ಮೈಸೂರು

ಚಾಮುಂಡೇಶ್ವರಿಯಲ್ಲಿ ಸಿದ್ದೇಗೌಡ ಅಭ್ಯರ್ಥಿ ಮಾತ್ರ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದುಕೊಳ್ಳಿ : ಸಿದ್ದರಾಮಯ್ಯ

ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದೇಗೌಡ ನಮ್ಮ ಅಭ್ಯರ್ಥಿ ಮಾತ್ರ, ಇಲ್ಲಿ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ನೀವೆಲ್ಲ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ,ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪಕ್ಷದಿಂದ 11 ಜನ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು, ಈ ಹನ್ನೊಂದೂ ಜನ ಕೂಡ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ, ಆದರೆ ಎಲ್ಲರ ಅಭಿಪ್ರಾಯ ಪಡೆದು ಮಾವಿನಹಳ್ಳಿ ಸಿದ್ದೇಗೌಡರನ್ನು ಅಂತಿಮವಾಗಿ ಹೈಕಮಾಂಡ್‌ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇಲ್ಲಿನ ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಹೈಕಮಾಂಡ್‌ ಮುಂದೆ ಹೇಳಿದ್ದೆ, ನಿಮ್ಮ ಅಭಿಪ್ರಾಯದ ಮೇರೆಗೆ ಸಿದ್ದೇಗೌಡರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದರು.

ನಾನು ಈ ಸಭೆಗೆ ಬಂದಿರುವ ಮುಖ್ಯ ಉದ್ದೇಶವೇ ನಮ್ಮಲ್ಲಿ ಇರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಒಂದಾಗಿ ಕೆಲಸ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು. ಸಿದ್ದೇಗೌಡರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ, ಅವರು ವಲಸಿಗ ಎಂಬ ಅಭಿಪ್ರಾಯ ಯಾರಲ್ಲೂ ಬರಬಾರದು,ಒಮ್ಮೆ ಕಾಂಗ್ರೆಸ್‌ ಸೇರಿದ ಮೇಲೆ ಅವರು ಕಾಂಗ್ರೆಸಿಗ. ಇಲ್ಲಿ ಮೂಲ, ವಲಸಿಗ ಎಂಬುದು ಯಾವುದೂ ಇಲ್ಲ. ನಿಮ್ಮೆಲ್ಲರ ಸಹೋದರ, ಈ ಕಾರಣದಿಂದ ತಾವೆಲ್ಲ ಒಗ್ಗಟ್ಟನ್ನು ಪ್ರದರ್ಶಿಸಬೇಕು, ಈ ಮನವಿ ಮಾಡಲು ಇಂದು ಸಭೆ ಕರೆದಿದ್ದೇವೆ. ಇಂದು ಬಹಳಷ್ಟು ಜನ ಮುಖಂಡರು ಬಿಜೆಪಿ ಮತ್ತು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ, ಮುಂದೆ ಸೇರುವವರೂ ಇದ್ದಾರೆ, ಅವರೆಲ್ಲರಿಗೂ ಪಕ್ಷದ ವತಿಯಿಂದ ಮತ್ತು ವೈಯಕ್ತಿಕವಾಗಿ ಹಾರ್ದಿಕ ಸ್ವಾಗತ ಎಂದರು.

ಈ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದ್ದು. ನಾವು ಯಾರು ಕೂಡ ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು, ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳಿಂದಾಗಿ ಜಿ.ಟಿ ದೇವೇಗೌಡ ಅವರು ನನ್ನನ್ನು ಸೋಲಿಸಿದರು. ಈ ಬಾರಿ ಅಂತಹ ಯಾವುದೇ ರಾಜಕೀಯ ಬೆಳವಣಿಗೆಗಳು ಆಗಿಲ್ಲ, ನಾನು 5 ವರ್ಷ ಮುಖ್ಯಮಂತ್ರಿಯಾಗಿ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಕೂಡ ಚಾಮುಂಡೇಶ್ವರಿಯ ಜನ ನನ್ನನ್ನು ಸೋಲಿಸಿದರು ಎಂದರು.

ನಾಡಿನ ಸಾಮರಸ್ಯ ಹಾಳುಮಾಡುವ, ಧರ್ಮ – ಧರ್ಮಗಳನ್ನು ಎತ್ತಿಕಟ್ಟಿ ಸಮಾಜ ಒಡೆಯುವ, ಅಶಾಂತಿ ಸೃಷ್ಟಿಸುವ ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದು, ಬಹುತ್ವದ ಭಾರತ ದೇಶದ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಜೆಡಿಎಸ್‌ ಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಜಿ.ಟಿ ದೇವೇಗೌಡ ಅವರನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಮಾಡಲಾಗಿತ್ತು. ಆಮೇಲೆ ಅವರೊಳಗೆ ವೈಮನಸು ಬಂದು ವಾಚಾಮಗೋಚರವಾಗಿ ಬೈದುಕೊಂಡು ತಿರುಗಾಡುತ್ತಾ ಇದ್ದರು. ಆಮೇಲೆ ನನ್ನತ್ರ ಬಂದು “ನಾನು ಕಾಂಗ್ರೆಸ್‌ ಸೇರಿಕೊಳ್ಬೇಕು ಎಂದುಕೊಂಡಿದ್ದೇನೆ, ನೀವು ಟಿಕೆಟ್‌ ಕೊಡಿಸಬೇಕು” ಎಂದಿದ್ದರು. ಕೊನೆಗೆ ನನ್ನ ಜತೆಯಲ್ಲೇ ಇದ್ದರು, ಚುನಾವಣೆ ಸಂದರ್ಭದಲ್ಲಿ ಕೆಲಸವನ್ನು ಮಾಡಿದ್ದರು, ಕೊನೆಗೆ ಮತ್ತೆ ಜೆಡಿಎಸ್‌ ಗೆ ವಾಪಾಸು ಹೋದರು. ಅವರೇ ಬಂದು ಅವರೇ ವಾಪಾಸು ಹೋಗಿದ್ದಾರೆ. ನಾನು ಅವರನ್ನು ಕರೆದಿರಲಿಲ್ಲ ಎಂದರು.

ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೊಬ್ಬರ ಹೆಗಲಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವವರು ಅವರು. ನಾನು ಜೆಡಿಎಸ್‌ ನಲ್ಲಿದ್ದಾಗ 2004ರಲ್ಲಿ 59 ಜನ ಜೆಡಿಎಸ್‌ ನಿಂದ ಗೆದ್ದಿದ್ದೆವು. 2005ರಲ್ಲಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು, ಆಗ ಜೆಟಿಡಿ ನನ್ನ ಜೊತೆ ಬರಲಿಲ್ಲ, ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಅಲ್ಲೇ ಉಳಿದುಕೊಂಡರು. ಹುಣಸೂರಿನಲ್ಲಿ ಯಾರು ಗೆಲ್ಲಿಸಿದರು ಎಂದು ಅವರು ಹೇಳಬೇಕು. ದೇವೇಗೌಡರು ಇವರನ್ನು ಮಂತ್ರಿ ಮಾಡಿದರು, ಇವೆರಲ್ಲ ಅವಕಾಶವಾದಿಗಳು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು, ಮತ್ತೆ ಜೆಡಿಎಸ್‌ 59 ಸ್ಥಾನವನ್ನು ಮುಟ್ಟಿದರೇ? ಇಲ್ಲ ಅಲ್ವಾ? 28 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದು. ಆಮೇಲೆ 40 ಗೆದ್ದರು, ಮತ್ತೆ 37 ಗೆದ್ದರು. ಈಗ 20 ರಿಂದ 22 ಗೆಲ್ಲಬಹುದು. ಹೇಗೆ ಸರ್ಕಾರ ಮಾಡ್ತಾರೆ? ಪಂಚರತ್ನ ಮಾಡಿದ ಕೂಡಲೇ ಬಹುಮತ ಸಿಗುತ್ತಾ? ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಯಾವ ಪಕ್ಷವೂ ಪೂರ್ಣ ಬಹುಮತ ಪಡೆಯಬಾರದು. ಆಗ ಕುಮಾರಸ್ವಾಮಿ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಮ್ಮ ಜೊತೆ ಬರುತ್ತೇನೆ ಎಂದು ಷರತ್ತು ಹಾಕುತ್ತಾರೆ, ಈ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಲು ಆಗುತ್ತಾ? ನಾವೆಲ್ಲ ಬೆಂಬಲ ಕೊಟ್ಟರೂ 1 ವರ್ಷ 2 ತಿಂಗಳಿಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದರು.

ಹಿಂದೆ ಕುಮಾರಸ್ವಾಮಿಗೆ ನೀವು ಅಮೆರಿಕಾಗೆ ಹೋಗಬೇಡಿ, ಇಲ್ಲಿ ಶಾಸಕರು ಪಕ್ಷಾಂತರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದೆ. ನನ್ನ ಮಾತು ಕೇಳಿಲ್ಲ ಹೋಗಿ 9 ದಿನ ಅಮೇರಿಕಾದಲ್ಲಿ ಕೂತುಕೊಂಡರು. ಅಷ್ಟರಲ್ಲಿ ಬಿಜೆಪಿಯವರು ವ್ಯವಹಾರ ಕುದುರಿಸಿ ಎಲ್ಲರನ್ನು ಕೊಂಡುಕೊಂಡರು. ನಂತರ ಸಿದ್ದರಾಮಯ್ಯ ಅವರು ಬಿಜೆಪಿಗೆ ಕಳಿಸಿದರು ಎಂದು ನನ್ನ ಮೇಲೆ ಗೂಬೆ ಕೂರಿಸಲು ಶುರು ಮಾಡಿದರು. ಕಾಂಗ್ರೆಸ್‌ ನವರನ್ನು ನಾನು ಕಳಿಸಿದ್ದಾದರೆ ಹೆಚ್‌, ವಿಶ್ವನಾಥ್‌, ಗೋಪಾಲಯ್ಯ, ನಾರಾಯಣಗೌಡರನ್ನು ಕಳಿಸಿದ್ದು ಯಾರಪ್ಪ? ಹೊಟೇಲ್‌ ನಲ್ಲಿ ಕೂತು ಆಡಳಿತ ಮಾಡಿದರೆ ಯಾವ ಶಾಸಕರು, ಕಾರ್ಯಕರ್ತರು ಉಳ್ಕೊತಾರೆ. ಯಾರನ್ನೂ ಭೇಟಿ ಮಾಡಲ್ಲ, ಮಂತ್ರಿಗಳು, ಶಾಸಕರನ್ನು ಹೊಟೇಲ್‌ ಒಳಗೆ ಬಿಡುತ್ತಿರಲಿಲ್ಲ. ಹೀಗಾಗಿ ಸರ್ಕಾರ ಬಿದ್ದುಹೋಯಿತು ಎಂದರು.

ಬಿಜೆಪಿಯವರು ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಎರಡು ವರ್ಷಕ್ಕೆ ಅವರನ್ನು ಅಧಿಕಾರದಿಂದ ಕಿತ್ತುಹಾಕಿದರು, ಪಾಪ ಯಡಿಯೂರಪ್ಪ ಅಳುತ್ತಾ ಇದ್ರು. ಯಡಿಯೂರಪ್ಪ ಅವರೇ ಹೇಳಿ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿಸಿದರು. ಒಂದು ತಿಂಗಳು ಅವರ ಜತೆ ಚನ್ನಾಗಿದ್ದು, ನಂತರ ಇಬ್ಬರ ಮಧ್ಯ ವೈಮನಸ್ಸು ಶುರುವಾಯಿತು. ಬೊಮ್ಮಾಯಿ 6 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಿಲ್ಲ, ಕಾರಣ ಏನಪ್ಪಾ ಅಂದ್ರೆ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ರೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕಾಗುತ್ತೆ ಎನ್ನುವುದು. ಒಂದು ಮುಕ್ಕಾಲು ವರ್ಷ ಮಂತ್ರಿಮಂಡಲ ವಿಸ್ತರಣೆ ಮಾಡದೆ ಸರ್ಕಾರ ತಳ್ಳಿದರು ಎಂದರು.

lokesh

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

3 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

5 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

6 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

8 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

9 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

9 hours ago