ವಿಚಾರಣೆ ಇಲ್ಲದೆ ಆರು ವರ್ಷಗಳಿಂದ ಜೈಲುವಾಸದಲ್ಲಿರುವ ಉಮರ್ ಖಾಲಿದ್ ಪ್ರಥಮ ಸಂದರ್ಶನ
ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ೨೦೨೦ರಲ್ಲಿ ಜೈಲು ಪಾಲಾದ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರು, ೬ ವರ್ಷಗಳಿಂದ ಯಾವುದೇ ವಿಚಾರಣೆ ಇಲ್ಲದೇ ಕಾರಾಗೃಹದಲ್ಲಿದ್ದಾರೆ. ಈ ಮಧ್ಯೆ ಆರು ವರ್ಷಗಳ ಬಳಿಕ ತಮ್ಮ ಮೊದಲ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೆಹಲಿಯ ತಿಹಾರ್ ಜೈಲಿನಲ್ಲಿ ಕಳೆದ ಆರು ವರ್ಷಗಳ ಸುದೀರ್ಘ ಜೈಲುವಾಸ ತಮ್ಮ ಮೇಲೆ ಉಂಟುಮಾಡಿದ ಮಾನಸಿಕ ಪರಿಣಾಮದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ವರ್ಷಗಳ ಪರ್ಯಂತ ಜೈಲುವಾಸವು ತಮ್ಮನ್ನು ‘ಮಾನವೀಯತೆ’ ಮತ್ತು ಕೆಲವೊಮ್ಮೆ ‘ಮಾನಸಿಕ ಸಮತೋಲನ’ ಎರಡರಿಂದಲೂ ದೂರ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜೈಲಿನಲ್ಲಿರುವ ನಿರ್ಬಂಧಗಳ ಕಾರಣದಿಂದಾಗಿ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಮೂಲಕ ಬ್ರಿಟನ್ ನ ‘ದಿ ಗಾರ್ಡಿಯನ್’ ಪತ್ರಿಕೆಯೊಂದಿಗೆ ಮಾತನಾಡಿದ ಉಮರ್ ಖಾಲಿದ್, ತಮ್ಮ ಮೇಲಿರುವ ಆರೋಪಗಳ ಕಳಂಕವು ತಮ್ಮನ್ನು ಆಳವಾಗಿ ಕಾಡಿದೆ ಎಂದಿದ್ದಾರೆ. ‘ಜೊತೆಗೆ ಊಟ ಮಾಡುವ ಸಹ ಕೈದಿಗಳೇ ಬೆನ್ನ ಹಿಂದೆ ನನ್ನನ್ನು ‘ಉಗ್ರ’ ಎಂದು ಕರೆಯುವ ಪಿಸುಮಾತುಗಳು ನನಗೆ ಕೇಳಿಸುತ್ತವೆ. ಈ ಅಪಪ್ರಚಾರವು ಜನರ ದೃಷ್ಟಿಯಲ್ಲಿ ನನ್ನನ್ನು ‘ಅಮಾನವೀಯ’ವಾಗಿಸಿದೆ. ಮಾನವೀಯತೆ ಎಂಬುದು ನನ್ನಂತಹ ಜನರಿಗೆ ನೀಡಲಾಗದ ಒಂದು ಸವಲತ್ತು’ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ಕೇವಲ ಒಂದು ನಕಾರಾತ್ಮಕ ಅಥವಾ ಸಕಾರಾತ್ಮಕ ‘ಚಿತ್ರ’ವಾಗಿ ನೋಡಿದಾಗ, ಮನುಷ್ಯನಾಗಿ ಉಳಿಯುವುದು ಕಷ್ಟವಾಗುತ್ತದೆ. ತಮ್ಮನ್ನು ಬೆಂಬಲಿಸುವವರು ಕೂಡ ತಾವು ಭಯ, ದೌರ್ಬಲ್ಯಗಳು ಮತ್ತು ಅಪೂರ್ಣತೆಗಳನ್ನು ಹೊಂದಿರುವ ಸಾಮಾನ್ಯ ಮನುಷ್ಯ ಎಂಬುದನ್ನು ಮರೆತುಬಿಡುತ್ತಾರೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಮೌನದ ಬಗ್ಗೆಯೂ ಅವರು ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ‘ಆರು ವರ್ಷಗಳ ನಂತರ, ವಿರೋಧ ಪಕ್ಷಗಳು, ನಾಗರಿಕ ಸಮಾಜ ಮತ್ತು ಖ್ಯಾತ ಹೋರಾಟ ಗಾರರೂ ಮೌನಕ್ಕೆ ಶರಣಾಗಿರುವುದು ನನ್ನನ್ನು ನಿರಾಶೆ ಗೊಳಿಸಿದೆ, ಜೊತೆಗೆ ಒಂಟಿಯಾಗಿಸಿದೆ. ಈ ಮೌನವು ಭಿನ್ನಮತೀಯರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಆಡಳಿತ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಧನದ ಹಿನ್ನೆಲೆ
೨೦೨೦ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ‘ಪ್ರಧಾನ ಸಂಚು ಕೋರ’ ಎಂಬ ಆರೋಪದಡಿ ದೆಹಲಿ ಪೊಲೀಸರು ಸೆಪ್ಟೆಂಬರ್ ೨೦೨೦ರಲ್ಲಿ ಉಮರ್ ಖಾಲಿದ್ ಅವರನ್ನು ಬಂಧಿಸಿದ್ದರು. ಅವರ ಮೇಲೆ ಕಠಿಣವಾದ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)’ ವಿಧಿಸಲಾಗಿದೆ.
ಆರೋಪ ನಿರಾಕರಣೆ
ಉಮರ್ ಖಾಲಿದ್ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸತತವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ನಾವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡಿದ್ದೇವೆಯೇ ಹೊರತು ಯಾವುದೇ ಹಿಂಸಾಚಾರ ದಲ್ಲಿ ಭಾಗಿಯಾಗಿಲ್ಲ ಎಂದು ಅವರು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ.
ವಿಚಾರಣೆ ವಿಳಂಬ
ಪ್ರಕರಣದ ನ್ಯಾಯಾಲಯದ ವಿಚಾರಣೆ ಇನ್ನೂ ಅಧಿಕೃತವಾಗಿ ಆರಂಭವಾಗದೆಯೇ ಅವರು ಇದೀಗ ಸುಮಾರು ಆರು ವರ್ಷಗಳನ್ನು ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾರೆ. ವಿಚಾರಣೆಯ ವಿಳಂಬ ಮತ್ತು ಹೋರಾಟಗಾರರ ವಿರುದ್ಧ ‘ಯುಎ ಪಿಎ’ದಂತಹ ಕಠಿಣ ಕಾಯ್ದೆಗಳ ಬಳಕೆಯ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆಗಳು ಜಾಗತಿಕವಾಗಿಯೂ ತೀವ್ರ ಕಳವಳ ವ್ಯಕ್ತಪಡಿಸಿವೆ.
(ಕೃಪೆ: ದಿ ಗಾರ್ಡಿಯನ್)
ಮೈಸೂರಿನ ನೃತ್ಯ ಪರಂಪರೆಯ ವೈಭವಕ್ಕೆ ಪ್ರೇರಕ ಶಕ್ತಿ ಹಲವು ಕೆ.ರಾಮಮೂರ್ತಿ ರಾವ್ ಮೈಸೂರು ಪ್ರಾಚೀನ ಕಾಲದಿಂದಲೂ ಲಲಿತಕಲೆಗಳಿಗೆ ನೆಲೆಯಾಗಿದ್ದ ಸ್ಥಳ.…
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಭಾಗಮಂಡಲ…
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಐದು ದಿನಗಳಿಂದ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುತ್ತಿದ್ದ ಶಂಕಿತ ಲಷ್ಕರ್ ಎ ತೊಯ್ಬಾ ಉಗ್ರನನ್ನು ಭದ್ರತಾ…
ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ 16,593…
ಬೆಂಗಳೂರು: ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳು ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ…