Categories: ಅಂಕಣಗಳು

ಜಾತಿ ಮನುಷ್ಯ ಕುಲದ ಅನಿಷ್ಠವೆಂದ ಕನಕದಾಸರು

• ಕಾ.ತ.ಚಿಕ್ಕಣ್ಣ

ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ಸರ್ಕಾರವು ಸಾಧಕರ, ಸಂತರ ಜಯಂತಿಗಳನ್ನು ವ್ಯಾಪಕವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕನಕದಾಸರನ್ನು ಕುರು ಬರು, ಬಸವಣ್ಣನವರನ್ನು, ಲಿಂಗಾಯತರು,
ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ದಲಿತರು ಮುಂತಾಗಿ ಅವರವರ ಜಾತಿಗೆ ಅಂಟಿಸಿ ಕೊಳ್ಳುತ್ತಿದ್ದಾರೆಂಬ ಮಾತುಗಳು ಪ್ರಧಾನವಾಗಿಯೇ ಕೇಳಿಬರುತ್ತಿವೆ.

ಇದು ಹೌದೆಂಬುವಂತೆ ಆಯಾ ಸಮುದಾಯದವರು ತಮ್ಮವರೆಂದು ಕೆಲವೊಮ್ಮೆ ಅತಿರೇಕದ ಅಭಿಮಾನವನ್ನು ತೋರಿಸುತ್ತಿರುವುದೂ ಉಂಟು. ಈ ಬಗೆಯ ಅತಿರೇಕದ ಅಭಿಮಾನ ಮತ್ತು ಜಾತಿ ಯನ್ನು ರಾಜಕೀಯ ಅಸ್ತ್ರವಾಗಿ, ಅಧಿಕಾರ-ಸೌಲಭ್ಯ ಗಳ ಗಾಳವಾಗಿ, ಗುಂಪುಗುಳಿತನಗಳ ಪ್ರೇರಕಬಿಂದು ವಾಗಿ ಬಳಸಿಕೊಳ್ಳುತ್ತಿರುವುದು ಇಂಥ ಅಭಿಪ್ರಾಯ ಗಳಿಗೆ ಕಾರಣವಾಗುತ್ತವೆ. ಇಂದಿನ ದಿನಗಳಲ್ಲಂತೂ ಜಾತಿಯು ಸಮಾಜದ ಸ್ವಾಸ್ಥ್ಯ ಕೆಡಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಈ ಮಾತನ್ನು ಒಪ್ಪಿಯೂ ಕೂಡ, ಪ್ರತಿಯೊಂದು ಜಾತಿಗಿರುವ ಸಾಂಸ್ಕೃತಿಕ ಅನನ್ಯತೆಯನ್ನು ಉಪೇಕ್ಷಿಸಲು ಬರುವುದಿಲ್ಲ. ಕುಲ, ಧರ್ಮ, ದೈವ, ಆಚರಣೆಗಳು ಸಮಾಜೋ-ಸಾಂಸ್ಕೃತಿಕ ಚರಿತ್ರೆಯ ಪುನಾರಚನೆಗೆ ಆಕರ ದ್ರವ್ಯಗಳಾಗಿವೆ. ತಳಸಮುದಾಯಗಳ ಸಂಸ್ಕೃತಿಯ ನೆಲೆಗಟ್ಟಾಗಿವೆ. ಆದರೆ ಈ ದಿಕ್ಕಿನತ್ತ ಜಾತಿ ಜನಾಂಗವನ್ನು ಅಧ್ಯಯನ ಮಾಡುವ ದೃಷ್ಟಿಕೋನ ಕ್ಷೀಣಿಸುತ್ತಿದೆ ಎಂಬುದು ಇವತ್ತಿನ ನಮ್ಮ ನಡುವಿನ ಹವಾಮಾನ. ಇಂಥ ತಳಸಮು ದಾಯದಿಂದ ಹುಟ್ಟಿ ಬಂದ ಕನಕದಾಸರು ಆ ಜನಾಂಗದವರ ಭಾವನೆಯಲ್ಲಿ ಗೌರವದ ಪ್ರತೀಕವಾಗಿದ್ದರೆ ಅದು ಅಸಹಜವಲ್ಲ. ಮಹಾ ಸಾಧಕನ ಅಭಿಮಾನಿ ವರ್ಗವೂ ಸಮಾಜದ ಒಂದು ಭಾಗವೇ ಆಗಿರುತ್ತದೆ.

ಈ ಪೀಠಿಕೆಯೊಂದಿಗೆ ಕನಕದಾಸರು ತನ್ನ ಸಾಧನೆಯ ಹಾದಿಗೆದುರಾಗಿ ನಿಂತ ಜಾತಿಯನ್ನು ತಮ್ಮ ವೈಯಕ್ತಿಕ ಬದುಕು ಮತ್ತು ಕಾವ್ಯ ರಚನೆ ಯಲ್ಲಿ ಹೇಗೆ ಕಂಡರಿಸಿದರು ಎಂಬುವುದು ಗಮ ನಿಸಬೇಕಾದ ಮುಖ್ಯ ಸಂಗತಿ, ಮೇಲ್ವರ್ಗದವರು ಜಾತಿಯನ್ನು ತಮ್ಮ ಹಿರಿಮೆಗೆ, ಅಂತಸ್ತಿಗೆ ಅಸ್ತ್ರವಾಗಿ ಬಳಸಿಕೊಂಡರೆ, ಜಾತಿಯ ಬಳಕೆ ಅಪಾಯ ವೆಂದು; ಮನುಷ್ಯಕುಲದ ಅನಿಷ್ಟವೆಂದು ಕನಕ ದಾಸರು ವಿರೋಧಿಸಿದರು. ಆದರೆ ಜಾತಿಯ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ಸ್ಪರ್ಶಿಸುವುದನ್ನು ಕೈಬಿಡಲಿಲ್ಲ.

ಹೀಗಿದ್ದರೂ ಕನಕದಾಸರನ್ನು ಭಕ್ತರೆಂದು ಹಿಡಿದಿಡುವಲ್ಲಿ ಈ ಮನೋಧರ್ಮದ ಜನವರ್ಗ ನಿರತವಾದದ್ದು ಏಕೆ ಎಂಬ ಪ್ರಶ್ನೆ ಇದ್ದೇ ಇದೆ. ಹೀಗೆಂದ ಮಾತ್ರಕ್ಕೆ ನಾನು ಕನಕದಾಸರು ಭಕ್ತರಲ್ಲವೆಂದೇನೂ ಸಾಧಿಸಲು ಹೋಗುತ್ತಿಲ್ಲ. ಹೇಳಬೇಕಿರುವುದೇನೆಂದರೆ ಕನಕದಾಸರು ಮೊದಲು ತಿಮ್ಮಪ್ಪನಾಗಿ, ಆನಂತರ ತಿಮ್ಮಪ್ಪ ನಾಯಕನಾಗಿ, ಕನಕಪ್ಪನಾಗಿ ಕೊನೆಗೆ ಕನಕದಾಸನಾಗಿ ಬೆಳೆದದ್ದು ನಮ್ಮ ಜನಪದ ಚರಿತ್ರೆಯ ತಿಳಿವಳಿಕೆ, ತರುಣದಲ್ಲಿಯೇ ಬಂಧು-ಬಳಗದ ನಷ್ಟ ಅನುಭವಿಸಿ, ಯುದ್ಧದಲ್ಲಿ ಸೋಲುಂಡು ಹತಾಶೆಗೊಂಡ ಸಮಯವದು. ಹಾಗಾಗಿ ಲೌಕಿಕ ಬದುಕಿನ ಜಂಜಾಟಗಳ ಅರಿವಾಗಿ ಜೀವನದಲ್ಲಿ ವಿರಕ್ತಿ ತಾಳಿದರು.

ಆಗ ಉಚ್ಚಾಯ ಸ್ಥಿತಿಯಲ್ಲಿದ್ದದ್ದು ವೈಷ್ಣವ ಪಂಥ. ಅದು ಅವರನ್ನು ಆಕರ್ಷಿಸಿತು. ಅಲ್ಲಿ ತನ್ನ ತಲ್ಲಣಗಳಿಗೆ ಸಮಾಧಾನ ಸಿಗುವುದೆಂದು ತಿಳಿದರು. ಇದು ಕಾಲಧರ್ಮದ ಸೆಳೆತ. ಆದರೆ ಜಾತಿ ಒಂದು ಸಮಸ್ಯೆಯಾಯಿತು. ರಾಗ, ದ್ವೇಷ, ಸಿರಿತನಗಳನ್ನೆಲ್ಲ ತೊರೆದು ಶ್ರೀಹರಿಯೇ ಸರ್ವೋತ್ತಮನೆಂದು, ಅವ ನಿಂದ ಮೋಕ್ಷ ಸಾಧಿಸಬಹುದೆಂದು ನೆಚ್ಚಿ ಬಂದ ಕನಕ ರನ್ನು ಕೆಲ ಕರ್ಮಠ ಸಿದ್ಧಾಂತಿಗಳು ಸಹಿಸಲಿಲ್ಲ. ಶ್ರೇಷ್ಠತೆಯ ವ್ಯಸನಿಗಳಾದ ಅವರು ಅಪಹಾಸ್ಯ ಮಾಡಿದರು. ತಮ್ಮ ಕೂಟ ಪರಂಪರೆಗೆ ಸೇರಿಸದೆ ಹೊರಗಿಟ್ಟರು. ಆದರೂ ಕನಕರೊಳಗಿದ್ದ ಕವಿ ‘ಜಾತಿ’ಯನ್ನು ಬಗಲಿಗೇರಿಸಿಕೊಂಡ. ಈ ಜಾತಿ ಕನಕದಾಸರ ವೈಯಕ್ತಿಕ ಬದುಕಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಾಜಕಾರಣವಾಗಿಯೂ; ಕಾವ್ಯರಚನೆಗೆ ಅಸ್ಥಿತೆಯಾಗಿ ದೊರಕಿತು.

ಇದನ್ನು ಪುಷ್ಟಿಕರಿಸುವ ಸಲುವಾಗಿ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ ಹಾಗೂ ಸಾಮಾಜಿಕ ಆಶಯಗಳುಳ್ಳ ಕೀರ್ತನೆಗಳು ಬಹಳ ಇವೆ ಸತ್ಯ-ಸುಖವುಳ್ಳ ಜನರಿಗೆ ಕುಲವಾವುದು ಎಂದು ಕೇಳುವ ಅವರ ಪ್ರಶ್ನೆ ಮಾರ್ಮಿಕವಾದುದು.

ಹರಿಭಕ್ತಿಸಾರ ಎಂಬ ಭಕ್ತಿ ಕಾವ್ಯದಲ್ಲಿಯೂ ಕೂಡ ಎಲ್ಲರನ್ನು ರಕ್ಷಿಸು ಎಂದು ಸಾಮೂಹಿಕವಾಗಿ ಬೇಡುವ ಮಾತು ಕೂಡ ಕವಿಯ ಸಮೂಹ ಪ್ರಜ್ಞೆಯತ್ತಲೇ ಬೆರಳು ತೋರಿಸುತ್ತದೆ. ಕಾರಣ, ಕನಕದಾಸರದು ಒಂದು ವ್ಯಕ್ತಿತ್ವವಲ್ಲ. ಅವರದು ಹಲವು ವ್ಯಕ್ತಿತ್ವಗಳು ದಾಸನಾಗಿ, ಭಕ್ತನಾಗಿ ಅಷ್ಟೇ ಉಳಿಯಲಿದೆ. ಸಮಾಜ ಸುಧಾರಕನಾಗಿ, ಕಂದಾಚಾರ ಮೌಡ್ಯಗಳ ವಿರುದ್ಧದ ಪ್ರತಿಭಟನೆಯ ದನಿ ಯಾಗಿ ಮಿಗಿಲಾಗಿ ಒಬ್ಬ ಸಂತಕವಿಯಾಗಿ ಕನಕ ದಾಸರು ಜಾತಿ, ಮತ, ಕಾಲ, ಧರ್ಮವನ್ನು ಮೀರಿ ನಿಲ್ಲುವ ಸಾಂಸ್ಕೃತಿಕ ಸಂದೇಶ ವಾಹಕರಾಗಿ ಕಾಣುತ್ತಾರೆ.

ಸಮಾಜದ ಮಾನವೀಯ ತಲ್ಲಣಗಳಿಗೆ ದನಿಯಾ ಗುವ ಕವಿ, ಅನಂತ ಕಾಲ ಜನಸಾಗರದ ಮಧ್ಯೆ ಉಳಿಯು ತ್ತಾನೆ ಎಂಬ ಮಾತಿದೆ ಕನಕದಾಸರಿಗೆ ಇದು ಅನ್ವರ್ಥ.
(ಲೇಖಕ: ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರು )

ಶ್ರೇಷ್ಠತೆಯ ವ್ಯಸನಿಗಳಾದ ಅವರು ಅಪಹಾಸ್ಯ ಮಾಡಿದರು. ತಮ್ಮ ಕೂಟ ಪರಂಪರೆಗೆ ಸೇರಿಸದೆ ಹೊರಗಿಟ್ಟರು. ಆದರೂ ಕನಕರೊಳಗಿದ್ದ ಕವಿ ‘ಜಾತಿ’ಯನ್ನು ಬಗಲಿಗೇರಿಸಿಕೊಂಡ. ಈ ಜಾತಿ ಕನಕದಾಸರ ವೈಯಕ್ತಿಕ ಬದುಕಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಾಜಕಾರಣವಾಗಿಯೂ, ಕಾವ್ಯರಚನೆಗೆ ಅಸ್ಥಿತೆಯಾಗಿ ದೊರಕಿತು. ಇದನ್ನು ಪುಷ್ಟಿಕರಿಸುವ ಸಲುವಾಗಿ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ ಹಾಗೂ ಸಾಮಾಜಿಕ ಆಶಯಗಳುಳ್ಳ ಕೀರ್ತನೆಗಳು ಬಹಳ ಇವೆ. ಸತ್ಯ-ಸುಖವುಳ್ಳ ಜನರಿಗೆ ಕುಲವ್ಯಾವುದು ಎಂದು ಕೇಳುವ ಅವರ ಪ್ರಶ್ನೆ ಮಾರ್ಮಿಕವಾದುದು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

2 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

2 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

2 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

2 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

2 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

2 hours ago