ಜಿಲ್ಲೆಗಳು

ವೇತನ ಆದೇಶ ಮರು ಜಾರಿಗೆ ಅತಿಥಿ ಉಪನ್ಯಾಸಕರ ಧರಣಿ

ಜನಪ್ರತಿನಿಧಿಗಳ ಪ್ರವೇಶದಿಂದ ಅಹೋರಾತ್ರಿ ಧರಣಿ ವಾಪಸ್: ಇಂದು ಸಂಸದ ಪ್ರತಾಪ್‌ಸಿಂಹ ಸಭೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಹೆಚ್ಚಿಸಿದ್ದ ವೇತನವನ್ನು ಒಂದು ತಿಂಗಳು ನೀಡಿ ಏಕಾಏಕಿ ವಾಪಸ್ ಪಡೆದಿರುವ ಜತೆಗೆ ಕುಲಪತಿಗಳು ಸರಿಯಾಗಿ ಉತ್ತರಿಸಿದ್ದರಿಂದ ಆಕ್ರೋಶಗೊಂಡು ಅತಿಥಿ ಉಪನ್ಯಾಸಕರು ಶುಕ್ರವಾರ ಅಹೋರಾತ್ರಿ ಧರಣಿ ಆರಂಭಿಸಿ ಜನಪ್ರತಿನಿಧಿಗಳ ಮಧ್ಯೆಪ್ರವೇಶದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.

ಸಂಸದ ಪ್ರತಾಪ್‌ಸಿಂಹ, ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ ಹಾಗೂ ಸಿಂಡಿಕೇಟ್ ಸದಸ್ಯೆ ಚೈತ್ರ ನಾರಾಯಣ್ ಅವರ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಸೋಮವಾರ ಹಣಕಾಸು ಅಧಿಕಾರಿಯೊಂದಿಗೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದರಿಂದ ಧರಣಿ ಹಿಂಪಡೆಯಲಾಗಿದೆ.

ಮೈಸೂರು ವಿವಿ ವ್ಯಾಪ್ತಿಯಲ್ಲಿ ೯೭೦ ಅತಿಥಿ ಉಪನ್ಯಾಸಕರು ಗಂಗೋತ್ರಿ, ವಿವಿ ಕಾಲೇಜುಗಳ ವ್ಯಾಪ್ತಿಯಲ್ಲಿ ಕಾರ‌್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ೧೮ ಸಾವಿರ ರೂ. ವೇತನ ಇದ್ದವರಿಗೆ ೨೪ ಸಾವಿರ ರೂ., ೨೩ ಸಾವಿರ ರೂ. ಇದ್ದವರಿಗೆ ೩೭ ಸಾವಿರ ರೂ.ಗೆ ಏರಿಸಿ ಹಿಂದಿನ ಕುಲಪತಿ ಪ್ರೊ.ಹೇಮಂತ್‌ಕುಮಾರ್ ಅವರ ಕಾಲದಲ್ಲಿ ಆದೇಶ ಹೊರಡಿಸಲಾಗಿತ್ತು. ಅದರಂತೆ ಅಕ್ಟೋಬರ್ ತಿಂಗಳ ವೇತನ ಹೊಸ ಆದೇಶದಂತೆ ಜಾರಿಯಾಗಿತ್ತು. ಆದರೆ ನವೆಂಬರ್ ತಿಂಗಳ ವೇತನ ಶುಕ್ರವಾರ ಬಿಡುಗಡೆಯಾಗಿದ್ದು. ಹಿಂದಿನಂತೆಯೇ ನೀಡಲಾಗಿತ್ತು. ಈ ಕುರಿತು ಮಾಹಿತಿ ಕೇಳಲು ಹೋದಾಗ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ. ಇದರಿಂದ ಬೇಸರಗೊಂಡ ೨೫೦ಕ್ಕೂ ಹೆಚ್ಚು ಉಪನ್ಯಾಸಕರು ಕ್ರಾಫರ್ಡ್ ಹಾಲ್ ಎದುರು ಮಧ್ಯಾಹ್ನ ೩.೩೦ಕ್ಕೆ ಪ್ರತಿಭಟನೆ ಆರಂಭಿಸಿದರು. ಇದಾದ ಕೆಲ ಹೊತ್ತಿನಲ್ಲೇ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಹನುಮಂತೇಶ್, ಸಂಚಾಲಕ ಡಾ.ಕೃಷ್ಣಕುಮಾರ್, ಡಾ.ಮನು, ಡಾ.ರಾಘವೇಂದ್ರ, ಡಾ.ಸ್ವಾಮಿ, ಡಾ.ಅರುಣ್, ಡಾ.ಚೈತ್ರ, ಡಾ.ರವೀಂದ್ರ, ಡಾ.ಮಹದೇವಪ್ರಸಾದ್, ಡಾ.ಅಭಿಲಾಷ್, ಡಾ.ರಮೇಶ್ ಮತ್ತಿತರರು ಕುಲಪತಿಗಳನ್ನು ಭೇಟಿ ಮಾಡಲು ಹೋದರು.

‘ವಿಶ್ವವಿದ್ಯಾನಿಲಯ ಆರ್ಥಿಕ ನಷ್ಟದಲ್ಲಿದೆ. ಎಲ್ಲರಿಗೂ ಸಂಬಳ ಕೊಡಲು ಆಗುತ್ತಿಲ್ಲ. ಇದರಿಂದ ಈ ಹಿಂದೆ ಅತಿಥಿ ಉಪನ್ಯಾಸಕರಿಗೆ ನೀಡಿದ ವೇತನ ಮುಂದುವರಿಸಲು ಆಗೋಲ್ಲ. ಇದನ್ನು ಹಣಕಾಸು ಸಮಿತಿಯಲ್ಲಿ ತೀರ್ಮಾನಿಸಿ ಜಾರಿಗೊಳಿಸಲಾಗಿದೆ’ ಎಂದು ಕುಲಪತಿ ಪ್ರೊ.ರಾಜಶೇಖರ್ ಹೇಳಿದರೂ ನಮ್ಮನ್ನು ಸರಿಯಾಗಿ ನಡಸಿಕೊಳ್ಳಲಿಲ್ಲ. ಏಕವಚನದಲ್ಲಿ ಮಾತನಾಡಿದರು ಎಂದು ಆಕ್ರೋಶಗೊಂಡು ಅಹೋರಾತ್ರಿ ಧರಣಿ ಆರಂಭಿಸಿ. ಆರು ಗಂಟೆ ಕಾಲ ಧರಣಿ ನಡೆಸಿದರು.

‘ನಾವು ನೆಟ್/ ಸ್ಲೆಟ್, ಪಿಎಚ್.ಡಿ. ಮುಗಿಸಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಕಡಿಮೆ ವೇತನದಲ್ಲಿ ಹೇಗೆ ಬದುಕು ನಡೆಸಲು ಸಾಧ್ಯ. ವಿವಿಯ ಸಿಂಡಿಕೇಟ್ ಜಾರಿಗೊಳಿಸಿ ಅನುಷ್ಠಾನಕ್ಕೆ ತಂದಿದ್ದ ಆದೇಶಕ್ಕೆ ಬೆಲೆ ಇಲ್ಲವೇ? ಮರು ಆದೇಶ ಜಾರಿಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲೋಲ್ಲ’ ಎಂದು ವಿಕಲಚೇತನರಾದ ಉಪನ್ಯಾಸಕ ಡಾ.ಶಿವಕುಮಾರ್ ಹೇಳಿದರು.

ವಿಷಯ ತಿಳಿದು ಸಿಂಡಿಕೇಟ್ ಸದಸ್ಯೆ ಚೈತ್ರ ನಾರಾಯಣ್ ಕುಲಪತಿಗಳ ಜತೆಗೆ ಮಾತನಾಡಿದರು. ಸಂಸದ ಪ್ರತಾಪ್‌ಸಿಂಹ, ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಮಾದೇಗೌಡ ದೂರವಾಣಿ ಮೂಲಕ ಕುಲಪತಿ ಜತೆಗೆ ಮಾತನಾಡಿದರು. ಅಲ್ಲದೇ ಪ್ರತಾಪ್‌ಸಿಂಹ ಶನಿವಾರವೇ ಖುದ್ದು ವಿವಿಗೆ ಭೇಟಿ ನೀಡಿ ಕುಲಪತಿ ಜತೆ ಮಾತನಾಡುವೆ ಎನ್ನುವ ಭರವಸೆ ನೀಡಿದರು.

ಸೋಮವಾರ ಗೊಂದಲ ಬಗೆಹರಿಸುವ ಭರವಸೆಯನ್ನು ಕುಲಪತಿ ನೀಡಿದ್ದರಿಂದ ರಾತ್ರಿ ೯.೩೦ಕ್ಕೆ ಧರಣಿ ಹಿಂಪಡೆಯಲಾಗಿದೆ.


ವಿವಿ ಜಾರಿಗೊಳಿಸಿದ ಆದೇಶ ಹಿಂಪಡೆದಿರುವ ಜತೆಗೆ ಮಾಹಿತಿ ಕೇಳಲು ಹೋದ ಉಪನ್ಯಾಸಕರ ಜತೆಗೆ ಕುಲಪತಿಗಳು ನಡೆದುಕೊಂಡ ರೀತಿ ಸರಿಯಲ್ಲ. ಇದನ್ನು ವಿರೋಧಿಸಿಯೇ ನಾವು ಅಹೋರಾತ್ರಿ ಧರಣಿ ಆರಂಭಿಸಿದ್ದೆವು. ಹಿಂದಿನ ಆದೇಶ ಜಾರಿಯಾಗದೇ ಇದ್ದರೆ ಸೋಮವಾರದಿಂದ ಮತ್ತೆ ಧರಣಿ ಆರಂಭಿಸುತ್ತೇವೆ.

-ಅತಿಥಿ ಉಪನ್ಯಾಸಕರು, ಮೈಸೂರು ವಿವಿ

andolanait

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

2 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

2 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

2 hours ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

2 hours ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

2 hours ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

2 hours ago