ಜಿಲ್ಲೆಗಳು

ಮಿಡ್ ಬ್ರೈನ್ ಆ್ಯಕ್ಟಿವೇಷನ್ ಅಸಲಿಯತ್ತು ಏನು ಗೊತ್ತಾ..?

ಮೈಸೂರು: ಅಲ್ಲಿ ಗಾಳಿಯಲ್ಲಿ ಕೈಯಾಡಿಸಿ ಚಿನ್ನದ ಮಾದರಿಯ ಸರವನ್ನು ಸೃಷ್ಟಿಸಲಾಯಿತು… ತೈಲವೊಂದನ್ನು ಹಚ್ಚಿ ಯುವಕನನ್ನು ಕ್ಷಣಮಾತ್ರದಲ್ಲಿ ಬಲಶಾಲಿಯನ್ನಾಗಿ ಮಾಡಲಾಯಿತು… ಕಣ್ಣಿಗೆ ಬಟ್ಟೆ ಕಟ್ಟಿ ಅಕ್ಷರಗಳನ್ನು ಪಟಪಟನೆ ಗುರುತಿಸಲಾಯಿತು..
ಆದರೆ ಈ ಎಲ್ಲ ಪವಾಡಗಳನ್ನು ಮಾಡಿ ತೋರಿಸಿದವರು ಬಾಬಾನೂ ಅಲ್ಲ, ಯೋಗಿಯೂ ಅಲ್ಲ. ಜಾದೂಗಾರನೂ ಅಲ್ಲ. ಅವರೊಬ್ಬ ಮಾಜಿ ಪ್ರೊಫೆಸರ್. ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ಸಭಾಂಗಣದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಮೂಢನಂಬಿಕೆ ಮತ್ತು ವಿಜ್ಞಾನ ಕಾರ್ಯಕ್ರಮದಲ್ಲಿ ನಾನಾ ಪವಾಡಗಳ ರಹಸ್ಯ ಬಯಲಾಯಿತು. ಭಾರತೀಯ ವಿಚಾರವಾದಿಗಳ ಒಕೂಟದ ಅಧ್ಯಕ್ಷ ನರೇಂದ್ರನಾಯಕ್ ಅವರು ನಕಲಿ ಬಾಬಾಗಳ ಪವಾಡದ ರಹಸ್ಯವನ್ನು ವಿದ್ಯಾರ್ಥಿಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.

ಗಾಳಿಯಲ್ಲಿ ಕೈಯಾಡಿಸಿ ಕೈಗೆ ವಿಭೂತಿ ಪ್ರಸಾದ ನೀಡುವ ಬಾಬಾಗಳು ಕೈ ಬೆರಳಿನಲ್ಲಿ ಕ್ಯಾಪ್ಸೂಲ್ ಮೂಲಕ ವಿಭೂತಿಯನ್ನು ಹೇಗೆ ಬಚ್ಚಿಡುತ್ತಾರೆ. ಜನರಿಗೆ ಗೊತ್ತಾಗದಂತೆ ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನಾಯಕ್ ವಿದ್ಯಾರ್ಥಿಗಳಲ್ಲಿ ಮುಂದೆಯೇ ಪ್ರಾತ್ಯಕ್ಷಿಕೆಯ ಸಮೇತ ವಿವರಿಸಿದರು. ಐಐಟಿಯಂತಹ ಉನ್ನತ ಕಾಲೇಜಿಗೆ ತೆರಳಿದ ಸ್ವಾಮೀಜಿ ಒಬ್ಬರು ಅಲ್ಲಿನ ವಿದ್ಯಾರ್ಥಿಗಳನ್ನು ತಕ್ಷಣವೇ ಬಲಶಾಲಿಯನ್ನಾಗಿ ಮಾಡುತ್ತೇನೆಂದು ಹೇಗೆ ನಂಬಿಸುತ್ತಾರೆ. ನಂತರ ಅವರು ಅನುಸರಿಸುವ ವಿಧಾನವನ್ನು ಕೂಡ ವಿದ್ಯಾರ್ಥಿಗಳನ್ನು ವೇದಿಕೆ ಮೇಲೆ ಕರೆದು ಪ್ರತ್ಯಕ್ಷವಾಗಿ ತೋರಿಸಿದರು.
ಗೋಮೂತ್ರದಿಂದ ಜನರಿಗೆ ಉಪಯೋಗವಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಆದರೆ ರಾಸಾಯನಿಕವನ್ನು ಬಳಸಿ ನೀರನ್ನು ಶುದ್ಧಗೊಳಿಸುವ ಮೂಲಕ ಗೋ ಮೂತ್ರದಿಂದಲೇ ನೀರು ತಿಳಿಯಾಗಿದೆ ಎಂದು ಜನರನ್ನು ನಂಬಿಸುವ ವಂಚಕರ ಬಗ್ಗೆ ನಾಯಕ್ ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ಮಿಡ್ ಬ್ರೈನ್ ಆ್ಯಕ್ಟಿವೇಷನ್ ಅಕಾಡೆಮಿ ಹೆಸರಿನಲ್ಲಿ ಕೆಲ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ಮಕ್ಕಳ ಕೈಯಲ್ಲಿ ವಸ್ತುಗಳನ್ನು ಗುರುತಿಸಲು ಹೇಳುತ್ತಾರೆ. ಅಕ್ಷರಗಳನ್ನು ಓದಿಸುತ್ತಾರೆ. ಆದರೆ ಕಣ್ಣಿಗೆ ಕಟ್ಟಿದ ಬಟ್ಟೆೊಯೊಳಗಿನಿಂದ ಎಲ್ಲವೂ ಕಾಣುತ್ತಿರುತ್ತವೆ. ಇವೆಲ್ಲವೂ ಜನರನ್ನು ವಂಚಿಸಲು ನಡೆಸುತ್ತಿರುವ ಪ್ರಯತ್ನಗಳು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಂತರ ಕೆಲ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ವೇದಿಕೆಗೆ ಕರೆದು ಅವರ ಕಣ್ಣಿಗೆ ಬಟ್ಟೆ ಕಟ್ಟುವ ಮೂಲಕ ಅವರಿಂದ ವಸ್ತುಗಳನ್ನು ಗುರುತಿಸುವ ಹಾಗೂ ಅಕ್ಷರಗಳನ್ನು ಓದಿಸುವ ಮೂಲಕ ವಾಸ್ತವವನ್ನು ತೆರೆದಿಟ್ಟರು. ಇಂತಹ ವಿಚಾರಗಳನ್ನು ನಂಬಬೇಡಿ ಎಂದು ಕಿವಿಮಾತು ಹೇಳಿದರು.
“ನಮ್ಮ ದೇಶದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಆದರೂ ಕೂಡ ವಿಚಾರವಂತರ ಸಂಖ್ಯೆ ಕಡಿಮೆ ಇದೆ. ಯಾವುದನ್ನೂ ಪ್ರಶ್ನಿಸದೆ, ವಿಶ್ಲೇಷಿಸದೆ ನಂಬುವವರಿದ್ದಾರೆ. ಹೀಗಾಗಿಯೇ ವಂಚನೆ ಮಾಡುವವರಿಗೆ ಜೀವನ ಸಾಗಿಸಲು ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತಿವೆ’’ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಮೂಢನಂಬಿಕೆಯನ್ನು ತೊಡೆದುಹಾಕಲು ಯತ್ನಿಸಬೇಕು. ಮನುಷ್ಯರಿಂದಾಗದ ಕೆಲಸವನ್ನು ಮಾಡುತ್ತೇವೆ ಎಂದು ಯಾರಾದರೂ ಹೇಳಿದರೆ ಅವರನ್ನು ಪ್ರಶ್ನಿಸುವ ಹಾಗೂ ಪರಿಶೀಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಂಚನೆಯಾಗುವುದನ್ನು ತಡೆಗಟ್ಟಬಹುದು. ನಿಮಗೆ ಗೊತ್ತಿರುವ ವಿಚಾರವನ್ನು ಇತರರಲ್ಲಿ ಹಂಚಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.  ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಂಬಶಿವಯ್ಯ , ಭಾಷಾತಜ್ಞ ಪ್ರೊ.ಪಂಡಿತಾರಾಧ್ಯ, ಪ್ರಾಂಶುಪಾಲರಾದ ಎಂ.ಬಿ. ವಿಜಯೇಂದ್ರ ಕುಮಾರ್‌, ಡಾ.ರಮ್ಯ ಶ್ರೀ ಮುಂತಾದವರು  ಹಾಜರಿದ್ದರು.

ದಶಕಗಳ ಹಿಂದೆ ಪುಟ್ಟಪರ್ತಿ ಸಾಯಿಬಾಬಾ ಅವರು ಗಾಳಿಯಲ್ಲಿ ಕೈಯಾಡಿಸಿ ತಮ್ಮ ಭಕ್ತರಿಗೆ ವಿಭೂತಿ ನೀಡುತ್ತಿದ್ದರು. ಆಗ ‘‘ನಮಗೊಂದು ಕುಂಬಳಕಾಯಿ ಸೃಷ್ಟಿ ಮಾಡಿ ಕೊಡಿ’ ಸಾಯಿಬಾಬಾ ಅವರಿಗೆ ನೇರವಾಗಿ ಸವಾಲು ಹಾಕಿದವರು ನರೇಂದ್ರ ನಾಯಕ್. ತಮ್ಮಲ್ಲಿ ಅತಿಮಾನುಷವಾದ ಶಕ್ತಿಯಿದೆ ಎಂದು ಯಾರೇ ಹೇಳಿದರೂ ಅದಕ್ಕೆ ಸವಾಲೊಡ್ಡುವ ನಾಯಕ್ ಕಳೆದ ಐದು ದಶಕಗಳಿಂದ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಮಂಗಳೂರಿನ ಕೆಎಂಸಿ ಕಾಲೇಜಿನಲ್ಲಿ ಬಯೋ ಕೆಮೆಸ್ಟ್ರಿ ಪ್ರಾಧ್ಯಾಪಕರಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಾಯಕ್ 2006ರಲ್ಲಿ ಸ್ವಯಂನಿವೃತ್ತಿ ಪಡೆದರು. ನಿವೃತ್ತಿ ಬಳಿಕ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ನಾಲ್ಕೂವರೆ ದಶಕಗಳ ಹಿಂದಯೇ ಮಂಗಳೂರಿನಲ್ಲಿ ವಿಚಾರವಾದಿ ಸಂಘವನ್ನು ಸ್ಥಾಪಿಸಿದ ಅವರು ಈಗ 71ರ ಏರು ಜವ್ವನಿಗ. ಈಗಲೂ ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುತ್ತಾ ಸ್ವಯಂಘೋಷಿತ ಜ್ಯೋತಿಷಿಗಳ, ದೇವಮಾನವರ, ಢೋಂಗಿ ಬಾಬಾಗಳ ವಂಚನೆಗಳನ್ನು ಬಯಲಿಗೆಳೆಯುತ್ತಾ ಬಂದಿದ್ದಾರೆ. ಪ್ರಸ್ತುತ ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

andolanait

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

1 hour ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

2 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

2 hours ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

2 hours ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

2 hours ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

2 hours ago