ಜಿಲ್ಲೆಗಳು

ವಿವಾದದ ಮಧ್ಯೆ ಶೌಚಾಲಯವಾಯಿತು ಲ್ಯಾನ್ಸ್‌ ಡೌನ್‌ ಬಿಲ್ಡಿಂಗ್‌

ಮೈಸೂರು: ಪಾರಂಪರಿಕ ನಗರದ ಹೆಗ್ಗುರುತಾದ ಲ್ಯಾನ್ಸ್‌ ಡೌನ್‌ ಕಟ್ಟಡ ಕುಸಿದು ಬರೋಬ್ಬರಿ ಹತ್ತು ವರ್ಷಗಳು ಕಳೆದಿವೆ. 2012 ರ ಆಗಷ್ಟ್‌ 25 ರಂದು ಮಳಿಗೆ ಸಂಖ್ಯೆ 17 ಮತ್ತು 18ರ ಮೇಲ್ಛಾವಣಿ ಕುಸಿದು ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದ ಘಟನೆ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಈ ನಡುವೆ ಶಿಥಿಲವಾಗಿರುವ ಪಾರಂಪರಿಕ ಕಟ್ಟಡವನ್ನು ನವೀಕರಿಸಬೇಕೇ , ಮರು ನಿರ್ಮಿಸಬೇಕೇ ಎಂಬ ಚರ್ಚೆ ಇನ್ನೂ ನಡೆಯುತ್ತಿದೆ. ಆದರೆ ಈ ಕಟ್ಟಡದ ಸದ್ಯದ ಸ್ಥಿತಿ ಹೇಗಿದೆ ಎಂದು ನಿಮಗೆ ಗೊತ್ತೇ ?

ಲ್ಯಾನ್ಸ್‌ ಡೌನ್‌ ಕಟ್ಟಡದ ಸ್ಥಿತಿಗತಿ ಹೇಗಿದೆ ಎಂದು ನೋಡುವುದು ಬಿಡಿ. ಹತ್ತಿರಕ್ಕೆ ಹೋಗಲೂ ಆಗದಷ್ಟು ಗಬ್ಬುನಾತ ಮೂಗಿಗೆ ಬಡಿಯುತ್ತದೆ. ಲ್ಯಾನ್ಸ್ ಡೌನ್ ಕಟ್ಟಡದ ಮುಂಭಾಗಕ್ಕೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ, ಹಿಂಭಾಗದಲ್ಲಿ ಹಳೇ ಸಂತೆಪೇಟೆಗೆ ಬರುವ ಜನರಿಗೆ, ಅಂಗಡಿ ಮಾಲೀಕರಿಗೆ ಈ ಕಟ್ಟಡ “ಸುಲಭ ಶೌಚಾಲಯʼವಾಗಿದೆ. ಇಲ್ಲಿನ ಖಾಲಿ ಗೋದಾಮುಗಳಲ್ಲಿ ಅಂಗಡಿಯ ತ್ಯಾಜ್ಯಗಳನ್ನು ತುಂಬಲಾಗುತ್ತಿದೆ. ರಾತ್ರಿ ವೇಳೆ ಕಟ್ಟಡದ ಹತ್ತಿರಕ್ಕೆ ಹೋಗಲೂ ಭಯಪಡುವ ವಾತಾವರಣವಿದೆ.

 

ಮಳೆ ಬಂದಾಗ ಕಟ್ಟಡದ ಛಾವಣಿಗಳಿಂದ ನೀರು ಸೋರುವುದು, ಗಾರೆ ಕಳಚಿ ಬೀಳುವುದು ಸಾಮಾನ್ಯ ಸಂಗತಿ. ನವೀಕರಣ ಮತ್ತು ಮರು ನಿರ್ಮಾಣದ ಚರ್ಚೆಯ ನಡುವೆಯೇ ಇಡೀ ಕಟ್ಟಡ ಕುಸಿದು ಬಿದ್ದರೆ ಅಶ್ಚರ್ಯವೇನೂ ಇಲ್ಲ.

ಮೈಸೂರು ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಸದುದ್ದೇಶದಿಂದ ಅರಮನೆಗೆ ಕೂಗಳತೆ ದೂರದಲ್ಲಿ ಈ ಕಟ್ಟಡವನ್ನು ಕಟ್ಟಿಸಿದ್ದರು. ಬ್ರಿಟಿಷ್ ವೈಸ್‌ ರಾಯ್‌ ಆಗಿದ್ದ ಲ್ಯಾನ್ಸ್‌ ಡೌನ್‌ ವಿಕ್ಟೋರಿಯಾ ರಾಣಿಯ ಪ್ರತಿನಿಧಿಯಾಗಿ 1892 ರ ಲ್ಲಿ ನವೆಂಬರ್ ತಿಂಗಳಿನಲ್ಲಿ ಮೈಸೂರಿಗೆ ಭೇಟಿ ನೀಡಿದ್ದ. ಇದರ ಜ್ಞಾಪಕಾರ್ಥವಾಗಿ ಈ ಕಟ್ಟಡಕ್ಕೆ ಅವನ ಹೆಸರಿಡಲಾಗಿತ್ತು.

ಮುಂಬೈನ ವಿಕ್ಟೋರಿಯಾ ಟರ್ಮಿನಲ್ ಮಾದರಿಯಲ್ಲಿ ಕಟ್ಟಿದ ಈ ಕಟ್ಟಡ ಅಂದು ಮೈಸೂರಿನ ಹೆಗ್ಗುರುತಾಗಿತ್ತು. 1927 ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿ ಈ ಕಟ್ಟಡದಲ್ಲಿದ್ದ ಖಾದಿ ಭಂಡಾರಕ್ಕೂ ಭೇಟಿ ನೀಡಿದ್ದರು.

ಮೈಸೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಈ ಕಟ್ಟಡದ ಎರಡು ಮಳಿಗೆಗಳು ಕುಸಿದುಬಿದ್ದ ತಕ್ಷಣವೇ ದೊಡ್ಡ ಮಟ್ಟದಲ್ಲಿ ಕೋಲಾಹಲ ಉಂಟಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಸರ್ವಪಕ್ಷ ಮುಖಂಡರ ಸಭೆ ನಡೆಸಿ ಮುಂದಿನ ಒಂದು ವರ್ಷದೊಳಗೆ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳುವ ಭರವಸೆ ನೀಡಿದ್ದರು. ಯಡಿಯೂರಪ್ಪ ಸರಕಾರ ಇದಕ್ಕಾಗಿ ಎರಡು ಕೋಟಿ ರೂ. ಹಣ ಮಂಜೂರು ಮಾಡಿತ್ತು. ಕಟ್ಟಡವನ್ನು ಮರು ನಿರ್ಮಿಸಬೇಕೇ, ನವೀಕರಿಸಬೇಕೇ ಎಂದು ವರದಿ ನೀಡಲು ಎರಡು ಸಮಿತಿಗಳನ್ನು ರಚಿಸಲಾಗಿತ್ತು. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಮುಖ್ಯಸ್ಥ ಡಾ.ವಿಶ್ವನಾಥ್ ಹಾಗೂ ಭಾರತೀಯ ಪರಂಪರೆ ನಗರಗಳ ಒಕ್ಕೂಟದ ಗೋವಿಂದನ್ ಕುಟ್ಟಿ ಅವರು ಎರಡು ಪ್ರತ್ಯೇಕ ವರದಿಯನ್ನು ಸಲ್ಲಿಸಿ ಮೈಸೂರು ನಗರ ಪಾಲಿಕೆ ಅಧೀನದಲ್ಲಿರುವ ಪಾರಂಪರಿಕ ಕಟ್ಟಡದ ಪುನರುಜ್ಜೀವನಕ್ಕೆ ಸಲಹೆ ಮಾಡಿದ್ದರು. ಅಷ್ಟರಲ್ಲಿ ಎರಡೂವರೆ ವರ್ಷಗಳೇ ಕಳೆದು ಹೋಗಿದ್ದವು.

2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಲ್ಯಾನ್ಸ್ ಡೌನ್ ಕಟ್ಟಡ ಪುನರ್‌ ನಿರ್ಮಾಣಕ್ಕಾಗಿ 6 ಕೋಟಿ ರೂ. ಬಿಡುಗಡೆ ಮಾಡಿ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಮುಂಬೈನ ಮೆ. ಸಾವನಿ ಕನ್ಸ್ಟ್ರಕ್ಷನ್ ಕಂಪನಿ ಶೇ.೪೦ರಷ್ಟು ಕೆಲಸ ಮುಗಿಸಿತ್ತು. ಆದರೆ ದೇವರಾಜ ಮಾರುಕಟ್ಟೆಯ ಕಮಾನು ದ್ವಾರ ನವೀಕರಣ ಸಂದರ್ಭದಲ್ಲಿ ಕುಸಿದು ಬಿದ್ದ ಬಳಿಕ ಎಲ್ಲ ಕೆಲಸಗಳು ಅಲ್ಲಿಗೇ ಸ್ಥಗಿತಗೊಂಡವು. ಆ ನಂತರದಲ್ಲಿ ಕಟ್ಟಡದ ಸಂರಕ್ಷಣೆಗಾಗಿ ಅಳವಡಿಸಿದ್ದ ಕಿಟಿಕಿ-,ಬಾಗಿಲುಗಳು ಕಳ್ಳಕಾಕರ ಪಾಲಾಯಿತು.

ಈ ಮಧ್ಯೆ ಕಟ್ಟಡದಲ್ಲಿದ್ದ ಬಾಡಿಗೆದಾರರು ಕಟ್ಟಡವನ್ನು ಕೆಡಹುವುದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದಾದ ಬಳಿಕ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮತ್ತೆ ಎರಡು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳೂ ಲ್ಯಾನ್ಸ್‌ ಡೌನ್‌ ಕಟ್ಟಡ ‌ ಹಾಗೂ ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡುವಂತೆ ವರದಿ ನೀಡಿದ್ದವು.

ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಪಡೆದುಕೊಂಡು 6 ತಿಂಗಳೊಳಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಎರಡು ವರ್ಷಗಳ ಹಿಂದೆಯೇ ಹೈಕೋರ್ಟ್‌ ‌ ಪಾಲಿಕೆಗೆ ಸೂಚಿಸಿತ್ತು. ಆದರೆ ಕಟ್ಟಡವನ್ನು ಉಳಿಸಿಕೊಂಡು ನವೀಕರಣ ಮಾಡಬೇಕೇ ಅಥವಾ ಪೂರ್ತಿ ಕೆಡವಿ ಪಾರಂಪರಿಕ ಶೈಲಿಯಲ್ಲಿ ಮತ್ತೆ ಕಟ್ಟಬೇಕೇ ಎನ್ನುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ನಗರಪಾಲಿಕೆಗಾಗಲೀ, ಸರಕಾರಕ್ಕಾಗಲೀ ಇದುವರೆಗೂ ಸಾಧ್ಯವಾಗಿಲ್ಲ.

ಪ್ರಜಾಪ್ರಭುತ್ವದಲ್ಲಿ ಒಮ್ಮತದ ತೀರ್ಮಾನ ದೂರದ ಮಾತು. ಬಹುಜನರ ಅಭಿಪ್ರಾಯದ ನಡುವೆ ವಿವೇಚನಾಯುಕ್ತ ತೀರ್ಮಾನ ತೆಗೆದುಕೊಳ್ಳುವುದು ಬಹಳ ಮುಖ್ಯ. ಲ್ಯಾನ್ಸ್‌ ಡೌನ್‌ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ವಿಚಾರದಲ್ಲಿ ಸರಕಾರ ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ ಕಾಲ ತನ್ನದೇ ತೀರ್ಮಾನ ತೆಗೆದುಕೊಳ್ಳಲಿದೆ.

andolanait

Recent Posts

ಕಾಂಗ್ರೆಸ್‌ ಶಾಸಕ ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…

43 mins ago

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪತ್ತೆ: ಆರೋಗ್ಯ ಇಲಾಖೆಯಿಂದ ಹೈಅಲರ್ಟ್‌

ಕೋಯಿಕ್ಕೋಡ್:‌ ವಯನಾಡು, ಕೋಯಿಕ್ಕೋಡ್‌ನಲ್ಲಿ ಶಿಗೆಲ್ಲಾ ವೈರಸ್‌ ಸೋಂಕು ಹರಡಿರುವ ನಡುವೆ ನಿಫಾ ವೈರಸ್‌ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…

51 mins ago

ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ 81 ಅಡಿಗೆ ಕುಸಿತ: ರೈತರಲ್ಲಿ ಆತಂಕ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.…

2 hours ago

ಮಧ್ಯಪ್ರಾಚ್ಯ ಯುದ್ಧ ಮತ್ತೆ ಉಲ್ಬಣ: ಹಾರ್ಮುಜ್‌ ಜಲಸಂಧಿ ಬಂದ್‌ ಮಾಡಿದ ಇರಾನ್‌

ಟೆಹರಾನ್:‌ ಇರಾನ್‌, ಅಮೇರಿಕಾ ಮತ್ತು ಇಸ್ರೇಲ್‌ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ. ಯುಎಸ್‌ ದಾಳಿ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಮತ್ತೆ…

3 hours ago

ಓದುಗರ ಪತ್ರ: ನೇರಳೆ ತಳಿ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿ

ನೇರಳೆ ಹಣ್ಣಿನ ಬೀಜಗಳ ಔಷಧಿಯ ಗುಣಗಳನ್ನು ಪರಿಗಣಿಸಿ ಸರ್ಕಾರವು ಇವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ತೋಟಗಾರಿಕಾ…

4 hours ago

ಓದುಗರ ಪತ್ರ: ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಬಸ್ ನಿಲುಗಡೆಯಿಂದ ತೊಂದರೆ

ಮೈಸೂರಿನ ರಿಂಗ್ ರಸ್ತೆ ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಪ್ರತಿನಿತ್ಯ ಸಾರಿಗೆ ನಿಗಮದ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್…

4 hours ago