ಸಂಪಾದಕೀಯ : ಭಾರತ್ ಮಾಲಾ ಫೇಸ್-2 ನಲ್ಲಿ ಮೈಸೂರಿಗೆ ಪೆರಿಫೆರಲ್ ರಿಂಗ್ ರೋಡ್

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಮತ್ತೊಂದು ಫೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಐತಿಹಾಸಿಕವಾದ ತೀರ್ಮಾನವನ್ನು ಕೈಗೊಂಡು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಡಿ ಇಟ್ಟಿದೆ. ಮುಂದಿನ ೨೦ ವರ್ಷಗಳಲ್ಲಿ ನಗರದ ಬೆಳವಣಿಗೆಯನ್ನು  ಗಮನದಲ್ಲಿಟ್ಟುಕೊಂಡು ವ್ಯಾಪ್ತಿಯ ಒಳಗೆ ಮತ್ತು ಹೊರಗೆ, ಸುಗಮ ಸಮತ್ತು ವೇಗ ಸಂಚಾರಕ್ಕೆ ಅನುಕೂಲವಾಗುವಂತೆ ಮತ್ತು ಮಹಾಯೋಜನೆ ೨೦೩೧ರಲ್ಲಿ ಪ್ರಸ್ತಾಪಿಸಿರುವಂತೆ ೭೩.೨೫ ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರೋಡ್ (ಹೊರ ವರ್ತುಲ ರಸ್ತೆ) ಅನ್ನು ಅಭಿವೃದ್ಧಿಪಡಿಸಲು ೧೯೭೧ ಕೋಟಿ ರೂ. ಅಂದಾಜಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಮೈಸೂರು  ಅಭಿವೃದ್ಧಿಯ ಮತ್ತೊಂದು ಹಂತದ ಹೆಬ್ಬಾಗಿಲೇ ತೆಗೆದಂತೆ. ಮುಂಬರುವ ವರ್ಷಗಳಲ್ಲಿ ನಗರದ ವಿಸ್ತೃತ ಬೆಳವಣಿಗೆಗೆ ಪೂರಕವಾಗಲಿದೆ. ಬೆಂಗಳೂರು ನಂತರದ ಐದು ನಗರಗಳಲ್ಲಿ ಕೈಗಾರಿಕಾ ಟೌನ್‌ಶಿಫ್ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವ ಹೊತ್ತಲ್ಲೇ ಬಹುದಿನಗಳ ಬೇಡಿಕೆಯಾದ, ಮೈಸೂರಿಗರ ಕನಸಾಗಿರುವ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಬಹುಬೇಗನೆ ಅನುಷ್ಠಾನವಾಗುವ ಸಾಧ್ಯತೆ ಇದೆ. ವಾರದ ಹಿಂದೆಯಷ್ಟೇ ಮೈಸೂರಿಗೆ ಆಗಮಿಸಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ‘ಭಾರತ್ ಮಾಲ ಯೋಜನೆ’ಯಡಿ ಉದ್ದೇಶಿತ ಯೋಜನೆ ಸೇರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿರುವುದು ವಿಶೇಷ.

 ಮೈಸೂರು ನಗರದಲ್ಲಿ ೪೪ ಕಿ.ಮೀ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಿದ ಬಳಿಕ ವಾಹನಗಳ ದಟ್ಟಣೆ ಕಡಿಮೆ ಆಗುವ ಜತೆಗೆ ನಗರಪ್ರದೇಶವನ್ನೂ ಹಾದು ಹೋಗುತ್ತಿದ್ದ ಬೃಹತ್ ಪ್ರಮಾಣದ ವಾಹನಗಳು, ಗೂಡ್ಸ್ ಲಾರಿಗಳು ರಿಂಗ್ ರಸ್ತೆಯ ಮೂಲಕ ಸಂಚರಿಸುತ್ತಿವೆ. ಇದರಿಂದಾಗಿ ಸಾಕಷ್ಟು ಅನುಕೂಲ ಆಗಿದೆ. ನಂತರದ ದಿನಗಳಲ್ಲಿ ರಿಂಗ್ ರಸ್ತೆಯು ಮುಡಾದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ ಬಳಿಕ ಮತ್ತೊಂದು ಸುತ್ತಿನ ಡಾಂಬರೀಕರಣ ಮಾಡುವ ಜೊತೆಗೆ ಸರ್ವೀಸ್ ರಸ್ತೆ ನಿರ್ಮಾಣಕ್ಕೂ ಅನುದಾನವನ್ನು ಬಿಡುಗಡೆ ಮಾಡಿದ್ದರಿಂದ ಕಾಮಗಾರಿ ಭರದಿಂದ ಸಾಗಿದೆ. ಇದರ ಬೆನ್ನಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ೭೭.೪೫ ಕಿ.ಮೀ ಉದ್ದದ ಮತ್ತೊಂದು ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸುತ್ತಿದೆ. ಈ ಯೋಜನೆ ಅನುಷ್ಠಾನವಾದರೆ ಮುಂದಿನ ೩೦- ೫೦ ವರ್ಷಗಳ ಕಾಲ ಯಾವುದೇ  ವಾಹನಗಳ ಸಂಚಾರದ ಒತ್ತಡ ಇರುವುದಿಲ್ಲ. ಮೈಸೂರು ನಗರದ ಹೊರವಲಯದಲ್ಲಿ ಹಲವಾರು ವರ್ಷಗಳಿಂದ ರೈತರ ಭೂಮಿಯನ್ನು ಖರೀದಿ ಮಾಡಿ ಬಡಾವಣೆಗಳನ್ನು ರಚನೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮಾಲೀಕರು ಅದಕ್ಕಾಗಿ ಕೋಟ್ಯಂತರ ರೂಪಾಯಿ ಬಂಡವಾಳ ತೊಡಗಿಸಿದ್ದಾರೆ. ಮುಂದೆ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವಾದ ಮೇಲೆ ರಸ್ತೆಗೆ ಹೊಂದಿಕೊಂಡಂತೆ ಇರುವ ಭೂಮಿಯ ಬೆಲೆ ಏರಲಿದೆ. ಈಗಾಗಲೇ ನಗರದ ೨೦ ಕಿ.ಮೀ ತನಕ ಬಡಾವಣೆಗಳು ರಚನೆಯಾಗಿದೆ. ನಂತರ ನಂಜನಗೂಡು, ತಿ.ನರಸೀಪುರ, ಹುಣಸೂರು ತಾಲ್ಲೂಕಿನ ಬಿಳಿಕೆರೆ ವ್ಯಾಪ್ತಿಯ ತನಕವೂ ವಿಸ್ತಾರಗೊಂಡು ನಗರ ಮತ್ತಷ್ಟು ಬೆಳೆಯಲು ಈ ಪರ್ಯಾಯ ರಸ್ತೆ ಪ್ರಮುಖ ಕಾರಣವಾಗಲಿದೆ. ನಗರದ ಹೊರ ವಲಯದಲ್ಲಿ ನೂರಾರು ಬಡಾವಣೆಗಳ್ನು ರಚನೆ ಮಾಡಿ ಸಿದ್ಧವಾಗಿರುವ ನಿವೇಶನಗಳ ಖರೀದಿ ಪ್ರಮಾಣವು ಹೆಚ್ಚಾಗಲಿದೆ. ಅದರಲ್ಲೂ ಮೈಸೂರು ನಗರದ ಹೊರವಲಯದಲ್ಲಿ ಟೌನ್‌ಶಿಫ್ ನಿರ್ಮಾಣಕ್ಕೂ ದಾರಿಯಾಗಲಿದೆ.

 ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನಯಾನವೂ ಆರಂಭವಾಗಲಿದೆ. ಅದಾದಲ್ಲಿ ಮತ್ತಷ್ಟು ಅಂತಾರಾಷ್ಟ್ರೀಯ ಕಂಪನಿಗಳು ಮೈಸೂರಿಗೆ ಬರಲಿವೆ. ಬೆಳೆಯುತ್ತಿರುವ ಮೈಸೂರಿಗೆ ಈಗಾಗಲೇ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ, ಮೈಸೂರು- ಬೆಂಗಳೂರು ದಶಪಥ ರಸ್ತೆ, ರೈಲ್ವೆ ನಿಲ್ದಾಣ ವಿಸ್ತರಣೆ ಜೊತೆಗೆ ಈಗ ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣ ಮಾಡಿದಲ್ಲಿ ಸಾಂಸ್ಕೃತಿಕ ನಗರಿಯ ಚಿತ್ರಣವೇ ಬದಲಾಗಲಿದೆ. ಮುಡಾದ ಪ್ರಸ್ತಾವನೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಅನುಮೋದನೆ ಕೊಡಿಸುವ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನ ಬಹುಬೇಗನೆ ಸಫಲವಾದರೆ ದೊಡ್ಡ ಕನಸು ನನಸಾಗಲಿದೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಂದ ಬರುವ ವಾಹನಗಳ ಸರಕು ಸಾಗಾಣಿಕೆಯೂ ಹೆಚ್ಚಾಗಲಿದೆ. ಇದಲ್ಲದೆ ವಾಹನಗಳು ನಗರದಿಂದ ಸಾಕಷ್ಟು ದೂರದಿಂದಲೇ ಹಾದು ಹೋಗಲಿದ್ದು  ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತಗಳು ತಗ್ಗಲಿವೆ. ಸ್ಥಳೀಯ ಜನರು ಓಡಾಡುವ ರಸ್ತೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿದರೆ ಮತ್ತಷ್ಟು ಅಭಿವೃದ್ಧಿ ಹೊಂದಲು ದಾರಿಯಾಗಲಿದೆ.

andolana

Recent Posts

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

3 hours ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

11 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

11 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

11 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

11 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

11 hours ago