ಗುಮ್ಲಾ, ಜಾರ್ಖಂಡ: ವಿಪರೀತ ಬಡತನ, ನಕ್ಸಲರ ಹಾವಳಿಯಿಂದ ತತ್ತರಿಸಿದ್ದ ಈ ಜಿಲ್ಲೆ ಈಗ ಸದ್ದಿಲ್ಲದೇ ನಡೆಯುತ್ತಿರುವ ‘ರಾಗಿ ಕೃಷಿ’ಯಿಂದ ದೇಶದ ಗಮನ ಸೆಳೆಯುತ್ತಿದೆ.
ರಾಗಿ ಬೆಳೆಯುವ ಪ್ರದೇಶವು ಕ್ರಮೇಣ ಹೆಚ್ಚಾಗುತ್ತಿದ್ದು, ರಾಗಿ ಬಳಸಿ ಮಾಡಿದ ಪೌಷ್ಟಿಕ ಪದಾರ್ಥಗಳು ಜಿಲ್ಲೆಯ ಮಕ್ಕಳು, ಮಹಿಳೆಯರಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೂ ನೆರವಾಗುತ್ತಿದೆ.
ಈ ಮೌನ ಕ್ರಾಂತಿ, ಯುವ ಜಿಲ್ಲಾಧಿಕಾರಿಯಾಗಿರುವ ಸುಶಾಂತ್ ಗೌರವ ಅವರ ಕಾಳಜಿ, ಪರಿಶ್ರಮದ ಫಲ.
ಇವರ ಕಾರ್ಯವನ್ನು ಗುರುತಿಸಿರುವ ಸರ್ಕಾರ, ಇವರನ್ನು ‘ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿಗೆ’ ಆಯ್ಕೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸುಶಾಂತ್ ಅವರಿಗೆ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ.
‘ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆ ಮೂಲಕ ಸಮಗ್ರ ಅಭಿವೃದ್ಧಿ’ ವಿಭಾಗದಡಿ ಗುಮ್ಲಾ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.
ಮಹದಾಸೆ: ಜಿಲ್ಲೆಯಲ್ಲಿ ರಾಗಿ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಬೇಕು. ರಾಗಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಬೇಕು. ಆ ಮೂಲಕ ಗುಮ್ಲಾ ಜಿಲ್ಲೆಯನ್ನು ‘ಈಶಾನ್ಯ ಭಾರತದ ರಾಗಿ ರಾಜಧಾನಿ’ಯನ್ನಾಗಿ ಮಾಡಬೇಕು ಎಂಬುದೇ ನನ್ನ ಗುರಿ ಎನ್ನುತ್ತಾರೆ ಸುಶಾಂತ್ ಗೌರವ್.
ರಾಜಧಾನಿ ರಾಂಚಿಯಿಂದ 100 ಕಿ.ಮೀ. ದೂರದಲ್ಲಿ ಗುಮ್ಲಾ ಜಿಲ್ಲೆ ಇದೆ. ಜಿಲ್ಲೆಯ ರೈತರು ಕೃಷಿಗೆ ಮಳೆಯನ್ನೇ ನಂಬಿದ್ದು, ವರ್ಷದಲ್ಲಿ ಒಂದು ಬಾರಿ ಭತ್ತ ಬೆಳೆಯುತ್ತಾರೆ.
‘ರಾಷ್ಟ್ರೀಯ ಬೀಜ ನಿಗಮದಿಂದ ಉತ್ತಮ ಗುಣಮಟ್ದದ ರಾಗಿ ಖರೀದಿಸಿ, ಬಿತ್ತನೆ ಆರಂಭಿಸಲಾಯಿತು’ ಎಂದು ಸುಶಾಂತ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಆರಂಭದಲ್ಲಿ 1,600 ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಕ್ರಮೇಣ ಬಿತ್ತನೆ ಪ್ರದೇಶ 3,600 ಎಕರೆಗೆ ಏರಿಕೆಯಾಗಿದೆ. ಒಟ್ಟು ಇಳುವರಿ ಪ್ರಮಾಣದಲ್ಲಿ ಶೇ 300ರಷ್ಟು ಹೆಚ್ಚಳ ಕಂಡುಬಂದಿದೆ’ ಎಂದು ವಿವರಿಸಿದ್ದಾರೆ.
‘ರಾಗಿ ಕೃಷಿಯಲ್ಲಿನ ಈ ಯಶೋಗಾಥೆಯ ಸಂಪೂರ್ಣ ‘ಶ್ರೇಯ ಸಖಿ ಮಂಡಲ ಸಮೂಹ’ ಎಂಬ ಮಹಿಳಾ ಸ್ವಸಹಾಯ ಗುಂಪಿಗೆ ಸೇರಬೇಕು. ಈ ಸಂಘಟನೆ ದೊಡ್ಡ ಪ್ರಮಾಣದಲ್ಲಿ ರಾಗಿಯನ್ನು ಖರೀದಿಸುತ್ತಿದೆ’ ಎಂದು ಹೇಳಿದ್ದಾರೆ.
‘ನಾವು ರಾಗಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಇದು ಜಾರ್ಖಂಡ್ದಲ್ಲಿಯೇ ಮೊದಲ ಘಟಕವಾಗಿದೆ. ಜಿಲ್ಲೆಯಲ್ಲಿ ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ರಾಗಿ ಲಡ್ಡು, ಭುಜಿಯಾದಂತಹ ತಿನಿಸುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ’.
‘ರಾಗಿ ಬಳಸಿ ತಯಾರಿಸುವ ಉತ್ಪನ್ನಗಳು ಪ್ರೊಟೀನ್, ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶಗಳಿಂದ ಕೂಡಿರುತ್ತವೆ. ಇವು ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆ ನಿವಾರಣೆಗೆ ನೆರವಾಗುತ್ತವೆ’ ಎಂದು ಸುಶಾಂತ್ ಗೌರವ್ ವಿವರಿಸಿದ್ದಾರೆ.
‘ರಾಗಿ ಸಂಸ್ಕರಣೆ ಘಟಕಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಟನ್ನಷ್ಟು ರಾಗಿ ಹಿಟ್ಟು, 300 ಪಾಕೆಟ್ಗಳಷ್ಟು ರಾಗಿ ಲಡ್ಡು, ರಾಗಿಯಿಂದ ಮಾಡಿದ ತಿನಿಸುಗಳ 200 ಪಾಕೆಟ್ಗಳನ್ನು ‘ಜೋಹರ್ ರಾಗಿ’ ‘ಬ್ರ್ಯಾಂಡ್ನಡಿ ಉತ್ಪಾದಿಸಲಾಗುತ್ತದೆ’ ಎಂದು ಯಶಸ್ಸಿನ ಕಥೆಯನ್ನು ವಿವರಿಸಿದ್ದಾರೆ.
‘ರಾಗಿ ಕೃಷಿಯಲ್ಲಿನ ಈ ಯಶಸ್ಸಿನಿಂದ ಪ್ರೇರಿತರಾಗಿರುವ ಸಾಕಷ್ಟು ಜನ ರೈತರು. ಈ ಧಾನ್ಯದ ಬೇಸಾಯಕ್ಕೆ ಮುಂದೆ ಬರುತ್ತಿದ್ದಾರೆ. ಎರಡೇ ವರ್ಷಗಳಲ್ಲಿ ಈ ಬದಲಾವಣೆ ಕಂಡುಬಂದಿದೆ’ ಎಂದು ಹೇಳಿದ್ದಾರೆ.
ಪಸರಿಸಿದ ಖ್ಯಾತಿ: ಗುಮ್ಲಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರು ಮಾಡಿರುವ ಈ ಕ್ರಾಂತಿಯ ಖ್ಯಾತಿ ದೂರದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನೂ ತಲುಪಿದೆ.
ಕೌಶಲ ಅಭಿವೃದ್ಧಿ ಸಚಿವಾಲಯದ ‘ಮಹಾತ್ಮ ಗಾಂಧಿ ರಾಷ್ಡ್ರೀಯ ಫೆಲೊ’ ಆಗಿರುವ ಅವಿನಾಶ್ ಕುಮಾರ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ, ಈ ಕುರಿತು ಅಧ್ಯಯನ ವರದಿ ಮಂಡಿಸಿದ್ದಾರೆ. ಈ ‘ಗುಮ್ಲಾ ಮಾದರಿ’ ಕುರಿತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಕೈಗೊಂಡಿದ್ದು, ಈ ‘ಮೌನ ಕ್ರಾಂತಿ’ಯ ಕುರಿತು ವಿಶ್ವದ ಇತರ ಬ್ಯುಸಿನೆಸ್ ಸ್ಕೂಲ್ಗಳಿಗೆ ಮಾಹಿತಿ ನೀಡಲಿದೆ. ಅಧಿಕಾರಿಗಳಿಗೆ ತರಬೇತಿ ನೀಡಲು ಈ ಅಧ್ಯಯನ ವರದಿಯನ್ನು ಬಳಸಿಕೊಳ್ಳಲಾಗುತ್ತದೆ
ಮುಖ್ಯಾಂಶಗಳು
ಇದೇ ಮೊದಲ ಬಾರಿಗೆ ಜಾರ್ಖಂಡನ ಜಿಲ್ಲೆಯೊಂದು ಪ್ರಶಸ್ತಿಗೆ ಆಯ್ಕೆ
ಅಪೌಷ್ಟಿಕತೆ: 400 ಮಾದರಿ ಅಂಗನವಾಡಿಗಳ ಮೂಲಕ ಮೇಲ್ವಿಚಾರಣೆ
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…