ಮೈಸೂರು

ಮನಸ್ವಿನಿ, ಮೈತ್ರಿ ಯೋಜನೆ ರೂವಾರಿ ಶ್ರೀನಿವಾಸಪ್ರಸಾದ್ : ಡಾ.ರಂಗಸ್ವಾಮಿ

ಮೈಸೂರು: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ೪೦ರಿಂದ ೬೫ ವರ್ಷದ ಅವಿವಾಹಿತೆ ಮಹಿಳೆಯರಿಗೆ, ಮಂಗಳಮುಖಿಯರಿಗೆ ಜೀವನ ಭದ್ರತೆ ಒದಗಿಸಲು ಕ್ರಮವಾಗಿ ಮನಸ್ವಿನಿ, ಮೈತ್ರಿ ಯೋಜನೆ ರೂಪಿಸಲು ವಿ.ಶ್ರೀನಿವಾಸಪ್ರಸಾದ್ ಅವರೇ ಕಾರಣ ಎಂದು ಮೈಸೂರು ವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ರಂಗಸ್ವಾಮಿ ಹೇಳಿದರು.

ಮೈಸೂರು ಅಥ್ಲೆಟಿಕ್ಸ್ ಕ್ಲಬ್, ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

೫ ದಶಕಗಳ ಸುದೀರ್ಘ ರಾಜಕಾರಣ ಅನುಭವ ಶ್ರೀನಿವಾಸಪ್ರಸಾದ್ ಅವರಿಗಿತ್ತು. ವಿಧವೆಯರಿಗೆ, ವೃದ್ಧೆಯರಿಗೆ ಮಾಸಾಶನ ನೀಡಲಾಗುತ್ತದೆ. ಆದರೆ, ವಿವಾಹ ಆಗದೇ ಇರುವ ಮಹಿಳೆಯರಿಗೆ ಏನು ಮಾಡುವುದು?. ಅವರಿಗೂ ಜೀವನ ಭದ್ರತೆ ಕಲ್ಪಿಸಬೇಕಲ್ಲ ಎಂದು ಮಾಸಿಕ ೨ ಸಾವಿರ ರೂ. ಪಿಂಚಣಿ ನೀಡುವ ಯೋಜನೆ ರೂಪಿಸಿದರು. ರಾಜ್ಯದಲ್ಲಿ ಸುಮಾರು ೧.೩೪ ಲಕ್ಷ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದು ಜೀವನ ಸಾಗಿಸುತ್ತಿದ್ದಾರೆ ಎಂದರು.

ಮೊಟ್ಟ ಮೊದಲನೆಯದಾಗಿ ಈ ಯೋಜನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ರಾಚಪ್ಪಾಜಿ ನಗರದಲ್ಲಿ ಈ ಯೋಜನೆ ಜಾರಿಯಾಯಿತು. ಇದೀಗ ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳೂ ಈ ಯೋಜನೆ ಜಾರಿ ಮಾಡುತ್ತಿವೆ ಎಂದರು.

ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ದೇವರಾಜ್ ಮಾತನಾಡಿ, ಆನಾರೋಗ್ಯದಿಂದಾಗಿ ಸುಮಾರು ೨೪ ವರ್ಷಗಳ ಹಿಂದೆಯೇ ಅಪ್ಪನನ್ನು ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ ಅವರ ಮನೋಸ್ಥೆರ್ಯ ಚೆನ್ನಾಗಿದ್ದರಿಂದ ಈವರೆಗೆ ಬದುಕುಳಿದು, ಜನಸೇವೆ ಮಾಡಿದರು. ಈ ಬಾರಿಯೂ ಅವರು ಆಸ್ಪತ್ರೆಯಿಂದ ಮನೆಗೆ ಮರಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಆ ರೀತಿಯಾಗಲಿಲ್ಲ ಎಂದು ಭಾವುಕರಾದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ೫ ದಶಕಗಳ ರಾಜಕಾರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಆದರ್ಶ ಪಾಲಿಸಿ, ಸಮಸಮಾಜ, ಸಾಮರಸ್ಯ, ಸಹಬಾಳ್ವೆಯ ವಾತಾವರಣ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲ ಶೋಷಿತರ ಪರ ಧ್ವನಿಯಾಗಿದ್ದರು. ಜೊತೆಗೆ ಎಲ್ಲಾ ವರ್ಗಗಳ ಜನಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಎಂ.ಯೋಗೇಂದ್ರ ಮಾತನಾಡಿ, ಸ್ವಾಭಿಮಾನಿ, ಶುದ್ಧ ಹಸ್ತದ ರಾಜಕಾರಣಿಯಾಗಿದ್ದ ಶ್ರೀನಿವಾಸಪ್ರಸಾದ್ ಅವರು ಸ್ವತಃ ಕ್ರೀಡಾಪಟು ಹಾಗೂ ಕ್ರೀಡಾಪ್ರೇಮಿಯಾಗಿದ್ದಾರೆ. ನನ್ನಂಥ ಕ್ರೀಡಾಪಟು ಈ ಮಟ್ಟಕ್ಕೆ ಬೆಳೆಸಲು ಶ್ರೀನಿವಾಸಪ್ರಸಾದ್ ಅವರ ಪ್ರೋತ್ಸಾಹವೇ ಕಾರಣ ಎಂದರು.

ಪಿ.ಜಿ.ಸತ್ಯನಾರಾಯಣ್ ಮಾತನಾಡಿ, ಶ್ರೀನಿವಾಸಪ್ರಸಾದ್ ಯಾವಾಗಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ಸ್ಮರಿಸಿದರು. ಧೀರಜ್ ಪ್ರಸಾದ್, ಪಿ.ಜಿ.ಚಂದ್ರಶೇಖರ್, ಸಿ.ಕೆ.ಮರುಳೀಧರ್, ಮಹದೇವಯ್ಯ, ಜಿ.ಆರ್.ಪ್ರಭಾಕರ್, ಕೆ.ಎನ್.ಸೋಮಶೇಖರ್, ಟಿ.ಎಸ್.ರವಿಕುಮಾರ್, ಮಹದೇವರಾವ್, ಎಚ್.ಆರ್.ರಾಮಸ್ವಾಮಿ, ಪದ್ಮನಾಭ, ಕೆ.ಟಿ.ಬಲರಾಮೇಗೌಡ, ಅಭಿಷೇಕ್, ಎನ್.ಪ್ರಸಾದ್, ರೇಖಾ, ಸೇರಿದಂತ ಅಥ್ಲೆಟ್ಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

6 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

6 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

6 hours ago

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

ಎಚ್.ಹಾಲಪ್ಪ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ…

6 hours ago

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!

ಎಸ್.ಎಸ್.ಭಟ್ ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ ನಂಜನಗೂಡು: ಮಳೆ ಬಂದರೆ ನೀರಿನಿಂದ…

6 hours ago