ಜಿಲ್ಲೆಗಳು

ಪೊಲೀಸಪ್ಪನ ಪತ್ನಿ ಲಕ್ಷ್ಮಮ್ಮ ಈಗ ಹೂವು ಮಾರುವಾಕೆ!

‘ಸ್ವಾಭಿಮಾನದ ಬದುಕಿಗೆ ಮಾದರಿಯಾದ ಹಿರಿಯ ಜೀವ’

ಬಿ.ಎನ್.ಧನಂಜಯಗೌಡ

ಮೈಸೂರು: ‘ನಮ್ಮ ಯಜಮಾನ್ರು ಪೊಲೀಸ್ ಆಗಿದ್ರು. ಆದ್ರೆ, ತುಂಬಾ ದಿನ ಅವರು ಆ ಕೆಲಸದಲ್ಲೂ ಇರಲಿಲ್ಲ. ಅವರೊಂದಿಗೆ ಜೀವನ ನಡೆಸುವ ಭಾಗ್ಯವನ್ನು ಆ ದೇವ್ರ ನನಗೂ ಕೊಡಲಿಲ್ಲ. ಆ ನಂತರ ಬದುಕಿಗೆ ಆಸರೆಯಾಗಿದ್ದು ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಇರುವಂತಿಗೆ, ಕನಕಾಂಬರ, ಗುಲಾಬಿ…’
ಹೀಗೆ ಅಂದಿದ್ದು ೮೩ ವರ್ಷ ವಯಸ್ಸಿನಲ್ಲಿಯೂ ಹೂವು ಮಾರುವ ‘ಲಕ್ಷ್ಮಮ್ಮ’. ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಇರ್ವೀನ್ ರಸ್ತೆ ಕಡೆಗೆ ಬರುವ ಮಾರ್ಗದ ಮೂಲೆಯೊಂದರಲ್ಲಿ ಕಣ್ಣಗಲಿಸಿಕೊಂಡು ಸೂಜಿಗೆ ದಾರ ಪೋಣಿಸಿ, ಹೂವು ಕಟ್ಟುತ್ತಾ, ಮಾರುವ ಈ ಲಕ್ಷ್ಮಜ್ಜಿಯ ಕಥೆ ಎಂತಹವರಿಗೂ ಪ್ರೇರಣದಾಯಕವಾದುದು.
ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಇರ್ವೀನ್ ರಸ್ತೆ ಕಡೆಗೆ ಹೋಗುವ ಮೂಲೆಯಲ್ಲಿ ೪೫ ವರ್ಷಗಳಿಂದ ಹೂವು ಮಾರುವ ಈ ಲಕ್ಷ್ಮಮ್ಮನಿಗೆ ಈಗಲೂ ದುಡಿಯುವ ಹುರುಪು.
‘ಇಷ್ಟು ವರ್ಷವಾದ್ರೂ ನನಗೆ ಯಾವ ಕಾಯಿಲೆ ಇಲ್ಲ. ಮನೆಯಲ್ಲಿ ಕುಂತ್ರೆ ಏನೇನೋ ಕೆಟ್ಟ ಯೋಚನೆ. ಕೈಯಲ್ಲಿ ಆಗೋವರೆಗೂ, ಹೂವು ಮಾರೋದಾ ಬಿಡೋದಿಲ್ಲ’ ಎನ್ನುತ್ತಾ ಹೆಬ್ಬಾಳದ ಭೈರವೇಶ್ವರ ನಗರದಲ್ಲಿ ವಾಸಿಸುತ್ತಿರುವ ಲಕ್ಷ್ಮಮ್ಮ. ಬೆಳಿಗ್ಗೆ ೭ ಗಂಟೆ ಆಗುತ್ತಿದ್ದಂತೆ ತನ್ನ ಕಾಯಕ ಸ್ಥಳಕ್ಕೆ ಹಾಜರಾಗುತ್ತಾರೆ.
ಪೊಲೀಸಪ್ಪನ ಹೆಂಡತಿ ಕಥೆ: ಕುಂಬಾರಕೊಪ್ಪಲಿನ ಲಕ್ಷ್ಮಮ್ಮ ಅವರು ಮಂಡಿ ಮೊಹಲ್ಲಾದ ವೆಂಕಟರಾಮಯ್ಯ ಎಂಬವರನ್ನು ವಿವಾಹವಾಗುತ್ತಾರೆ. ವೆಂಕಟರಾಮಯ್ಯ ಅವರು ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದವರು. ಆದರೆ, ಅನಾರೋಗ್ಯ ಕಾರಣದಿಂದ ವೃತ್ತಿಗೆ ರಾಜೀನಾಮೆ ನೀಡುವ ಅವರು, ಮದುವೆಯಾದ ಹೆನ್ನೆರಡು-ಹದಿಮೂರು ವರ್ಷಗಳಿಗೆಲ್ಲ ಅನಾರೋಗ್ಯದಿಂದ ನಿಧನರಾಗುತ್ತಾರೆ. ಆನಂತರದಲ್ಲಿ ಕುಟುಂಬದ ಹೊರೆ ಲಕ್ಷ್ಮಮ್ಮ ಅವರ ಮೇಲೆ ಬೀಳುತ್ತದೆ. ಇದಕ್ಕಾಗಿ ಹೂವು ಮಾರುವ ಕಾಯಕ ಹಿಡಿದ ಅವರು ೪೫ ವರ್ಷಗಳಿಂದ ಒಂದೇ ಜಾಗದಲ್ಲಿ ಹೂವು ಮಾರಾಟ ಮಾಡುತ್ತಿದ್ದಾರೆ.
ಮಗ ಮತ್ತು ಮಗಳನ್ನು ಸಾಕಿ ಮದುವೆ ಮಾಡಿರುವ ಅವರು, ಹೂವು ಮಾರಾಟ ಮಾಡುತ್ತಲೇ ಭೈರವೇಶ್ವರ ನಗರದಲ್ಲಿ ೨೫ ವರ್ಷಗಳ ಹಿಂದೆ ಸ್ವಂತ ನಿವೇಶನ ಖರೀದಿಸಿ, ಮೂರು ಅಂತಸ್ತಿನ ಸ್ವಂತ ಮನೆಯನ್ನು ಮಾಡಿದ್ದಾರೆ. ಒಂದು ಅಂತಸ್ತಿನ ಮನೆಯನ್ನು ಭೋಗ್ಯಕ್ಕೆ ನೀಡಿದ್ದು, ಇನ್ನುಳಿದ ಎರಡು ಅಂತಸ್ತನ್ನು ಇಬ್ಬರೂ ಮಕ್ಕಳಿಗೂ ಭಾಗವಾಗಿ ನೀಡಿದ್ದಾರೆ. ಇವರು ಮಗನ ಮನೆಯಲ್ಲಿಯೇ ಇದ್ದಾರೆ.
ವ್ಯಾಪಾರ ಮುಂಚೆ ತರ ಇಲ್ಲ. ಅಷ್ಟೋ, ಇಷ್ಟೋ ಆಗುತ್ತೆ ಎನ್ನುವ ಲಕ್ಷ್ಮಮ್ಮ. ಪ್ರತಿನಿತ್ಯ ಬೆಳಿಗ್ಗೆ ೭ ಗಂಟೆಗೆ ಹೂವು ಮಾರಲು ಬರುತ್ತಾರೆ. ಮನೆಯಿಂದ ನಾನಿರುವಲ್ಲಿಗೆ ತಿಂಡಿ ಬರುತ್ತದೆ. ಮಧ್ಯಾಹ್ನ ಇಲ್ಲೇ ಹೋಟೆಲ್ ಅಲ್ಲಿ ಏನಾದ್ರೂ ತಿನ್ಕೋತಿನಿ. ರಾತ್ರಿ ೮ ಗಂಟೆಗೆ ಮನೆಗೆ ಆಟೋದಲ್ಲಿ ವಾಪಸ್ಸು ಆಗುತ್ತೇನೆ. ಮುಂಚೆ ಬೆಳಿಗ್ಗೆ ೫ ಗಂಟೆಯಿಂದ ವ್ಯಾಪಾರ ಶುರು ಮಾಡುತ್ತಿದ್ದೆ. ಈಗ ಅಷ್ಟು ಹೊತ್ತಿಗೆ ಎದ್ದು ಬರೋಕೆ ಆಗಲ್ಲ ಎಂದು ತಮ್ಮ ಪರಿಶ್ರಮವನ್ನು ವಿವರಿಸುತ್ತಾರೆ.

‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’
ಮಗ ಆಟೋ ಓಡಿಸ್ತಾನೆ. ಈ ಕಾಲದಲ್ಲಿ ಅವರವರ ಸಂಸಾರ ಸಾಕೋದೆ ಕಷ್ಟವಾಗುತ್ತೆ. ಹೀಗಿರುವಾಗ ನನ್ನ ಖರ್ಚಿಗೆ ಅವರನ್ನು ಕಾಸು ಕೇಳೋಕೆ ಆಗುತ್ತಾ. ಅದ್ಕೆ, ನನ್ನ ಕೈಯಲಿ ಆಗೋವರೆಗೂ ಹೂವು ಮಾರಿ ಕಾಸು ಕೂಡಿ ಹಾಕ್ತಿನಿ. ಈಗೇನೋ ಆರೋಗ್ಯ ಚೆನ್ನಾಗಿದೆ. ಮುಂದೆನೋ?, ಹಿಂಗೆ ಇರುತ್ತೇ ಅಂಥ ಯಾರಿಗೆ ಗೊತ್ತು. ಆಗ ಖರ್ಚುಗಿರ್ಚು ಅಂತ ಬರಲ್ವಾ ಎಂದು ಮುಗ್ಧತೆಯಿಂದ ಮಾತನಾಡುವ ಲಕ್ಷ್ಮಮ್ಮ ‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’ ಎಂದು ಹೇಳುವ ಮೂಲಕ ತಾಯ್ಕರುಳಿನ ಪ್ರೀತಿಯನ್ನು ತೆರೆದಿಡುತ್ತಾರೆ.

andolanait

Recent Posts

ಗ್ಯಾರಂಟಿ ಪರಿಷ್ಕರಣೆ; ಅರ್ಹರಿಗೆ ಅನ್ಯಾಯ ಆಗಬಾರದು

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…

45 mins ago

ರಾಜ್ಯ ರಾಜಕಾರಣದ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ-ಜಾ.ದಳ ಮಿತ್ರಕೂಟ ಯತ್ನ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್‌ನ…

48 mins ago

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…

55 mins ago

ಮುಚ್ಚುವ ಆತಂಕದಲ್ಲಿ ಶತಮಾನ ಕಂಡ ಶಾಲೆ

ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…

1 hour ago

ಸರ್ಕಾರಿ ಕಚೇರಿ; ಮೂಲ ಸೌಕರ್ಯಗಳಿಗೆ ಗೋರಿ!

ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…

1 hour ago