ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 23 ಗುರುವಾರ 2023

ಪ್ರತಾಪ್ ಸಿಂಹ ಅವರ ವ್ಯಾಪ್ತಿಯಲ್ಲಿ ಮಾತ್ರ ಕೆಲಸ ನಿರ್ವಹಿಸಲಿ!

ಸಂಸದ ಪ್ರತಾಪ್ ಸಿಂಹರವರು ಅವರ ಜವಾಬ್ದಾರಿಗಳ ಹೊರತಾಗಿ ಬೇರೆ ವಿಚಾರಗಳಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದೆನಿಸುತ್ತದೆ. ಮೈಸೂರು ವಿಶ್ವವಿದ್ಯಾನಿಲುಂದ ಆಡಳಿತದ ವಿಚಾರದಲ್ಲಿ ಅವರಿಗೆ ಯಾವುದೇ ಹಕ್ಕು ಇಲ್ಲದಿದ್ದರೂ ಸಿಂಡಿಕೇಟ್ ಸಭೆ ಕರೆದು ಕುಲಸಚಿವರಾದ ವಿ.ಆರ್.ಶೈಲಜಾ ಅವರೊಂದಿಗೆ ಅಗೌರವದಿಂದ ನಡೆದುಕೊಂಡಿರುವುದು ಸರಿಯಲ್ಲ.
ಇದು ಅವರಿಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ಥಾಪನೆಗಿರುವ ಆಸಕ್ತಿಯೋ? ಅಥವಾ ಸರ್ಕಾರ ಅದಕ್ಕಾಗಿ ಮೀಸಲಿಟ್ಟಿರುವ ಕೋಟಿ ಕೋಟಿ ರೂ. ಹಣದ ಮೇಲಿರುವ ವ್ಯಾಮೋಹವೋ? ತಿಳಿಯದು.
ಪ್ರತಾಪ್ ಸಿಂಹರವರು ಮೈಸೂರು ವಿಶ್ವವಿದ್ಯಾನಿಲಯದ ಭ್ರಷ್ಟಾಚಾರದ ಬಗ್ಗೆ ಆರೋಪಿಸುವ ಬದಲು ಅವರದೇ ಡಬಲ್ ಇಂಜಿನ್ ಸರ್ಕಾರವಿರುವುದರಿಂದ ಈ ಕುರಿತು ತನಿಖೆ ನಡೆಸಲಿ. ನಿಮ್ಮದೇ ಪಕ್ಷದ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಆಡಳಿತದ ಸುಶಾಸನ ಮಾಸಾಚರಣೆ ಎಂಬ ಕಾರ್ಯಕ್ರಮ ನಡೆಸುವಾಗ ಅದನ್ನು ಪ್ರಶ್ನಿಸಬಹುದಲ್ಲವೆ? ಆದ್ದರಿಂದ ಪ್ರತಾಪ್ ಸಿಂಹರವರು ಮೊದಲು ಈ ವಿಚಾರಗಳ ಬಗ್ಗೆ ಗಮನ ನೀಡಲಿ ಜೊತೆಗೆ ಮಹಿಳಾ ಅಧಿಕಾರಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಲಿ.

ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.


ಖಾಸಗಿ ಫೋಟೋಗಳು ಸಿಕ್ಕಿದ್ದು ಹೇಗೆ?

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರು ಮತ್ತೊಬ್ಬ ಐಎಎಸ್ ಅಧಿಕಾರಿಗೆ ಕಳುಹಿಸಿದ್ದಾರೆ ಎನ್ನಲಾದ ಖಾಸಗಿ ಫೋಟೋಗಳನ್ನು ಐಪಿಎಸ್ ಅಧಿಕಾರಿ ಡಿ.ರೂಪಾರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರೋಹಿಣಿ ಸಿಂಧೂರಿಯವರನ್ನು ಟೀಕಿಸಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ರೋಹಿಣಿಯವರು ಕಳುಹಿಸಿದ್ದಾರೆ ಎನ್ನಲಾದ ಆ ಖಾಸಗಿ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಒಂದು ವೇಳೆ ರೋಹಿಣಿಯವರು ಕಳಿಸಿದ ಆ ಫೋಟೋಗಳನ್ನು ಆ ಮತ್ತೊಬ್ಬ ಐಎಎಸ್ ಅಧಿಕಾರಿಯು ರೂಪಾ ಅವರಿಗೆ ಕಳಿಸಿದ್ದರೆ, ರೂಪಾರವರಿಗೂ ಆ ಐಎಎಸ್ ಅಧಿಕಾರಿಗೂ ಏನು ಸಂಬಂಧ? ಎಂಬುದು ಮತ್ತೊಂದು ಪ್ರಶ್ನೆಯಾಗಿದೆ.
ಇಲ್ಲಿ ರೋಹಿಣಿಯವರು ಫೋಟೋಗಳನ್ನು ಕಳುಹಿಸಿರುವುದಕ್ಕೂ, ಆ ಅಧಿಕಾರಿಯೂ ಮತ್ತೇ ರೂಪಾ ಅವರಿಗೆ ಕಳಿಸಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲದಂತಿದೆ. ಅಲ್ಲದೆ ರೂಪಾರವರಿಗೆ ಕಳುಹಿಸಿದ ಉದೇಶವಾದರೂ ಏನು?
ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಅವರೊಂದಿಗೆ ಇಷ್ಟು ಸಲಿಗೆಯಿಂದಿರುವ ಆ ಕಾಮನ್ ಐಎಎಸ್ ಅಧಿಕಾರಿ ಯಾರು ಎಂದು ಪತ್ತೆಹಚ್ಚುವ ಬಗ್ಗೆ ತನಿಖೆಯಾಗಬೇಕು. ರೂಪಾ ಹಾಗೂ ರೋಹಿಣಿ ಸಿಂಧೂರಿ ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಾದರೆ, ಆ ಫೋಟೋಗಳನ್ನು ದುರುಪಯೋಗಪಡಿಸಿಕೊಂಡ ಆ ಐಎಎಸ್ ಅಧಿಕಾರಿಯೂ ಸೇರಿದಂತೆ ಮೂವರೂ ಅಮಾನ್ಯಗೊಳ್ಳಬೇಕಾದ ನಾಣ್ಯಗಳು.

-ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು.


ಕಾಡ್ಗಿಚ್ಚಿನಿಂದ ಕಾಡನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ

ಬೇಸಿಗೆಉ ಸಂದರ್ಭದಲ್ಲಿ ಕಾಡ್ಗಿಚ್ಚು ಎಂಬುದು ಅರಣ್ಯಗಳಿಗೆ ಎದುರಾಗುವ ಕಂಟಕವಿದ್ದಂತೆ. ಅದರಲ್ಲಿಯೂ ಎಲೆ ಉದುರುವ ಕಾಡುಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಇದು ನೈಸರ್ಗಿಕವಾಗಿ ಉಂಟಾಗುತ್ತದೆ ಎನ್ನುವುದಕ್ಕಿಂತ ಕಾಡ್ಗಿಚ್ಚು ಎಂಬುದು ಮಾನವನಿಂದಲೇ ಉಂಟಾಗುವ ಒಂದು ಪೈಶಾಚಿಕ ಕೃತ್ಯವೆನ್ನಬಹುದು.
ವೈಲ್ಡ್‌ಲೈಫ್ ಕನ್ಸರ್ವೇಷನ್ ಫೌಂಡೇಶನ್ ಪ್ರತಿನಿಧಿ ಅನಿಲ್ ಕುಮಾರ್‌ರವರು ಎಂ.ಸಿ.ತಳಲು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಈ ಅರಣ್ಯಗಳು, ಹುಲ್ಲುಗಾವಲುಗಳು ಸ್ಪಂಜಿನಂತೆ ಮಳೆ ನೀರನ್ನು ಹಿಡಿದಿಟ್ಟುಕೊಂಡು ನದಿ, ಕೆರೆ ಅಂತರ್ಜಲಕ್ಕೆ ನೀರುಣಿಸುತ್ತವೆ. ಹಾಗಾಗಿ ಕಾಡ್ಗಿಚ್ಚಿನಿಂದ ಈ ಅರಣ್ಯವು ನಾಶವಾಗುವುದರ ಜೊತೆಗೆ ಅಂತರ್ಜಲ ಮಟ್ಟ ಕುಸಿಯುತ್ತದೆ ಎಂಬುದರ ಕುರಿತು ಮಕ್ಕಳಿಗೆ ಸಾಕಷ್ಟು ಮಾಹಿತಿ ನೀಡಿದರು.
ಸರಗೂರು ಹಾಗೂ ಎಚ್.ಡಿ.ಕೋಟೆ ಭಾಗದ ಸಾಕಷ್ಟು ಹಳ್ಳಿಗಳು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ಅಂಚಿನಲ್ಲಿವೆ. ಆದ್ದರಿಂದ ಇಲ್ಲಿನ ಜನರಿಗೆ ಕಾಡ್ಗಿಚ್ಚಿನಿಂದ ಉಂಟಾಗುವ ಪರಿಣಾಮಗಳೇನು? ಅದನ್ನು ತಡೆಗಟ್ಟಲು ನಾವು ಹೇಗೆ ಸಿದ್ಧರಾಗಬೇಕು ಎಂಬೆಲ್ಲ ಮಾಹಿತಿಗಳನ್ನು ಅರಣ್ಯ ಇಲಾಖೆ ನೀಡಬೇಕಿದೆ.
ಕಾಡ್ಗಿಚ್ಚಿನಿಂದ ಫಲವತ್ತಾದ ಮಣ್ಣಿನ ಮೇಲ್ಪದರ ನಾಶವಾಗುವುದರೊಂದಿಗೆ ಅರಣ್ಯ ನಾಶದಿಂದ ಮಳೆಯ ಪ್ರಮಾಣವೂ ಕಡಿಮೆಯಾಗಿ ಆಹಾರ ಮತ್ತು ನೀರಿಗೂ ಕೊರತೆಯಾಗಲಿದೆ.
ಭಾರತದ ಎಲೆ ಉದುರುವ ಕಾಡುಗಳಲ್ಲಿ ಕಾಡ್ಗಿಚ್ಚು ಎಂಬುದು ನೈಸರ್ಗಿಕವಾಗಿ ಉಂಟಾಗುವುದಕ್ಕಿಂತ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿಯೇ ಕಾಡಿಗೆ ಬೆಂಕಿ ಇಡುವುದೇ ಹೆಚ್ಚಾಗಿದೆ. ಕಾಡಿಗೆ ಅಕ್ರಮ ಪ್ರವೇಶ ಹಾಗೂ ಬೆಂಕಿ ಹಚ್ಚುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ನಾವೂ ಕೂಡ ಕಾಡು ರಕ್ಷಣೆಯಲ್ಲಿ ಜಾಗೃತರಾಗಿರಬೇಕು.

-ಮದನ್ ಮೌರ್ಯ, ಹಾದನೂರು, ಸರಗೂರು ತಾ.


ಬೇಸಿಗೆಯಲ್ಲಿ ನೀರಿನ ಕೊರತೆಯಾಗದಿರಲಿ

ಬೇಸಿಗೆಗಾಲ ಆರಂಭವಾಗುತ್ತಿದ್ದು, ಫೆಬ್ರವರಿಯಿಂದಲೇ ಸೂರ್ಯನ ತಾಪ ಹೆಚ್ಚಾಗತೊಡಗಿದೆ. ಈ ವೇಳೆ ಅಂತರ್ಜಲದ ಪ್ರಮಾಣವೂ ಕಡಿಮೆಯಾಗಲಿದ್ದು, ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರವ ಸನ್ನಿವೇಶಗಳು ಹೆಚ್ಚಾಗಿವೆ.
ಎಚ್.ಡಿ.ಕೋಟೆ ಮತ್ತು ಸರಗೂರು ಭಾಗಗಳಲ್ಲಿ ನಾಲ್ಕು ಜಲಾಶಯಗಳಿದ್ದು, ಕಳೆದ ಬಾರಿ ಉತ್ತಮ ಮಳೆಯಾಗಿದ್ದ ಪರಿಣಾಮ ಎಲ್ಲ ಜಲಾಶಯಗಳಲ್ಲಿಯೂ ಸಮೃದ್ಧವಾಗಿ ನೀರು ಸಂಗ್ರಹವಾಗಿದೆ. ಆದರೆ ಇಲ್ಲಿಯವರೆಗೂ ಆ ನೀರು ಕ್ಷೇತ್ರದ ಜನತೆಗೆ ಕುಡಿಯಲು ಲಭ್ಯವಾಗಿಲ್ಲ ಎಂಬುದು ಬೇಸರದ ಸಂಗತಿ. ಆ ಜಲಾಶಯದ ನೀರು ಈ ಭಾಗದ ಜನರಿಗೂ ಕುಡಿಯಲು ಯೋಗ್ಯವಾಗುವಂತೆ ನೋಡಿಕೊಳ್ಳಬೇಕಿದೆ.
ಬೇಸಿಗೆಯಲ್ಲಿ ಕೆರೆಕಟ್ಟೆಗಳು ಬತ್ತುವ ಸಂಭವವಿದ್ದು, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಸಿಗೆ ಸಂದರ್ಭದಲ್ಲಿ ಜಲಾಶುಂದ ನೀರನ್ನು ಬಳಸಿ ವಿವಿಧ ಗ್ರಾಮಗಳ ಪ್ರಮುಖ ಕೆರೆಗಳು ಬತ್ತದಂತೆ ಅವುಗಳು ತುಂಬಿರುವಂತೆ ನೋಡಿಕೊಂಡರೆ ಆ ಕೆರೆಯ ನೀರಿನಿಂದ ಅಂರ್ತಜಲವೂ ವೃದ್ಧಿಸಲಿದ್ದು, ಪ್ರಾಣಿಗಳಿಗೂ ಕುಡಿಯುವ ನೀರು ಲಭ್ಯವಾಗಲಿದೆ.

-ಎಂ.ವಿ.ಪ್ರಕಾಶ್, ಮಚ್ಚರೆ, ಎಚ್.ಡಿ.ಕೋಟೆ ತಾ.

andolanait

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

4 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

6 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

6 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

6 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

6 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

7 hours ago