ಕಬಿನಿ ಹಿನ್ನೀರಿನಲ್ಲಿ 4 ಮರಿಗಳ ಜತೆ ಹುಲಿ ದರ್ಶನ, ಬಂಡೀಪುರಕ್ಕೆ ಮತ್ತೆ ಬಂದಿದ್ದಾಳೆ ಸುಂದರಿ…
ಮೈಸೂರು: ಬಂಡೀಪುರ ಮತ್ತು ನಾಗರಹೊಳೆಯ ವನ್ಯಪ್ರೇಮಿಗಳಿಗೆ ಈಗ ಖುಷಿಯೋ ಖುಷಿ. ಕಾರಣವಿಷ್ಟೆ. ಅಪರೂಪಕ್ಕೆ ಕಾಣ ಸಿಗುವ ಹುಲಿಗಳು ಈಗ ಮರಿಗಳ ಜತೆ ದರ್ಶನ ನೀಡುತ್ತಿವೆ. ಬಂಡೀಪುರ ಬಿಟ್ಟು ಮಧುಮಲೈ ಅರಣ್ಯಕ್ಕೆ ಹೋಗಿದ್ದ ಸುಂದರಿ 18 ತಿಂಗಳ ಬಳಿಕ ಮರಿಯ ಜತೆ ಮರಳಿ ಬಂದಿದ್ದಾಳೆ. ಇತ್ತ ನಾಗರಹೊಳೆಯ ಅಂತರ ಸಂತೆ ವಲಯದಲ್ಲಿ ಎರಡು ಹುಲಿಗಳು ನಾಲ್ಕು-, ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ತಾಯಿ ಮತ್ತು ಮರಿಗಳ ಜತೆ ಎರಡು ಗಂಡು ಹುಲಿಗಳೂ ಸೇರಿಕೊಂಡಿವೆ. ಸಫಾರಿ ಪ್ರಿಯರು ಅತ್ಯಪರೂಪದ ಈ ಗ್ರೂಪ್ ಫೋಟೊಗಳನ್ನು ಕ್ಲಿಕ್ಕಿಸಿ ಖುಷಿಪಡುತ್ತಿದ್ದಾರೆ.
ಎಚ್. ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಡಿಸೆಂಬರ್ 10ರ ಬೆಳಿಗ್ಗೆ ವನ್ಯಜೀವಿ ಸಫಾರಿಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ದರ್ಶನವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎರಡು ಹೆಣ್ಣು ಹುಲಿಗಳು ತಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ಇದೇ ಪ್ರಥಮ ಬಾರಿ ಎಂದು ಅಂತರಸಂತೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಎಸ್.ಎಸ್. ಸಿದ್ದರಾಜು ಸಂತಸ ಹಂಚಿಕೊಂಡಿದ್ದಾರೆ.
ಎಚ್.ಡಿ.ಕೋಟೆಯ ತಾರಕ ಹಿನ್ನೀರು ವ್ಯಾಪ್ತಿಯಲ್ಲಿ ರಸೂಲ್ ಲೈನ್ ಫೀಮೇಲ್ ಹೆಸರಿನಿಂದ ಗುರುತಿಸಿಕೊಂಡಿರುವ ಹೆಣ್ಣು ಹುಲಿಯು 11 ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಹೆಣ್ಣು ಹುಲಿಗೆ ಸೀಳುತುಟಿ ಎಂಬ ಗಂಡುಹುಲಿ ಜೋಡಿಯಾಗಿದೆ. ಕಳೆದ ಅಕ್ಟೋಬರ್ 12ರಂದು ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಈ ಹೆಣ್ಣು ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ವನ್ಯಪ್ರಿಯರಿಗೆ ದರ್ಶನ ನೀಡಿತ್ತು.
ಅಂತರ ಸಂತೆಯ ಕಬಿನಿ ಹಿನ್ನೀರು ಪ್ರದೇಶದ ವನ್ಯಪ್ರಿಯರು ಬ್ಯಾಕ್ ವಾಟರ್ ಫೀಮೇಲ್ ಎಂದು ಕರೆಯುತ್ತಿರುವ ಹೆಣ್ಣು ಹುಲಿಯು ಆರು ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಗೆ ಈಗ ಟೈಗರ್ ಟ್ಯಾಂಕ್ ಗಂಡುಹುಲಿ ಜೋಡಿಯಾಗಿದೆ. ಈ ಹುಲಿಯೂ ಇತ್ತೀಚೆಗೆ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದೆ.
ಇನ್ನು ಬಂಡೀಪುರದ ರಾಯಭಾರಿ ಎಂದು ಕರೆಸಿಕೊಳ್ಳುತ್ತಿದ್ದ ” ಪ್ರಿನ್ಸ್ʼ ಹುಲಿಯ ಮರಣದ ಬಳಿಕ ಹುಲಿ ದರ್ಶನ ವಿರಳವಾಗಿತ್ತು. ಈ ಕೊರತೆಯನ್ನು ನೀಗಿಸಿದ್ದು ಸುಂದರಿ. ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದ್ದ ಸುಂದರಿ ಸುಮಾರು ಎರಡು ವರ್ಷಗಳ ಕಾಲ ಆಗಾಗ ಸಫಾರಿ ಹಾದಿಯಲ್ಲಿ ದರ್ಶನ ಕೊಡುತ್ತಿದ್ದಳು. ಇದ್ದಕ್ಕಿದ್ದಂತೆ ಅದೇನಾಯಿತೋ ಗೊತ್ತಿಲ್ಲ. ಸುಂದರಿ ತನ್ನ ಮರಿಗಳನ್ನು ತೊರೆದು ಮಧುಮಲೈ ಅರಣ್ಯಕ್ಕೆ ವಾಸ್ತವ್ಯ ಬದಲಿಸಿದ್ದಳು. ಈ ಮಧ್ಯೆ ಕೆಕ್ಕನಹಳ್ಳಿ ಸಮೀಪ ಮಾಯಾರ್ ರಾಣಿ ಎಂಬ ಹುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಇತ್ತೀಚೆಗೆ ಆಕೆ ಕಾಣಿಸುತ್ತಿಲ್ಲ.
ಈ ಮಧ್ಯೆ 18 ತಿಂಗಳ ಬಳಿಕ ಸುಂದರಿ ತನ್ನ ಮರಿ ಜತೆ ಬಂಡೀಪುರಕ್ಕೆ ಮರಳಿದ್ದಾಳೆ. ಮೊನ್ನೆ ತನ್ನ ಕಂದನಿಗೆ ರಸ್ತೆ ದಾಟುವ ಬಗೆಯನ್ನು ಹೇಳಿಕೊಡುತ್ತಿದ್ದ ಸುಂದರಿ ಸಫಾರಿಗೆ ಹೊರಟವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಅವಳದು ಈಗಲೂ ಅದೇ ನಿರ್ಭೀತ, ಸ್ವಚ್ಛಂದ ನೋಟ. ಆರೇಳು ತಿಂಗಳು ಪ್ರಾಯದ ಮರಿ ಜತೆ ಸುಂದರಿ ವಾಕ್ ಮಾಡುತ್ತಿದ್ದರೆ ಬಂಡೀಪುರದ ಸೌಂದರ್ಯ ಇಮ್ಮಡಿಸಿದಂತೆ ಕಾಣುತ್ತಿದೆ. ಒಟ್ಟಾರೆಯಾಗಿ ನಾಗರಹೊಳೆ ಮತ್ತು ಬಂಡೀಪುರಕ್ಕೆ ಸಫಾರಿಗೆ ಬಂದರೆ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಡಬಲ್ ಧಮಾಕಾ ಗ್ಯಾರಂಟಿ..
ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…
ಮಡಿಕೇರಿ : ಶಿಕ್ಷಕಿಯೊಬ್ಬರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.…
ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)…
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…
ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…
ಮೈಸೂರು : ನಗರದ ಇಟ್ಟಿಗೆಗೂಡಿನ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ೧೦೨ನೇ ಕರಗಮಹೋತ್ಸವ…