ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 29 ಗುರುವಾರ 2022

ಯುಗದ ಕವಿಗೆ ನಮನ

ಜಗದ ಕವಿ ಯುಗದ ರವಿ ರಸ ಋಷಿಗೆ ನಮನ

ಕವಿಶೈಲದಿ ಕಥೆಯಾಗುತ ನೀ ಸೇರಿದೆ ಜವನ

ನನ್ನೆದೆಯ ಪದ ಪದದಲಿ ನೀನಾಗು ಚೇತನ

ನೀನಿಲ್ಲದೆ ಬರಿದಾಗಿದೆ ಕನ್ನಡ ಸುಮನ!!

ಅಳಿದರು ಕೊಟ್ಟಿರುವೆ ಕನ್ನಡಕ್ಕೆ ಉಸಿರು

ಕನ್ನಡದ ಗುಡಿಯಲ್ಲಿ ನಿನ್ನದೇ ಹೆಸರು

ಕವಿ ಪುಂಗವ, ರಾಷ್ಟ್ರಕವಿ, ಕರ್ನಾಟಕ ರತ್ನ

ಕನ್ನಡದ ಏಳ್ಗೆಯಲ್ಲಿ ನೀ ನಾಯಕ ರತ್ನ!!

ಶ್ರೀರಾಮಾಯಣ ದರ್ಶನಂ ನಿನಗೆ ನಿದರ್ಶನ

ಪಂಪ, ಜ್ಞಾನಪೀಠ, ನಿನಗೆ ಸಿಂಹಾಸನ

ಜಗಕೆ ನೀ ಕೊಟ್ಟೆ ವಿಶ್ವಮಾನವ ಸಂದೇಶ

ಋಣಿಯಾಗಿದೆ ಎಂದೆಂದಿಗೂ ಈ ನನ್ನ ದೇಶ!!

ಕನವರಿಸುತ್ತಿದೆ ಕನ್ನಡ ನೀ ನಿಲ್ಲದೆ ಇಲ್ಲಿ!

ಓ ವಿಶ್ವಚೇತನ ನೀ ಹೋದೆ ಎಲ್ಲಿ?

ಹುಟ್ಟಿ ಬಾ ಮತ್ತೊಮ್ಮೆ ಈ ಜಗದಲ್ಲಿ

ಕಲ್ಕಿಯಾಗಿ ಮತ್ತೆ ಈ ಯುಗದಲ್ಲಿ!!

ದಿಡ್ಡ್ಡಿಹಳ್ಳಿ ರಘು, ಹವ್ಯಾಸಿ ಛಾಯಾಗ್ರಾಹಕ, ಮೈಸೂರು


ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಬೋಗಾದಿಯ ನ್ಯಾಯಾಂಗ ಬಡಾವಣೆಯ ಬಸ್ ನಿಲ್ದಾಣದಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಬಿ.ಇಡಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಪ್ರತಿನಿತ್ಯ ಬಸ್‌ಗಳನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿ ಬೆಳಿಗ್ಗೆ ೮ ರಿಂದ ೯ ಗಂಟೆವರೆಗೆ ಸರಿಯಾದ ಬಸ್ ವ್ಯವಸ್ಥೆಗಳಿಲ್ಲದೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳುವುದು ಸಾಧ್ಯವಾಗುತ್ತಿಲ್ಲ . ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸಮಸ್ಯೆ ಬಗ್ಗೆ ಸದನದ ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಶೇ.೫೦ರಷ್ಟು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಬಸ್‌ನಲ್ಲಿ ಸಾಮರ್ಥ್ಯ ಮೀರಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಬಸ್‌ಗೆ ಹತ್ತುವ ಧಾವಂತದಲ್ಲಿ ಆಯತಪ್ಪಿ ಬೀಳುವ ಸಾಧ್ಯತ ಇದೆ. ಹಾಗಾಗಿ ಕೆಎಸ್‌ಆರ್‌ಟಿಸಿ ಅಽಕಾರಿಗಳು ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಬಸ್ ಸೇವೆಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು.

ಎಂ.ಚೈತ್ರ, ಪ್ರತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.


ಮೈಸೂರಿನಲ್ಲಿ ಪೇಜಾವರ ಶ್ರೀ ಸ್ಮಾರಕ ನಿರ್ಮಿಸಲಿ

ಉಡುಪಿಯ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನಿಧನರಾಗಿ ಇದೇ ಡಿ.೨೯ಕ್ಕೆ ಮೂರು ವರ್ಷಗಳಾಗುತ್ತಿವೆ. ಪೇಜಾವರ ಶ್ರೀಗಳಿಗೆ ಮೈಸೂರೆಂದರೆ ಬಹಳ ಪ್ರೀತಿ. ಮೈಸೂರಿನಲ್ಲಿ ಶ್ರೀ ಕೃಷ್ಣಧಾಮ, ಶ್ರೀ ರಾಮಧಾಮ, ವಿಜಯ ವಿಠ್ಠಲ ವಿದ್ಯಾಸಂಸ್ಥೆಗಳು, ಪೇಜಾವರ ಶ್ರೀಧಾಮ, ಹಿಂದುಳಿದ ವರ್ಗಗಳ ವಸತಿ ಶಾಲೆಗಳನ್ನು ನಿರ್ಮಿಸಿದ್ದಾರೆ. ಅವರು ಮೈಸೂರಿನಲ್ಲಿ ಮಂಜುನಾಥನಗರ, ಕೃಷ್ಣಮೂರ್ತಿಪುರಂ, ಗಾಂಧಿನಗರಗಳಲ್ಲಿ ಪಾದಯಾತ್ರೆ ಮಾಡಿ ಎಲ್ಲರಲ್ಲೂ ಸಾಮರಸ್ಯ ಉಂಟು ಮಾಡುವ ಪ್ರಯತ್ನ ಮಾಡಿದ್ದು ಅವಿಸ್ಮರಣೀಯ. ನಾಡಹಬ್ಬ ದಸರಾ ಮಹೋತ್ಸವವನ್ನೂ ಉದ್ಘಾಟಿಸಿದ್ದರು. ದೇಶಾದ್ಯಂತ ಹಿಂದುಳಿದ ವರ್ಗಗಳ ವಸತಿ ನಿವಾಸಗಳಿಗೆ ಭೇಟಿ ನೀಡಿ ಎಲ್ಲರೂ ವಿದ್ಯಾವಂತರಾಗಬೇಕು ಎಂದು ಕರೆ ನೀಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ಪ್ರತಿಭಟನೆ, ಪಂಜಾಬಿನಲ್ಲಿ ಶಾಂತಿ ಯಾತ್ರೆ, ಉತ್ತರ ಭಾರತದ ಉಮಾಭಾರತಿ ಅವರಿಗೆ ಸನ್ಯಾಸ ದೀಕ್ಷೆ, ಕೈಗಾ ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟದ ಜೊತೆಗೆ ಪರಿಸರ ಪ್ರೇಮಿಯಾಗಿದ್ದರು. ಆದ್ದರಿಂದ ಮೈಸೂರಿನ ಕೃಷ್ಣಧಾಮದ ಎದುರಿನ ವೃತ್ತಕ್ಕೆ ಶ್ರೀ ಪೇಜಾವರ ವೃತ್ತ ಎಂದು ನಾಮಕರಣ ಮಾಡಬೇಕು, ಜೊತೆಗೆ ಮೈಸೂರಿನ ಹೃದಯಭಾಗದಲ್ಲಿ ಪೇಜಾವರ ಶ್ರೀಗಳ ಪ್ರತಿಮೆ ನಿರ್ಮಿಸಬೇಕು. ಈ ಬಗ್ಗೆ ಮೈಸೂರಿನ ಜಿಲ್ಲಾಡಳಿತ, ಸಂಘ-ಸಂಸ್ಥೆಗಳು ಪೇಜಾವರರ ಸ್ಮಾರಕ ಸ್ಥಾಪನೆ ಮಾಡುವ ಬಗ್ಗೆ ಯೋಚಿಸಬೇಕು.

ಎಸ್.ನಾಗರಾಜ, ಅರವಿಂದನಗರ, ಮೈಸೂರು.


ಕೇರಳದಲ್ಲಿ ಪಕ್ಷಿ ಜ್ವರ ; ಎಚ್.ಡಿ.ಕೋಟೆ ಜನರಲ್ಲಿ ಆತಂಕ

ನೆರೆಯ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ೩ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಪಕ್ಷಿಜ್ವರದ ಕಾರಣ ಸಾವಿರಾರು ಕೋಳಿಗಳು ಮತ್ತು ಬಾತುಕೋಳಿಗಳನ್ನು ನಾಶಪಡಿಸಲಾಗಿದೆ ಎಂಬ ಮಾಹಿತಿ ಅರಿತು ಗಡಿ ತಾಲ್ಲೂಕಾದ ಎಚ್.ಡಿ.ಕೋಟೆ ಜನರಲ್ಲಿ ಆತಂಕ ಆರಂಭವಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಗಡಿಭಾಗವಾದ ಬಾವಲಿಯಿಂದ ಸುಮಾರು ೩೫೦ ಕಿ.ಮೀ. ಅಂತರದಲ್ಲಿ ಕೊಟ್ಟಾಯಂ ಜಿಲ್ಲೆ ಇದೆಯಾದರೂ, ಕೇರಳದಿಂದ ಪ್ರತಿನಿತ್ಯ ವಾಹನಗಳು ಎಚ್.ಡಿ.ಕೋಟೆ ತಾಲ್ಲೂಕಿನ ಮೂಲಕವೇ ಸಂಚರಿಸುವುದರಿಂದ ಪಕ್ಷಿ ಜ್ವರ ಹರಡುತ್ತಿರುವ ಭೀತಿ ಎದುರಾಗಿದೆ. ಕೊಟ್ಟಾಯಂ ಜಿಲ್ಲೆಯ ವೇಜೂರು ಪಂಚಾಯಿತಿ ವ್ಯಾಪ್ತಿಯಲ್ಲಿ ೧೩೩ ಕೋಳಿಗಳು ಮತ್ತು ೧೫೬ ಬಾತು ಕೋಳಿಗಳು, ನೀಂದೂರು ಪಂಚಾಯಿತಿಯಲ್ಲಿ ೨,೭೫೩ ಬಾತುಕೋಳಿಗಳು ಹಾಗೂ ಆರ್ಪೂಕ ಪಂಚಾಯಿತಿ ವ್ಯಾಪ್ತಿಯಲ್ಲಿ ೨,೯೭೫ ಬಾತುಕೋಳಿಗಳನ್ನು ಈಗಾಗಲೆ ನಾಶಪಡಿಸಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿಯೂ ಪಕ್ಷಿಜ್ವರದ ಹಿನ್ನೆಲೆಯಲ್ಲಿ ೨೦ ಸಾವಿರ ಪಕ್ಷಿಗಳನ್ನು ಕೇರಳ ರಾಜ್ಯದಲ್ಲಿ ನಾಶಪಡಿಸಲಾಗಿತ್ತು. ಪಕ್ಷಿಜ್ವರ ಕೇರಳ ರಾಜ್ಯದಲ್ಲಿ ೨ ನೆಯ ಬಾರಿಗೆ ಕಣಿಸಿಕೊಂಡಿದ್ದು,ಕೇರಳದಿಂದ ರಾಜ್ಯಕ್ಕೆ ಆಮದಾಗುತ್ತಿದ್ದ ಕೋಳಿ ಮಾಂಸಕ್ಕೆ ತಡೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ತಾಲ್ಲೂಕಿನ ಭಾಗದ ಜನರು ಎಚ್ಚರಿಕೆ ವಹಿಸಬೇಕು.

ಹಿತೇಶ್ ಪಿ.ನಾಗ್, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

3 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

5 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

19 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

23 hours ago