ಡಾ.ನೀ.ಗೂ.ರಮೇಶ್
ಎಲ್ಲಿ ಹುಟ್ಟಬೇಕೆಂಬುದು ನಮ್ಮ ಕೈಯಲ್ಲಿರುವುದಿಲ್ಲ. ಆದರೆ, ಎಲ್ಲಿಗೆ ಮುಟ್ಟಬೇಕೆಂಬುದನ್ನು ನಾವೇ ನಿರ್ಧಾರ ಮಾಡಿಕೊಳ್ಳಬಹುದು. ಹಾಗಾಗಿ, ನಮ್ಮ ಈಗಿನ ಕೆಟ್ಟ ಸ್ಥಿತಿಯ ಬಗ್ಗೆ ಕೊರಗುವುದಕ್ಕಿಂತ, ಯಾರನ್ನೋ ದೂರುವುದಕ್ಕಿಂತ ಅವುಗಳ ವಿರುದ್ಧ ಯೋಜಿತವಾಗಿ ಹೋರಾಡಲು ಪ್ರಾರಂಭಿಸುವುದು ಸಮಸ್ಯೆಯಿಂದ ಹೊರಬರುವ ಜಾಣತನ. ಇಂತಹ ಸಂದರ್ಭಗಳಲ್ಲಿ ನಮ್ಮ ಬೆನ್ನೆಲುಬಾಗಿ ನಿಲ್ಲುವುದು ಸಕಾರಾತ್ಮಕ ಮನೋಭಾವನೆ ಮಾತ್ರ. ‘ಅದು ನನ್ನಿಂದ ಸಾಧ್ಯವಾಗುತ್ತದೆ’ ಎಂದುಕೊಳ್ಳುವುದೂ ಒಂದು ಅಮೃತ ಘಳಿಗೆ! ಆದರೆ, ಇತ್ತೀಚೆಗೆ ಇಡೀ ಯುವ ಸಮೂಹ ನಕಾರಾತ್ಮಕ ಆಲೋಚನೆಯ ಕಡೆಗೆ ಚಲಿಸುತ್ತಿರುವುದೇ ಹೆಚ್ಚು. ನಕಾರಾತ್ಮಕ ಮನೋಭಾವನೆ ಎಲ್ಲೆಡೆ ಸಾಂಕ್ರಾಮಿಕ ವಾಗಿರುವಾಗ ಅದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.
ಯಾವುದನ್ನು ಬೇಡ ಎನ್ನುತ್ತೇವೆಯೋ ಮನಸ್ಸು ಅದರ ಕಡೆಗೆ ಹೆಚ್ಚಾಗಿ ವಾಲುತ್ತದೆ. ಹತ್ತು ನಿಮಿಷ ಮೊಬೈಲ್ ಬಗ್ಗೆ ಯೋಚಿಸದಂತೆ ಕಣ್ಮುಚ್ಚಿ ಕುಳಿತುಕೊಳ್ಳಿ ಎಂದರೆ ಆ ಹತ್ತು ನಿಮಿಷ ಹಿಂದೆಂದಿಗಿಂತಲೂ ಹೆಚ್ಚಾಗಿ ಕಣ್ತುಂಬ ಮೊಬೈಲೇ ಕಾಣುತ್ತವೆ! ಇದು ಮನಸ್ಸಿನ ಚಾಂಚಲ್ಯದ ಸ್ಥಿತಿ. ಆಲಸ್ಯ, ಅಂಜಿಕೆ ಇವು ಎಂತಹ ಸಾಮರ್ಥ್ಯವಿದ್ದರೂ ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತವೆ.
ಬಹುತೇಕರು ಗೆಲುವಿಗಿಂತ ಸೋಲಿನ ಬಗ್ಗೆ ಚಿಂತಿಸುವುದೇ ಹೆಚ್ಚು. ಒಂದು ಉದ್ಯೋಗ ನೇಮಕಾತಿಯ ಸಂದರ್ಭದಲ್ಲಿ ಎಷ್ಟೋ ಬಾರಿ ೧೦೦ ಹುದ್ದೆಗಳಿಗೆ ಲಕ್ಷಗಟ್ಟಲೆ ಅರ್ಜಿಗಳು ಬಂದಿರುತ್ತವೆ. ನಕಾರಾತ್ಮಕ ವ್ಯಕ್ತಿಗಳು ಈ ಸಂಖ್ಯೆಯಿಂದಲೇ ಕುಗ್ಗಿ ಹೋಗುತ್ತಾರೆ. ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ. ಆದರೆ, ನೆನಪಿರಲಿ ಅರ್ಜಿ ಎಷ್ಟಾದರೂ ಬಂದಿರಲಿ. ನನಗೆ ಬೇಕಾಗಿರುವುದು ಒಂದೇ ಹುದ್ದೆ ಎಂದುಕೊಳ್ಳುವುದು ಸಕಾರಾತ್ಮಕತೆಯ ಸಲ್ಲಕ್ಷಣ.
ಕಡೆಗೆ ಒಂದೇ ಹುದ್ದೆ ಇದ್ದರೂ ಅದು ನನಗೇ ಸಿಗಬೇಕು ಎಂದುಕೊಳ್ಳುವವನದು ಈ ಜಗತ್ತು. ಅವನೇ ನಿಜವಾದ ಮಹತ್ವಾಕಾಂಕ್ಷಿ! ಇಂತಹ ಸಕಾರಾತ್ಮಕ ಮನೋಭಾವನೆಯು ಒಬ್ಬ ಸಾಧಕನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಬೇರೆಯವರು ನಮ್ಮ ಬಗ್ಗೆ ಆಡುವ ಮಾತುಗಳಲ್ಲಿ, ಒಳ್ಳೆಯ ಅಂಶವನ್ನು ಕಂಡುಕೊಳ್ಳುವುದು ಆ ಸಕಾರಾತ್ಮಕತೆಯ ಮುಖ್ಯಗುಣ. ಆಗಿರುವುದು, ಆಗುತ್ತಿರು ವುದು, ಆಗಲಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂಬ ನಿರ್ಲಿಪ್ತ ಸ್ಥಿತಿ ಕೆಲವು ವೇಳೆ ಪೊಳ್ಳು ಮಾತಿನಂತೆ ಕಂಡರೂ ಹಲವು ಸಂದರ್ಭಗಳಲ್ಲಿ ನಮ್ಮನ್ನು ಸಂತೈಸುತ್ತದೆ.
ಆಕಸ್ಮಿಕವಾಗಿ ಏನೋ ಕೆಟ್ಟದ್ದು ಸಂಭವಿಸಿದಾಗ ‘ಸದ್ಯ ಇಷ್ಟಕ್ಕೇ ಮುಗಿಯಿತಲ್ಲ’ ಎಂಬಸಮಾಧಾನ ತುಂಬಾ ದೊಡ್ಡ ಅಪಾಯದಿಂದ ನಮ್ಮ ಮನಸ್ಸನ್ನು ಪಾರು ಮಾಡುತ್ತದೆ. ನಮ್ಮ ಬಳಿ ಎಲ್ಲವೂ ಇದ್ದು, ಸಕಾರಾತ್ಮಕ ಮನೋಭಾವನೆಯೊಂದು ಇಲ್ಲದಿದ್ದರೆ ಯಾವುದೂ ನಮ್ಮನ್ನು ಸಂತೋಷವಾಗಿಡಲಾರದು. ನಮ್ಮೊಳಗಿನ ಸಾವಿರ ಸಾಮರ್ಥ್ಯಗಳನ್ನು ಕ್ಷಣ ಮಾತ್ರದಲ್ಲಿ ಛಿದ್ರವಾಗಿಸುವ ಜಗತ್ತಿನ ಏಕೈಕ ದೌರ್ಬಲ್ಯವೆಂದರೆ ಅದು ನಕಾರಾತ್ಮಕತೆ ಮಾತ್ರ!
ಸಕಾರಾತ್ಮಕ ಮನೋಭಾವವೇ ನಾಯಕನ ಮೊದಲ ಗುಣ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇದು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ನಾಯಕತ್ವ ಗುಣ ಹಣ ವ್ಯಯಿಸಿ ತರಬೇತಿ ಪಡೆಯುವುದರಿಂದ ಬರುವಂಥದ್ದಲ್ಲ. ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ಸಾಹ ತುಂಬಿ ಹುರಿದುಂಬಿಸುವುದರಿಂದ ಮೈಗೂಡಿಕೊಳ್ಳುವ ಗುಣವಿದು. ಮಕ್ಕಳಿರಲಿ, ದೊಡ್ಡವರಿರಲಿ ಒಂದು ಗುಂಪಿನಲ್ಲಿದ್ದಾಗ ‘ಈ ಕೆಲಸ ಯಾರು ಮಾಡುತ್ತೀರಿ?’ ಎಂದಾಗ ಮೊದಲು ಅವಕಾಶ ತೆಗೆದುಕೊಂಡು ಆ ನಂತರ ಯೋಚಿಸುವವನೇ ನಿಜವಾದ ನಾಯಕ. ಸೀಮಿತ ಅವಕಾಶಗಳಿದ್ದಾಗ ನಾವು ಹಿಂದೆ ಸರಿದು, ಯೋಚಿಸಿ ನಿರ್ಧರಿಸುವ ವೇಳೆಗೆ ಆ ಅವಕಾಶ ಬೇರೆಯವರ ಪಾಲಾಗಬಹುದು.
ದುರಂತವೆಂದರೆ ನಾವು ಯೋಗ್ಯತೆ ಇದ್ದೂ ಅವಕಾಶ ತೆಗೆದುಕೊಳ್ಳದಿದ್ದರೆ ಯಾರೋ ಬೇರೆಯವರು ನಮ್ಮ ಗುಂಪಿನ ನಾಯಕರಾಗಿ, ನಾವು ಅವರ ಅಧೀನರಾಗಿ ಇರಬೇಕಾಗಬಹುದು!
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…