ಅಂಕಣಗಳು

ಹೆಣ್ಣು ದನಿಯ ದಿಟ್ಟ ಕೊರಳು ಚ.ಸರ್ವಮಂಗಳ

• ಶಭಾನ

“ಅಯ್ಯಾ ನನಗೊಂದು ಆಸೆ ಹಾಗೆ-ಹೀಗೆ ಹೆಣ್ಣು ಬುಗುರಿಯಾಡಿಸುವ ಇವುಗಳ ಕುಂಡಿಗೆ ಝಾಡಿಸಿ ಒದೆಯಬೇಕು ಒಮ್ಮೆಯಾದರೂ…” ಹೆಣ್ಣನ್ನು ಸಂಕಷ್ಟಕ್ಕೀಡುಮಾಡುವ ಗಂಡು ಜಗತ್ತಿನ ಮೇಲಿನ ಆಕ್ರೋಶವನ್ನು ಹೊರಹಾಕುವ ಈ ಕವಿತೆಯ ಸಾಲುಗಳು ಮೈಸೂರಿನ ಹಿರಿಯ ಕವಯಿತ್ರಿ ಚ.ಸರ್ವಮಂಗಳ ಅವರದು. ಕನ್ನಡ ಸಾಹಿತ್ಯದಲ್ಲಿ ಕಡಿಮೆ ಬರೆದರೂ, ಕನ್ನಡ-ಕರ್ನಾಟಕವನ್ನು ಪ್ರಭಾವಿಸಿದವರ ಸಾಲಿನಲ್ಲಿ ಚ. ಸರ್ವಮಂಗಳ ಅವರಿಗೆ ವಿಶಿಷ್ಟ ಸ್ಥಾನವಿದೆ.

‘ಅಮ್ಮನಗುಡ್ಡ’ (1988) ಕವನ ಸಂಕಲನದಿಂದ ಹೆಸರಾದ ಇವರು ನವ್ಯ ಹಾಗೂ ನವೋತ್ತರ ಕಾಲದಲ್ಲಿ ಬರೆಯಲು ಪ್ರಾರಂಭಿಸಿದ ಕನ್ನಡದ ದಿಟ್ಟ ಕವಯಿತ್ರಿಯರಲ್ಲಿ ಒಬ್ಬರು.

ಕ್ರಿಯಾಶೀಲ ಕನ್ನಡ ಅಧ್ಯಾಪಕಿಯಾಗಿ, ಕವಯಿತ್ರಿಯಾಗಿ, ಮಹಿಳಾಪರ ಹೋರಾಟಗಾರ್ತಿಯಾಗಿ, ರಂಗಭೂಮಿಯಲ್ಲೂ ತಮ್ಮದೇ ಆದ ಚಾಪು ಮೂಡಿಸಿದ ಇವರು ತಮ್ಮ ಕವಿತೆಗಳ ಉದ್ದಕ್ಕೂ ಗಂಡು ದನಿಯ ಆರ್ಭಟದಲ್ಲಿ ಹುದುಗಿ ಹೋಗಿರುವ ಸ್ತ್ರೀ ಮನದ ತೊಳಲಾಟಗಳನ್ನು ಸಶಕ್ತವಾಗಿ ಮುಂದಿಡುವ ಮೂಲಕ ಹೆಣ್ಣಿನ ಅಸ್ತಿತ್ವದ ಹುಡುಕಾಟವನ್ನೂ ನಡೆಸುತ್ತಾರೆ. ಸ್ತ್ರೀಯರಿಗೆ ಈ ಸಮಾಜ ಹೊರಿಸಿರುವ ಒಳ್ಳೆಯ ಹೆಂಡತಿ, ಒಳ್ಳೆಯ ಮಗಳು, ಒಳ್ಳೆಯ ತಾಯಿ, ಇತ್ಯಾದಿ ‘ಒಳ್ಳೆಯ’, ‘ಆದರ್ಶ’ದ ಯಾವ ಗೋಜಲುಗಳಲ್ಲೂ ಸಿಕ್ಕಿ ನರಳದೆ ತನ್ನ ಅಸ್ತಿತ್ವವನ್ನು ಕಂಡು ಕೊಳ್ಳಲು ನಿರಾಳವಾಗಿ ಮಾತನಾಡುವ ಸ್ತ್ರೀ ದನಿಯೊಂದನ್ನು ತಮ್ಮ ಕವನಗಳ ಜೀವದ್ರವ್ಯವಾಗಿಸಿದ್ದಾರೆ. ಪರಂಪರೆಗೆ ಅಂಟಿಕೊಳ್ಳದೆ ಮುಂದೆ ಸಾಗುವ ಇವರ ಕವಿತೆಗಳಿಗೆ ಖಚಿತ ನಿಲುವಿದೆ. ಅದಕ್ಕಾಗಿ ಅವರು ‘ತಡೆ’ ಕವನದಲ್ಲಿ ಹೇಳುವ- “ಅಮ್ಮಾ, ಸಾಕುಮಾಡೆ ನಿನ್ನ ಪುರಾಣ…

ಏನೇ ಹೇಳು ತೊಡೆ ಸಂಧಿಯಲ್ಲಿ ಬದುಕ ಹುದುಗಿಸಿ ಬದುಕಲಾರೆ, ನೀನು ಅಜ್ಜಿ ಸುತ್ತಿದ ವರ್ತುಲದಲ್ಲೇ ಸುತ್ತಲಾರೆ, ಕುತ್ತಿಗೆಗೊಂದು ಬಿಗಿದು ಹಿಡಿಯಬೇಡ ಅಮ್ಮಾ” ಎನ್ನುವ ಸಾಲುಗಳು ಕೇವಲ ನಾನು ನಿಮ್ಮಗಳ ಚೌಕಟ್ಟುಗಳ ಒಳಗೆ ಕಷ್ಟದ ಬದುಕ ಬದುಕಲಾರೆ ಎನ್ನುವ ಕೋರಿಕೆ/ಆಗ್ರಹದ ಜೊತೆಗೆ ‘ನನ್ನ ಬದುಕನ್ನಾದರೂ ನನಗಾಗಿ ಬಿಡುವಿರಾ’ ? ಎಂಬ ಪ್ರಶ್ನೆಯೂ ಆಗುತ್ತವೆ. ಹಾಗೆ ನೋಡಿದ್ದಲ್ಲಿ ಅಮ್ಮನ ಗುಡ್ಡ’ ಸಂಕಲನದ ಕವಿತೆಗಳು ಕೇವಲ ಕವಿತೆಗಳಷ್ಟೇ ಅಲ್ಲ, ಕವಯಿತ್ರಿಯ ಬದುಕೂ ಹೌದು ಎಂಬುದು ಅನೇಕ ಸಂದರ್ಭಗಳಲ್ಲಿ ಮನದಟ್ಟಾಗುತ್ತದೆ.

ಕವಯಿತ್ರಿ ತನ್ನ ಅನುಭವವನ್ನು ಅಭಿವ್ಯಕ್ತಿಸುವಾಗ ಎಲ್ಲಿಯೂ, ಯಾರ ಬಳಿಯೂ, ಯಾವುದಕ್ಕೂ ನಿವೇದನೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ಘಟಿಸಿ ಹೋದದನ್ನು ಟೀಕಿಸುತ್ತಲೇ ”ಕ್ಷಣ ತಿಕ್ಕಾಟದಲ್ಲಿ ಹೇಸಿಗೆ ನಡುವೆ ಹುಟ್ಟಿ ಅಲ್ಲಿಯೇ ಇನ್ನೂ ಗಿ‌ಗಿಟ್ಟೆ ಆಡುತ್ತಿರುವ ನನ್ನ ನಾನೇ ಅರಿವುದು’ ಮುಖ್ಯವೆನ್ನುತ್ತಾರೆ. ಹೆಣ್ಣು ಹೀಗೆ ತನ್ನ ಅಸ್ತಿತ್ವವನ್ನು ತಾನೇ ಕಟ್ಟಿಕೊಳ್ಳುವುದು ತನ್ನ ಗುರುತು ಏನೋ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಎಷ್ಟು ಮುಖ್ಯವೆನ್ನುವ ತಿಳಿವನ್ನು ಇವರ ಬಹುತೇಕ ಕವನಗಳಲ್ಲಿ ಗುರುತಿಸಬಹುದು.

ಇವರ ಗಮನಿಸಲೇಬೇಕಾದ ಅಥವಾ ಕನ್ನಡದ ಅಸಂಖ್ಯಾತ ಜನಮಾನಸ ಓದಿ-ಕೇಳಿರುವ ಅವನು ಬಸವ’ ಕವನವು ಲಿಂಗ ತಾರತಮ್ಯದ ಬಗೆಗಿನ ಸ್ಥಾಪಿತ ಧೋರಣೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತದೆ. ಹೆಣ್ಣು ಹೆಣ್ಣಾಗಿ ರೂಪಿತವಾಗುವಲ್ಲಿ ‘ಮನೆಯೇ ಮೊದಲ ಪಾಠಶಾಲೆ’ ಯಾಗಿರುವ ಪರಿಯನ್ನು, ಮಗನಾದ ಬಸವನಿಗೆ, ಮಗಳು ಕಮಲಳಿಗೆ ಕುಟುಂಬ ಕಲಿಸುವ ಪಾಠವನ್ನು ಅತ್ಯಂತ ಮೊನಚಾಗಿ ಪ್ರಶ್ನಿಸುತ್ತದೆ. ಮನೆ ಯಾರಿಗೆ ಮೊದಲ ಪಾಠ ಶಾಲೆ? ಯಾರಿಗೆ ಯಾವ ಪಾಠ ಇಲ್ಲಿ ಸಿಗುತ್ತದೆ? ಎಂಬ ಪ್ರಶ್ನೆಯನ್ನೂ ಓದುಗರಲ್ಲಿ ಹುಟ್ಟಿಸುತ್ತದೆ.

1948 ಏಪ್ರಿಲ್ 6ರಂದು ಶಿವಮೊಗ್ಗದಲ್ಲಿ ಜನಿಸಿದ ಇವರು ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ಈಗ ವಿಶ್ರಾಂತರಾಗಿದ್ದಾರೆ. ಇವರ ‘ಅಮ್ಮನ ಗುಡ್ಡ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ದಿನಕರ ದೇಸಾಯಿ ಪ್ರಶಸ್ತಿ ಲಭಿಸಿದೆ. ಸುಮಾರು 9 ಭಾಗಗಳಿಗೆ ಅನುವಾದಗೊಂಡಿರುವ ‘ಅಮ್ಮನಗುಡ್ಡ’ದ ನಂತರ ಇತರೆ ಸಂದರ್ಭಗಳಲ್ಲಿ ಬರೆದ ಕವಿತೆಗಳನ್ನು ಒಟ್ಟು ಸೇರಿಸಿ ಅಮ್ಮನ ಗುಡ್ಡ ಅಂತರಾಳ’ ಎಂಬ ಸಂಕಲನವನ್ನಿವರು ಹೊರ ತಂದಿದ್ದಾರೆ. ಇದಲ್ಲದೆ ಎರಡು ದಶಕಗಳ ಕಾವ್ಯ’, ‘ಚದುರಂಗ ವಾಚಿಕೆ’ ಎಂಬ ಕೆಲವು ಕೃತಿಗಳನ್ನು ಸಂಪಾದಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಿಂದಲೂ ಜನ ಚಳವಳಿಗಳಲ್ಲಿ ಸಕ್ರಿಯರಾಗಿರುವ ಚ. ಸರ್ವಮಂಗಳ ಅವರ ಅಭಿಮಾನಿ ಬಳಗ ಇವರಿಗೆ ‘ಕದಳಿಯ ಬೆರಗು’ ಎಂಬ ಅಕ್ಷರ ಬಾಗಿನವನ್ನು ಸಮರ್ಪಿಸಿದೆ.
(shabhanamys@gmail.com)

andolanait

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

5 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

6 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

7 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

10 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

11 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

11 hours ago