ಅಧಿಕಾರ ರಾಜಕಾರಣದ ಪರಾಕಾಷ್ಠೆ ಸಂಕೇತಿಸುವ ಮಹಾರಾಷ್ಟ್ರ ರಾಜಕೀಯ ವಿದ್ಯಮಾನ

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರ ಅತಂತ್ರವಾಗಿದೆ. ವಾರಾರಂಭದ ವಿದ್ಯಮಾನಗಳನ್ನು ಗಮನಿಸಿದರೆ ಸರ್ಕಾರ ಉಳಿಯುವ ಸಾಧ್ಯತೆಗಳು ಕ್ಷೀಣಿಸಿವೆ, ಯಾವ ಕ್ಷಣದಲ್ಲಾದರೂ ಸರ್ಕಾರ ಬೀಳಬಹುದು. ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸದಂತೆ ಮಹಾರಾಷ್ಟ್ರ ಉಪ ಸ್ಪೀಕರ್ ನರಹರಿ ಜೀರ್ವಾಲ್ ಅವರಿಗೆ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿದೆ. ಇದರೊಟ್ಟಿಗೆ ಸರ್ಕಾರವು ಸ್ಥಿರತೆಯಿಂದ ಬಹುದೂರ ಸಾಗಿ ಅಸ್ಥಿರತೆಗೆ ಬಹಳ ಸಮೀಪವಾಗಿಬಿಟ್ಟಿದೆ.

೨೦೧೯ರಲ್ಲಿ ಸೈದ್ಧಾಂತಿಕ ವೈರುದ್ಧ್ಯಗಳಿರುವ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಒಗ್ಗೂಡಿ ರಚಿಸಿದ ಸರ್ಕಾರ ತನ್ನ ಪೂರ್ಣ ಅವಧಿ ಪೂರೈಸುವ ಯಾವ ನಿರೀಕ್ಷೆಯು ಉಳಿದಿಲ್ಲ. ಈ ಎಲ್ಲಾ ಬೆಳವಣಿಗೆಗಳು ನಿರೀಕ್ಷಿತವೇ. ಆದರೆ, ರಾಜಕೀಯ ಪಲ್ಲಟಗಳ ಸ್ವರೂಪ ಬೇರೆಯಾಗಿದೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದ ಸೂತ್ರದಾರರು ದೆಹಲಿಯ ಬಿಜೆಪಿ ನಾಯಕರು ಎಂಬುದು ಗುಟ್ಟಾಗಿ ಉಳಿದಿಲ್ಲ. ೨೦೧೯ರಲ್ಲಿ ನವೆಂಬರ ೨೩ರಂದು ನಿಕಟಪೂರ್ವ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದ್ದರು. ಪ್ರಮಾಣ ವಚನ ಬೋಧಿಸಿದ್ದು ಬೆಳಿಗ್ಗೆ ೭.೩೦ರ ಹೊತ್ತಿಗೆ. ಆಗ ಎನ್‌ಸಿಪಿಯ ಅಜಿತ್ ಪವಾರ್ ಅವರಿಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಲಾಗಿತ್ತು.
೨೦೧೯ ಅಕ್ಟೋಬರ್ ೨೪ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದರೂ ತಿಂಗಳಿಡೀ ಸರ್ಕಾರ ರಚನೆಗೆ ಕಸರತ್ತು ನಡೆದಿತ್ತು. ಬಿಜೆಪಿ- ಶಿವಸೇನಾ ಮೈತ್ರಿಗೆ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಗಾದಿ ಹಂಚಿಕೊಳ್ಳುವ ವಿಚಾರದಲ್ಲಿ ಬಿಜೆಪಿ ತಕರಾರು ತೆಗೆದೆತ್ತು. ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಬಿಜೆಪಿ ಬಿಲ್‌ಕುಲ್ ಒಪ್ಪಿರಲಿಲ್ಲ. ಆದರೆ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ತಮ್ಮ ಪಟ್ಟು ಬಿಡಲಿಲ್ಲ. ಈ ನಡುವೆ ಅಜಿತ್ ಪವಾರ್ ಅವರನ್ನು ಹೇಗೋ ಒಪ್ಪಿಸಿದ್ದ ಬಿಜೆಪಿಗೆ ಆಘಾತ ಕಾದಿತ್ತು. ಎನ್‌ಸಿಪಿ ನಾಯಕ ಶರದ್ ಪವಾರ್ ಅಜಿತ್ ಪವಾರ್ ಮಾಡಿಕೊಂಡಿದ್ದ ಬಿಜೆಪಿ ಜತೆಗಿನ ಮೈತ್ರಿ ತಿರಸ್ಕರಿಸಿದ್ದರು. ಅಜಿತ್ ಪವಾರ್ ಬಿಜೆಪಿ ಸಖ್ಯ ತೊರೆದು ವಾಪಾಸಾಗಿದ್ದರು. ಆಗ ಬಿಜೆಪಿ ತನ್ನ ರಾಜಕೀಯ ಜೀವನದ ಮಹಾ ಮುಜುಗರವನ್ನು ಅನುಭವಿಸಿತ್ತು. ಆ ಮುಜುಗರದ ಕಿಚ್ಚನ್ನು ಈಗ ತಣಿಸಿಕೊಳ್ಳಲು ಬಿಜೆಪಿ ಮುಂದಾಗಿರುವಂತಿದೆ. ಶಿವಸೇನೆ ಶಾಸಕರನ್ನು ಏಕ್‌ನಾಥ್ ಸಿಂಧೆ ಸಾರಥ್ಯದಲ್ಲಿ ತಮ್ಮದೇ ಸರ್ಕಾರ ಇರುವ, ತೀವ್ರ ಪ್ರವಾಹ ಪೀಡಿತವಾಗಿರುವ ಅಸ್ಸಾಂ ರಾಜ್ಯದ ಗುವಾಹಟಿಗೆ ರವಾನಿಸಿದೆ.

ಹೇಗಾದರೂ ಬಿಜೆಪಿ ಮಣಿಸಲೇ ಬೇಕೆಂಬ ಹಠದಿಂದ ಒಗ್ಗೂಡಿ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಒಗ್ಗೂಡಿ ಮಹಾ ವಿಕಾಸ ಅಘಾಡಿ ರಚಿಸಿಕೊಂಡವು. ಸಮಾಜವಾದಿ ಪಾರ್ಟಿ, ಬಹುಜನ ವಿಕಾಸ ಅಘಾಡಿ, ಪ್ರಹಾರ್ ಜನಶಕ್ತಿ ಪಾರ್ಟಿ, ಪಿಡಬ್ಲ್ಯೂಪಿ ಅಲ್ಲದೇ ಎಂಟು ಮಂದಿ ಪಕ್ಷೇತರರು ಅಘಾಡಿಗೆ ಕೈಜೋಡಿಸಿದ್ದರು.

ಕೋವಿಡ್ ನಡುವೆಯೇ ಮಧ್ಯಪ್ರದೇಶದಲ್ಲಿ ರಾಜಕೀಯ ತಂತ್ರಗಾರಿಕೆ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ತನ್ನದೇ ಸರ್ಕಾರ ರಚಿಸಿಕೊಂಡಿದ್ದ ಬಿಜೆಪಿ ಬಗ್ಗೆ ಎಂವಿಎ ಮಿತ್ರ ಪಕ್ಷಗಳು ಎಚ್ಚರಿಕೆಯಿಂದಲೇ ಇದ್ದವು. ಆದರೆ, ಬಿಜೆಪಿ ಮಾತ್ರ ತನ್ನ ತಂತ್ರಗಾರಿಕೆಯನ್ನು ಬಿಟ್ಟಿರಲೇ ಇಲ್ಲ. ಇಡಿ, ಸಿಬಿಐ ದಾಳಿ ಸೇರಿದಂತೆ ಎಲ್ಲಾ ವಿಧವಾದ ಅಧಿಕಾರವನ್ನು ಬಳಸಿಕೊಂಡಿತು. ಎಷ್ಟರ ಮಟ್ಟಿಗೆ ಎಂದರೆ ಈ ರಾಜಕೀಯ ದೊಂಬರಾಟಗಳ ನಡುವೆಯೇ ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಗೆ ಇಡಿ ವಿಚಾರಣೆ ಬರುವಂತೆ ಸೂಚನೆ ನೀಡಿದೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳಲ್ಲೂ ತನ್ನ ಅಧಿಕಾರವನ್ನು ವಿಸ್ತರಿಸುವ ಯಜ್ಞ ಆರಂಭಿಸಿತ್ತು. ಬಿಹಾರ,
ಅರುಣಾಚಲ ಪ್ರದೇಶ, ಮಣಿಪುರ, ಗೋವಾ, ಮಧ್ಯಪ್ರದೇಶ, ಕರ್ನಾಟಕ ಹೀಗೆ ಅರ್ಧ ಡಜನ್ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡು ಇಲ್ಲವೇ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದೆ. ೨೦೧೪ರಲ್ಲಿ ಪಿಡಿಪಿ ಜತೆ ಸೇರಿ ಜಮ್ಮ ಕಾಶ್ಮೀರದಲ್ಲಿ ಸರ್ಕಾರ ರಚಿಸಿದ್ದ ಬಿಜೆಪಿ ೨೦೧೮ರಲ್ಲಿ ಪಿಡಿಪಿಯನ್ನು ದೂರವಿಟ್ಟು ರಾಷ್ಟ್ರಪತಿ ಆಡಳಿತ ಹೇರಿತ್ತು.
೨೦೧೯ರಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರ ಗ್ರಹಿಸಲಾಗದೇ ಹತಾಶಗೊಂಡಿದ್ದ ಬಿಜೆಪಿ ಇದೀಗ ಶಿವಸೇನೆಯಲ್ಲಿ ಬಂಡಾಯ ಎಬ್ಬಿ ಸಿ ಅಧಿಕಾರ ಗ್ರಹಿಸಲು ಕಾಯುತ್ತಿದೆ. ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈ ಇರುವ ಮಹಾರಾಷ್ಟ್ರದಲ್ಲಿ ಅಧಿಕಾರ ಇಲ್ಲದೇ ಬಿಜೆಪಿ ಈ ೩೨ ತಿಂಗಳ ಕಾಲ ತಹತಹಿಸುತ್ತಿತ್ತು.

ಅಧಿಕಾರದ ಆಮಿಷ, ಇಲ್ಲವೇ ಇಡಿ, ಸಿಬಿಐ ಬೆದರಿಕೆ ಯಾವುದನ್ನಾದರೂ ಬಳಸಿ ಮಣಿಸುವುದು ಅಧಿಕಾರಸ್ತರಿಗೆ ಕರತವಾಗಿದೆ. ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾತಂತ್ರದ ಅಣಕದಂತೆ ಕಾಣುತ್ತಿವೆ. ಇಂತಹ ಬೆಳವಣಿಗೆಗಳಿಂದಾಗಿಯೇ ಜನರು ಮತಾದಾನದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ಅಧಿಕಾರ ರಾಜಕಾರಣ ಮಾಡಿದರೆ ತಪ್ಪಿಲ್ಲ. ಆದರೆ, ಸದಾ ಕಾಲ ಅಧಿಕಾರ ರಾಜಕಾರಣ ಮಾಡುತ್ತಲೇ ಇದ್ದರೆ ನೈತಿಕ ರಾಜಕಾರಣಕ್ಕೆ ಸೋಲಾಗುತ್ತದೆ. ನೈತಿಕ ರಾಜಕಾರಣದ ಸೋಲು ಎಂದರೆ ಪ್ರಜಾಪ್ರಭುತ್ವದ ಸೋಲೇ. ಮಹಾರಾಷ್ಟ್ರದ ವಿದ್ಯಮಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನೆಲೆಯಲ್ಲಂತೂ ಇಲ್ಲ ಎಂಬುದು ವಾಸ್ತವಿಕ ಕಹಿ ಸತ್ಯ.

andolana

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

6 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

7 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

8 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

11 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

12 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

12 hours ago