ಮೈಸೂರು

ಚಿರತೆ ದಾಳಿಗೆ 10 ಮೇಕೆ ಬಲಿ

ಮೈಸೂರು ತಾಲ್ಲೂಕು ಧನಗಳ್ಳಿಯಲ್ಲಿ ಘಟನೆ

ಮೈಸೂರು: ಚಿರತೆ ದಾಳಿಗೆ 10 ಮೇಕೆಗಳು ಬಲಿಯಾಗಿರುವ ಘಟನೆ ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಧನಗಳ್ಳಿ ಗ್ರಾಮದ ರೈತ ಬಸವರಾಜು ಎಂಬವರು ಗ್ರಾಮದ ಸಮೀಪದ ಕೆಎಚ್‌ಬಿ ಕಾಲೋನಿ ಬಳಿ ತಮಗೆ ಸೇರಿದ ಹತ್ತು ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಸಂಜೆಯ ವೇಳೆಗೆ ಮನೆಗೆ ಹೊಡೆದುಕೊಂಡು ಬರುವ ಸಲುವಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ಏಳು ಮೇಕೆಗಳು ರಕ್ತಸಿಕ್ತವಾಗಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪರಿಶೀಲಿಸಿ, ಚಿರತೆಯ ದಾಳಿಯಿಂದಾಗಿಯೇ ಮೇಕೆಗಳು ಸಾವನ್ನಪ್ಪಿವೆ ಎಂಬುದಾಗಿ ತಿಳಿಸಿದ್ದಾರೆ.

ಮೃತಪಟ್ಟಿರುವ ಮೇಕೆಗಳ ಕತ್ತಿನ ಭಾಗದಲ್ಲಿ ಕೋರೆಹಲ್ಲುಗಳಿಂದ ಕಚ್ಚಿದ ಆಳವಾದ ಗಾಯಗಳಾಗಿದ್ದು, ಮೈಮೇಲೂ ಉಗುರಿನಿಂದ ತರಚಿದ ರೀತಿಯಲ್ಲಿ ಆಳವಾದ ಗಾಯಗಳಾಗಿವೆ. ಸತ್ತ ಮೇಕೆಗಳ ದೇಹದಿಂದ ರಕ್ತ ಸೋರುತ್ತಿದ್ದು, ಆಗಷ್ಟೇ ಚಿರತೆ ದಾಳಿ ನಡೆಸಿ ಕೊಂದು ಹಾಕಿರಬಹುದೆಂದು ಗ್ರಾಮದ ಶಿವಪ್ರಕಾಶ್ ಹಾಗೂ ಇತರ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಗ್ರಾಮಸ್ಥರು ಸ್ಥಳದಲ್ಲಿ ನಾಪತ್ತೆಯಾಗಿರುವ ಮತ್ತೆ ಮೂರು ಮೇಕೆಗಳಿಗಾಗಿ ಹುಡುಕಾಟ ನಡೆಸಿದರಾದರೂ ಅಷ್ಟೊತ್ತಿಗಾಗಲೇ ಕತ್ತಲೆ ಆವರಿಸಿದ್ದರಿಂದಾಗಿ ಅವುಗಳು ಪತ್ತೆಯಾಗಿಲ್ಲ, ನಾಪತ್ತೆಯಾಗಿರುವ ಈ ಮೂರು ಮೇಕೆಗಳ ಮೇಲೂ ಚಿರತೆ ದಾಳಿ ಮಾಡಿ ಕೊಂದು ಹಾಕಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ರೈತ ಬಸವರಾಜು ಅವರು ಮೇಕೆಗಳನ್ನು ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.ಈಗ ಮೇಕೆಗಳು ಸಾವನ್ನಪ್ಪಿರುವುದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಅವರಿಗೆ ದಿಕ್ಕು ತೋಚದಂತಾಗಿದೆ. ಅರಣ್ಯ ಇಲಾಖೆ ಸಂಕಷ್ಟಕ್ಕೆ ಸಿಲುಕಿರುವ ಬಸವರಾಜು ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಧನಗಳ್ಳಿ ಮಗ್ಗುಲಲ್ಲಿರುವ ಕೆಎಚ್‌ಬಿ ಕಾಲೋನಿಯಲ್ಲಿ ಕೆಲವೇ ಮನೆಗಳು ನಿರ್ಮಾಣವಾಗಿದ್ದು, ಕುರುಚಲು ಗಿಡಗಳು ಬೆಳೆದಿರುವುದರಿಂದ ಚಿರತೆಗಳು ಸಂಚರಿಸುತ್ತಿರುವುದು ದೃಢಪಟ್ಟಿದ್ದು, ಸಂಜೆ ವೇಳೆ ಈ ಕಾಲೋನಿಯ ರಸ್ತೆಯಲ್ಲಿ ಜನರು ಸಂಚರಿಸಲು ಭಯ ಪಡುವಂತಾಗಿದೆ. ದನಗಳನ್ನು ಮೇಯಿಸುವವರು ಮತ್ತು ಜಮೀನಿಗೆ ತೆರಳುವವರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಚಿರತೆಗಳನ್ನು ಬೋನು ಇರಿಸಿ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

3 hours ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

3 hours ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

3 hours ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

4 hours ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

14 hours ago