ರಾಜ್ಯಗಳಿಂದ ಅಕ್ಕಿ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ಸಾಗಣೆ ವೆಚ್ಚ ಭರಿಸಬೇಕಾಗುವುದರಿಂದ ಅಕ್ಕಿ ಬೆಲೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಅಕ್ಕಿ ವ್ಯಾಪಾರಿಗಳು.
ಅನ್ನಭಾಗ್ಯ ಅಕ್ಕಿ ಬಳಕೆ ಕಡಿಮೆ: ರಾಜ್ಯ ಸರ್ಕಾರ ಜನರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದ್ದರೂ, ಅದನ್ನು ಅನ್ನ ತಯಾರಿಸಲು ಬಳಸುವವರ ಸಂಖ್ಯೆ ಕ್ಷೀಣಿಸಿದೆ. ನ್ಯಾಯ ಬೆಲೆ ಅಂಗಡಿಗಳಿಂದ ಪಡೆದ ಅಕ್ಕಿಯನ್ನು ಬಹುತೇಕ ಗ್ರಾಹಕರು ಇಡ್ಲಿ, ದೋಸೆಗೆ ಮಾತ್ರ ಬಳಸುತ್ತಾರೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಕ್ಕಿ ದರ ಒಂದು ಕೆಜಿಗೆ ೧ರಿಂದ ೨ರೂ. ಏರಿಕೆಯಾಗುತ್ತಿತ್ತು. ಆದರೆ, ಈ ಬಾರಿ ಸೋನಾ ಸ್ಟೀಮ್ ರೈಸ್ ೪೩ ರೂ.ಗಳಿಂದ ೪೯ ರೂ.ಗಳಿಗೆ ಹಾಗೂ ಸೋನಾ ರಾ ರೈಸ್ ೫೨ ರೂ.ಗಳಿಂದ ೫೯ ರೂ.ಗಳಿಗೆ ಏರಿಕೆಯಾಗಿದೆ. ಶ್ರೀರಾಮ್ ಜೀರಾ ರಾ ರೈಸ್ ೬೮ ರಿಂದ ೭೫ ರೂ.ಗಳವರೆಗೂ ಹೆಚ್ಚಳವಾಗಿದೆ. ಶ್ರೀಲಂಕಾ ಸೇರಿ ಕೆಲ ದೇಶಗಳಿಗೆ ಅಕ್ಕಿ ರಫ್ತು ಹೆಚ್ಚಾಗಿರುವುದು ಮತ್ತು ಸ್ಥಳೀಯವಾಗಿ ದಾಸ್ತಾನು ಕೊರತೆಯಿಂದಾಗಿ ಮೈಸೂರು ಮತ್ತು ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೆಲೆ ಸ್ವಲ್ಪ ಹೆಚ್ಚಾಗಿದೆ. ಹೊಸ ಅಕ್ಕಿ ಮಾರುಕಟ್ಟೆಗೆ ಬರುವವರೆಗೂ ಕಾಯಬೇಕಾಗಿರುವುದು ಅನಿವಾರ್ಯ ಎನ್ನುತ್ತಾರೆ ವ್ಯಾಪಾರಸ್ಥರು.
ತಿಂಗಳ ಹಿಂದೆಯೇ ಏರಿಕೆ: ಸೋನಾ ಮಸ್ಸೂರಿ, ಸ್ಟೀಮ್ ಅಕ್ಕಿ, ಕೋಲಂ ಮತ್ತು ರಾ ರೈಸ್ ಸೇರಿದಂತೆ ಎಲ್ಲ ಬಗೆಯ ಅಕ್ಕಿ ಬೆಲೆ ಪ್ರತಿ ಕೆಜಿಗೆ ೬ರಿಂದ ೧೦ ರೂ.ಗಳಷ್ಟು ಹೆಚ್ಚಳವಾಗಿದೆ. ಪ್ರತಿ ೨೬ ಕೆಜಿ ತೂಕದ ಅಕ್ಕಿ ಚೀಲದ ಬೆಲೆ ಕನಿಷ್ಠ ೧೫೦ ರೂ.ಗಳಷ್ಟು ಹೆಚ್ಚಳವಾಗಿದೆ. ಆದರೆ, ‘ಅಕ್ಕಿ ಬೆಲೆ ಏರಿಕೆಯಿಂದ ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮವೇನೂ ಬೀರಿಲ್ಲ. ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಅನಿವಾರ್ಯವಾಗಿ ಹೆಚ್ಚಿನ ದರ ಕೊಟ್ಟು ಅಕ್ಕಿ ಖರೀದಿಸುತ್ತಿದ್ದಾರೆ’ ಎಂದು ಮೈಸೂರಿನ ಅಗ್ರಹಾರದ ಅಕ್ಕಿ ವ್ಯಾಪಾರಿಯೊಬ್ಬರು ‘ಆಂದೋಲನ’ಕ್ಕೆ ತಿಳಿಸಿದ್ದಾರೆ.
” ಎಪಿಎಂಸಿಗೆ ಆವಕವಾಗುವ ಅಕ್ಕಿಯನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗುತ್ತದೆ. ಜುಲೈ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಅಕ್ಕಿ ಆವಕವಾಗಿತ್ತು. ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ.”
-ಎಚ್.ಸಿ.ಎಂ. ರಾಣಿ, ಕಾರ್ಯದರ್ಶಿ, ಎಪಿಎಂಸಿ, ಮೈಸೂರು
ನವೀನ್ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…
ಎಸ್.ಎಸ್.ಭಟ್ಟ ನಾಳೆ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜನೆ ನಂಜನಗೂಡು: ಮಾಜಿ ಸಂಸದರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ…
೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…
ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…
ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…