ಇವುಗಳು ಈಗ ಬೇಕಿತ್ತೇ?
ಸಮಾವೇಶ ತಪ್ಪೇನೂ ಇಲ್ಲ. ಸಂವಿಧಾನ ನೀಡಿದ
ಈ ಹಕ್ಕನ್ನು ಯಾರೂ ಕಸಿದುಕೊಳ್ಳಲಾಗದು ಮತ್ತು ಮೊಟಕುಗೊಳಿಸಲಾಗದು. ಅದರೂ ಇವುಗಳನ್ನು ನಡೆಸಲು ಸಮಯ, ಸಂದರ್ಭ ಮತ್ತು ಕಾಲಗಳು ಇರುತ್ತವೆ. ಇಡೀ ರಾಜ್ಯವೇ ವರುಣಾಘಾತದಿಂದ, ಕಂಡು ಕೇಳರಿಯದ ನೆರೆಯಿಂದ ತಲ್ಲಣಿಸಿದೆ. ದಿನನಿತ್ಯದ ಬದುಕು ಅಯೋಮಯವಾಗಿರುವಾಗ, ಜನರು ಈ ಜಲಕಂಟಕದಿಂದ ನೆಮ್ಮದಿ ಪಡೆಯಲು ಹೆಣಗಾಡುವಾಗ ಜನಸ್ಪಂದನ ಸಮಾವೇಶ ಮತ್ತು ಭಾರತ್ ಜೋಡೋ ಪಾದಯಾತ್ರೆಗಳು ಅಷ್ಟು ತರಾತುರಿಯಲ್ಲಿ ಬೇಕಿತ್ತೇ? ಇದಕ್ಕೆ ವೆಚ್ಚವಾಗುವ ಹಣ ಮತ್ತು ಸಮಯವನ್ನು ಈ ಮಳೆಯಿಂದ ಸಂಕಷ್ಟಕ್ಕೀಡಾದವರ ಪುನರ್ವಸತಿಗೆ ಬಳಸಬಹುದಿತ್ತಲ್ಲವೇ? ರಾಜಕೀಯ ಪಕ್ಷಗಳ ಚುನಾವಣಾ ಹಪಾಹಪಿಯನ್ನು ನೋಡಿದಾಗ ಕನ್ನಡದ ಹಳೆಯ ಗಾದೆಯೊಂದು ಬೇಡವೆಂದರೂ ನೆನಪಾಗುತ್ತದೆ!
-ರಮಾನಂದ ಶರ್ಮಾ, ಬೆಂಗಳೂರು.
ಇದೆಂತಹ ದಶಪಥ ಹೆದ್ದಾರಿ?
ಮೈಸೂರು.- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬುದು ಭಾರಿ ಮಳೆಯಿಂದಾಗಿ ಉದ್ಘಾಟನೆಗೂ ಮುನ್ನವೇ ಬಯಲಾಗಿದೆ. ಮಳೆಯಿಂದಾಗಿ ಹೆದ್ದಾರಿ ಮಧ್ಯೆ ಸರೋವರವೇ ಸೃಷ್ಟಿಯಾಗುವಂತೆ ಕಾಮಗಾರಿ ಮಾಡಲಾಗಿದೆ. ಸಾಮಾನ್ಯವಾಗಿ ಹಳ್ಳಿಯಲ್ಲಿ ಕಚ್ಚಾ ರಸ್ತೆ ನಿರ್ಮಿಸುವಾಗ ಕೂಡ ಮಳೆ ನೀರು ಹರಿದು ಹೋಗಲು ಚರಡಿ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ದಶಪಥ ಹೆದ್ದಾರಿಗೆ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನೇ ಮಾಡಿಲ್ಲ ಎಂದರೆ ಏನರ್ಥ? ಮುಖ್ಯಮಂತ್ರಿಗಳು ಖುದ್ಧು ಹೆದ್ದಾರಿ ಸಚಿವರಿಗೆ ದೂರು ದುಮ್ಮಾನ ಹೇಳಿಕೊಂಡ ನಂತರ, ಮಳೆ ನೀರು ಹರಿದು ಹೋಗಲು ಹೊಸ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾದರೆ ಮಳೆ ನೀರು ಹರಿದು ಹೋಗುವ ಬಗ್ಗೆ ಹೆದ್ದಾರಿ ನಿರ್ಮಿಸುವ ಮುಂಚೆ ಯೋಚಿಸಲೇ ಇಲ್ಲವೇ? ಅಥವಾ ಮಳೆ ನೀರು ಚರಂಡಿ ನಿರ್ಮಿಸಬೇಕಾದ ದುಡ್ಡು ಶೇ.೪೦ ಪರ್ಸೆಂಟ್ ಮೊತ್ತದಲ್ಲಿ ಹರಿದು ಹೋಯಿತೇ? ಸಂಬಂಧಪಟ್ಟವರು ಯಾರಾದರೂ ಉತ್ತರಿಸುತ್ತಾರೆಯೇ?
–ನಂದಕುಮಾರ್, ಸರಸ್ವತಿಪುರಂ, ಮೈಸೂರು.
‘ಗುಂಡ್ಲುಹೊಳೆ’ಗೆ ಬರುವುದೆ ಜೀವಕಳೆ?
ಇಡೀ ರಾಜ್ಯಾದ್ಯಂತ ಆಗುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳೆಲ್ಲ ತುಂಬಿ ತುಳುಕುತ್ತಿವೆ. ಇದರಿಂದ ಜನರಿಗೆ ಸಾಕಷ್ಟು ಹಾನಿಯೂ ಉಂಟಾಗಿದೆ. ಸದಾ ಬರದಿಂದಾಗಿ ಕಂಗೆಟ್ಟಿದ್ದ ನಮ್ಮ ಚಾಮರಾಜನಗರ ಜಿಲ್ಲೆಯ ಜನತೆಯಂತೂ ಈ ಸಲದ ಮಳೆಗೆ ಭಾರಿ ತತ್ತರಿಸಿ ಹೋಗಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲೂ ನಿರಂತರ ಸುರಿದ ಮಳೆಯಿಂದಾಗಿ ಹಲವು ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದು ಹರಿಯುತ್ತಿವೆ. ಜನರೆಲ್ಲ ಉತ್ಸಾಹದಿಂದ ತುಂಬಿದ ಕೆರೆ ಕಟ್ಟೆಗಳನ್ನು ಗುಂಪು ಗುಂಪಾಗಿ ಹೋಗಿ ನೋಡಿ ಬಂದು ಸಂಭ್ರಮಿಸುತ್ತಿದ್ದಾರೆ. ಕುತೂಹಲ ತಡೆಯಲಾರದೆ ನಾನು ಸಹ ನಮ್ಮ ಹೆಮ್ಮೆಯ ‘ಗುಂಡ್ಲು’ವಿನ ಉಗಮ ಸ್ಥಳವಾದ ಹಂಗಳ ಬಳಿಯ ಗೋಪಾಲಸ್ವಾಮಿ ಬೆಟ್ಟದ ತಪ್ಪಿಲಿನಲ್ಲಿರುವ ‘ಹಿರಿಕೆರೆ’ಗೆ ಭೇಟಿ ಕೊಟ್ಟು ಬಂದೆ. ಅಬ್ಬಾಬ್ಬ ಅದ್ಭುತ! ಆ ಪ್ರಕೃತಿಯ ಸೌಂದರ್ಯದ ಸೊಬಗನ್ನು ವರ್ಣಿಸಲಾಗದು. ವರುಣನ ಅವಕೃಪೆಯಿಂದಾಗಿ ಗುಂಡ್ಲುಪೇಟೆ ತಾಲ್ಲೂಕಿನ ಅಸ್ಮಿತೆಯಂತಿದ್ದ ‘ಗುಂಡ್ಲುಹೊಳೆ’ ಎಷ್ಟೋ ವರ್ಷಗಳಿಂದ ತನ್ನ ಇರುವಿಕೆಯನ್ನು ಕಳೆದುಕೊಂಡು ನಶಿಸಿ ಹೋಗುವ ಅಂಚಿನಲ್ಲಿತ್ತು. ಅದು ಈ ಬಾರಿಯಾದರೂ ವರುಣನ ಕೃಪೆಯಿಂದ ಬೇಗ ಭರ್ತಿಯಾಗಿ ವರ್ಷಪೂರ್ತಿ ತುಂಬಿ ಹರಿಯುವಂತಾಗಲಿ. ಹಾಗೆಯೇ ನಮ್ಮ ತಾಲ್ಲೂಕನ್ನು ಕಾಡುವ ನೀರಿನ ಬವಣೆಯನ್ನು ನೀಗಿಸುವಂತಾಗಲಿ.
-ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು.
ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ. ಮಂಡ್ಯ ನಗರದ…
ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು…
ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್, ವಿದೇಶದಲ್ಲಿ ಅಡಗಿದ್ದ…
ಗೋಣಿಕೊಪ್ಪ : ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ರಸ್ತೆ ಅತಿಕ್ರಮಣ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ…
72,100 ಟನ್ ಕಬ್ಬಿಣದ ಅದಿರು ಇದ್ದ ಹಡಗು ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯ ಆಳ ಸಮುದ್ರದಲ್ಲಿ ಶನಿವಾರ ಭೀಕರ ನೌಕಾ…
ಬೆಂಗಳೂರು : ಕೆಪಿಎಸ್ಸಿ ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನುಪಸ್ಥಿತಿಯಲ್ಲಿ ಅವರ…