ಹಲವು ದಶಕಗಳ ಹೋರಾಟದಿಂದ ಎರಡೂವರೆ ವರ್ಷಗಳ ಹಿಂದೆ ನನಸಾದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀರಾಮ ಮಂದಿರದಗಿರುವ ಭಕ್ತರ ಕಾಣಿಕೆಯ ಲೂಟಿ ಮತ್ತು ಅಧಿಕಾರ ದುರುಪಯೋಗದ ಪ್ರಕರಣವೇ ಈಗ ರಾಷ್ಟ್ರಮಟ್ಟದಲ್ಲಿ ನಿತ್ಯ ನಿರಂತರ ಚರ್ಚೆಯ ವಿಷಯವಾಗಿದೆ. ಸುಮಾರು ೨೦೦ ಕೋಟಿರೂ.ಗಳಷ್ಟು ರಾಮಮಂದಿರದ ಹುಂಡಿಯ ಕಾಣಿಕೆ ದೇವಾಲಯದ ಆಡಳಿತ ಸಿಬ್ಬಂದಿಯಿಂದಲೇ ಲೂಟಿಯಾಗಿರುವ ಸಂಗತಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ವಾಸ್ತವ.
ಎರಡೂವರೆ ವರ್ಷಗಳ ಹಿಂದೆ ತಲೆ ಎತ್ತಿದ ಈ ಭವ್ಯ ಮಂದಿರವನ್ನು ನೋಡಿ ಕಣ್ತುಂಬಿಕೊಳ್ಳಲು ಮತ್ತು ಶ್ರೀರಾಮ ಮತ್ತೆ ತನ್ನ ಹುಟ್ಟಿದ ಜಗದಲ್ಲಿ ಅವತರಿಸಿದ ಎನ್ನುವ ನಂಬಿಕೆಯಿಂದ ನಿತ್ಯವೂ ದೇಶದಾದ್ಯಂತದಿಂದ ಬಂದು ಹೋಗುವ ಭಕ್ತರು ತಮ್ಮ ಗಾಢವಾದ ನಂಬಿಕೆ ಮತ್ತು ಶ್ರದ್ಧೆಯಿಂದ ಹುಂಡಿಗೆ ಹಾಕಿದ ಹಣ ಆ ದೇವರಿಗೆ ಸಲ್ಲುತ್ತದೆ ಎಂದುಕೊಂಡವರಿಗೆ ಈಗ ಬೆಳಕಿಗೆ ಬರುತ್ತಿರುವ ಹಗರಣದ ಮಾಹಿತಿ ಆಘಾತವನ್ನೇ ಉಂಟು ಮಾಡಿದೆ.
ಉತ್ತರ ಪ್ರದೇಶ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡವು ಬಗೆದಷ್ಟು ಹೊರ ಬರುತ್ತಿರುವ ಅವ್ಯವಹಾರ ಭಕ್ತರ ನಂಬಿಕೆಯನ್ನೇ ಅಲುಗಾಡಿಸುತ್ತಿದೆ. ಇಲ್ಲಿ ದೇವರ ಮೇಲಿನ ನಂಬಿಕೆಯೇ ಬೇರೆ, ಈ ಮಂದಿರವನ್ನು ನಿರ್ಮಿಸಿ, ಅದರ ನಿತ್ಯದ ಆಡಳಿತವನ್ನು ನಡೆಸಿಕೊಂಡು ಬರುತ್ತಿರುವವರ ನಡೆಯೇ ಬೇರೆ. ಸನಾತನ ಧರ್ಮದ ಪುನರುತ್ಥಾನದ ಈ ಕನಸಿನ ರಾಮಮಂದಿರದಲ್ಲಿ ಇಷ್ಟು ಬೇಗ ಇಂತಹ ಅವ್ಯವಹಾರ ನಡೆಯುತ್ತದೆ ಎಂದು ಯಾರೂ ಭಾವಿಸಿರಲಾರರು.ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿನ ನಂಬಿಕೆಗೆ ಧಕ್ಕೆ ಆಗದಿದ್ದರೂ ಅದನ್ನು ನಡೆಸಿಕೊಂಡು ಹೋಗುವವರ ಆಡಳಿತ ವ್ಯವಸ್ಥೆಯ ಮೇಲೆ ಭಕ್ತರ ಅನುಮಾನ ನಿರಂತರವಾಗಿ ಕಾಡುವುದನ್ನು ತಳ್ಳಿಹಾಕಲಾಗದು.
ಈಗ ನಿತ್ಯವೂ ಹೊರ ಬರುತ್ತಿರುವ ಸುದ್ದಿಗಳ ಪ್ರಕಾರ, ಹುಂಡಿ ಕಾಣಿಕೆಯಿಂದ ಪ್ರತಿ ದಿನವೂ ೧೬ ಲಕ್ಷದಿಂದ ೧೮ ಲಕ್ಷ ರೂಪಾಯಿ ನಗದು ಸಂಗ್ರಹವಾಗುತ್ತಿತ್ತು. ಈ ಹುಂಡಿ ಹಣದಲ್ಲಿ ಕಳ್ಳತನವಾಗುವುದನ್ನು ಮಂದಿರದ ಕಾಣಿಕೆಯ ಲೆಕ್ಕಾಚಾರವನ್ನು ನೋಡಿಕೊಳ್ಳುತ್ತಿದ್ದ ವಿಭಾಗದ ಮಾಜಿ ಅಕೌಂಟ್ ಸೂಪರ್ ವೈಸರ್ ಸಿಸಿ ಟಿವಿಯಲ್ಲಿ ಗಮನಿಸಿದ್ದು ಈ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಂಡರು.
ಸಮಾಜವಾದಿ ಪಕ್ಷದ ಶಾಸಕ ಪವನ್ ಪಾಂಡೆ, ಮಂದಿರದ ಕಾಣಿಕೆಯ ಹುಂಡಿಗಳಿಂದ ಸುಮಾರು ೭ರಿಂದ ೮ ಕೋಟಿ ರೂ.ಗಳಷ್ಟು ಹಣದ ಲೂಟಿ ನಡೆದಿರುವುದನ್ನು ಮಾಧ್ಯಮದ ಮೂಲಕ ಬೆಳಕಿಗೆ ತಂದರು. ಇದನ್ನಾಧರಿಸಿ ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತಷ್ಟು ವಿವರಗಳೊಡನೆ ಸಾರ್ವಜನಿಕವಾಗಿ ಕಾಣಿಕೆ ಲೂಟಿಯನ್ನು ಬೆಳಕಿಗೆ ತಂದರು.
ಈ ಹಗರಣದ ಬಗೆಗೆ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಆಗ್ರಹಪಡಿಸಿದ್ದನ್ನು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಲ್ಲಗಳೆದರು. ಅಂತಹ ಯಾವುದೇ ಭಕ್ತರ ಕಾಣಿಕೆಯ ಲೂಟಿ ನಡೆದಿಲ್ಲ ಎಂದು ಪ್ರಕರಣದಿಂದ ನುಣುಚಿಕೊಳ್ಳುವ ಯತ್ನ ಮಾಡಿದ್ದು ಮುಂದೆ ಅದೇ ಅವರಿಗೇ ತಿರುಗುಬಾಣವಾಯಿತು.
ಅಚ್ಚರಿಯ ಸಂಗತಿ ಎಂದರೆ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಿನಕ್ಕೆ ಸಂಗ್ರಹವಾಗುತ್ತಿದ್ದ ಸುಮಾರು ೧೮ ಲಕ್ಷ ರೂಪಾಯಿ ಕಾಣಿಕೆ ಕದಿಯುವುದು ನಿಲ್ಲುತ್ತಿದ್ದಂತೆ ಕಾಣಿಕೆಯ ಮೊತ್ತ ೨೫ ಲಕ್ಷರೂ.ಗೆ ಹೆಚ್ಚಿತು.ಜೂನ್ ೮ರಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಬಗೆಗೆ ಮಾಹಿತಿ ನೀಡಬೇಕೆಂದು ಟ್ರಸ್ಟ್ ಗೆ ಕೇಳಿತು. ಮಾಜಿ ಅಕೌಂಟೆಂಟ್ ಸೂಪರ್ ವೈಸರ್ ನೀಡಿದ ಸಿಸಿಟಿವಿ ಮಾಹಿತಿಯು ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟ್ರಸ್ಟ್ , ಉತ್ತರ ಪ್ರದೇಶದ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯ ಅಚ್ಚರಿ ಪಡುವಂತಾಯಿತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಪ್ರಕರಣದ ತನಿಖೆಗೆ ಮೂವರ ಎಸ್ ಐ ಟಿ ಯನ್ನು ನೇಮಿಸಿ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎದುರಾಗುವ ಸಮಸ್ಯೆಯಿಂದ ಸದ್ಯಕ್ಕೆ ಬಚಾವ್ ಆದರು.
ಈ ಎಸ್ಐಟಿ ತನ್ನ ತನಿಖೆ ಆರಂಭಿಸಿದ ನಂತರ ಆರ್ಎಸ್ಎಸ್ ಮೂಲದಿಂದ ಬಂದ ರಾಮ ಜನ್ಮ ಭೂಮಿ ಟ್ರಸ್ಟ್ ನ ಮಾಜಿ ಟ್ರಸ್ಟಿ ಅನಿಲ್ ಕುಮಾರ್ ಮಿಶ್ರಮತ್ತು ವಿಎಚ್ಪಿ ಮೂಲದ ಚಂಪತ್ ರಾಯ್ ಮುಖ್ಯ ಪಾತ್ರಧಾರಿಗಳು ಎನ್ನುವುದು ಬೆಳಕಿಗೆ ಬಂದಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಸಂಘ- ಸಂಸ್ಥೆಗಳ ಧಾರ್ಮಿಕ ನಾಯಕರೇ ಈ ಹಗರಣದ ರೂವಾರಿಯಾಗಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದು ಅಚ್ಚರಿಯ ಸಂಗತಿ. ಆರ್ ಎಸ್ ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮಾಜಿ ನಾಯಕರಿಬ್ಬರು ಪ್ರಮುಖ ಆರೋಪಿಗಳು ಎನ್ನುವುದು ಸಂಘ ಪರಿವಾರದ ಈ ಎರಡೂ ಸಂಸ್ಥೆಗಳನ್ನು ಬೆಚ್ಚಿ ಬೀಳಿಸಿದೆ. ಎಸ್ ಐ ಟಿ ಈಗಾಗಲೇ ಅನಿಲ್ ಮಿಶ್ರ ಮತ್ತು ಚಂಪತ್ ರಾಯ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುರಿಸಿ ಮತ್ತೆ ಬರಲಿರುವ ಸತ್ಯ ಸಂಗತಿಯ ಬಗೆಗೆ ಹಲವರು ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣದ ಆರೋಪಗಳಿಂದ ದೂರವಾಗಲು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ತಮ್ಮ ಮೌನ ಮುರಿದು ಪ್ರತ್ಯೇಕ ಹೇಳಿಕೆಗಳನ್ನು ನೀಡಿ ಈ ಘಟನೆ ಹಿಂದೂ ಸಮಾಜದ ಭಾವನೆಗೆ ಧಕ್ಕೆ ತಂದಿದೆ. ಯಾರೇ ತಪ್ಪು ಮಾಡಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹೇಳುವ ಮೂಲಕ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅಂತರವನ್ನು ಕಾಯ್ದುಕೊಂಡಿರುವುದು ನಿರೀಕ್ಷಿತ ಬೆಳವಣಿಗೆ.
ಆದರೆ ವೈಯಕ್ತಿಕ ಆಸಕ್ತಿವಹಿಸಿ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕರಣ ಬೆಳಕಿಗೆ ಬಂದು ಎರಡು ವಾರಗಳಾಗಿದ್ದರೂ ಮೌನವಹಿಸಿರುವುದನ್ನು ಪ್ರತಿಪಕ್ಷಗಳು ನಿತ್ಯವೂ ಟೀಕಿಸಲು ಶುರುಮಾಡಿರುವುದು ಸಹಜವಾಗಿ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ತನ್ನ ಆಡಳಿತದಲ್ಲಿ ನಾ ಖಾವುಂಗಾ, ನಾ ಖಾನೆ ದೂಂಗಾ (ನಾನು ತಿನ್ನುವುದಿಲ್ಲ, ತಿನ್ನುವವರನ್ನು ಬಿಡುವುದಿಲ್ಲ) ಎನ್ನುವ ಭ್ರಷ್ಟಾಚಾರ ವಿರೋಽ ಹೇಳಿಕೆ ಬಗೆಗೆ ಪ್ರತಿಪಕ್ಷಗಳು ವ್ಯಂಗ್ಯವಾಡಲು ಶುರು ಮಾಡಿವೆ.
ಈ ಹಗರಣದಿಂದ ಆತಂಕಕ್ಕೀಡಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆ ಸನಾತನ ಧರ್ಮದ ಸಂಕೇತ. ಈ ಹರಣವನ್ನು ಬಳಸಿಕೊಂಡು ಅಯೋಧ್ಯೆ ರಾಮಮಂದಿರದ ಹೆಸರಿಗೆ ಕಳಂಕ ತರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿರುವುದು ಪ್ರತಿಪಕ್ಷಗಳ ನಾಯಕರನ್ನು ಮತ್ತಷ್ಟು ಕೆರಳಿಸಿದೆ. ಎಸ್ ಐ ಟಿ ಮೂಲಕ ಈ ಹಗರಣವನ್ನು ಮುಚ್ಚುವ ಸಾಧ್ಯತೆ ಇರುವುದರಿಂದಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ವಿಚಾರಣೆ ನಡೆಸಬೇಕು. ಎಸ್ ಐ ಟಿ ತನಿಖೆ ಕೇವಲ ಕಣ್ಣೊರೆಸುವ ತಂತ್ರ .
ಆದ್ದರಿಂದ ನ್ಯಾಯಾಲಯವೇ ಮುಂದೆ ಬಂದು ಸ್ವಯಂ ತನಿಖೆ ಆರಂಭಿಸಬೇಕೆಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ. ಈ ಬಗೆಗೆ ತನಿಖೆ ಕೋರಿ ಸುಪ್ರೀಂ ಕೋರ್ಟಿಗೆ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದು ತುರ್ತು ವಿಚಾರಣೆ ಬೇಡಿಕೆಯನ್ನು ನ್ಯಾಯಾಲಯ ತಳ್ಳಿಹಾಕುವ ಮೂಲಕ ಸದ್ಯಕ್ಕೆ ಇದರಿಂದ ಆಕಾಶವೇನೂ ಕಳಚಿ ಬೀಳುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲೆಂದು ನಂಬಿರುವವರಿಗೆ ನಿರಾಶೆ ಉಂಟು ಮಾಡಿದೆ. ರಾಮ ಮಂದಿರ ನಿರ್ಮಾಣದ ಕನಸು ನನಸಾಗಲಿ ಎನ್ನುವ ಹೋರಾಟಕ್ಕೆ ನಾವು ನಲ್ವತ್ತು ವರ್ಷ ನಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡಿದ್ದೇವೆ. ಈ ಹುಂಡಿ ಹಗರಣ ನಮ್ಮ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದೆ. ನಮ್ಮ ಹೋರಾಟ ಮತ್ತು ತ್ಯಾಗವನ್ನು ನೆನಪಿಸಿಕೊಂಡರೆ ನಮಗಾಗುವ ನೋವು ಅಷ್ಟಿಷ್ಟಲ್ಲ ಎಂದು ವಿಎಚ್ ಪಿ ಸಂಘಟನೆಯ ಅಂತರ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ನೋವು ತೋಡಿಕೊಂಡಿದ್ದಾರೆ.
ರಾಮಮಂದಿರದ ಹಣಕಾಸು ಅವ್ಯವಹಾರ ಕುರಿತಂತೆ ಕೆಲವು ತಿಂಗಳ ಹಿಂದೆ ಮಾಹಿತಿ ಆಯೋಗದ ಮೂಲಕ ಉತ್ತರಿಸಿರುವ ಕೇಂದ್ರ ಗೃಹ ಇಲಾಖೆ, ಶ್ರೀರಾಮಮಂದಿರದ ಆಡಳಿತ ಸ್ವತಂತ್ರ ಧಾರ್ಮಿಕ ಸಂಸ್ಥೆಯದಾಗಿದ್ದು, ಅದರ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ತನ್ನ ಹೊಣೆಗಾರಿಕೆಯಿಂದ ಕೈತೊಳೆದುಕೊಂಡಿತು. ಆದರೆ ಸಾವಿರಾರು, ಲಕ್ಷಾಂತರ ರೂಪಾಯಿ ಮತ್ತು ಬೆಲೆಬಾಳುವ ಆಭರಣವನ್ನು ಭಕ್ತಿಯಿಂದ ಸಲ್ಲಿಸಿರುವ ಭಕ್ತರ ಭಾವನೆಗಳಿಗೆ ಸ್ಪಂದಿಸಿ ಅವರಲ್ಲಿ ಮತ್ತೆ ಮಂದಿರದ ಆಡಳಿತದ ಬಗೆಗೆ ವಿಶ್ವಾಸ ಮೂಡಿಸಲು ಕೇಂದ್ರ ಸರ್ಕಾರ ಅಖಾಡಕ್ಕಿಳಿಯುವುದು ಅನಿವಾರ್ಯ. ಏಕೆಂದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿವಸೇನೆ ನೀಡಿದ ಕೋಟಿ ರೂಪಾಯಿ, ಕಾಂಗ್ರೆಸ್ಸಿನ ನಾಯಕ ದಿಗ್ವಿಜಯ್ ಸಿಂಗ್ ತಾವು ನೀಡಿರುವ ೧.೧೦ ಕೋಟಿರೂ.ಗಳಿಗೆ ಲೆಕ್ಕ ಕೊಡಿ ಎಂದು ಬೇಡಿಕೆ ಇಟ್ಟಿzರೆ. ಇಂತಹ ಬೇಡಿಕೆಗಳು ಮುಂದಿನ ದಿನಗಳಲ್ಲಿ ಹೆಚ್ಚಾದರೆ ಅಚ್ಚರಿ ಇಲ್ಲ.
” ಅಚ್ಚರಿಯ ಸಂಗತಿ ಎಂದರೆ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಿನಕ್ಕೆ ಸಂಗ್ರಹವಾಗುತ್ತಿದ್ದ ಸುಮಾರು ೧೮ ಲಕ್ಷ ರೂಪಾಯಿ ಕಾಣಿಕೆ ಕದಿಯುವುದು ನಿಲ್ಲುತ್ತಿದ್ದಂತೆ ಕಾಣಿಕೆಯ ಮೊತ್ತ ೨೫ ಲಕ್ಷರೂ.ಗೆ ಹೆಚ್ಚಿತು. ಜೂನ್ ೮ರಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಬಗೆಗೆ ಮಾಹಿತಿ ನೀಡಬೇಕೆಂದು ಟ್ರಸ್ಟ್ ಗೆ ಕೇಳಿತು. ಮಾಜಿ ಅಕೌಂಟೆಂಟ್ ಸೂಪರ್ ವೈಸರ್ ನೀಡಿದ ಸಿಸಿಟಿವಿ ಮಾಹಿತಿಯು ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟ್ರಸ್ಟ್ , ಉತ್ತರ ಪ್ರದೇಶದ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯ ಅಚ್ಚರಿ ಪಡುವಂತಾಯಿತು.”
ಆರ್.ಪಿ.ವೆಂಕಟೇಶಮೂರ್ತಿ ಬೆಂಗಳೂರು ಮತ್ತು ಸುತ್ತಮುತ್ತಲಿನ ದುಃಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆ ಇದೆ, ರಾಜಕೀಯ ನಾಯಕರು ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು.…
ಕೆ.ಎಸ್.ಚಂದ್ರಶೇಖರ ಮೂರ್ತಿ ‘ಸಂವಿಧಾನಬದ್ಧ ಪ್ರಕ್ರಿಯೆ; ಕಾರ್ಯವಿಧಾನದ ಬಗ್ಗೆ ಅಸಮಾಧಾನ’ ಸಾಹಿತಿಗಳು, ಗಣ್ಯರು, ಮುಖಂಡರ ಅಭಿಪ್ರಾಯ ಮೈಸೂರು: ಭಾರತೀಯ ಚುನಾವಣಾ ಆಯೋಗದ…
ಮೈಸೂರು : ಸಮಾಜದಲ್ಲಿ ನಾನಾ ಕಾರಣಗಳಿಂದ ನೊಂದ ಪುರುಷರ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು…
ಮೈಸೂರು : ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ. ಗುಂಪು ಗುಂಪಾಗಿ ಮತದಾರರ ಪಟ್ಟಿ ಪರಿಷ್ಕರಣೆ…
ಎಚ್.ಎಸ್.ದಿನೇಶ್ ಕುಮಾರ್ ನಿತ್ಯಾನಂದ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪಶ್ಚಾತ್ತಾಪದ ಕಣ್ಣೀರು ಮೈಸೂರು: ನಗರದ ಕುವೆಂಪುನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ನಿತ್ಯಾನಂದ…