BREAKING NEWS

ಬ್ರಾಂಡ್ ಬೆಂಗಳೂರಿಗೆ ಸಾರ್ವಜನಿಕ ಸಹಭಾಗಿತ್ವಕ್ಕಾಗಿ ಮಹತ್ವದ ಸುಧಾರಣೆಗಳ ಜಾರಿ : ಡಿಸಿಎಂ

ಬೆಂಗಳೂರು : ಮಹಾನಗರದಲ್ಲಿನ ಆಸ್ತಿ ದಾಖಲೆಗಳನ್ನು ಸಮರ್ಪಕಗೊಳಿಸಿ ಮನೆ ಬಾಗಿಲಿಗೆ ತಲುಪಿಸಲು ನಮ್ಮ ಸ್ವತ್ತು, ರಸ್ತೆಗಳ ಕಾಮಗಾರಿಗಳಲ್ಲಿನ ಅವ್ಯವಹಾರ ತಡೆಯಲು ಪಾರದರ್ಶಕವಾದ ಕ್ಯೂ ಆರ್ ಕೋಡ್ ವ್ಯವಸ್ಥೆ, ಪಾರ್ಕ್, ಆಟದ ಮೈದಾನ ಸೇರಿದಂತೆ ಇತರ ಸ್ವತ್ತುಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಚಿಂತನೆ ನಡೆಸಲಾಗಿದ್ದು, ಬ್ರಾಂಡ್ ಬೆಂಗಳೂರು ಮೂಲಕ ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಜ್ಞಾನಜ್ಯೊತಿ ಸಭಾಂಗಣದಲ್ಲಿ ಬ್ರಾಂಡ್ ಬೆಂಗಳೂರಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಏಳೆಂಟು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದರು. ಬ್ರಾಂಡ್ ಬೆಂಗಳೂರಿಗಾಗಿ ಸಾರ್ವಜನಿಕರಿಂದ ಸುಮಾರು 70 ಸಾವಿರ ಸಲಹೆಗಳು ಬಂದಿವೆ.

ಇದು ಜನರ ನಗರ. ಇದನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಅಭಿವೃದ್ಧಿಪಡಿಸಲು ಬ್ರಾಂಡ್ ಬೆಂಗಳೂರು ನಿರ್ಮಾಣ ಮಾಡಬೇಕಿದೆ. ಹಣಕಾಸಿನ ಲಭ್ಯತೆ ಆಧರಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ತಮ್ಮ ನೇತೃತ್ವದಲ್ಲಿ ಸಮನ್ವಯ ಸಮಿತಿ, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಾನುಷ್ಠಾನ ಸಮಿತಿ ರಚಿಸಲಾಗುವುದು ಎಂದರು.

ಎಸ್.ಎಂ.ಕೃಷ್ಣ ಕಾಲದಲ್ಲಿ ಆಸ್ತಿಗಳ ದಾಖಲಾತಿಗಳ ಡಿಜಿಟಲೀಕರಣಕ್ಕಾಗಿ ಭೂಮಿ ಸಾಫ್ಟ್‍ವೇರ್ ಅನ್ನು ಜಾರಿಗೊಳಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಇನ್ನೂ ಪುಸ್ತಕ ಇಟ್ಟುಕೊಂಡು ಕುಳಿತಿದ್ದೇವೆ. ಒಂದು ಸಣ್ಣ ಪ್ರದೇಶದಲ್ಲಿ ಮಾತ್ರ ಪ್ರಾಯೋಗಿಕ ಪ್ರಯತ್ನ ನಡೆದಿದೆ. ನಗರದಲ್ಲಿ ಯಾರ ಆಸ್ತಿಗೂ ಸರಿಯಾದ ದಾಖಲೆಗಳಿಲ್ಲ. ಕೆಲವರ ದಾಖಲೆಗಳು ಸರಿ ಇದ್ದರೂ, ಯಾರ ಖಾತೆಗೆ ಯಾರದೋ ಹೆಸರು, ಇನ್ನ್ಯಾರೊ ಪರಭಾರೆ ಮಾಡುವುದು ಕಂಡುಬರುತ್ತಿದೆ. ಇದನ್ನು ಸರಿಪಡಿಸಬೇಕಿದೆ.

ಪ್ರತಿಯೊಂದು ಮನೆ, ನಿವೇಶನ, ಅಪಾರ್ಟ್‍ಮೆಂಟ್‍ಗಳನ್ನು ಅಳತೆ ಮಾಡಿಸಿ ನಕ್ಷೆ ಸಹಿತವಾಗಿ ಮಾಲಿಕತ್ವದ ದಾಖಲಾತಿಗಳನ್ನು ಡಿಜಿಟಲೀಕರಣ ಮಾಡಿ, ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು, ಮೊಬೈಲ್‍ನಲ್ಲೇ ದಾಖಲೆಗಳನ್ನು ಪರಿಶೀಲಿಸಬಹುದಾದ ವ್ಯವಸ್ಥೆಗೆ ನಮ್ಮ ಸ್ವತ್ತು ಎಂದು ನಾಮಕರಣ ಮಾಡಲಾಗುತ್ತದೆ. ಇದರಿಂದ ಅನಗತ್ಯವಾದ ತೊಂದರೆ ತಪ್ಪಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದರು.

ಟ್ರೇಡ್‍ಲೈಸೆನ್ಸ್ ವ್ಯವಸ್ಥೆಯಲ್ಲೂ ಸುಧಾರಣೆ ಮಾಡುವ ಅಗತ್ಯವಿದೆ. ಅರ್ಜಿ ಹಾಕಿದ ತಕ್ಷಣ ನೇರವಾಗಿ ಅನುಮತಿ ನೀಡಬೇಕು ಎಂದು ಕೆಎಂಸಿ ಕಾಯ್ದೆಯಲ್ಲಿದೆ. ಅದರಂತೆ ಈಗ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆನ್‍ಲೈನ್ ವ್ಯವಸ್ಥೆ ಜಾರಿ ಮಾಡುವಂತೆ ಪ್ರೇಕ್ಷಕರು ಸಲಹೆ ನೀಡಿದಾಗ, ಆನ್‍ಲೈನ್ ಮಾಡಿದ್ದಕ್ಕೆ ಪಟಾಕಿ ದುರಂತದಲ್ಲಿ 14 ಜನ ಪ್ರಾಣ ಕಳೆದುಕೊಂಡರು. ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಖುದ್ದು ಸ್ಥಳ ತಪಾಸಣೆ, ಉತ್ತರಾದಾಯಿತ್ವದ ಅಗತ್ಯವಿದೆ. ಇದರ ಜೊತೆಗೆ ವರ್ತಕರಿಗೆ ತೊಂದರೆಯಾಗದಂತಹ ಸರಳ ವ್ಯವಸ್ಥೆ ರೂಪಿಸಬೇಕಿದೆ ಎಂದರು.

ಮನೆ ನಿರ್ಮಾಣಕ್ಕೆ ಪ್ಲಾನ್ ಮಂಜೂರಾತಿಗಾಗಿ ಪಾಲಿಕೆ ಕಚೇರಿಗೆ ಅಲೆದಾಡುವ ವ್ಯವಸ್ಥೆಯನ್ನು ತಪ್ಪಿಸಬೇಕಿದೆ. 50-80 ಅಡಿವರೆಗಿನ ಮನೆ ನಿರ್ಮಾಣಗಳಿಗೆ ಸ್ವಯಂಚಾಲಿತ ನಕ್ಷೆ ಮಂಜೂರಾತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಅರ್ಹ ವಾಸ್ತುಶಿಲ್ಪಿಗಳು ಧೃಡೀಕರಿಸಿದ ಪ್ಲಾನ್‍ಗಳನ್ನು ಅಂಗೀಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರೀ ಹಗರಣಗಳು ನಡೆಯುತ್ತಿವೆ. ಒಂದೇ ರಸ್ತೆಗೆ ಎರಡೂ ದಿಕ್ಕಿನಿಂದಲೂ ಬೇರೆ ಬೇರೆ ಗುತ್ತಿಗೆದಾರರು ಕಾಮಗಾರಿಗಳ ಬಿಲ್ ಪಡೆದಿರುವ ಉದಾಹರಣೆಗಳಿವೆ. ಇದಕ್ಕೆ ಕಡಿವಾಣ ಹಾಕಬೇಕು. ರಸ್ತೆ ಅಭಿವೃದ್ಧಿಗೆ ಯಾವ ಮೂಲದಿಂದ ಹಣ ಖರ್ಚು ಮಾಡಲಾಗಿದೆ. ಪಾಲಿಕೆ, ಸಂಸದರು, ಶಾಸಕರು ಯಾವ ನಿಯನ್ನು ಬಳಸಲಾಗಿದೆ ಎಂಬ ಲೆಕ್ಕಾಚಾರ ಕರಾರುವಕ್ಕಾಗಿ ಇರಬೇಕು. ಕಾಮಗಾರಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ. ಗುತ್ತಿಗೆದಾರರು ಯಾರು ಎಂಬೆಲ್ಲಾ ವಿವರಗಳನ್ನು ಒಳಗೊಂಡ ಕ್ಯೂ ಆರ್ ಕೋಡ್ ಅನ್ನು ಪ್ರತಿಯೊಂದು ರಸ್ತೆಗೂ ಸೃಷ್ಟಿಸಲಾಗುವುದು. ಪಾರದರ್ಶಕತೆಯ ಮೂಲಕ ರಸ್ತೆ ಕಾಮಗಾರಿ ಹಗರಣಗಳನ್ನು ತಡೆಯಲಾಗುವುದು.

ಸಾರ್ವಜನಿಕರು ಬಳಸುವ ರಸ್ತೆಗಳು, ಆಟದ ಮೈದಾನಗಳ ನಿರ್ವಹಣೆಗೆ ಸ್ಥಳೀಯರನ್ನೊಳಗೊಂಡ ರಾಜಕೀಯೇತರ ಸಮಿತಿಗಳನ್ನು ರಚಿಸಲಾಗುತ್ತದೆ. ನಾಗರಿಕರು ಅವರೇ ಬಳಸುವ ಸ್ವತ್ತನ್ನು ರಕ್ಷಿಸಿ ಅಭಿವೃದ್ಧಿಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಶಾಸಕರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ವಾರ್ಡ್ ಸಮಿತಿ, ರಸ್ತೆ ಸಂಚಾರ ಸುಧಾರಣೆ, ಕೆರೆಯ ಅಭಿವೃದ್ಧಿ, ಇಂದಿರಾ ಕ್ಯಾಂಟಿನ್ ನಿರ್ವಹಣೆ, ಹಸಿರು ಬೆಂಗಳೂರು ಸೇರಿದಂತೆ ವಿವಿಧ ವಿಚಾರಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ.

ಟೆಂಡರ್‍ಶ್ಯೂರ್ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಸುರಂಗಮಾರ್ಗದಲ್ಲೇ ವಿದ್ಯುತ್ ಕೇಬಲ್ ಸೇರಿದಂತೆ ವಿವಿಧ ತಂತಿಗಳು ಹಾದು ಹೋಗಲು ಹಂತಹಂತವಾಗಿ ಕ್ರಮ ಜರುಗಿಸಲಾಗುವುದು. ಬೆಂಗಳೂರಿನ ಯೋಜನೆಗಳಿಗೆ ಸಂಬಂಧಪಟ್ಟಂತೆ ಬಿಬಿಎಂಪಿ, ಬಿಡಿಎ, ಮೆಟ್ರೊ, ಪೊಲೀಸ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ನಡುವೆ ಸಮನ್ವಯತೆ ಗುರುತಿಸಲಾಗುವುದು.

ಸಂಚಾರ ನಿರ್ವಹಣೆಗೆ ಮೇಲ್ಸೇತುವೆ, ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಪರಿಶೀಲನೆ ನಡೆಯುತ್ತಿದೆ. ರಸ್ತೆಗಳಲ್ಲಿ ಸಂಚಾರದಟ್ಟಣೆಯಿಂದ ಎರಡು ಮೂರು ಗಂಟೆ ಸಮಯ ವ್ಯರ್ಥವಾಗುವುದನ್ನು ತಡೆಗಟ್ಟಲು ಆದ್ಯತೆ ನೀಡಲಾಗುವುದು. ತ್ಯಾಜ್ಯ ನಿರ್ವಹಣೆ ವೈಜ್ಞಾನಿಕ ಕ್ರಮಗಳನ್ನು ಆಚರಿಸಲಾಗುವುದು. ಈಗಾಗಲೇ ತಾವು ಹಲವು ನಗರಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಹೈದ್ರಾಬಾದ್‍ನಲ್ಲಿ ಪ್ರತಿ ಮನೆಯಿಂದ 100 ರೂ. ಕಸ ಸಂಗ್ರಹಣೆಗೆ ಶುಲ್ಕ ವಿಸಲಾಗುತ್ತಿದೆ.

ದೆಹಲಿ, ಚೆನ್ನೈ ಹಲವು ಕಡೆ ಇರುವ ಉತ್ತಮ ಅಭ್ಯಾಸಗಳನ್ನು ಪರಿಶೀಲಿಸಿದ್ದೇವೆ. ಬೆಂಗಳೂರಿನಲ್ಲಿ ಏಳೆಂಟು ಕಡೆ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿವೆ. ಆದರೆ ಅವು ಯಶಸ್ವಿಯಾಗಿಲ್ಲ. ಕಸವನ್ನು ಒಂದು ಕಡೆ ಹಾಕಿದರೆ ಪ್ರಯೋಜನವಿಲ್ಲ. ವಿದ್ಯುತ್ ಅಥವಾ ಸಾವಯವ ಗೊಬ್ಬರ ತಯಾರು ಮಾಡಬೇಕಿದೆ. ಈ ಕುರಿತು ಕಾರ್ಯಕ್ರಮಗಳು ಜಾರಿಯಾಗಲಿದೆ ಎಂದರು.

ಬೆಂಗಳೂರಿನಲ್ಲಿ ಕೇವಲ 3 ಸಾವಿರ ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಇದು ನಾಚಿಕೆಗೇಡು. ಈ ಹಿಂದೆ ಜನರನ್ನು ನಂಬಿ ಜಾರಿಗೊಳಿಸಲಾದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ನಾಗರಿಕರು ಪ್ರಮಾಣಿಕವಾಗಿ ಪಾಲಿಸುತ್ತಿಲ್ಲ. ಯಾವುದೇ ತೆರಿಗೆಯನ್ನು ಹೆಚ್ಚಿಸದೆ ಈಗಾಗಲೇ ನಿರ್ಮಾಣವಾಗಿರುವ ಆಸ್ತಿಗಳಿಗೆ ಕರಾರುವಕ್ಕಾದ ತೆರಿಗೆ ಸಂಗ್ರಹಿಸುವ ಹೊಸ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಹೇಳಿದರು.

225 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದು, ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಬಹುದು. ಜನರ ಸೇವೆ ಮಾಡಲು ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಲ ನೀಡಬೇಕು ಎಂದರು.

andolanait

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

23 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

23 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

23 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

23 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

23 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

23 hours ago