ಹೆದ್ದಾರಿಯಲ್ಲಿ ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಸಾವು ಹಿನ್ನೆಲೆ: ಮೂರು ಗಂಟೆ ಕಡಿತ ಮಾಡುವ ಸಲಹೆ
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಒಳಗೆ ಹಾದು ಹೋಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ (766)ಯಲ್ಲಿ ಮಂಗಳವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಸರವಾದಿಗಳಿಂದ ರಾತ್ರಿ ಸಂಚಾರ ನಿಷೇಧ ಅವಧಿಯನ್ನು ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ತಮಿಳುನಾಡು ಮೂಲದ ಲಾರಿ ಅರಣ್ಯದೊಳಗೆ ಮದ್ದೂರು ವಲಯದಲ್ಲಿ ಅತಿವೇಗವಾಗಿ ಸಂಚರಿಸುವಾಗ 25 ವರ್ಷದ ಹೆಣ್ಣಾನೆಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿತ್ತು. ಈ ಬಗ್ಗೆ ವನ್ಯಜೀವಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.
ಅರಣ್ಯದೊಳಗಿನ ಹೆದ್ದಾರಿಯಲ್ಲಿ ಅತಿ ವೇಗವಾಗಿ ಸಂಚರಿಸುವ ವಾಹನಗಳಿಗೆ ತಡೆಯೊಡ್ಡಲು ಪ್ರಸ್ತುತ ಜಾರಿಲ್ಲಿರುವ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆ ಸಮಯದ ಬದಲು ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಗೆ ವಿಸ್ತರಿಸಬೇಕು. ಸರಕು ಸಾಗಿಸುವ ಭಾರಿ ವಾಹನಗಳಿಗೆ ಹೊಸ ಸಮಯ ನಿಗದಿಪಡಿಸಬೇಕು ಎಂಬ ಕೂಗು ಕೇಳಿಬಂದಿದೆ.
ಈ ಹುಲಿ ಸಂರಕ್ಷಿತಾರಣ್ಯದಲ್ಲಿ ಊಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಕಡೆಗೆ ರಾಷ್ಟ್ರೀಯ ಹೆದ್ದಾರಿ 766 ಹಾದು ಹೋಗುತ್ತವೆ.ರಾಜ್ಯ ಸರ್ಕಾರ 2009ರಲ್ಲಿ 2 ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ರವರೆಗೆ ವಾಹನಗಳ ಸಂಚಾರ ನಿಷೇಧಿಸಿತ್ತು. ಈ ನಿರ್ಧಾರವನ್ನು ಕೇರಳ ರಾಜ್ಯ ವಿರೋಧಿಸಿದರೆ ತಮಿಳುನಾಡು ಬೆಂಬಲಿಸಿತ್ತು. 2 ರಾಜ್ಯಗಳ ಸರ್ಕಾರಿ ಬಸ್ಗಳು, ಆಂಬುಲೆನ್ಸ್ ಸೇರಿದಂತೆ ಇತರೆ ತುರ್ತು ವಾಹನಗಳನ್ನು ಬಿಟ್ಟು ಉಳಿದ ವಾಹನಗಳು ಸಂಚಾರವನ್ನು ನಿಷೇಧಿಸಲಾಗಿತ್ತು.
ನಾಗರಹೊಳೆ ಮತ್ತು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ಗಂಟೆ ತನಕ ವಾಹನಗಳ ಸಂಚಾರ ನಿಷೇಧವಿದೆ. ಬಂಡೀಪುರ ಅರಣ್ಯದಲ್ಲಿ ಹೊರ ರಾಜ್ಯಗಳಿಗೆ ಹೋಗುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾತ್ರಿ 9 ಗಂಟೆ ನಂತರ ಸಂಚಾರ ನಿಷೇಧವಿದೆ.
ರಾತ್ರಿ 9 ಗಂಟೆ ನಂತರ ಸಂಚಾರ ಬಂದ್ ಆಗಲಿದೆ ಎಂಬ ಕಾರಣದಿಂದ ವಾಹನ ಸವಾರರು ಅರಣ್ಯದೊಳಗೆ ವೇಗವಾಗಿ ಸಂಚರಿಸುತ್ತವೆ. ಆದರೂ ಅರಣ್ಯ ಇಲಾಖೆ ವೇಗದ ಸಂಚಾರ ಬೇಡ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ ಎಂಬ ಅಸವಾಧಾನ ವ್ಯಕ್ತವಾಗಿದೆ.
ರಸ್ತೆ ಡುಬ್ಬಗಳು ಕಡಿಮೆ ?
ಊಟಿಗೆ ಸಂಪರ್ಕ ಸಾಧಿಸುವ ಹೆದ್ದಾರಿಗೆ ಹೋಲಿಸಿದರೆ ಕೇರಳದತ್ತ ಹೋಗುವ ಹೆದ್ದಾರಿ ಅಗಲವಾಗಿದೆ. ಇಲ್ಲಿ ರಸ್ತೆ ಡುಬ್ಬಗಳು ಕಡಿಮೆಯಿದ್ದು ವಾಹನಗಳು ಹೆಚ್ಚು ವೇಗದಲ್ಲಿ ಸಾಗುತ್ತವೆ.
ಗುಂಡ್ಲುಪೇಟೆ ಕಡೆಯ ಮದ್ದೂರು ಚೆಕ್ಪೋಸ್ಟ್ನಿಂದ ಕೇರಳದ ಗಡಿಯಲ್ಲಿರುವ ಮೂಲೆಹೊಳೆ ಚೆಕ್ಪೋಸ್ಟ್ ತನಕ 18 ಕಿ.ಮೀ ಅಂತರವಿದ್ದು 30 ಡುಬ್ಬಗಳಿವೆ. ಗುಂಡ್ಲುಪೇಟೆ ಕಡೆಯ ಮೇಲುಕಾಮನಹಳ್ಳಿಯಿಂದ ತಮಿಳುನಾಡು ಗಡಿಯ ಕೆಕ್ಕನಹಳ್ಳ ಚೆಕ್ಪೋಸ್ಟ್ ತನಕ 13 ಕಿ.ಮೀ ಇದ್ದು, 50ಕ್ಕೂ ಹೆಚ್ಚು ಡುಬ್ಬಗಳಿವೆ.
ಸಂರಕ್ಷಿತಾರಣ್ಯ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿವೆ. ಇನ್ನೊಂದಷ್ಟು ಹೆಚ್ಚು ಡುಬ್ಬ್ಬಗಳನ್ನು ಹಾಕಿ ವಾಹನಗಳ ವೇಗ ನಿಯಂತ್ರಿಸಿ ಪ್ರಾಣಿಗಳ ಜೀವ ಉಳಿಸಬೇಕಿದೆ.
-ಆರ್.ಕೆ.ಮಧು, ವನ್ಯಜೀವಿ ಛಾಯಾಗ್ರಾಹಕ. ಗುಂಡ್ಲುಪೇಟೆ
2 ಹೆದ್ದಾರಿಗಳಲ್ಲಿ ವೇಗವಾಗಿ ವಾಹನಗಳು ಚಲಿಸುವುದರಿಂದ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಆದ್ದರಿಂದ ಹೆದ್ದಾರಿಗಳಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧಿಸಬೇಕು ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
– ಡಾ.ಪಿ.ರಮೇಶಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಿಆರ್ಟಿ ಅಕ್ರಮ ರೆಸಾರ್ಟ್ಗಳ ವಿರುದ್ದ ಕ್ರಮಕ್ಕೆ ಶಿಫಾರಸ್ಸು
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ಅಕ್ರಮ ರೆಸಾರ್ಟ್ಗಳು ಮತ್ತು ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಶಿಫಾರಸ್ಸು ಮಾಡಿದೆ.
ಅರಣ್ಯದೊಳಗೆ ಹಾಗೂ ಅಂಚಿನಲ್ಲಿರುವ ಅಕ್ರಮ ರೆಸಾರ್ಟ್, ಹೋಂಸ್ಟೇಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪರಿಸರವಾದಿ ಗಿರಿಧರ ಕುಲಕರ್ಣಿ ಅವರು ಪ್ರಾಧಿಕಾರದ ಕೇಂದ್ರ ಕಚೇರಿಗೆ ದೂರು ನೀಡಿದ್ದರು.
ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿರುವ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ಸೂಚಿಸಿತ್ತು . ಅದರಂತೆ, ಸಹಾಯಕ ಐಜಿಎಫ್ ಹರಿಣಿ ವೇಣುಗೋಪಾಲ್ ನವೆಂಬರ್ 7ರಿಂದ 9ರವರೆಗೆ ಸಂರಕ್ಷಿತಾರಣ್ಯದ ನಿರ್ದೇಶಕಿ ಹಾಗೂ ಡಿಸಿಎಫ್ ದೀಪ್ ಜೆ.ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳೊಂದಿಗೆ ಗೊರುಕನ ರೆಸಾರ್ಟ್ಸ್, ಗಿರಿದರ್ಶಿನಿ ರೆಸಿಡೆನ್ಸಿ, ಚಂಪಕಾರಣ್ಯ ಹೋಂ ಸ್ಟೇ / ಶ್ವೇತಾದ್ರಿ ಹೋಂ ಸ್ಟೇ, ರಜತಾದ್ರಿ ಹಿಲ್ ವಿಲಾಸ್, ರಾಜಕುಮಾರ್ ಲಾಡ್ಜ್, ಆಕಾಶ್ ಲಾಡ್ಜ್, ರಂಗಣ್ಣ ರೂಮ್ಸ್, ಪಿ.ಸಿ. ಮಂಜು ವಸತಿ ಗೃಹಗಳಲ್ಲಿ ಪರಿಶೀಲಿಸಿದ್ದರು.
ಟರ್ಕಿ : ಟರ್ಕಿಯ ಕಹ್ರಮನ್ಮರಾಸ್ ಪ್ರಾಂತ್ಯದ ಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ (ಮಾಜಿ ಪೊಲೀಸ್ ಅಧಿಕಾರಿ) ಬಂದೂಕನ್ನು…
ಬೆಂಗಳೂರು : ಇಷ್ಟು ವರ್ಷ ನಾಪತ್ತೆ ಆಗಿದ್ದ ನಟ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಅವರು ಈಗ ಮರಳಿ ಬಂದಿದ್ದಾರೆ.…
ಯಳಂದೂರು : ತಾಲ್ಲೂಕಿನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತುಂಬಲಾಗುತ್ತಿದೆ. ಅಕ್ರಮಕ್ಕೆ ಕಡಿವಾಣ ಹಾಕಿಬೇಕಿದ್ದ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ಮಣ್ಣು ಮಾಫಿಯಾ…
ನವದೆಹಲಿ : ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ʼನಾರಿ ಶಕ್ತಿ ವಂದನ್ ಅಧಿನಿಯಮʼ ಮಸೂದೆ…
ಬೆಂಗಳೂರು : ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಸಂಪುಟ ಪುನರ್ ರಚನೆ ಆಗಲಿ ಎಂದು ಸಚಿವ ದಿನೇಶ್ ಗುಂಡೂರಾವ್…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಳೆ(ಏ.16) ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಮತ್ತಷ್ಟು…